ಕನ್ನಡದ ನಿರ್ದೇಶಕನಿಂದ 'ಧುರಂಧರ್' ಕಥೆ ಕದ್ದ ಆದಿತ್ಯ ಧರ್ ; ಚಿಂದಿ ಚೋರ್ ಎಂದು ಕೆಂಡ ಕಾರಿದ 'ಕ್ಯಾಂಪಸ್ ಕ್ರಾಂತಿ' ಸಂತೋಷ್
ಚಿತ್ರರಂಗದಲ್ಲಿ ಪ್ರೇರಣೆ ಗೀತೆಯನ್ನು ಹಾಡುತ್ತಾ ಚಿತ್ರ ಮಾಡುವುದಕ್ಕೂ.. ಯಥಾವತ್ತು ನಕಲು ಮಾಡುವುದಕ್ಕೂ.. ತುಂಬಾ ವ್ಯತ್ಯಾಸ ಇದೆ. ಆದರೆ ಕಲೆ ಮತ್ತು ಕಾಸು ಬೆರೆತ ಉದ್ಯಮದಲ್ಲಿ ಹಲವರು ಯಾರಿಗೂ ಗೊತ್ತಾಗಲ್ಲ ಎಂದುಕೊಂಡು ಯಥಾವತ್ತು ನಕಲು ಮಾಡುತ್ತಾರೆ. ತಮ್ಮದೇ ಸೃಜನಶೀಲ ಕಲಾಕೃತಿ ಎನ್ನುವಂತೆ ಪೋಸು ಕೊಡುತ್ತಾರೆ.
ತಪ್ಪು ಮಾಡುವವರು ತಾವು ಮಾಡುವ ತಪ್ಪು ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸುವುದು ತಪ್ಪು. ಆದರೆ ಇದನ್ನರಿಯದೇ ಇವರು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚಕ್ಕೆ ಗೊತ್ತಾಗಲ್ಲ ಅನ್ನೋ ಭ್ರಮೆಯಲ್ಲಿ ಇರುತ್ತಾರೆ. ಈ ಸಾಲಿನಲ್ಲಿ ''ಧುರಂಧರ್'' ಸೂತ್ರಧಾರ ಆದಿತ್ಯ ಧರ್ ಕೂಡ ಇದ್ದಾರೆ ಎನ್ನುವ ಶಾಕಿಂಗ್ ಆರೋಪವನ್ನು ಸದ್ಯ ವ್ಯಕ್ತಿಯೊಬ್ಬರು ಮಾಡಿದ್ದಾರೆ. ಅವರ ಹೆಸರು ಸಂತೋಷ್ ಕುಮಾರ್ ಆರ್.ಎಸ್.

ಹೌದು, ಸಂತೋಷ್ ಕುಮಾರ್ ಆರ್ ಎಸ್.. ಕನ್ನಡದ ನೆಲದ ನಿರ್ದೇಶಕ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು ಇವರು. 2017ರಲ್ಲಿ ಕನ್ನಡದಲ್ಲಿ ''ಸ್ಟೂಡೆಂಟ್ಸ್'' ಎಂಬ ಚಿತ್ರ ಬಂದಿತ್ತು. ಈ ಚಿತ್ರದ ಮೂಲಕ ನಿರ್ದೇಶಕರಾದ ಸಂತೋಷ್ ಕುಮಾರ್ ಆ ನಂತರ ''ಬಿಂದಾಸ್ ಗೂಗ್ಲಿ'' ಮತ್ತು ''ಕ್ಯಾಂಪಸ್ ಕ್ರಾಂತಿ'' ಎಂಬ ಇನ್ನೆರಡು ಚಿತ್ರಗಳನ್ನು ಕೂಡ ಮಾಡಿದರು.
ಹೀಗೆ ಕನ್ನಡದಲ್ಲಿ 3 ಚಿತ್ರಗಳನ್ನು ನಿರ್ದೇಶಿಸಿದ ಸಂತೋಷ್ ಕುಮಾರ್ ಅವರಿಗೆ ಅಂದುಕೊಂಡ ಗೆಲುವು ಸಿಗಲಿಲ್ಲ. ಈ ಹಿನ್ನೆಲೆ ಕಳೆದ ವರ್ಷ ಪಕ್ಕದ ಚೆನ್ನೈಗೆ ವಲಸೆ ಹೋದ ಸಂತೋಷ್ ಕುಮಾರ್ ''ಯುವನ್ ರಾಬಿನ್ಹುಡ್'' ಎಂಬ ಚಿತ್ರವನ್ನು ಘೋಷಿಸಿದ್ದರು.
ಇಂಥಾ ಸಂತೋಷ್ ಕುಮಾರ್ ಈಗ ''ಧುರಂಧರ್'' ಕಥೆ ನನ್ನದು ಎಂದು ಬಾಂಬ್ ಸಿಡಿಸಿದ್ಧಾರೆ. ಆದಿತ್ಯ ಧರ್ ಅವರನ್ನು ಚಿಂದಿ ಚೋರ್ ಎಂದು ಕರೆದಿದ್ಧಾರೆ. ಈ ಕುರಿತು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿರುವ ಸಂತೋಷ್ ಕುಮಾರ್ ನೀವೆಲ್ಲರೂ ''ಧುರಂಧರ್ 2'' ಸಿನಿಮಾ ನೋಡಿರಬಹುದು. ಅದು ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ ಎಂದು ಹೇಳಿರುವ ಸಂತೋಷ್ ಕುಮಾರ್ ಆ ಸಿನಿಮಾ ನೋಡಿದ ನಂತರವಷ್ಟೇ ಅದು ನನ್ನ ಕಥೆ ಎಂಬುದು ನನಗೆ ಗೊತ್ತಾಯ್ತು ಎಂದಿದ್ಧಾರೆ.
ನಾನು 2023ರಲ್ಲಿ ಬೆವರು ಸುರಿಸಿ ಈ ಕಥೆ ಬರೆದಿದ್ದೆ ಎಂದು ಹೇಳಿರುವ ಸಂತೋಷ್ ಕುಮಾರ್, ಆದಿತ್ಯ ರಾಯ್ ಕಪೂರ್ ಅವರನ್ನು ಈ ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಬೇಕೆನ್ನುವ ಉದ್ದೇಶ ನನಗೆ ಇತ್ತು ಎಂದು ಹೇಳಿದ್ದಾರೆ.

ಇಂತಹ ದೊಡ್ಡ ಚಿತ್ರಕ್ಕೆ ದೊಡ್ಡ ಸಂಸ್ಥೆಯ ಬೆಂಬಲ ಬೇಕು, ಈ ಹಿನ್ನೆಲೆ ಸೋನಿ ಪಿಕ್ಚರ್ಸ್, ಜೀ ಸ್ಟುಡಿಯೋಸ್, ಟಿ-ಸೀರೀಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ನಂತಹ ದೊಡ್ಡ ಸಂಸ್ಥೆಗಳ ಜೊತೆ ಚರ್ಚೆ ಮಾಡಿರುವುದಾಗಿಯೂ ಹೇಳಿರುವ ಸಂತೋಷ್ ಕುಮಾರ್ ನವೆಂಬರ್ 2023 ರಲ್ಲೇ 'ಸ್ಕ್ರೀನ್ರೈಟರ್ಸ್ ಅಸೋಸಿಯೇಷನ್' (SWA) ನಲ್ಲಿ ನಾನು ಈ ಕಥೆ ನೋಂದಣಿ ಮಾಡಿಸಿದ್ದೆ ಎಂದು ಹೇಳಿದ್ದಾರೆ. ತಮ್ಮ ಈ ಆರೋಪಗಳಿಗೆ ಸಾಕ್ಷಿಯನ್ನು ಕೂಡ ತೋರಿಸಿದ್ಧಾರೆ.
ನನ್ನ ಚಿತ್ರಕ್ಕೆ ನಾನು ''ಡಿ ಸಾಹೇಬ್'' ಎಂದು ಶೀರ್ಷಿಕೆ ಇಟ್ಟಿದ್ದೆ, ಅದನ್ನೇ ಇವರು ''ಧುರಂಧರ್'' ಮಾಡಿದರು ಎಂದು ಹೇಳಿರುವ ಸಂತೋಷ್ ಕುಮಾರ್, ನಾನು ಮನರಂಜನೆಯ ದೃಷ್ಟಿಯಿಂದ ಮಾತ್ರ ಕಥೆ ಬರೆದಿದ್ದೆ, ಆದರೆ ಇವರು ಕದಿಯುವುದಲ್ಲದೇ ಅದನ್ನು ತಮ್ಮ ರಾಜಕೀಯದ ಪ್ರಚಾರಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂದು ಹೇಳಿದ್ಧಾರೆ. ಇದರಿಂದ ನನಗೆ ಅತೀವ ನೋವಾಗಿದ್ದು, ನನ್ನ ಕಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ, ನನ್ನ ಅನುಮತಿ ಇಲ್ಲದೇ ಕಥೆಯ ಮೂಲ ಉದ್ದೇಶವನ್ನೇ ಬದಲಿಸಲಾಗಿದೆ ಎಂದು ಕಿಡಿ ಕಾರಿದ್ಧಾರೆ. ನನಗಾದ ಈ ಅನ್ಯಾಯ ಇನ್ಯಾರಿಗೂ ಆಗಬಾರದು ಈ ಹಿನ್ನೆಲೆ ನಾನು ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











