ಕ್ರಿಸ್ಮಸ್ ಸಂಭ್ರಮದಲ್ಲಿ ಕೇಕ್ ಕಟ್ ಮಾಡಿ ವಿವಾದ ಮೈಮೇಲೆ ಎಳೆದುಕೊಂಡ ರಣ್ಬೀರ್ ಕಪೂರ್
ಸಿನಿಮಾ ತಾರೆಯರಿಗೂ ವಿವಾದಗಳಿಗೂ ಬಿಡಿಸಲಾರದ ನಂಟು. ಒಂದಿಲ್ಲೊಂದು ವಿವಾದದಲ್ಲಿ ಸಿನಿಮಾ ನಟ-ನಟಿಯರು ಹೆಸರುಗಳು ಥಳುಕು ಹಾಕಿಕೊಳ್ಳುತ್ತದೆ. ಗೊತ್ತಿದ್ದು ಗೊತ್ತಿಲ್ಲದೆಯೇ ತಾರೆಯರು ಮಾಡುವ ಎಡವಟ್ಟು ದೊಡ್ಡ ವಿವಾದಕ್ಕೆ ಕಾರಣವಾಗುತ್ತದೆ. ಈಗ ರಣ್ಬೀರ್ ಕಪೂರ್ ಸರದಿ.
ರಣ್ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಭರ್ಜರಿ ಸದ್ದು ಮಾಡಿದೆ. ಡಿಸೆಂಬರ್ 1ರಂದು ತೆರೆಗಪ್ಪಳಿಸಿದ ಸಿನಿಮಾ 800 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ತೃಪ್ತಿ ದಿಮ್ರಿ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ಇನ್ನು ರಣ್ಬೀರ್ ಪರ್ಫಾರ್ಮನ್ಸ್ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

'ಅನಿಮಲ್' ಸಕ್ಸಸ್ ಸಂಭ್ರಮದಲ್ಲಿ ತೇಲುತ್ತಿರುವ ನಟ ರಣ್ಬೀರ್ ಕಪೂರ್ ಇತ್ತೀಚೆಗೆ ಕಪೂರ್ ಖಾಂದಾನ್ ಜೊತೆ ಕ್ರಿಸ್ಮಸ್ ಆಚರಿಸಿದ್ದರು. ಕುಟುಂದ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿದ್ದರು. ಇದೇ ವೇಳೆ ರಣ್ಬೀರ್- ಆಲಿಯಾ ದಂಪತಿ ತಮ್ಮ ಮಗಳು ರಹಾಳನ್ನು ಮಾಧ್ಯಮಗಳ ಮುಂದೆ ಪರಿಚಯಿಸಿದ್ದರು. ಆಕೆಯ ಫೋಟೊಗಳು ಸಖತ್ ವೈರಲ್ ಆಗಿತ್ತು. ಇದೀಗ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ರಣ್ಬೀರ್ ಧಕ್ಕೆ ತಂದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕ್ರಿಸ್ಮಸ್ ಸಂಭ್ರಮದಲ್ಲಿ ಫ್ಯಾಮಿಲಿ ಸದಸ್ಯರ ಜೊತೆ ಸೇರಿ ಬಾಲಿವುಡ್ ರಾಕ್ಸ್ಟಾರ್ ಕೇಕ್ ಕಟ್ ಮಾಡಿದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ. ಡೈನಿಂಗ್ ಟೇಬಲ್ ಮೇಲಿದ್ದ ಕೇಕ್ ಮೇಲೆ ವೈನ್ ಸುರಿದು ರಣಬೀರ್ ಕಪೂರ್ ಲೈಟರ್ನಿಂದ ಬೆಂಕಿ ಹಚ್ಚಿದ್ದಾರೆ. ಈ ವೇಳೆ 'ಜೈ ಮಾತಾ ದಿ' ಎಂದು ಹೇಳಿರೋದು ಕೇಳಿಬಂದಿದೆ. ಹಿಂದೂ ಧರ್ಮದಲ್ಲಿ ಇತರ ದೇವತೆಗಳನ್ನು ಆಹ್ವಾನಿಸುವ ಮೊದಲು ಅಗ್ನಿ ದೇವರನ್ನು ಪೂಜಿಸಲಾಗುತ್ತದೆ. ಇದು ಹಿಂದೂ ಸಂಪ್ರದಾಯ. ಆದರೆ, ನಟ ರಣಬೀರ್ ಕಪೂರ್ ಹಾಗೂ ಅವರ ಕುಟುಂಬಸ್ಥರು ಕ್ರೈಸ್ತರ ಹಬ್ಬ ಆಚರಣೆ ವೇಳೆ ಆಲ್ಕೋಹಾಲ್ ಬಳಸಿ, ಬಳಿಕ 'ಜೈ ಮಾತಾ ದಿ' ಎಂದು ಘೋಷಣೆ ಕೂಗಿದ್ದಾರೆ. ಇದು ತಪ್ಪು ಎಂದು ಸಂಜಯ್ ತಿವಾರಿ ಎಂಬ ವ್ಯಕ್ತಿ ಗಂಭೀರ ಆರೋಪಿಸಿ ದೂರು ದಾಖಲಿಸಿದ್ದಾರೆ.
ಮುಂಬೈ ಮೂಲದ ವಕೀಲರಾದ ಆಶಿಶ್ ರಾಯ್ ಮತ್ತು ಪಂಕಜ್ ಮಿಶ್ರಾ ಅವರು ಘಾಟ್ಕೋಪರ್ ಪೊಲೀಸ್ ಠಾಣೆಯಲ್ಲಿ ರಣಬೀರ್ ಕಪೂರ್ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಸನಾತನ ಧರ್ಮಕ್ಕೆ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೂರಿನಲ್ಲಿ "ಹಿಂದೂ ಧರ್ಮದಲ್ಲಿ ಇತರ ದೇವತೆಗಳನ್ನು ಪೂಜಿಸುವ ಮೊದಲು ಅಗ್ನಿಯನ್ನು ಪೂಜಿಸಲಾಗುತ್ತದೆ. ಆದಾಗ್ಯೂ, ಕಪೂರ್ ಮತ್ತವರ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ಇತರ ಧರ್ಮಗಳ ಹಬ್ಬಗಳಲ್ಲಿ ಹಿಂದೂ ಧರ್ಮದಲ್ಲಿ ನಿಷೇಧಿಸಲಾದ ಆಲ್ಕೋಹಾಲ್ನ್ನು ಬಳಸಿದ್ದಾರೆ. 'ಜೈ ಮಾತಾ ದಿ' ಎಂಬ ಘೋಷಣೆಗಳೂ ಮೊಳಗಿಸಿದ್ದಾರೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ವಕೀಲರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ರೀತಿಯ ವಿಡಿಯೋಗಳು ವೈರಲ್ ಆಗಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರಣಬೀರ್ ಕಪೂರ್ ವಿರುದ್ಧ ಸೆಕ್ಷನ್ 295 A (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವುದು), ಸೆಕ್ಷನ್ 298 (ಧಾರ್ಮಿಕ ಭಾವನೆಗಳನ್ನು ನೋಯಿಸುವುದು), ಸೆಕ್ಷನ್ 500 (ಮಾನನಷ್ಟ), ಸೆಕ್ಷನ್ 34 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಈ ದೂರಿನ ಆಧಾರದ ಮೇಲೆ ಪೊಲೀಸರು ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ ಎನ್ನಲಾಗ್ತಿದೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ರಣ್ಬೀರ್ ಸದ್ಯ 'ಅನಿಮಲ್' ಸಕ್ಸಸ್ ಜೋಶ್ನಲ್ಲಿದ್ದಾರೆ. ಇನ್ನು ಸೀಕ್ವೆಲ್ 'ಅನಿಮಲ್ ಪಾರ್ಕ್' ಸಿನಿಮಾ ಬಗ್ಗೆ ಬಾಲಿವುಡ್ನಲ್ಲಿ ಚರ್ಚೆ ಆಗ್ತಿದೆ. ಇದೆಲ್ಲದರ ನಡುವೆ ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ನಟಿಸುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಇದೇ ಚಿತ್ರದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಾರೆ ಎನ್ನಲಾಗ್ತಿದೆ.


Click it and Unblock the Notifications











