ಪೂನಂ ವಿರುದ್ಧ ದೂರು ದಾಖಲಿಸುವಂತೆ ಹೆಚ್ಚಿದ ಒತ್ತಡ: ಆದರೆ ಆಕೆ ಬೆಂಬಲಕ್ಕೆ ನಿಂತ RGV
ಇತ್ತೀಚೆಗೆ ತಾನು ಸತ್ತಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಿ ಬಾಲಿವುಡ್ ನಟಿ ಪೂನಂ ಪಾಂಡೆ ಭಾರೀ ಚರ್ಚೆ ಹುಟ್ಟಾಕ್ಕಿದ್ದರು. ಎಲ್ಲರೂ ಆಕೆಗೆ ಅಗಲಿಕೆಗೆ ಸಂತಾಪ ಸೂಚಿಸಿದ್ದರು. ಗರ್ಭಕಂಠ ಕ್ಯಾನ್ಸರ್ನಿಂದ ಪೂನಂ ಕೊನೆಯುಸಿರೆಳೆದಿದ್ದಾಗಿ ಹೇಳಲಾಗಿತ್ತು. ಆಕೆಯ ಮ್ಯಾನೇಜರ್ ಈ ವಿಷಯ ಹೇಳಿ ಶಾಕ್ ಕೊಟ್ಟಿದ್ದರು.
ಪೂನಂ ಪಾಂಡೆ ಸಾವಿನ ಸುದ್ದಿಯನ್ನು ಕೆಲವರು ನಂಬಲು ಸಿದ್ಧರಿರಲಿಲ್ಲ. ಇದೆಲ್ಲಾ ಪಬ್ಲಿಸಿಟಿ ಸ್ಟಂಟ್ ಎನ್ನುವ ಊಹಾಪೋಹ ಶುರುವಾಗಿತ್ತು. ಕೊನೆಗೆ ಅದೇ ನಿಜವಾಗಿತ್ತು. ಒಂದು ದಿನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಖುದ್ದು ಪೂನಂ ಪಾಂಡೆ ನಾನು ಸತ್ತಿಲ್ಲ ಎಂದಿದ್ದರು. ಇಂತಹ ಸುದ್ದಿ ಹಬ್ಬಿಸಿದ್ದಕ್ಕಾಗಿ ಕ್ಷಮಿಸಿ ಎಂದು ಕ್ಷಮೆ ಕೇಳಿದ್ದರು. ಯಾಕೆ ಈ ರೀತಿಯ ಸಾವಿನ ನಾಟಕ ಮಾಡಿದ್ದು ಎನ್ನುವ ಬಗ್ಗೆಯೂ ವಿವರಿಸಿದ್ದರು.

ಗರ್ಭಕಂಠ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾಗಿ ಪೂನಂ ವಿವರಣೆ ನೀಡಿದ್ದರು. ಆದರೂ ಆಕೆಯ ಹುಚ್ಚಾಟಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಈ ಸುಳ್ಳು ಸುದ್ದಿ ಹರಡಲು ಕಾರಣರಾದ ಎಲ್ಲರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ. ಚಿತ್ರರಂಗದ ಮಂದಿ, ರಾಜಕೀಯ ಮುಖಂಡರು ಸೇರಿದಂತೆ ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೊಲೀಸರು ಕೂಡಲೇ ಆಕೆಯ ವಿರುದ್ಧ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಕೇಳುತ್ತಿದ್ದಾರೆ.
ಪೂನಂ ಪಾಂಡೆ ಗರ್ಭಕಂಠ ಕ್ಯಾನರ್ನಿಂದ ನಿಧನರಾದರು ಎಂದು ಖುದ್ದು ಆಕೆಯ ಮ್ಯಾನೇಜರ್ ಹೇಳಿದಾಗ ಬಹುತೇಕರು ನಂಬಿದ್ದರು. ಆಕೆಯ ಕುಟುಂಬ ಸದಸ್ಯರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹಾಗಾಗಿ ಎಲ್ಲರೂ ನಂಬುವಂತಾಯಿತು. ಈ ಬಗ್ಗೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಅಖಿಲ ಭಾರತ ಸಿನಿಮಾ ಕಾರ್ಮಿಕರ ಒಕ್ಕೂಟ ಕೂಡ ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದೆ. ಇಂತಹ ಸುಳ್ಳು ಸುದ್ದಿಗಳಿಂದ ಇನ್ನುಮುಂದೆ ಸಿನಿಮಾಮಂದಿರ ಸಾವಿನ ವಿಚಾರವನ್ನು ಯಾರು ನಂಬದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೂನಂ ಪಾಂಡೆ ಸಾವಿನ ನಾಟಕದ ಬಗ್ಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಮಾತ್ರ ಮೆಚ್ಚಿ ಟ್ವೀಟ್ ಮಾಡಿದ್ದಾರೆ. "ಹೇ ಪೂನಂ ಪಾಂಡೆ, ನಿಮ್ಮ ಈ ನಡೆಯಿಂದ ಟೀಕೆಗಳು ವ್ಯಕ್ತವಾಗಬಹುದು. ಆದರೆ ಸುಳ್ಳು ಸುದ್ದಿ ಹಬ್ಬಿಸಿದ ನೀವು ಮೂಡಿಸಿದ ಜಾಗೃತಿ ಬಗ್ಗೆ ಯಾರು ಪ್ರಶ್ನಿಸಲು ಸಾಧ್ಯವಿಲ್ಲ, ನಿಮ್ಮ ಪ್ರಯತ್ನದಿಂದ ಈಗ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ. ನಿಮ್ಮಂತೆ ನಿಮ್ಮ ಆತ್ಮ ಸಹ ಸುಂದರ, ನಿಮಗೆ ಮತ್ತಷ್ಟು ಆಯಸ್ಸು ವೃದ್ಧಿಸಲಿ" ಎಂದು ಬರೆದುಕೊಂಡಿದ್ದಾರೆ.
ಶುಕ್ರವಾರ ಮಧ್ಯಾಹ್ನ ತಮ್ಮ ಆಪ್ತರ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ್ದ ಪೂನಂ ಪಾಂಡೆ ಶನಿವಾರ ಇನ್ಸ್ಟಾಗ್ರಾಮ್ನಲ್ಲಿ ಪ್ರತ್ಯಕ್ಷರಾಗಿದ್ದರು. "ನಾನು ಬದುಕಿದ್ದೇನೆ. ಗರ್ಭಕಂಠದ ಕ್ಯಾನ್ಸರ್ನಿಂದ ನಾನು ಸಾಯಲಿಲ್ಲ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ್ದಾಗಿ ವಿಡಿಯೋದಲ್ಲಿ ಹೇಳಿದ್ದಾಳೆ. ಪ್ರತಿವರ್ಷ ಗರ್ಭಕಂಠ ಕ್ಯಾನರ್ನಿಂದ ಬಹಳ ಜನ ಮಹಿಳೆಯರು ಸಾಯುತ್ತಿದ್ದಾರೆ. ಇದಕ್ಕೆ ಚಿಕಿತ್ಸೆ ಹೇಗೆ ಎನ್ನುವುದು ಗೊತ್ತಿಲ್ಲ, ಆ ಬಗ್ಗೆ ಜಾಗೃತಿ ಮೂಡಿಸಲು ನಾನು ಈ ರೀತಿ ಮಾಡಿದೆ" ಎಂದು ಪೂನಂ ವಿಡಿಯೋದಲ್ಲಿ ಹೇಳಿದ್ದಳು.
ಈ ಹಿಂದೆ ಹಲವು ಬಾರಿ ಇಂತಹ ಸುಳ್ಳು ಸುದ್ದಿಗಳಿಂದ, ವಿವಾದಾತ್ಮಕ ಹೇಳಿಕೆಗಳಿಂದ ಪೂನಂ ಸುದ್ದಿಯಾಗಿದ್ದಳು. ಬರೀ ವಿವಾದಗಳಿಂದಲೇ ಜನಪ್ರಿಯತೆ ಸಾಧಿಸಿದ ಚೆಲುವೆ ಈಗ ಸಾವಿನ ವಿಚಾರದಲ್ಲೂ ನಾಟಕ ಮಾಡಿರುವುದ ಚರ್ಚೆಗೆ ಗ್ರಾಸವಾಗಿದೆ.


Click it and Unblock the Notifications










