Dada First Look: ಜೆರ್ಸಿ ಬಿಚ್ಚಿ 'ದಾದಾ' ಸಂಭ್ರಮ; ಗಂಗೂಲಿ ಬಯೋಪಿಕ್ ಫಸ್ಟ್ ಲುಕ್ ಬಂತು
ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ತಮ್ಮ ಜರ್ಸಿ ಬಿಚ್ಚಿ ಸಂಭ್ರಮಿಸಿದ್ದ ಘಟನೆಯನ್ನು ಕ್ರಿಕೆಟ್ ಪ್ರೇಮಿಗಳು ಮರೆಯೋಕೆ ಸಾಧ್ಯವಿಲ್ಲ. ಈ ಬಗ್ಗೆ ಸಾಕಷ್ಟು ಟೀಕೆಗಳು ಬಂದಿದ್ದವು. ಆದರೂ ಆ ಕ್ಷಣಗಳು ಕ್ರಿಕೆಟ್ ಇತಿಹಾಸದ ಪಟ್ಟಗಳಲ್ಲಿ ಅಚ್ಚಳಿಯದೇ ಉಳಿದು ಬಿಟ್ಟಿದೆ. ಸದ್ಯ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಬಯೋಪಿಕ್ ಸಿನಿಮಾ ನಿರ್ಮಾಣವಾಗ್ತಿದೆ. ದಾದಾ ಹುಟ್ಟುಹಬ್ಬದ ಸಂಭ್ರಮದಲ್ಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನಾವರಣವಾಗಿದೆ.
ವಿಕ್ರಮಾದಿತ್ಯ ಮೋಟ್ವಾನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ 'ದಾದಾ' ಎಂಬ ಟೈಟಲ್ ಫಿಕ್ಸ್ ಆಗಿದ್ದು 'ದಿ ಸೌರವ್ ಗಂಗೂಲಿ ಸ್ಟೋರಿ' ಎನ್ನುವ ಕ್ಯಾಪ್ಷನ್ ಕೂಡ ಇದೆ. ಚಿತ್ರದಲ್ಲಿ ಗಂಗೂಲಿ ಪಾತ್ರದಲ್ಲಿ ರಾಜ್ಕುಮಾರ್ ರಾವ್ ಬಣ್ಣ ಹಚ್ಚಿದ್ದಾರೆ. ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ಗಂಗೂಲಿ ಜೆರ್ಸಿ ಬಿಚ್ಚಿ ಸಂಭ್ರಮಿಸಿದ ಅವತಾರದಲ್ಲೇ ಫಸ್ಟ್ ಲುಕ್ ಪೋಸ್ಟ್ ಡಿಸೈನ್ ಮಾಡಿದ್ದಾರೆ. ಮುಂದಿನ ವರ್ಷ ಮೇ 14ಕ್ಕೆ ಈದ್ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಇತ್ತೀಚಿಗೆ ಚಿತ್ರದ ಮೇಕಿಂಗ್ ಸ್ಟಿಲ್ಸ್ ಲೀಕ್ ಆಗಿ ವೈರಲ್ ಆಗಿತ್ತು. ಗಂಗೂಲಿ ಅವತಾರದಲ್ಲಿ ರಾಜ್ಕುಮಾರ್ ರಾವ್ ಲುಕ್ ನೋಡಿ ಕೆಲವರು ಟೀಕಿಸಿದ್ದರು. ಇದೀಗ ಅಧಿಕೃತ ಪೋಸ್ಟರ್ ಹೊರಬಂದಿದೆ. ಪೋಸ್ಟರ್ನಲ್ಲಿ ಕೂಡ ಲುಕ್ಸ್ ಬಗ್ಗೆ ಪರ ವಿರೋಧ ಚರ್ಚೆ ಶುರುವಾಗಿದೆ. ಕೆಲವರು ಚೆನ್ನಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಚೆನ್ನಾಗಿಲ್ಲ ಎಂದು ಟೀಕಿಸುವವರು ಇದ್ದಾರೆ.
'ದಾದಾ' ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡು ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ. "ಇದು ನಿಜಕ್ಕೂ ಬೆಸ್ಟ್ ಗಿಫ್ಟ್.. ನನ್ನ ರೀತಿ ನೀವು ಕವರ್ ಡ್ರೈವ್ ಶಾಟ್ ಹೊಡೆಯುವುದನ್ನು ನೋಡಲು ಕಾಯುತ್ತದ್ದೇನೆ ರಾಜ್ಕುಮಾರ್ ರಾವ್" ಎಂದು ಬರೆದುಕೊಂಡಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಲಾಗ್ತಿದೆ. ಈಗಾಗಲೇ ಸಾಕಷ್ಟು ಕ್ರೀಡಾಪಟುಗಳ ಜೀವನಾಧರಿತ ಸಿನಿಮಾಗು ತೆರೆಗೆ ಬಂದಿದೆ. ಧೋನಿ, ಸಚಿನ್ ತೆಂಡೂಲ್ಕರ್, ಅಜರುದ್ದೀನ್ ರೀತಿ ಅದ್ಭುತ ಕ್ರಿಕೆಟ್ ಆಟಗಾರರ ಬಯೋಪಿಕ್ ಸಿನಿಮಾಗಳು ಸದ್ದು ಮಾಡಿದ್ದವು. ಆದರೆ 'ದಾದಾ' ಚಿತ್ರಕ್ಕಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ.
ಭಾರತೀಯ ಕ್ರಿಕೆಟ್ಗೆ ಗಂಗೂಲಿ ಕೊಡುಗೆ ಮರೆಯುವಂತಿಲ್ಲ. 2000 ರ ದಶಕದ ಆರಂಭದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಂಕಷ್ಟಕ್ಕೆ ಸಿಲುಕ್ಕಿತ್ತು. ಮ್ಯಾಚ್ ಫಿಕ್ಸಿಂಗ್ ಹಗರಣದಿಂದ ಭಾರೀ ಟೀಕೆಗೆ ಗುರಿಯಾಗಿತ್ತು. ಅದೇ ಸಮಯದಲ್ಲಿ ತಂಡದ ನಾಯತ್ವ ವಹಿಸಿಕೊಂಡು ಕುಗ್ಗಿ ಹೋಗಿದ್ದ ತಂಡವನ್ನು ಕಟ್ಟಿ ಬೆಳೆಸಿದವರು ಗಂಗೂಲಿ. ಯುವ ಪ್ರತಿಭೆಗಳನ್ನು ಬೆಳೆಸಿ ತಂಡಕ್ಕೆ ಹೊಸ ಚೈತನ್ಯ ತುಂಬಿದರು. ಮುಂದೆ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದರೂ ಅದಕ್ಕೂ ಮುನ್ನ ತಂಡವನ್ನು ಬೆಳೆಸಿದವರು ಗಂಗೂಲಿ. ವಿದೇಶಿ ನೆಲದಲ್ಲಿ ದಾದಾ ನಾಯಕತ್ವದಲ್ಲೇ ಭಾರತ ತಂಡ ಅದ್ಭುತ ಪ್ರದರ್ಶನ ತೋರಿತ್ತು.
ದಾದಾ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ಬಲಿಷ್ಠ ತಂಡಗಳ ವಿರುದ್ಧ ಭಾರತ ಕ್ರಿಕೆಟ್ ಐತಿಹಾಸಿಕ ಗೆಲುವುಗಳನ್ನ ಸಾಧಿಸಿತ್ತು. ಜುಲೈ 13, 2002ರಂದು ನಡೆದ ನಾಟ್ವೆಸ್ಟ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತ ಸೋಲುವ ಭೀತಿಗೆ ಸಿಲುಕಿತ್ತು. ಆದರೆ 326 ರನ್ಗಳ ಬೃಹತ್ ಗುರಿ ಬೆನ್ನಟ್ಟಿ ತಂಡ ರೋಚಕ ಗೆಲುವು ಸಾಧಿಸಿತ್ತು. ಅದೇ ಸಂಭ್ರಮದಲ್ಲಿ ತಂಡದ ನಾಯಕ ಗಂಗೂಲಿ ಹೀಗೆ ತಮ್ಮ ಜೆರ್ಸಿ ಬಿಚ್ಚಿ ಗಾಳಿಯಲ್ಲಿ ತಿರುಗಿಸಿ ವಿಜಯೋತ್ಸವ ಮಾಡಿದ್ದರು.
ರಾಷ್ಟ್ರಪ್ರಶಸ್ತಿ ವಿಜೇತ ನಟ ರಾಜ್ಕುಮಾರ್ ರಾವ್ ತಮ್ಮ ಅದ್ಭುತ ನಟನೆಯ ಮೂಲಕ ಈಗಾಗಲೇ ಮೋಡಿ ಮಾಡಿದ್ದಾರೆ. ತೆರೆಮೇಲೆ ಸೌರವ್ ಗಂಗೂಲಿ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ. ಕ್ರಿಕೆಟ್ ಆಟದ ತರಬೇತಿ ಪಡೆದು ರಾಜ್ಕುಮಾರ್ ರಾವ್ ನಟಿಸುತ್ತಿದ್ದಾರೆ. ಒಟ್ಟಾರೆ ಸಿನಿಮಾ ನಿರೀಕ್ಷೆ ಮೂಡಿಸಿದೆ.


Click it and Unblock the Notifications