ಮದ್ವೆ ಬಗ್ಗೆ ದೀಪಿಕಾ ಪಡುಕೋಣೆ ಬಿಚ್ಚಿಟ್ಟ ಸತ್ಯ
ಬಾಲಿವುಡ್ ಅಂಗಳದಲ್ಲಿ ಬೆಳಗುತ್ತಿರುವ ಬೆಂಗಳೂರಿನ ಬೆಡಗಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಸಾಲು ಸಾಲು ಯಶಸ್ವಿ ಚಿತ್ರಗಳನ್ನು ನೀಡುತ್ತಾ ತಮ್ಮ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಯೇ ಜವಾನಿ ಹೇ ದಿವಾನಿ ನಂತರ ಚೆನ್ನೈ ಎಕ್ಸ್ ಪ್ರೆಸ್ ಕೂಡಾ ಯಶಸ್ಸಿನ ಹಾದಿ ಹಿಡಿದಿದೆ. ಈ ನಡುವೆ ಯುವ ಪ್ರತಿಭೆ ದೀಪಿಕಾ ಅವರು ತಮ್ಮ ಮದುವೆ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.
ಚೆನ್ನೈ ಎಕ್ಸ್ ಪ್ರೆಸ್ ನಲ್ಲಿ ದಕ್ಷಿಣ ಭಾರತದ ಸಾಂಪ್ರದಾಯಿಕ ಶೈಲಿ ಉಡುಗೆಗಳಲ್ಲಿ ಕಾಣಿಸಿಕೊಂಡಿರುವ ದೀಪಿಕಾ ಮದುವೆ ವಿಷಯದಲ್ಲಿ ಮಾತ್ರ ಅಲ್ಟ್ರಾ ಮಾರ್ಡನ್ ರೀತಿ ಮಾತಾಡುತ್ತಾರೆ. " ಈಗೆಲ್ಲ ಕಾಲ ಬದಲಾಗಿದೆ. ಭಾರತದ ಸಮಾಜದಲ್ಲಿ ಪೋಷಕರು ತಮ್ಮ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳ ಮದುವೆ ವಿಷಯದಲ್ಲಿ ಹೆಚ್ಚಿನ ಕಾಳಜಿ ಹಾಗೂ ಸ್ವತಂತ್ರ ನೀಡುತ್ತಿದ್ದಾರೆ. ಮಕ್ಕಳ ಸುಖದ ಮುಂದೆ, ಜಾತಿ, ಧರ್ಮ, ಮತಗಳು ಲೆಕ್ಕಕ್ಕೆ ಬರುವುದಿಲ್ಲ' ಎಂದಿದ್ದಾರೆ.

ಆದರೆ, ಹುಡುಗಿಯರಿಗೆ ಸ್ವಾತಂತ್ರ್ಯ ಸಿಕ್ಕ ತಕ್ಷಣ ಅದು ಸ್ವೇಚ್ಛೆಯಾಗಬಾರದು, ಅಂತರ್ ಜಾತೀಯ, ಅಂತರ್ ಮತೀಯ ಮದುವೆಗಳು ಲೆಕ್ಕವಿಲ್ಲದಷ್ಟು ನಡೆದಿವೆ. ಆದರೆ, ಅದರಲ್ಲಿ ಎಷ್ಟು ಯಶಸ್ವಿಯಾಗಿ ಆದರ್ಶ ದಾಂಪತ್ಯಕ್ಕೆ ನಾಂದಿ ಹಾಡಿದೆ ಎಂಬುದನ್ನು ಕೂಡಾ ಗಮನಿಸಬೇಕಾಗುತ್ತದೆ.
ರಾಷ್ಟ್ರೀಯ ಸುದ್ದಿ ವಾಹಿನಿ ಜತೆ ಮಾತನಾಡಿದ ದೀಪಿಕಾ, ಪೋಷಕರ ಭಾವನೆಗಳನ್ನು ಮಕ್ಕಳು ಕೂಡಾ ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಸುಖಕ್ಕೆ ಕಾರಣವಾಗುವಂಥ ನಿರ್ಧಾರಗಳನ್ನು ಕೈಗೊಳ್ಳುವಂಥ ಶಕ್ತಿ ನಮ್ಮ ಕೈಲಿದೆ. ಅದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಅನಗತ್ಯವಾಗಿ ಒಬ್ಬರ ಮೇಲೆ ಆಧಾರವಾಗುವುದು ಅಥವಾ ಪೋಷಕರನ್ನು ತೊರೆಯುವುದು ಎಲ್ಲವೂ ಹಿಂಸೆಯ ಬದುಕಿಗೆ ಕಾರಣವಾಗಲಿದೆ ಎಂದು ದೀಪಿಕಾ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಸಂಸ್ಕೃತಿ, ಜೀವನಶೈಲಿ ಬದಲಾವಣೆ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಸ್ಪಂದಿಸುವ ಅಗತ್ಯವಿದೆ. ಮಹಿಳೆಯರಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗುತ್ತಿದ್ದಂತೆ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಿದ್ದಾರೆ. ಇದು ಪೋಷಕರಿಗೂ ಅನ್ವಯಿಸುತ್ತದೆ. ಮಕ್ಕಳ ಸುಖಕ್ಕಾಗಿ ಎಷ್ಟೊಂದು ತ್ಯಾಗ ಮಾಡುವ ಪೋಷಕರು, ಮದುವೆ ವಿಷಯದಲ್ಲಿ ಮಾತ್ರ ಕಠಿಣ ನಿರ್ಧಾರ ತೆಗೆದುಕೊಳ್ಳುವುದು ಅಷ್ಟು ಸೂಕ್ತವಲ್ಲ ಎಂದು ನನ್ನ ಅನಿಸಿಕೆ ಎಂದು ದೀಪಿಕಾ ಹೇಳಿದ್ದಾರೆ.


Click it and Unblock the Notifications











