ಕಂಗನಾ ರನೌತ್ಗೆ ಜೀವ ಬೆದರಿಕೆ: ಸೋನಿಯಾ ಗಾಂಧಿಯ ಸಹಾಯ ಕೇಳಿದ ನಟಿ
ಕೆಲ ವರ್ಷಗಳಿಂದ ವಿವಾದಾತ್ಮಕ ಹೇಳಿಕೆಗಳ ಮೂಲಕ ಬಹಳ ಸುದ್ದಿಯಲ್ಲಿರುವ ನಟಿ ಕಂಗನಾ ರನೌತ್, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ, ಆರ್ಎಸ್ಎಸ್ನ ಅನಧಿಕೃತ ವಕ್ತಾರೆಯೇ ಆಗಿದ್ದಾರೆ. ಬಿಜೆಪಿ ಪರವಾಗಿ ಸತತ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವ ಕಂಗನಾ ಇದೀಗ ಹಠಾತ್ತನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಹಾಯ ಕೇಳಿದ್ದಾರೆ.
ಕಂಗನಾ ರನೌತ್, ಸೋನಿಯಾ ಗಾಂಧಿ ಯವರ ಸಹಾಯ ಕೇಳಲು ಕಾರಣವಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು, ರೈತರ ಸತತ ಪ್ರತಿಭಟನೆ ಮುಂದೆ ಮಂಡಿಯೂರಿ ಕೃಷಿ ಕಾಯ್ದೆಗಳನ್ನು ಹಿಂಪಡೆದಿತ್ತು. ಕೃಷಿ ಕಾಯ್ದೆಗಳನ್ನು ಬೆಂಬಲಿಸಿ ಪ್ರತಿಭಟನಾನಿರತ ರೈತರ ವಿರುದ್ಧ ನಿಂದನೆಗಳ ಸುರಿಮಳೆ ಮಾಡಿದ್ದ ಕಂಗನಾಗೆ ಇದು ಸೂಕ್ತವೆನಿಸಲಿಲ್ಲ.
ಹಾಗಾಗಿ ಕೃಷಿ ಕಾಯ್ದೆಯನ್ನು ಸರ್ಕಾರವು ಹಿಂಪಡೆದ ಬಳಿಕ ಮತ್ತೆ ರೈತರ ವಿರುದ್ಧ ಹಾಗೂ ರೈತರ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಸಿಖ್ಖರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಂಗನಾ ಸಿಖ್ ಸಮುದಾಯದ ಬಗ್ಗೆ ಆಡಿದ್ದ ಮಾತುಗಳಿಗೆ ತೀವ್ರ ಆಕ್ರೋಶ ವ್ಯಕ್ತವಾಗಿ, ಹಲವು ಕಡೆ ದೂರುಗಳು ಸಹ ಕಂಗನಾ ವಿರುದ್ಧ ದಾಖಲಾಗಿದ್ದವು. ಈಗ ಅದೇ ಹೇಳಿಕೆಗೆ ಸಂಬಂಧಿಸಿದಂತೆ ಕಂಗನಾಗೆ ಕೊಲೆ ಬೆದರಿಕೆಗಳು ಬಂದಿದ್ದು ನಟಿಯು ದೂರು ನೀಡಿದ್ದಾರೆ.

ನಾನು ಮಾತನಾಡುತ್ತಲೇ ಇರುತ್ತೇನೆ: ಕಂಗನಾ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಗನಾ, ''ನನಗೆ ಸತತವಾಗಿ ಬೆದರಿಕೆ ಕರೆಗಳು, ಸಂದೇಶಗಳು ಬರುತ್ತಿವೆ. ಪಂಜಾಬಿನ ಬಟಿಂಡಾದಿಂದ ವ್ಯಕ್ತಿಯೊಬ್ಬ ನನಗೆ ಕೊಲೆ ಬೆದರಿಕೆ ಹಾಕಿದ್ದಾನೆ. ನಾನು ಇಂಥಹಾ ಬೆದರಿಕೆಗಳಿಗೆಲ್ಲ ಹೆದರುವುದಿಲ್ಲ. ದೇಶದ ವಿರುದ್ಧ ಸಂಚು ಮಾಡುವ ಹಾಗೂ ಭಯೋತ್ಪಾದಕರಿಗೆ ಬೆಂಬಲ ನೀಡುವವರ ವಿರುದ್ಧ ಮಾತನಾಡಿದ್ದೇನೆ ಮುಂದೆಯೂ ಮಾತನಾಡುತ್ತೇನೆ. ಅಮಾಯಕ ಸೈನಿಕರನ್ನು ಕೊಲ್ಲುವ ನಕ್ಸಲೈಟ್ಗಳ ವಿರುದ್ಧ ಆಗಿರಬಹುದು, ತುಕ್ಡೆ-ತುಕ್ಡೆ ಗ್ಯಾಂಗ್ ವಿರುದ್ಧ ಆಗಿರಬಹುದು ಅಥವಾ ವಿದೇಶದಲ್ಲಿ ಕುಳಿತುಕೊಂಡು ಈ ದೇಶವನ್ನು ತುಂಡು ಮಾಡಿ ಖಲಿಸ್ಥಾನ ಕಟ್ಟು ಕನಸು ಕಾಣುತ್ತಿರುವವರ ವಿರುದ್ಧ ಆಗಿರಬಹುದು ನಾನು ಮಾತನಾಡುತ್ತಲೇ ಇರುತ್ತೇನೆ'' ಎಂದಿದ್ದಾರೆ.

ಸೋನಿಯಾ ಗಾಂಧಿ ಸಹಾಯ ಕೇಳಿದ ಕಂಗನಾ
ಸೋನಿಯಾ ಗಾಂಧಿಯ ನೆರವು ಕೇಳಿರುವ ಕಂಗನಾ, ''ನೀವು ಕೂಡ ಮಹಿಳೆ, ನಿಮ್ಮ ಅತ್ತೆ ಇಂದಿರಾ ಗಾಂಧಿ ಸಹ ಮಹಿಳೆ ಮತ್ತು ಆಕೆ ಇಂಥಹಾ ಭಯೋತ್ಪಾದಕರ ವಿರುದ್ಧ ತಮ್ಮ ಜೀವದ ಕೊನೆ ಉಸಿರು ಇರುವವರೆಗೆ ಹೋರಾಡಿದ್ದಾಳೆ. ದಯವಿಟ್ಟು ಪಂಜಾಬ್ನ ನಿಮ್ಮ ಸಿಎಂಗೆ ಹೇಳಿ, ಬೆದರಿಕೆ ಹಾಕುತ್ತಿರುವ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿ, ದೇಶವಿರೋಧಿಗಳನ್ನು ಮಟ್ಟ ಹಾಕಲು ಹೇಳಿ'' ಎಂದಿದ್ದಾರೆ.

ಇಂಥಹಾ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ: ಕಂಗನಾ
''ನಾನು ಇಂಥಹಾ ಬೆದರಿಕೆಗಳಿಗೆಲ್ಲ ಬಗ್ಗುವುದಿಲ್ಲ. ದೇಶದ ಪರವಾಗಿ ನಾನು ಮಾತನಾಡುತ್ತಲೇ ಇರುತ್ತೇನೆ. ಭಯೊತ್ಪಾದಕರ ವಿರುದ್ಧ ನಾನು ಬಹಿರಂಗವಾಗಿ ಮಾತನಾಡುತ್ತಲೇ ಇರುತ್ತೇನೆ'' ಎಂದಿರುವ ಕಂಗನಾ, ''ಯಾವುದೇ ಪಕ್ಷ ಸರ್ಕಾರ ರಚಿಸಲಿ, ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು ಅದರ ಮೊದಲ ಆದ್ಯತೆ ಆಗಿರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನ ನಮಗೆ ನೀಡಿದೆ. ನಾನು ಈವರೆಗೆ ಯಾವುದೇ ಜಾತಿ, ಸಮುದಾಯದ ವಿರುದ್ಧ ಕೆಟ್ಟದಾಗಿ ಅಥವಾ ದ್ವೇಷಪೂರಿತವಾಗಿ ಮಾತನಾಡಿಲ್ಲ'' ಎಂದಿದ್ದಾರೆ ಕಂಗನಾ.

ರೈತರನ್ನು ಖಲಿಸ್ಥಾನಿ ಉಗ್ರರಿಗೆ ಹೋಲಿಸಿದ ಕಂಗನಾ
''ಇಂದು ಖಲಿಸ್ಥಾನಿ ಉಗ್ರರು ಸರ್ಕಾರದ ಕೈ ತಿರುವಿದ್ದಾರೆ (ಬಲವಂತವಾಗಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ ಎಂಬರ್ಥದಲ್ಲಿ). ಆದರೆ ಒಂದನ್ನು ಮರೆಯದಿರೋಣ ಒಬ್ಬ ಮಹಿಳೆ, ಭಾರತದ ಏಕೈಕ ಮಹಿಳಾ ಪ್ರಧಾನಿ ಇದೇ ಖಲಿಸ್ಥಾನಿ ಉಗ್ರರನ್ನು ತನ್ನ ಶೂ ಕಾಲಿನಿಂದ ಹೊಸಕಿ ಹಾಕಿದ್ದಳು. ಆಕೆ ದೇಶಕ್ಕೆ ಸಾಕಷ್ಟು ತೊಂದರೆ ಕೊಟ್ಟಿರಬಹುದು ಆದರೆ ದೇಶವನ್ನು ಇಬ್ಭಾಗವಾಗಲು ಬಿಡಲಿಲ್ಲ. ಆಕೆಯ ಪ್ರಾಣವನ್ನೇ ಒತ್ತೆಯಿಟ್ಟು ಖಲಿಸ್ಥಾನಿ ಉಗ್ರರನ್ನು ಸೊಳ್ಳೆಗಳಂತೆ ಹೊಸಕಿಹಾಕಿದಳು'' ಎಂದು ಕಂಗನಾ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ್ದರು. ಕಂಗನಾರ ಈ ಪೋಸ್ಟ್ ವಿರುದ್ಧ ಸಿಖ್ ಸಮುದಾಯ ತೀವ್ರ ಆಕ್ರೋಶ ಹೊರಹಾಕಿತ್ತು, ಪ್ರತಿಭಟನೆ ಮಾಡಿದ ರೈತರನ್ನು ಕಂಗನಾ ಖಲಿಸ್ಥಾನಿ ಉಗ್ರರಿಗೆ ಹೋಲಿಸಿದ್ದರು.


Click it and Unblock the Notifications











