ಪಾಕಿಸ್ತಾನದ ಜೊತೆ ಸಂಬಂಧ,₹15,000 ಕೋಟಿ ಕಳೆದುಕೊಂಡ ಸೈಫ್ ಅಲಿ ಖಾನ್...?
ಅದೃಷ್ಟ.. ದುರಾದೃಷ್ಟಗಳೆಲ್ಲ ಅವರ ಅವರ ನಂಬಿಕೆಗೆ ಬಿಟ್ಟಿದ್ದಾದರೂ, ನವಗ್ರಹಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ. ಆದರೆ.. ಗ್ರಹಗಳ ಮೂಲಕ ಮನುಷ್ಯನ ಕಾರ್ಯಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ಕಲ್ಪನೆಗೆ ಆಧಾರವೇ ಇಲ್ಲ, ಅದು ಆಧಾರ ರಹಿತವಾದ ನಂಬಿಕೆ ಎನ್ನುವುದು ವಿಜ್ಞಾನಿಗಳ ವಾದ. ಈ ವಾದ-ವಿವಾದ ಏನೇ ಇರಲಿ.. ಸದ್ಯಕ್ಕೆ ಸೈಫ್ ಅಲಿ ಖಾನ್ ಹಣೆಬರಹಕ್ಕೆ ಈ ಗ್ರಹ ಗತಿಗಳೇ ಕಾರಣ ಅನ್ನುವುದು ಮಾತ್ರ ನಿಜಾ.
ಹೌದು, ಮೊನ್ನೆಯಷ್ಟೇ ಚಾಕು ಇರಿತಕ್ಕೆ ಒಳಗಾದ ಸೈಫ್ ಅಲಿ ಖಾನ್ ಸದ್ಯ ಆಸ್ಪತ್ರೆಯಿಂದ ನಿನ್ನೆ ಮನೆಗೆ ತೆರಳಿದ್ದಾರೆ. ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಮಧ್ಯ ಪ್ರದೇಶದ ಹೈಕೋರ್ಟ್ ಸೈಫ್ ಅಲಿ ಖಾನ್ ಗೆ ಇದ್ದ ಚೂರು-ಪಾರು ನೆಮ್ಮದಿಯನ್ನು ಕಸಿದುಕೊಂಡಿದೆ. 15,000 ಕೋಟಿ ಆಸ್ತಿಯ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದೆ.

ಹೌದು, ಅಸಲಿಗೆ ಭೋಪಾಲ್ನಲ್ಲಿ ಸೈಫ್ ಅಲಿ ಖಾನ್ ಅವರಿಗೆ ಸೇರಿದ ಭವ್ಯವಾದ ಅರಮನೆ ಇದೆ. ಸೈಫ್ ಅಲಿ ಖಾನ್ ತಮ್ಮ ಬಾಲ್ಯವನ್ನು ಕಳೆದಿದ್ದು ಇದೇ ಅರಮನೆಯಲ್ಲಿ. 15,000 ಕೋಟಿ ಮೌಲ್ಯದ ಈ ಅರಮನೆಯನ್ನು 1935ರಲ್ಲಿ ಸೈಫ್ ಅಲಿ ಖಾನ್ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿಯ ತಾಯಿಯ ಅಜ್ಜ ನವಾಬ್ ಹಮೀದುಲ್ಲಾ ಖಾನ್ ನಿರ್ಮಾಣ ಮಾಡಿದ್ದರು. ಆದರೆ, 1947ರ ವಿಭಜನೆಯ ನಂತರ ನವಾಬ್ ಹಮೀದುಲ್ಲಾ ಖಾನ್ ತಮ್ಮ ಈ ಆಸ್ತಿಯನ್ನು ತೊರೆದು ಪಾಕಿಸ್ತಾನಕ್ಕೆ 1950ರಲ್ಲಿ ವಲಸೆ ಹೋದರು.
ಈ ಸಮಯದಲ್ಲಿ ನವಾಬ್ ಹಮೀದುಲ್ಲಾ ಖಾನ್ ಅವರ ಮೂವರು ಹೆಣ್ಣು ಮಕ್ಕಳ ಪೈಕಿ ಒಬ್ಬ ಮಗಳಾದ ಅಬಿದಾ ಸುಲ್ತಾನ್ ತಂದೆ ಜೊತೆ ಪಾಕಿಸ್ತಾನಕ್ಕೆ ತೆರಳಿದರೆ ನವಾಬ್ ಇಫ್ತಿಕರ್ ಅಲಿ ಪಟೌಡಿಯನ್ನು ಮದುವೆಯಾಗಿದ್ದ ಎರಡನೇ ಮಗಳು ಸಾಜಿದಾ ಸುಲ್ತಾನ್ ಭಾರತದಲ್ಲಿಯೇ ಉಳಿದುಕೊಂಡರು. ಕಾನೂನು ಬದ್ದವಾಗಿ ಆಸ್ತಿಗಳ ಉತ್ತರಾಧಿಕಾರಿಯಾದರು. 2019ರಲ್ಲಿ ನ್ಯಾಯಾಲಯ ಕೂಡ ಸಾಜಿದಾ ಸುಲ್ತಾನ್ ಅವರೇ ಈ ಆಸ್ತಿಯ ಉತ್ತರಾಧಿಕಾರಿಯೆಂದು ಹೇಳಿತ್ತು. ಆಸ್ತಿಯಲ್ಲಿ ಸೈಫ್ ಅಲಿ ಖಾನ್ ಅವರಿಗೆ ಕೂಡ ಪಾಲನ್ನು ನೀಡಿತ್ತು.
ಆದರೆ, ಆ ನಂತರ ಸಾಜಿದಾ ಅವರ ಅಕ್ಕ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದ ಹಿನ್ನೆಲೆ ಕೇಂದ್ರ ಸರ್ಕಾರ ಚಕಾರವೆತ್ತಿತ್ತು. 1968ರ ಶತ್ರು ಆಸ್ತಿ ಕಾಯ್ದೆ ಅಡಿ ಈ ಆಸ್ತಿ ಬರುತ್ತೆ ಎಂದು ವಾದವನ್ನು ಮಾಡಿತ್ತು. ಈ ಕಾಯ್ದೆಯ ಅಡಿ ಭಾರತ ಮತ್ತು ಪಾಕಿಸ್ಥಾನದ ವಿಭಜನೆಯ ನಂತರ ಭಾರತವನ್ನು ತೊರೆದು ಹೋದವರ ಮೇಲೆ ಸರ್ಕಾರದ ಹಕ್ಕು ಮಾತ್ರ ಇರುತ್ತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಈ ಹಿನ್ನೆಲೆ ಮಧ್ಯ ಪ್ರದೇಶ ಕೈಕೋರ್ಟ್ಗೆ ಸೈಫ್ ಅಲಿ ಖಾನ್ ಅರ್ಜಿಯನ್ನು ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಆದರೆ ಈಗ ಈ ತಡೆಯಾಜ್ಞೆಯನ್ನು ಹೈಕೋರ್ಟ್ನ ನ್ಯಾಯಮೂರ್ತಿ ವಿವೇಕ್ ಅಗರ್ ವಾಲ್ ಅವರ ಏಕ ಸದಸ್ಯ ಪೀಠ ತೆರವುಗೊಳಿಸಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ಆಸ್ತಿಯನ್ನು ವಶಕ್ಕೆ ಪಡೆಯುವ ಎಲ್ಲ ಸಾಧ್ಯತೆಗಳಿವೆ. ಒಂದು ವೇಳೆ ಸೈಫ್ ಅಲಿ ಖಾನ್ ಸುಪ್ರಿಂ ಕೋರ್ಟ್ನ ಮೆಟ್ಟಿಲೇರದಿದ್ದರೆ ಈ 15,000 ಕೋಟಿ ಆಸ್ತಿ ಕೇಂದ್ರ ಸರ್ಕಾರದ ಪಾಲಾಗುವುದು ಖಚಿತ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಹೈಕೋರ್ಟ್ನ ಆದೇಶದ ಕುರಿತು ಸೈಫ್ ಅಲಿ ಖಾನ್ ಇನ್ನು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.


Click it and Unblock the Notifications











