ದುಬೈನಿಂದ ಬಂದ ಶಾರುಖ್ ಅನ್ನು ತಡೆದು ಲಕ್ಷಾಂತರ ದಂಡ ಕಟ್ಟಿಸಿಕೊಂಡ ಅಧಿಕಾರಿಗಳು!
ಶಾರುಖ್ ಖಾನ್ ಒಂದು ದಿನ ಹಿಂದೆಯಷ್ಟೆ ದುಬೈನ ಶಾರ್ಜಾನಲ್ಲಿ ನಡೆದ 'ಬುಕ್ ಫೇರ್' (ಪುಸ್ತಕ ಮೇಳ) ದಲ್ಲಿ ಭಾಗವಹಿಸಿ, ಅಲ್ಲಿ ಪ್ರತಿಷ್ಠಿತ ಪ್ರಶಸ್ತಿಗೆ ಸಹ ಭಾಜನರಾಗಿದ್ದಾರೆ. ಇದು ದೊಡ್ಡ ಸುದ್ದಿಯಾದ ಬೆನ್ನಲ್ಲೇ ಅಲ್ಲಿಂದ ಹಿಂತಿರುಗಿ ಬರುವ ವೇಳೆಗೆ ಮಹಾರಾಷ್ಟ್ರದ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಅವರನ್ನು ತಡೆದಿದ್ದಾರೆ.
ಶಾರ್ಜಾದಿಂದ ಎಮರೈಟ್ಸ್ ವಿಮಾನದಲ್ಲಿ ವಾಪಸ್ಸಾದ ಶಾರುಖ್ ಖಾನ್, ಅವರ ಮ್ಯಾನೇಜರ್ ಪೂಜಾ ದದ್ಲಾನಿ, ಬಾಡಿಗಾರ್ಡ್ ರವಿ ಹಾಗೂ ಶಾರುಖ್ ಖಾನ್ರ ಇತರೆ ಸಿಬ್ಬಂದಿಗಳನ್ನು ಮುಂಬೈನ ಕಸ್ಟಮ್ಸ್ ಅಧಿಕಾರಿಗಳು ತಡೆದಿದ್ದು ಅವರ ಬ್ಯಾಗುಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.
ಈ ಸಮಯದಲ್ಲಿ ಶಾರುಖ್ ಖಾನ್ಗೆ ಸೇರಿದ ಬ್ಯಾಗಿನಲ್ಲಿ ದುಬಾರಿ ವಾಚುಗಳು ದೊರೆತಿದ್ದು, ಅವಕ್ಕೆ ಸೂಕ್ತ ದಾಖಲೆಗಳು ಇರಲಿಲ್ಲ ಎನ್ನಲಾಗುತ್ತಿದೆ. ಶಾರುಖ್ ಖಾನ್ಗೆ ಸೇರಿದ ಬ್ಯಾಗಿನಲ್ಲಿ ದುಬಾರಿ ಬ್ರ್ಯಾಂಡ್ಗಳಾದ ಎಸ್ಪಿರೆಂಟ್, ಬಬೂನ್ ಆಂಡ್ ಜುರ್ಬಕ್, ಆಪರ್ ಸರಣಿ ವಾಚ್ಗಳು ಪತ್ತೆಯಾಗಿವೆ. ಈ ವಾಚುಗಳ ಒಟ್ಟು ಮೌಲ್ಯ ಸುಮಾರು 17.50 ಲಕ್ಷ ಆಗುತ್ತದೆ. ಇವುಗಳ ಜೊತೆಗೆ ದುಬಾರಿ ವಾಚು ಬ್ರ್ಯಾಂಡ್ ಆದ ರೋಲೆಕ್ಸ್ನ ಖಾಲಿ ಬಾಕ್ಸ್ಗಳು ಸಹ ಪತ್ತೆಯಾಗಿದೆ.

ಒಂದು ಗಂಟೆ ಕಾಲ ವಿಚಾರಣೆ
ಶಾರುಖ್ ಖಾನ್ ಹಾಗೂ ಅವರ ಸಿಬ್ಬಂದಿಯನ್ನು ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿದ ಮುಂಬೈನ ಕಸ್ಟಮ್ಸ್ ಅಧಿಕಾರಿಗಳು ಕೊನೆಗೆ ಶಾರುಖ್ ಖಾನ್ ಅವರಿಂದ 6.83 ಲಕ್ಷ ಕಸ್ಟಮ್ಸ್ ತೆರಿಗೆಯನ್ನು ಪಾವತಿ ಮಾಡಿಸಿಕೊಂಡಿದ್ದಾರೆ. ಒಂದು ಗಂಟೆ ಬಳಿಕ ಶಾರುಖ್ ಹಾಗೂ ಮ್ಯಾನೇಜರ್ ಪೂಜಾ ವಿಮಾನ ನಿಲ್ದಾಣ ತೊರೆದಿದ್ದಾರೆ ಆದರೆ ಅವರ ಬಾಡಿಗಾರ್ಡ್ ರವಿ ಹಾಗೂ ಇತರ ಸಿಬ್ಬಂದಿಗಳು ತಡವಾಗಿ ವಿಮಾನ ನಿಲ್ದಾಣ ತೊರೆದು ಹೋಗಿದ್ದಾರೆ.

ಅಮೆರಿಕದಲ್ಲಿಯೂ ತಡೆದಿದ್ದ ಅಧಿಕಾರಿಗಳು
ಶಾರುಖ್ ಖಾನ್ ಅವರನ್ನು ಕೆಲ ವರ್ಷಗಳ ಹಿಂದೆ ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ತಡೆದು ನಿಲ್ಲಿಸಿ ಕೆಲ ಗಂಟೆಗಳ ಕಾಲ ವಿನಾಕಾರಣ ವಿಚಾರಣೆ ನಡೆಸಿದ್ದರು. 2011ರಲ್ಲಿ ನ್ಯೂಯಾರ್ಕ್ನ ಟ್ವಿನ್ ಟವರ್ ಮೇಲೆ ದಾಳಿ ಮಾಡಿದ ಬಳಿಕ ಮುಸ್ಲಿಂ ಪ್ರಾಣಿಕರ ವಿರುದ್ಧ ಕಠಿಣ ನಿಲುವನ್ನು ಅಮೆರಿಕದ ವಿಮಾನ ನಿಲ್ದಾಣ ಭದ್ರತಾ ಅಧಿಕಾರಿಗಳು ತಳೆದಿದ್ದರು. ಅದೇ ಕಾರಣಕ್ಕೆ ಶಾರುಖ್ ಖಾನ್ ಜೊತೆ ಕಠಿಣವಾಗಿ ನಡೆದುಕೊಂಡಿದ್ದರು. ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈಗ ಭಾರತದಲ್ಲಿ, ಅದೂ ಶಾರುಖ್ ಖಾನ್ ನಿವಾಸಿಯಾಗಿರುವ ಮುಂಬೈನಲ್ಲಿಯೇ ಘಟನೆ ನಡೆದಿದೆ.

ಹಲವು ಸಿನಿಮಾಗಳಲ್ಲಿ ಶಾರುಖ್ ಖಾನ್ ಬ್ಯುಸಿ
ಶಾರುಖ್ ಖಾನ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ಸಿನಿಮಾ ಒಂದು ಬಿಡುಗಡೆ ಆಗಿ ಮೂರು ವರ್ಷದ ಮೇಲಾಗಿದೆ. ಈ ವರ್ಷವೂ ಶಾರುಖ್ ಖಾನ್ರ ಸಿನಿಮಾ ಬಿಡುಗಡೆ ಆಗುವುದಿಲ್ಲ. ಆದರೆ ಮುಂದಿನ ವರ್ಷದಿಂದ ಸತತವಾಗಿ ಮೂರು ಸಿನಿಮಾಗಳು ಬಿಡುಗಡೆ ಆಗಲಿವೆ. ಅಟ್ಲಿ ನಿರ್ದೇಶನದ 'ಜವಾನ್', ದೀಪಿಕಾ ಪಡುಕೋಣೆ, ಜಾನ್ ಅಬ್ರಹಂ ಜೊತೆ ನಟಿಸಿರುವ 'ಪಠಾಣ್' ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಇವುಗಳ ಬಳಿಕ ರಾಜ್ಕುಮಾರ್ ಹಿರಾನಿ ಜೊತೆಗಿನ 'ಡಂಕಿ' ಸಿನಿಮಾ ತೆರೆಗೆ ಬರುತ್ತಿದೆ. ಅದರ ಬಳಿಕ ಕರಣ್ ಜೋಹರ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications











