ಏನಿದ್ರೇನು ಕುತ್ತಿಗೆಯಲ್ಲಿ ತಾಳಿ ಇಲ್ಲ,ದೇವಸ್ಥಾನಕ್ಕೆ ತೆರಳಿದ್ದ ದೀಪಿಕಾ ಪಡುಕೋಣೆಗೆ ಸಂಸ್ಕ್ರತಿ-ಸಂಪ್ರದಾಯದ ಪಾಠ..!
ಬಣ್ಣದ ಪ್ರಪಂಚದಲ್ಲಿ ತಾರೆಯರು ಏನ್ಮಾಡಿದರೂ ನೋಡುಗರಿಗೆ ಅದು ಎಲೆ ಅಡಿಕೆಯೇ. ಅವರು ಕೆಮ್ಮಿದರೂ ಸುದ್ದಿ, ಪಾರ್ಟಿ ಮಾಡಿದರೂ ಸುದ್ದಿ, ಬಿಕಿನಿ ಹಾಕಿದರೂ ಸುದ್ದಿ, ಸೀರೆ ಉಟ್ಟರೂ ಸುದ್ದಿ. ಅಷ್ಟರ ಮಟ್ಟಿಗೆ ಈ ಸೆಲೆಬ್ರೆಟಿಗಳ ವ್ಯೆಯಕ್ತಿಕ ಬದುಕು ಇಲ್ಲಿ ಮೂರಾ ಬಟ್ಟೆಯಾಗಿರುತ್ತೆ. ಅದರಲ್ಲಿಯೂ ಮದುವೆಯಾಗಿದ್ದರೆ ಅಂತೂ ಮುಗಿದೇ ಹೋಯಿತು. ನಾಯಕಿಯರು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು, ಅವರು ಹಾಕಿಕೊಳ್ಳುವ ಆಭರಣದವರೆಗೆ .. ಅಡಿಯಿಂದ ಮುಡಿಯವರೆಗೆ.. ಸಾಮಾಜಿಕ ಜಾಲತಾಣದ ಕಣ್ಣಿರುತ್ತೆ. ಚೂರು ಯಾಮಾರಿದರೂ ಟ್ರೋಲಿಗರ ಗುಂಪು ಆಕ್ಟಿವ್ ಆಗುತ್ತೆ. ಇದಕ್ಕೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಸದ್ಯದ ಉದಾಹರಣೆ.
ಹೌದು. ಇವತ್ತಷ್ಟೇ ದೀಪಿಕಾ ಪಡುಕೋಣೆ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿದ್ದಾರೆ. ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ. ಇನ್ನೂ ಸಹಜವಾಗಿ ಮಗುವಾದ ಖುಷಿಯಲ್ಲಿ ದೀಪಿಕಾ ಮತ್ತು ರಣ್ ವೀರ್ ಸಿಂಗ್ ಮನೆಯಲ್ಲಿ ಅಲಂಕಾರ ಮಾಡಲಾಗಿರುತ್ತೆ. ತಂದೆ-ತಾಯಿಯಾಗಿ ಬಡ್ತಿ ಪಡೆದ ಇಬ್ಬರ ಮನದಲ್ಲಿ ಸಂಭ್ರಮ ಕೂಡ ಮನೆ ಮಾಡಿರುತ್ತೆ. ಆದರೆ ಈಗ ಈ ಸಂಭ್ರಮಕ್ಕೆ ಧಕ್ಕೆ ತರುವ ಕೆಲಸವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ಮಾಡುತ್ತಿದೆ.

ಹೌದು, ಅಸಲಿಗೆ ಹೆರಿಗೆಗೆ ಆಸ್ಪತ್ರೆಗೆ ದಾಖಲಾಗುವ ಮುನ್ನ, ಎರಡು ದಿನದ ಹಿಂದೆ ದೀಪಿಕಾ ಪಡುಕೋಣೆ ತಮ್ಮ ಪತಿ ರಣ್ವೀರ್ ಸಿಂಗ್ ಜೊತೆ ಸಿದ್ದಿ ವಿನಾಯಕನ ದೇವಸ್ಥಾನಕ್ಕೆ ತೆರಳಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ತೆರಳಿ ದೇವರ ದರ್ಶನವನ್ನು ಪಡೆದು ಬಂದಿದ್ದರು. ಆದರೆ, ಸೀರೆಯನ್ನು ಧರಿಸಿದ್ದ ದೀಪಿಕಾ ಪಡುಕೋಣೆ ತಮ್ಮ ಕತ್ತಿನಲ್ಲಿ ತಾಳಿಯನ್ನೂ ಹಾಕಿರಲಿಲ್ಲ. ಹಣೆಯ ಮೇಲೆ ಕುಂಕುಮವನ್ನಾಗಲಿ ಅಥವಾ ಬೊಟ್ಟಾಗಲಿ ಇಟ್ಟುಕೊಂಡಿರಲಿಲ್ಲ.
ಇದೀಗ ಈ ವಿಚಾರ ದೀಪಿಕಾ ಪಡುಕೋಣೆ ದೇವಸ್ಥಾನಕ್ಕೆ ತೆರಳಿ ಬಂದ ಎರಡು ದಿನದ ನಂತರ ಎಲ್ಲರ ಗಮನಕ್ಕೆ ಬಂದಿದೆ. ದೀಪಿಕಾ ಪಡುಕೋಣೆಯ ಹಣೆ ಮತ್ತು ಕುತ್ತಿಗೆಯ ಮೇಲೆ ಒಂದು ವರ್ಗದ ಕಣ್ಣು ಬಿದ್ದಿದೆ. ಹೀಗಾಗಿಯೇ ಚರ್ಚೆಗೆ ಮುನ್ನಡಿಯನ್ನು ಬರೆದ ಒಬ್ಬರು ತಾನಿಷ್ಕ್ ಆಭರಣಕ್ಕೆ ರಾಯಭಾರಿಯಾದರೂ, ಗಂಡ ಮತ್ತು ಹೆಂಡತಿ ಬಳಿ ಕೋಟ್ಯಂತರ ಹಣ ಇದ್ದರೂ, ದೇವಸ್ಥಾನಕ್ಕೆ ತೆರಳುವ ಸಮಯದಲ್ಲಿ ಒಂದು ಮಂಗಳಸೂತ್ರ ಹಾಕಿಕೊಳ್ಳಲು ಆಗದೇ ಇದ್ದರೆ ಏನ್ ಹೇಳಬೇಕು ಅಂದಿದ್ದಾರೆ. ಇದಕ್ಕೆ ಹಿಂದೂ ಸಂಪ್ರದಾಯದಲ್ಲಿ ಯಾವಾಗಲೂ ತಾಳಿ ಹಾಕಿಕೊಂಡು ಇರಬೇಕು ಎಂಬ ಯಾವ ನಿಯಮವೂ ಇಲ್ಲ ಎಂದಿರುವ ಒಬ್ಬರು, ಅದಿರಲಿ ಮೇಡಂ ನಿಮ್ಮ ಹಣೆಯ ಮೇಲೆ ಕುಂಕುಮ ಎಲ್ಲಿ ಎನ್ನುವ ಪ್ರಶ್ನೆ ಮಾಡಿದ್ಧಾರೆ.
ಮತ್ತೊಬ್ಬರು ಈ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದು ದೇವಸ್ಥಾನಕ್ಕೆ ತೆರಳಲು ಮಂಗಳಸೂತ್ರ ಕಡ್ಡಾಯ ಎಂಬ ನಿಯಮ ಇಲ್ಲ ಎಂದಿದ್ದಾರೆ. ಸಂಪ್ರದಾಯಗಳನ್ನು ಅನುಸರಿಸುವುದು, ಬಿಡುವುದು ಅವರ ಅವರ ಇಷ್ಟ, ಗರ್ಭಿಣಿ ಹೆಣ್ಣಿನ ಮೇಲೆ ನಿನ್ನ ದರ್ಪ ತೋರುವುದನ್ನು ಬಿಟ್ಟು ನಿನ್ನ ಕೆಲಸ ನೋಡ್ಕೋ ಎಂದು ಕೆಂಡ ಕಾರಿದ್ಧಾರೆ.
ಇನ್ನೊಬ್ಬರು ವಾರದ 07 ದಿನ, ದಿನದ 24 ಘಂಟೆ, ವರ್ಷದ 365ದಿನವೂ ಕೂಡ ಭಾರತದಲ್ಲಿನ ಹಿಂದೂ ಹೆಣ್ಣು ಮಕ್ಕಳು ಮಂಗಳ ಸೂತ್ರ ಧರಿಸುತ್ತಾರೆ ಎನ್ನುವುದನ್ನು ಯಾವ ಮುಠ್ಠಾಳ ನಿನಗೆ ಹೇಳಿದ್ದಾನೆ ಎಂದು ಪ್ರಶ್ನೆ ಕೇಳಿದ್ದಾರೆ. ಪ್ರತಿಯೊಂದು ರಾಜ್ಯದಲ್ಲಿ ದೇಶದ ನಾನಾ ಭಾಗದಲ್ಲಿ ಆಚರಣೆಗಳು ಸಂಪ್ರದಾಯಗಳು ಬೇರೆ ಬೇರೆಯಾಗಿವೆ ಮೊದಲು ಅದನ್ನು ಅರ್ಥ ಮಾಡಿಕೊಂಡು ಆಮೇಲೆ ಮಾತನಾಡು ಎಂದಿದ್ದಾರೆ. ಮಹಿಳೆಯರಿಗೆ ಬದುಕುವ ಹಕ್ಕಿದೆ, ಬದುಕಿ ಬದುಕಲು ಬಿಡಿ ಎಂದಿದ್ದಾರೆ. ಪುರುಷರಿಗೆ ಯಾರು ಯಾವ ಪ್ರಶ್ನೆಯನ್ನೂ ಇಲ್ಲಿ ಕೇಳುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
ಹೀಗೆ ದೀಪಿಕಾ ಪಡುಕೋಣೆಯ ಮಂಗಳ ಸೂತ್ರ ಮತ್ತು ಕುಂಕುಮದ ವಿಚಾರದಲ್ಲಿ ಸಾಮಾಜಿಕ ಜಾಲತಾಣ ಈ ಇಬ್ಬಾಗವಾಗಿದೆ. ಪರ-ವಿರೋಧದ ಚರ್ಚೆ ಕೂಡ ನಡೆಯುತ್ತಿದೆ.


Click it and Unblock the Notifications











