ರೇಪ್ ಸೀನ್ ಶೂಟಿಂಗ್ ವೇಳೆ ದಲಿಪ್ ತಹಿಲ್ ಕೆನ್ನೆಗೆ ಬಾರಿಸಿದ್ರಾ ಜಯಪ್ರದ? ದಶಕಗಳ ನಂತರ ಮೌನ ಮುರಿದ ನಟ!
'ಆಕ್ರೀ ರಾಸ್ತಾ' ಶೂಟಿಂಗ್ ವೇಳೆ ನಟಿ ಜಯಪ್ರದಾ ಪೋಷಕ ನಟ ದಲಿಪ್ ತಹಿಲ್ಗೆ ಕಪಾಳಮೋಕ್ಷ ಮಾಡಿದ್ದರು ಎನ್ನು ಸುದ್ದಿ ಕೇಳಿಬರ್ತಾನೆ ಇತ್ತು. ಆದರೆ ಈ ಬಗ್ಗೆ ಈವರೆಗೂ ಇಬ್ಬರು ಪ್ರತಿಕ್ರಿಯಿಸಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಈ ಬಗ್ಗೆ ನಟ ದಲೀಪ್ ತಹಿಲ್ ಮಾತನಾಡಿದ್ದಾರೆ.
ರೇಪ್ ಸೀನ್ ಶೂಟಿಂಗ್ ವೇಳೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ನಟ ದಲಿಪ್ ತಹಿಲ್ ಕೆನ್ನೆಗೆ ನಟಿ ಜಯಪ್ರದ ಬಾರಿಸಿದ್ದರು ಎನ್ನಲಾಗಿತ್ತು. ಹಲವು ವರ್ಷಗಳಿಂದ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಚರ್ಚೆ ಆಗುತ್ತಲೇ ಇತ್ತು. 1986ರಲ್ಲಿ ಬಿಡುಗಡೆಯಾಗಿದ್ದ 'ಆಕ್ರೀ ರಾಸ್ತಾ' ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಡಬಲ್ ರೋಲ್ನಲ್ಲಿ ಮಿಂಚಿದ್ದರು. ಕೆ. ಭಾಗ್ಯರಾಜ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೀದೇವಿ ಹಾಗೂ ಜಯಪ್ರದ ನಾಯಕಿಯರಾಗಿ ಮಿಂಚಿದ್ದರು.
ಪೊಲೀಸ್ ಇನ್ಸ್ಪೆಕ್ಟರ್ ಆಗಿ ನೆಗಟಿವ್ ರೋಲ್ನಲ್ಲಿ ನಟ ದಲಿಪ್ ತಹಿಲ್ ನಟಿಸಿದ್ದರು. ಚಿತ್ರದಲ್ಲಿ ಜಯಪ್ರದ ಹಾಗೂ ದಲೀಪ್ ತಹಿಲ್ ನಡುವೆ ರೇಪ್ ಸೀನ್ ಇತ್ತು. ಚಿತ್ರೀಕರಣದ ವೇಳೆ ದಲೀಪ್ ಓವರ್ ಆಗಿ ನಡೆದುಕೊಂಡಿದ್ದಕ್ಕೆ ಬೇಸರಗೊಂಡ ಜಯಪ್ರದ ಕೆನ್ನೆಗೆ ಬಾರಿಸಿದ್ದರು ಎನ್ನಲಾಗಿತ್ತು. ಆ ಕಾಲಕ್ಕೆ ಈ ಸುದ್ದಿ ಬಾಲಿವುಡ್ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ನಾನು ಜಯಪ್ರದ ಜೊತೆ ನಟಿಸಲೇ ಇಲ್ಲ
36 ವರ್ಷಗಳ ನಂತರ ಈ ಸುದ್ದಿ ಬಗ್ಗೆ ನಟ ದಲೀಪ್ ತಹಿಲ್ ಮಾತನಾಡಿದ್ದಾರೆ. "ಈ ಸುದ್ದಿಯನ್ನು ನಾನು ಬಹಳ ವರ್ಷಗಳಿಂದ ಕೇಳುತ್ತಲೇ ಇದ್ದೀನಿ. ಎಚ್ಚರಿಸುತ್ತಲೇ ಇದೆ. ನಾನು ಯಾವತ್ತು ಜಯಪ್ರದಾ ಅವರೊಟ್ಟಿಗೆ ಸ್ಕ್ರೀನ್ ಶೇರ್ ಮಾಡಿಲ್ಲ. ಆಕೆ ಜೊತೆ ನಟಿಸಬೇಕು, ಸ್ಕ್ರೀನ್ಶೇರ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆ. ಆದರೆ ಆ ಅವಕಾಶ ಬರಲೇ ಇಲ್ಲ. ಸದ್ಯ ಎಲ್ಲರೂ ಹೇಳುತ್ತಿರುವಂತಹ ಸನ್ನಿವೇಶ, ಘಟನೆ ನಡೆಯಲೇ ಇಲ್ಲ" ಎಂದಿದ್ದಾರೆ.

ಬರೀ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ
"ಅಷ್ಟಕ್ಕೂ ಇಂತಾದೊಂದು ಸುಳ್ಳು ಸುದ್ದಿ ಹಬ್ಬಿಸಿದ ವ್ಯಕ್ತಿ ಮೇಲೆ ನನಗೆ ಯಾವುದೇ ಶತ್ರುತ್ವ ಇಲ್ಲ. ಆದರೆ ಈ ಘಟನೆ ಯಾವಾಗ ನಡೀತು ಎನ್ನುವುದನ್ನು ಆತ ತೋರಿಸಬೇಕು ಎಂದು ಕೇಳಿಕೊಳ್ಳುತ್ತೇನೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಸಾಕಷ್ಟು ಸಂಗತಿಗಳನ್ನು ಸೃಷ್ಟಿಸಲಾಗುತ್ತಿದೆ. ನಡೆಯದೇ ಇರುವ ಘಟನೆಯನ್ನು ಕಲ್ಪಿಸಿಕೊಂಡು ಬರೆಯಲಾಗುತ್ತಿದೆ. ಆದರೆ ಅಂತಹ ಘಟನೆ ಮಾತ್ರ ನಡೆದೇ ಇಲ್ಲ" ಎಂದು ನಟ ದಲೀಪ್ ತಹಿಲ್ ಹೇಳಿದ್ದಾರೆ.

ಸೂಪರ್ ಹಿಟ್ ಚಿತ್ರಗಳಲ್ಲಿ ತಹಿಲ್
70 ದಶಕಗಳಿಂದಲೂ ನಟ ದಲಿಪ್ ತಹಿಲ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಬಾಜೀಗರ್', 'ಖಯಾಮತ್ ಸೇ ಖಯಾಮತ್ ತಕ್', 'ಕಹೋ ನ ಪ್ಯಾರ್ ಮೇ', 'ರಾಕ್ ಆನ್', 'ರಾ ವನ್', 'ಭಾಗ್ ಮಿಲ್ಕಾ ಭಾಗ್', 'ರೇಸ್', 'ಮಿಷನ್ ಮಂಗಲ್' ದಲೀಪ್ ನಟಿಸಿದ ಕೆಲ ಜನಪ್ರಿಯ ಸಿನಿಮಾಗಳು. ಈ ವರ್ಷ ಬಿಡುಗಡೆಯಾದ 'ಹಿಟ್: ದಿ ಫಸ್ಟ್ ಕೇಸ್' ಚಿತ್ರದಲ್ಲಿ ಕೊನೆಯದಾಗಿ ದಲೀಪ್ ನಟಿಸಿದ್ದಾರೆ.

ಪಂಚಭಾಷೆ ತಾರೆ ಜಯಪ್ರದ
ಇನ್ನು ನಟಿ ಜಯಪ್ರದ ಪಂಚಭಾಷೆ ತಾರೆಯಾಗಿ ಗುರ್ತಿಸಿಕೊಂಡಿದ್ದಾರೆ. 'ಸನಾದಿ ಅಪ್ಪಣ್ಣ', 'ಕವಿರತ್ನ ಕಾಳಿದಾಸ', 'ಶಬ್ದವೇದಿ' ಚಿತ್ರದಲ್ಲಿ ಡಾ. ರಾಜ್ಕುಮಾರ್ ಜೊತೆ ನಟಿಸಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲೂ ಮಿಂಚಿದ್ದಾರೆ. ಆಂಧ್ರದ ರಾಜಮಂಡ್ರಿಯಲ್ಲಿ ಹುಟ್ಟಿ ಬೆಳೆದ ಜಯಪ್ರದ ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ. ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ.


Click it and Unblock the Notifications










