ಬದುಕು-ಬವಣೆ ;ಜೀವನ್ಮರಣ ಹೋರಾಟದಲ್ಲಿ ಶಿರಡಿ ಸಾಯಿ ಬಾಬಾ ಪಾತ್ರಧಾರಿ,ಆರ್ಥಿಕ ಸಹಾಯಕ್ಕೆ ಅಂಗಲಾಚಿದ 86 ವರ್ಷದ ಹಿರಿಯ ನಟ
ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ. ಇನ್ನೂ ಇದರ ನಡುವೆ ಕಾಲು ಸೋತ ಕಲಾವಿದರನ್ನು ಕಸಕ್ಕಿಂತಲೂ ಕಡೆಯಾಗಿ ಕಾಣೋ ಚಿತ್ರರಂಗದವರ ದುರ್ಬುದ್ಧಿ ಬೇರೆ. ಆ ಭಾಷೆ .. ಈ ಭಾಷೆ.. ಅಂತಲ್ಲ. ಚಿತ್ರರಂಗಕ್ಕೆ ತನು, ಮನ ಅರ್ಪಿಸಿ..
ಯಾವ ತಕರಾರು ಮಾಡದೇ, ನೀಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವ, ನೀಡಿದಷ್ಟು ಸಂಭಾವನೆಯನ್ನು ಪಡೆಯುವ, ಹಿರಿಯ ಕಲಾವಿದರನ್ನು ಕಡೆಗಣಿಸುವ ಹಳೇ ಚಾಳಿ ಎಲ್ಲ ಭಾಷೆಯ ಚಿತ್ರರಂಗದವರಿಗೆ ಇದೆ. ಇದಕ್ಕೆ ಮತ್ತೊಂದು ಕೈಗನ್ನಡಿಯೇ ಸುಧೀರ್ ದಳವಿ ಅವರ ಬದುಕು-ಬವಣೆ.

ಹೌದು, ಸುಧೀರ್ ದಳವಿ.. ಹಲವರ ಪಾಲಿನ ಶಿರಡಿ ಸಾಯಿ ಬಾಬಾ. 1977ರಲ್ಲಿ ಮನೋಜ್ ಕುಮಾರ್.. ರಾಜೇಂದ್ರ ಕುಮಾರ್ ಮತ್ತು ಹೇಮಾ ಮಾಲಿನಿ ಅಭಿನಯದ ಶಿರಡಿ ಸಾಯಿ ಬಾಬಾ ಚಿತ್ರದಲ್ಲಿ ಸಾಯಿ ಬಾಬಾ ಪಾತ್ರವನ್ನು ನಿರ್ವಹಿಸಿದ್ದ ಸುಧೀರ್ ದಳವಿ ಆ ನಂತರ ''ಅರ್ಪಣ್''.. ''ಖಯಾಮತ್''.. ''ಮಾನವ್ ಹತ್ಯಾ''.. ''ಅವಿನಾಶ್''.. ''ದಾದಾಗಿರಿ''.. ''ಸತ್ಯಮೇವ ಜಯತೇ''.. ''ಹವಾಲಾತ್''.. ''ಕಸಮ್''.. ''ಅಗ್ನಿ''.. ''ವರ್ದಿ''..
ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದರಾದರೂ ಜನ ಇವರನ್ನು ಶಿರಡಿ ಸಾಯಿ ಬಾಬಾ ಎಂದೇ ಕರೆಯುತ್ತಿದ್ದರು. ಗುರುತಿಸುತ್ತಿದ್ದರು. ಅಷ್ಟರ ಮಟ್ಟಿಗೆ ಜನಮಾನಸದಲ್ಲಿ ಶಿರಡಿ ಸಾಯಿ ಬಾಬಾ ರೂಪದಲ್ಲಿ ಅಚ್ಚಳಿಯದೇ ಉಳಿದಿರುವ ಸುಧೀರ್ ದಳವಿ ಈಗ ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.
ಅಕ್ಟೋಬರ್ 8ರಂದು ಮುಂಬೈನ ಲೀಲಾವತಿ ಆಸ್ಪತ್ರೆಗೆ 86 ವರ್ಷದ ಸುಧೀರ್ ದಳವಿ ಅವರನ್ನು ದಾಖಲು ಮಾಡಲಾಗಿದ್ದು, ಸುಧೀರ್ ದಳವಿ ಅವರಿಗೆ ಮಾರಣಾಂತಿಕ ಸೆಪ್ಸಿಸ್ ಸೋಂಕು ತಗುಲಿದೆ ಎಂದು ವೈದ್ಯರು ಹೇಳಿದ್ದಾರೆ.
ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ (ಫಂಗಲ್) ಸೋಂಕಿನಿಂದ ಅಂಟಿಕೊಳ್ಳುವ ಈ ಸೆಪ್ಸಿಸ್ ರೋಗವು ಅಂಗಗಳಿಗೆ ಹಾನಿಯನ್ನುಂಟು ಮಾಡಬಹುದು. ಇದು ಮೂತ್ರಪಿಂಡಗಳ (ಕಿಡ್ನಿ) ಮೇಲೂ ಪರಿಣಾಮ ಬೀರುತ್ತದೆ. ತೀವ್ರವಾದ ಮೂತ್ರಪಿಂಡದ ಗಾಯ ಉಂಟುಮಾಡಬಹುದಾದ ಈ ರೋಗವನ್ನು ನಿಯಂತ್ರಿಸುವುದು ಕಷ್ಟಕರ. ಇನ್ನು ಸೆಪ್ಸಿಸ್ ಸಮಯದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವು ಮೂತ್ರಪಿಂಡದ ಜೀವಕೋಶಗಳಿಗೆ ಹಾನಿ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ.

ಇಂತಹ ಸೆಪ್ಸಿಸ್ ಖಾಯಿಲೆಗೆ ತುತ್ತಾಗಿರುವ ಸುಧೀರ್ ದಳವಿ ಅವರಿಗೆ ನಿರಂತರ ಚಿಕಿತ್ಸೆಯ ಅಗತ್ಯ ಇದೆ ಎಂದು ವೈದ್ಯರು ಹೇಳಿದ್ದು, ಸುಧೀರ್ ದಳವಿ ಅವರ ಕುಟುಂಬ ಈಗಾಗಲೇ ಚಿಕಿತ್ಸೆಗೆ ಹತ್ತು ಲಕ್ಷಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಯನ್ನು ಮಾಡಿವೆ.
ಸುಧೀರ್ ದಳವಿ ಅವರ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ಕುಟುಂಬಸ್ಥರು ಹಿಂದಿ ಚಿತ್ರರಂಗದ ತಾರೆಯರು ತಮ್ಮ ಹಿರಿಯ ಕಲಾವಿದನಿಗೆ ನೆರವಾಗುತ್ತಾರೆ ಎನ್ನುವ ಆಶಾಭಾವನೆಯಲ್ಲಿ ಕಾದು ಕುಳಿತಿದ್ದಾರೆ. ಚಿತ್ರಪ್ರೇಮಿಗಳಲ್ಲಿ ಕೂಡ ಸಹಾಯದ ಹಸ್ತ ಚಾಚುವಂತೆ ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಸಾಯಿಬಾಬಾ ಆಗಿ ಅವರನ್ನು ನೆನಪಿಸಿಕೊಳ್ಳುವ ಅಥವಾ ಅವರ ಕೆಲಸವನ್ನು ಮೆಚ್ಚುವ ಎಲ್ಲರೂ ಮುಂದೆ ಬಂದು ನೆರವು ನೀಡಬೇಕೆಂದು ನಾವು ವಿನಂತಿಸುತ್ತೇವೆ ಎಂದು ಮನವಿಯನ್ನು ಮಾಡಿಕೊಂಡಿರುವ ಸುಧೀರ್ ದಳವಿ ಅವರ ಕುಟುಂಬ ನೀವು ಮಾಡುವ ಚಿಕ್ಕ ಸಹಾಯದಿಂದ ಕೂಡ ಸುಧೀರ್ ದಳವಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಬಹುದು ಎಂದು ಹೇಳಿದೆ.
ಸದ್ಯ ಬಾಲಿವುಡ್ನ ಹಿರಿಯ ನಟ ರಿಶಿಕಪೂರ್ ಮತ್ತು ನೀತು ಕಪೂರ್ ಅವರ ಮಗಳು ಮತ್ತು ರಣ್ಬೀರ್ ಕಪೂರ್ ಅವರ ಸಹೋದರಿ ರಿದ್ದಿಮಾ ಕಪೂರ್, ಚಿತ್ರರಂಗದ ಹಿರಿಯ ಜೀವ ಸುಧೀರ್ ದಳವಿ ಅವರ ನೆರವಿಗೆ ಧಾವಿಸಿದ್ದು ಸಹಾಯದ ಹಸ್ತವನ್ನು ಚಾಚಿದ್ದಾರೆ. ಸುಧೀರ್ ಧಳವಿ ಬೇಗ ಗುಣಮುಖರಾಗಿ, ಆಸ್ಪತ್ರೆಯಿಂದ ಮರಳಿ ಬರಲಿ ಎಂದು ಇವರ ಹಲವಾರು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ಧಾರೆ.


Click it and Unblock the Notifications











