ವಿರಳ ಕೋವಿಡ್ ಔಷಧ ವಿತರಿಸಿದ ಸೋನು ಸೂದ್: ತನಿಖೆಗೆ ಆದೇಶಿಸಿದ ನ್ಯಾಯಾಲಯ
ನಟ ಸೋನು ಸೂದ್ ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಸಾವಿರಾರು ಮಂದಿಗೆ ಸಹಾಯ ಮಾಡಿದ್ದಾರೆ. ಕೊರೊನಾ ಕಾಲದಲ್ಲಿ ಸೋನು ಸೂದ್ ಮಾಡಿರುವ ಸಹಾಯದಿಂದಾಗಿ ಅವರನ್ನು 'ಮಸೀಯಾ' (ದೇವರು) ಎಂದೇ ಕರೆಯಲಾಗುತ್ತಿದೆ.
ಮೊದಲ ಲಾಕ್ಡೌನ್ನಲ್ಲಿ ಕಾರ್ಮಿಕರನ್ನು ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದ್ದ ಸೋನು ಸೂದ್ ಎರಡನೇ ಲಾಕ್ಡೌನ್ ನಲ್ಲಿ ಕೋವಿಡ್ ಪೀಡಿತರಿಗೆ ಬೆಡ್ ಅಲಾಟ್ ಮಾಡಿಸುವುದು, ಆಮ್ಲಜನಕ ವಿತರಣೆ ಮಾಡುವುದು, ಜೀವ ರಕ್ಷಕ ಎನ್ನಲಾಗಿದ್ದ ರೆಮ್ಡಿಸಿವಿರ್ ಔಷಧಗಳನ್ನು ತಲುಪಿಸು ಕಾರ್ಯಗಳನ್ನು ಮಾಡಿದರು.
ಆದರೆ ಸೋನು ಸೂದ್ರ ಇದೇ ಕಾರ್ಯ ಈಗ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೊರೊನಾ ಎರಡನೇ ಅಲೆಯಲ್ಲಿ ರೆಮ್ಡಿಸಿವಿರ್ ಔಷಧಗಳಿಗೆ ಇನ್ನಿಲ್ಲದ ಬೇಡಿಕೆ ಉಂಟಾಗಿತ್ತು. ರೆಮ್ಡಿಸಿವಿರ್ ಔಷಧಗಳನ್ನು ಜೀವ ರಕ್ಷಕಗಳಂತೆ ಬಳಸಲಾಯಿತು. ಹಾಗಾಗಿಯೇ ಭಾರಿ ಬೇಡಿಕೆ ಈ ಔಷಧಕ್ಕೆ ಸೃಷ್ಟಿಯಾಯಿತು. 50,000 ಸಾವಿರಕ್ಕೂ ಹೆಚ್ಚಿನ ಬೆಲೆಗೆ ಕಾಳ ಮಾರುಕಟ್ಟೆಯಲ್ಲಿ ಈ ಔಷಧ ಮಾರಾಟವಾಯಿತು.
ಆದರೆ ಇದೇ ಔಷಧವನ್ನು ಸೋನು ಸೂದ್ ಕೆಲವರಿಗೆ ವಿತರಣೆ ಮಾಡಿದರು. ಇಡೀಯ ದೇಶದಲ್ಲಿ ಈ ಔಷಧಿಗೆ ಇಷ್ಟೊಂದು ಬೇಡಿಕೆ ಇರುವಾಗ ಸೋನು ಸೂದ್ಗೆ ಔಷಧ ದೊರೆತಿದ್ದು ಹೇಗೆ? ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಕೆಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಹ ದಾಖಲಿಸಿದ್ದರು.

ತನಿಖೆ ಮಾಡುವಂತೆ ಸೂಚಸಿದ ನ್ಯಾಯಾಲಯ
ಈ ಬಗ್ಗೆ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಸೋನು ಸೂದ್ಗೆ ರೆಮ್ಡಿಸಿವಿರ್ ಸರಬರಾಜು ಮಾಡಿದ್ದು ಯಾರೆಂದು ತನಿಖೆ ನಡೆಸುವಂತೆ ಸೂಚಿಸಿದೆ. ಸೋನು ಸೂದ್ ಮಾತ್ರವೇ ಅಲ್ಲದೆ ಶಾಸಕ ಜೀಶಾನ್ ಸಿದ್ಧಿಕಿ ಸಹ ಕೆಲವು ರೋಗಿಗಳಿಗೆ ರೆಮ್ಡಿಸಿವಿರ್ ವಿತರಣೆ ಮಾಡಿದ್ದರು. ಆ ಬಗ್ಗೆಯೂ ತನಿಖೆ ಮಾಡುವಂತೆ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ.

ರೆಮ್ಡಿಸಿವಿರ್ ವಿತರಿಸಿದ್ದ ಸೋನು ಸೂದ್, ಜೀಶಾನ್ ಸಿದ್ಧಿಕಿ
ರೆಮ್ಡಿಸಿವಿರ್ ತೆರೆದ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ. ಅಲ್ಲದೆ ವೈದ್ಯರ ಸೂಚನೆ ಇಲ್ಲದೆ ರೆಮ್ಡಿಸಿವಿರ್ ಅನ್ನು ಯಾರಿಗೂ ನೀಡುವಂತಿಲ್ಲ. ಆದರೆ ಸೋನು ಸೂದ್, ಶಾಸಕ ಜೀಶಾನ್ ಸಿದ್ಧಿಕಿ ಹಾಗೂ ಇನ್ನೂ ಕೆಲವರು ಈ ಔಷಧವನ್ನು ವಿತರಣೆ ಮಾಡಿದ್ದರು.

ಖಾರವಾಗಿ ಪ್ರತಿಕ್ರಿಯಿಸಿರುವ ನ್ಯಾಯಾಲಯ
ಪ್ರಕರಣದ ಬಗ್ಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿರುವ ನ್ಯಾಯಾಲಯವು, ''ಈ ಸಾಮಾಜಿಕ ಜಾಲತಾಣ ಯುಗದಲ್ಲಿ 'ನಾನು ನಿನ್ನ ಸಹಾಯಕ್ಕೆ ಬಂದಿದ್ದೇನೆ' ಎಂದು ಪ್ರಚಾರ ಪಡೆಯುವುದು ಸುಲಭವಾಗಿದೆ. ಆದರೆ ಇಂಥಹಾ ಕ್ಲಿಷ್ಟಕರ ಸನ್ನಿವೇಶದಲ್ಲಿ ಅದು ಸೂಕ್ತವಲ್ಲ. ಸರ್ಕಾರವು ಕಷ್ಟಪಟ್ಟು ಎಲ್ಲ ವ್ಯವಸ್ಥೆ ಮಾಡುತ್ತಿರುವ ಸಂದರ್ಭದಲ್ಲಿ ಕೆಲವರು ಏಜೆನ್ಸಿಗಳ ಮೂಲಕ ಜನರಿಗೆ ತಲುಪಬೇಕಾದುದ್ದನ್ನು ತಾವು ಖರೀದಿಸಿ ನಂತರ ತಮ್ಮ ಪ್ರಚಾರಕ್ಕಾಗಿ ಉಚಿತವಾಗಿ ವಿತರಣೆ ಮಾಡುವುದು ಸೂಕ್ತವಲ್ಲ'' ಎಂದಿದೆ.
Recommended Video

ಮಹಾರಾಷ್ಟ್ರ ಸರ್ಕಾರಕ್ಕೆ ಸೂಚನೆ
''ಈ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ತಮ್ಮನ್ನು ತಾವು ದೇವರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ವಿತರಣೆ ಮಾಡುತ್ತಿರುವ ಔಷಧಗಳು ಎಲ್ಲಿಂದ ಬರುತ್ತಿವೆ. ಔಷಧಗಳನ್ನು ಬಳಸಬೇಕಾಗಿರುವುದು ಯಾವ ಕಾರಣಕ್ಕೆ. ಔಷಧಿಗಳು ನಕಲಿಯೋ ಅಸಲಿಯೋ ಎಂಬ ಪರೀಕ್ಷೆಗಳನ್ನು ಮಾಡದೆ ವಿತರಣೆ ಮಾಡುತ್ತಿದ್ದಾರೆ. ಇವರ ಮೇಲೆ ಸೂಕ್ತವಾದ ತನಿಖೆ ಮಾಡಿ'' ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿದೆ.


Click it and Unblock the Notifications











