ಸಿಂಹದ ಮರಿ ಆರ್ಭಟವೇ ಇಷ್ಟು ಜೋರಾಗಿದೆ, ಇನ್ನು ಸಿಂಹವೇ ಅಖಾಡಕ್ಕಿಳಿದು ಘರ್ಜಿಸಿದ್ರೆ?
ವಿಕ್ಕಿ ಕೌಶಲ್ ನಟನೆಯ 'ಛಾವ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಸಿನಿಮಾ ಬಾಕ್ಸಾಫೀಸ್ ಗಳಿಕೆಗಿಂತ ಇಂಪ್ಯಾಕ್ಟ್ ದೊಡ್ಡದಾಗಿದೆ. ಸಿನಿಮಾ ನೋಡಿದ ಕೆಲವರು ಭಾವುಕರಾಗಿ ಕಣ್ಣೀರಾಗುತ್ತಿದ್ದಾರೆ. ಮರಾಠ ಸಾಮ್ರಾಜ್ಯದ ದೊರೆ ಸಾಂಬಾಜಿ ರಾಷ್ಟ್ರಪ್ರೇಮ, ಶೌರ್ಯ ಪರಾಕ್ರಮವನ್ನು ನೋಡಿ ಹುಬ್ಬೇರಿಸಿದ್ದಾರೆ.
ನಮ್ಮ ಹಿಂದೂಸ್ತಾನದ ರಾಜನಿಗೆ ಇಷ್ಟೆಲ್ಲಾ ಹಿಂಸೆ ಕೊಟ್ರಾ? ತನ್ನ ದೇಶಕ್ಕಾಗಿ ತನ್ನವರಿಗಾಗಿ ಸಾಂಬಾಜಿ ಇಷ್ಟೆಲ್ಲಾ ನೋವು ಅನುಭವಿಸಿದ್ರಾ? ಎಂದು ಆವೇದನೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಶಾಲೆಗಳಲ್ಲಿ ಇತಿಹಾಸದ ಪಾಠಗಳಲ್ಲಿ ಬೇಡದ ಕಥೆಗಳನ್ನು ಕಲಿಸಿದರು. ನಿಜವಾದ ಇತಿಹಾಸ ಹೇಳಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ವಿಕ್ಕಿ ಕೌಶಲ್ ಅಂತೂ ಸಾಂಬಾಜಿ ಪಾತ್ರದಲ್ಲಿ ಜೀವಿಸಿದ್ದಾರೆ.

ದಿನದಿಂದ ದಿನಕ್ಕೆ 'ಛಾವ' ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಶೀಘ್ರದಲ್ಲೇ 300 ಕೋಟಿ ರೂ. ಕಲೆಕ್ಷನ್ ಗಡಿ ಮೀರುವ ಲೆಕ್ಕಾಚಾರ ಶುರುವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಲಕ್ಷ್ಮಣ್ ಉಟೇಕರ್ ಮತ್ತವರ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದರ ನಡುವೆ ಸಿಂಹದ ಮರಿ ಆರ್ಭಟವೇ ಹೀಗಿದ್ದರೆ ಇನ್ನು ಸಿಂಹದ ಕಥೆ ಹೇಗಿರುತ್ತೋ ಎಂದು ಕೆಲವರು ಊಹಿಸಿಕೊಳ್ಳುತ್ತಿದ್ದಾರೆ.
'ಛಾವ' ಅಂದರೆ ಸಿಂಹದ ಮರಿ. ಮರಾಠ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಮಹಾನ್ ಛತ್ರಪತಿ ಶಿವಾಜಿ. ಆತನ ಬಳಿಕ ಪುತ್ರ ಸಾಂಬಾಜಿ ರಾಜ್ಯವನ್ನು ಮುನ್ನಡೆಸಿದ. ಮೊಘಲ್ ದೊರೆಗಳ ನಿದ್ದೆಗೆಡಿಸಿದ್ದ ಕಥೆ ಈ ಚಿತ್ರದಲ್ಲಿದೆ. ಈಗಾಗಲೇ ರಿಷಬ್ ಶೆಟ್ಟಿ ಹೀರೊ ಆಗಿ 'ದಿ ಫ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಘೋಷಣೆ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಂದೀಪ್ ಸಿಂಗ್ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಸಾಂಬಾಜಿ ಶೌರ್ಯ ಪರಾಕ್ರಮದ ಕಥೆಯೇ ಹೀಗಿದ್ದರೆ ಇನ್ನು ಅವರಪ್ಪ ಶಿವಾಜಿ ಕಥೆಯನ್ನು ಹೇಗೆ ತೆರೆಗೆ ತರುತ್ತಾರೆ? ಅದು ಹೇಗೆ ಪ್ರೇಕ್ಷಕರನ್ನು ತಲುಪುತ್ತದೆ ಎಂದು ಚರ್ಚಿಸಲಾಗುತ್ತಿದೆ.

ಈ ಹಿಂದೆ ಶಿವಾಜಿ ಮಹಾರಾಜರ ಕುರಿತು ಸಾಕಷ್ಟು ಸಿನಿಮಾ, ಧಾರಾವಾಹಿ, ನಾಟಕಗಳು ಬಂದಿವೆ. ಆದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇಂದಿನ ತಂತ್ರಜ್ಞಾನ ಬಳಸಿಕೊಂಡು ದೊಡ್ಡಮಟ್ಟದ ದೃಶ್ಯಕಾವ್ಯ ನಿರ್ಮಾಣವಾಗಿಲ್ಲ. ಆದರೆ ಇದೀಗ ಶಿವಾಜಿ ಬಯೋಪಿಕ್ ನಿರ್ಮಾಣದ ಕೆಲಸ ಆರಂಭವಾಗಿದೆ. 'ಕಾಂತಾರ' ಚಿತ್ರದಲ್ಲಿ ನಟಿಸಿ ಗೆದ್ದ ರಿಷಬ್ ಶೆಟ್ಟಿ ಅವರನ್ನು ಶಿವಾಜಿ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ. ಇದು ಸಹಜವಾಗಿಯೇ ಕರ್ನಾಟಕದಲ್ಲೂ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.
ಜನವರಿ 21, 2027ರಂದು 'ದಿ ಫ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಸದ್ಯ 'ಛಾವ' ಚಿತ್ರದಲ್ಲಿ ಸಾಂಬಾಜಿ ಪಾತ್ರ ವಿಕ್ಕಿ ಕರಿಯರ್ನಲ್ಲೇ ಬೆಸ್ಟ್ ಎನಿಸಿಕೊಂಡಿದೆ. ಮುಂದೆ ಶಿವಾಜಿಯಾಗಿ ರಿಷಬ್ ಶೆಟ್ಟಿ ಇದಕ್ಕಿಂತಲೂ ದೊಡ್ಡದಾಗಿ ಹೆಸರು ಮಾಡುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಶಿವಾಜಿ ಯಶೋಗಾಥೆಯಲ್ಲಿ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಸಾಕಷ್ಟು ಅಂಶಗಳಿವೆ. 'ಛಾವ' ಚಿತ್ರಕ್ಕಿಂತಲೂ ಎಲಿವೇಷನ್ ಸನ್ನಿವೇಶಗಳಿಗೆ ಹೆಚ್ಚು ಸ್ಕೋಪ್ ಇದೆ. ಹಾಗಾಗಿ 'ದಿ ಫ್ರೈಡ್ ಆಫ್ ಭಾರತ್' ಸಿನಿಮಾ ಮತ್ತಷ್ಟು ರೋಚಕವಾಗಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಿವಾಜಿ ಜೀವನದ ಕಥೆ ತಿಳಿಯುವ ಆಸಕ್ತಿ ಸಾಕಷ್ಟು ಜನರಲ್ಲಿದೆ. ಶಿವಾಜಿಯನ್ನು ಇಂದಿಗೂ ಕೆಲವರು ಯಾಕೆ ದೇವರಂತೆ ಪೂಜಿಸುತ್ತಾರೆ? ಅವರ ಕಥೆ ದೃಶ್ಯ ರೂಪಕ್ಕಿದರೆ ಹೇಗಿರುತ್ತದೆ? ಎನ್ನುವುದನ್ನು ನೋಡುವ ಕಾತರ ಇದೆ.
'ದಿ ಫ್ರೈಡ್ ಆಫ್ ಭಾರತ್' ಚಿತ್ರಕ್ಕೆ ರವಿವರ್ಮನ್ ಛಾಯಾಗ್ರಹಣ, ಪ್ರೀತಮ್ ಸಂಗೀತ, ಪ್ರಸೂನ್ ಜೋಶಿ ಸಾಹಿತ್ಯ, ರಸೂಲ್ ಪೂಕುಟ್ಟಿ ಸೌಂಡ್ ಡಿಸೈನ್, ಆಶ್ಲೇ ರೆಬೆಲ್ಲೊ ಕಾಸ್ಟ್ಯೂಮ್ ಡಿಸೈನ್ ಮಾಡಲಿದ್ದಾರೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಪ್ರಯತ್ನ ಶುರುವಾಗಿದೆ.


Click it and Unblock the Notifications











