ಕೊನೆಗೂ NCB ಮುಂದೆ ಹಾಜರಾದ ದೀಪಿಕಾ ಪಡುಕೋಣೆ ಮ್ಯಾನೇಜರ್
NCB ನೋಟಿಸ್ ನೀಡಿದ ಬೆನ್ನಲ್ಲೇ ನಾಪತ್ತೆ ಆಗಿದ್ದ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಬುಧವಾರ ಬೆಳಗ್ಗೆ ಎನ್ ಸಿ ಬಿ ಮುಂದೆ ಹಾಜರಾಗಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಿಷ್ಮಾ ಪ್ರಕಾಶ್ ಗೆ ಎನ್ ಸಿ ಬಿ ಎರಡನೇ ಬಾರಿ ನೋಟಿಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಆದರೆ ಕರಿಷ್ಮಾ ಬಂಧನ ಬೀತಿಯಿಂದ ಎನ್ ಸಿ ಬಿ ಮುಂದೆ ಹಾಜರಾಗದೆ ನಾಪತ್ತೆಯಾಗಿದ್ದರು. ಬಳಿಕ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ಕರಿಷ್ಮಾ, ಇಂದು ಬೆಳಗ್ಗೆ ಮುಂಬೈನ ಎನ್ ಸಿ ಬಿ ಕಚೇರಿಕೆ ಆಗಮಿಸಿದ್ದಾರೆ.
ಜಾಮೀನು ಅರ್ಜಿ ವಿಚಾರಣೆಯಾಗುವ ವರೆಗೂ ಎನ್ ಸಿ ಬಿ ಕರಿಷ್ಮಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಹಾಗಿಲ್ಲ. ಇಂದು ವಿಚಾರಣೆ ವೇಳೆ ಕರಿಷ್ಮಾ ಯಾವೆಲ್ಲ ವಿಚಾರಗಳನ್ನು ಬಹಿರಂಗಪಡಿಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

ಕರಿಷ್ಮಾ ಪ್ರಕಾಶ್ ಕ್ವಾನ್ ಸಂಸ್ಥೆೆಗೆ ರಾಜಿನಾಮೆ ನೀಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇನ್ಮುಂದೆ ಕ್ವಾನ್ ಸಂಸ್ಥೆ ಜೊತೆ ಕರಿಷ್ಮಾಗೆ ಯಾವುದೇ ಸಂಬಂಧವಿಲ್ಲ ಎಂದು ಕ್ವಾನ್ ಸಂಸ್ಥೆ ಮೂಲಗಳು ತಿಳಿಸಿವೆ. ಆದರೆ ಈ ಬಗ್ಗೆ ಕರಿಷ್ಮಾ ಕಡೆಯಿಂದ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.
ಎನ್ ಸಿ ಬಿ ಅಧಿಕಾರಿಗಳು ಅಕ್ಟೋಬರ್ 27 ರಂದು ಕರಿಷ್ಮಾ ಪ್ರಕಾಶ್ ಮನೆಯ ಮೇಲೆ ರೇಡ್ ಮಾಡಿದ್ದು, ಕರಿಷ್ಮಾ ನಿವಾಸದಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಆದರೆ ಕರಿಷ್ಮಾ ಎನ್ ಸಿ ಬಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಾಗಾಗಿ ಅಧಿಕಾರಿಗಳು ಕರಿಷ್ಮಾ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದರು.
ಈ ಮೊದಲು ದೀಪಿಕಾ ಪಡುಕೋಣೆ ಮತ್ತು ವ್ಯವಸ್ಥಾಪಕಿ ಕರಿಷ್ಮಾ ಪ್ರಕಾಶ್ ಗೆ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗಿತ್ತು. ಇದೀಗ ಎರಡನೇ ಬಾರಿ ಎನ್ ಸಿ ಬಿ ಕರಿಷ್ಮಾಗೆ ನೋಟಿಸ್ ನೀಡಿದೆ. ಡ್ರಗ್ಸ್ ಪ್ರಕರಣ ಸಂಬಂಧ ಈಗಾಗಲೇ ಬಾಲಿವುಡ್ ನ ಖ್ಯಾತ ನಟಿಯರಾದ ಶ್ರದ್ಧಾ ಕಪೂರ್, ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್ ಸೇರಿದಂತೆ ಅನೇಕರಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಲಾಗಿದೆ. ಎಲ್ಲಾ ನಟಿಯರಿಗೂ ಎನ್ ಸಿ ಬಿ ಯಿಂದ ಕ್ಲೀನ್ ಚಿಟ್ ದೊರೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಕೇಳಿಬರುತ್ತಿದೆ.


Click it and Unblock the Notifications











