ಚಿತ್ರರಂಗಕ್ಕೆ ಧೋನಿ ಗ್ರ್ಯಾಂಡ್ ಎಂಟ್ರಿ ? ಆರ್.ಮಾಧವನ್ ಜೊತೆ ಶುರುವಾಯಿತು ''ಚೇಸ್''
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ..ಕಪಿಲ್ ದೇವ್ ಅವರಿಂದ ಹಿಡಿದು ಅಜಯ್ ಜಡೇಜಾವರೆಗೆ.. ವಿನೋದ್ ಕಾಂಬ್ಳಿಯಿಂದ ಹಿಡಿದು ಇರ್ಫಾನ್ ಪಠಾಣ್ ವರೆಗೆ ..
ಹಲವರು ಇಲ್ಲಿ 22 ಯಾರ್ಡ್ ಪಿಚ್ ದಿಂದ ದೂರ ಬಂದು ಬೆಳ್ಳಿತೆರೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ ಗೆಲುವು ಮಾತ್ರ ಯಾರಿಗೂ ಸಿಕ್ಕಿಲ್ಲ. ಹಾಗಂಥ ಕ್ರಿಕೆಟ್ ರಗಳಿಗೆ ಸಿನಿಮಾ ಮೇಲಿನ ವ್ಯಾಮೋಹ ಕಡಿಮೆಯಾಗಿದೆ ಎಂದೇನು ಇಲ್ಲ. ಅವಕಾಶ ಸಿಕ್ಕರೆ ಇವತ್ತು ಕೂಡ ಮೌಕೆ ಪೇ ಚೌಕಾ ಬಾರಿಸಲು ಹಲವಾರು ಜನ ರೆಡಿಯಾಗಿದ್ದಾರೆ. ಉದಾಹರಣೆಗೆ ಎಂ.ಎಸ್.ಧೋನಿ

ಹೌದು. ಮಹೇಂದ್ರ ಸಿಂಗ್ ಧೋನಿ.. ಭಾರತದ ಕ್ಯಾಪ್ಟನ್ ಕೂಲ್. ಕ್ರೀಡಾಂಗಣದಲ್ಲಿ ಎದುರಾಳಿಯ ತಂತ್ರಗಳನ್ನೆಲ್ಲಾ ವಿಫಲಗೊಳಿಸಿದ ಧೋನಿ ಅಚ್ಚರಿ ಎಂಬಂತೆ ಚಿತ್ರರಂಗವನ್ನು ಸದ್ಯ ಪ್ರವೇಶಿಸಿದ್ದಾರೆ. ಈ ಹಿಂದೆ ಅಲಿಯಾ ಭಟ್ ಅಭಿನಯದ ''ಜಿಗರಾ'' ಚಿತ್ರ ನಿರ್ದೇಶಿಸಿದ್ದ ವಸನ್ ಬಾಲ ನಿರ್ದೇಶನದ ''ದಿ ಚೇಸ್'' ಚಿತ್ರದ ಟೀಸರ್ನಲ್ಲಿ ಆರ್ ಮಾಧವನ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಹೊಸ ಸಂಚಲನ ಸೃಷ್ಟಿಸಿದ್ದಾರೆ.
ಇಂದು (ಸೆಪ್ಟೆಂಬರ್ 7) ಬಿಡುಗಡೆಯಾದ ಈ ಟೀಸರ್ನಲ್ಲಿ, ಕ್ರಿಕೆಟ್ ಅಂಗಳದಲ್ಲಿ ಮಾಸ್ಟರ್ಮೈಂಡ್ ಆಗಿದ್ದ ಧೋನಿ ಇದೀಗ ಬಂದೂಕು ಹಿಡಿದು ಮಿಲಿಟರಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು ಅವರ ಅಭಿಮಾಣಿಗಳು ಈ ಟೀಸರ್ ನೋಡಿ ಥ್ರಿಲ್ ಆಗಿದ್ದಾರೆ. ''ದಿ ಚೇಸ್'' ನ ಟೀಸರ್ ನಲ್ಲಿ ಮಾಧವನ್ ಮತ್ತು ಧೋನಿ ಇಬ್ಬರೂ ಕಪ್ಪು ಸಮವಸ್ತ್ರ, ಬುಲೆಟ್ಪ್ರೂಫ್ ಜಾಕೆಟ್ ಮತ್ತು ಸನ್ಗ್ಲಾಸ್ ಧರಿಸಿ, ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದಾರೆ.
"ಕ್ಯಾಪ್ಟನ್ ಕೂಲ್" ಆಕ್ಷನ್ ಸೀಕ್ವೆನ್ಸ್ನಲ್ಲಿ ಕಾಣಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅನೇಕ ಅಭಿಮಾನಿಗಳು ಚಿತ್ರರಂಗಕ್ಕೆ ಕಲಾವಿದನಾಗಿ ಧೋನಿ ಪ್ರವೇಶ ಮಾಡುತ್ತಿದ್ದಾರೆ ಎಂದು ಭಾವಿಸಿದ್ದಾರೆ.ಈ ಟೀಸರ್ ಕುರಿತು ಮಾಧವನ್ "ಒಂದು ಮಿಷನ್. ಇಬ್ಬರು ಹೋರಾಟಗಾರರು. ತಯಾರಾಗಿ - ಒಂದು ವಿನಾಶಕಾರಿ ಚೇಸ್ ಆರಂಭವಾಗುತ್ತಿದೆ. ದಿ ಚೇಸ್ - ಟೀಸರ್ ಈಗ ಲಭ್ಯವಿದೆ. ವಸನ್ ಬಾಲ ನಿರ್ದೇಶನ. ಶೀಘ್ರದಲ್ಲೇ ಬರಲಿದೆ" ಎಂದು ಬರೆದುಕೊಂಡಿದ್ದಾರೆ.

ಇದು ಸಿನಿಮಾನಾ..? ವೆಬ್ ಸರಣಿನಾ..? ಅಥವಾ ಜಾಹೀರಾತಾ ? ಎಂಬ ಬಗ್ಗೆ ಯಾವುದೇ ವಿವರಗಳು ಬಹಿರಂಗವಾಗಿಲ್ಲ. ಆದರೆ ಈ ಟೀಸರ್ ಸದ್ಯ ಕುತೂಹಲವನ್ನಂತೂ ಮೂಡಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಸಖತ್ ವೈರಲ್ ಆಗಿದೆ. ಅಂದ್ಹಾಗೇ ಚಿತ್ರರಂಗಕ್ಕೆ ಧೋನಿ ಬರುತ್ತಾರೆ ಎನ್ನುವ ಮಾತು ಇಂದು ನಿನ್ನೆಯದಲ್ಲ. ಈಗಾಗಲೇ ಧೋನಿ ನಿರ್ಮಾಪಕರಾಗಿ ತಮಿಳು ಚಿತ್ರರಂಗವನ್ನು ಪ್ರವೇಶ ಮಾಡಿದ್ದಾರೆ. ಈಗಾಗಲೇ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ.
ಆದರೆ.. ಕಲಾವಿದನಾಗಿ ಧೋನಿ ಅವರನ್ನು ಚಿತ್ರದಲ್ಲಿ ಅದರಲ್ಲಿಯೂ ಆರ್ ಮಾಧವನ್ ಅವರ ಎದುರು ಯಾರು ನಿರೀಕ್ಷೆ ಮಾಡಿರಲಿಲ್ಲ. ಇನ್ನುಳಿದಂತೆ ಆರ್ ಮಾಧವನ್ 'ಧುರಂಧರ್' ಚಿತ್ರದ ಬಿಡುಗಡೆಗೆಯನ್ನು ಎದುರು ನೋಡುತ್ತಿದ್ಧಾರೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ ಮತ್ತು ಸಂಜಯ್ ದತ್ ಕೂಡ ನಟಿಸಿದ್ದಾರೆ. 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಖ್ಯಾತಿಯ ಆದಿತ್ಯ ಧರ್ 'ಧುರಂಧರ್' ಚಿತ್ರ ನಿರ್ದೇಶನ ಮಾಡಿದ್ದು, ಆದಿತ್ಯ ಧರ್, ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ಜಂಟಿಯಾಗಿ ನಿರ್ಮಿಸಿದ್ದಾರೆ.
ಧೋನಿ ಕುರಿತು ಹೇಳುವುದಾದರೆ, ಅವರನ್ನು ಇತ್ತೀಚೆಗೆ ಐಸಿಸಿ ಹಾಲ್ ಆಫ್ ಫೇಮ್ಗೆ ಸೇರಿಸಲಾಗಿದೆ. ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಧೋನಿ, ಜೂನ್ ತಿಂಗಳಲ್ಲಿ ಲಂಡನ್ನಲ್ಲಿ ನಡೆದ ಸಮಾರಂಭದಲ್ಲಿ ಈ ವಿಶೇಷ ಕ್ಲಬ್ಗೆ ಸೇರ್ಪಡೆಯಾದ 11ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.


Click it and Unblock the Notifications











