ನನ್ನನ್ನು ಹಿಂಬಾಲಿಸಿದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ; ದೀಪಿಕಾ ಬೆದರಿಕೆ ಹಾಕಿದ್ದು ಯಾರಿಗೆ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಡ್ರಗ್ಸ್ ಜಾಲದ ಸಂಬಂಧ ಇತ್ತೀಚಿಗೆ ಎನ್ ಸಿ ಬಿ ವಿಚಾರಣೆಗೆ ಒಳಗಾದ ಬಳಿಕ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಮನೆಯಿಂದ ಹೊರ ಬಂದರೆ ಸಾಕು ಛಾಯಾಗ್ರಾಹಕರು ಹಿಂಬಾಲಿಸಲು ಪ್ರಾರಂಭಿಸುತ್ತಾರೆ. ದೀಪಿಕಾ ಪಡುಕೋಣೆ ಮಾತ್ರವಲ್ಲ ಬಾಲಿವುಡ್ ಸೆಲೆಬ್ರಿಟಿಗಳು ಮನೆಯಿಂದ ಹೊರಕ್ಕೆ ಕಾಲಿಟ್ಟರೆ ಸಾಕು, ಅವರ ದಿನದ ಚಟುವಟಿಗಳನ್ನು ಸೆರೆಹಿಡಿಯಲು ಛಾಯಾಗ್ರಾಹಕರು ಮುಗಿಬೀಳುತ್ತಾರೆ.
ಇದರಿಂದ ಎಷ್ಟೋ ಬಾರಿ ಸೆಲೆಬ್ರಿಟಿಗಳಿಗೆ ಕಿರಿಕಿರಿ ಉಂಟಾಗಿ ಪಾಪರಾಜಿಗಳನ್ನು ತರಾಟೆಗೆ ತೆಗೆದುಕೊಂಡ ಉದಾಹರಣೆಯೂ ಇದೆ. ಹಾಗಾಗಿ ಸೆಲೆಬ್ರಿಟಿಗಳು ಪಾಪರಾಜಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಇತ್ತೀಚಿಗೆ ದೀಪಿಕಾ ಪಡುಕೋಣೆ ಮುಂಬೈನ ಧರ್ಮ ಪ್ರೊಡಕ್ಷನ್ ಭೇಟಿ ನೀಡಿದ್ದರು. ಈ ಸಮಯದಲ್ಲಿ ಛಾಯಾಗ್ರಾಹಕರಿಗೆ ಬೆದರಿಕೆ ಹಾಕಿದ ಪ್ರಸಂಗ ನಡೆದಿದೆ.
ದೀಪಿಕಾ ಧರ್ಮಾ ಪ್ರೊಡಕ್ಷನ್ ನಿಂದ ಹೊರಬಂದ ಬಳಿಕ ಛಾಯಾಗ್ರಾಹಕರು ಎದುರಾಗಿ ಫೋಟೋ ಕ್ಲಿಕ್ಕಿಸಿದ್ದಾರೆ. ದೀಪಿಕಾ ಖುಷಿಯಾಗೆ ಫೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ಕಾರು ಹತ್ತಿ ಅಲ್ಲಿಂದ ಹೊರಟಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಪಾಪರಾಜಿಗಳು ದೀಪಿಕಾ ಕಾರನ್ನು ಬೆನ್ನಟ್ಟಿದ್ದಾರೆ. ಮತ್ತಷ್ಟು ಫೋಟೋಗಳನ್ನು ಕ್ಲಿಕ್ಕಿಸಲು ಪ್ರಯತ್ನ ಪಟ್ಟಿದ್ದಾರೆ.

ಇದರಿಂದ ಸಿಟ್ಟಿಗೆದ್ದ ದೀಪಿಕಾ ಕಾರಿನಿಂದ ಇಳಿದು, ಹೀಗೆಲ್ಲಾ ಹಿಂಬಾಲಿಸ ಬೇಡಿ ಎಂದು ಹೇಳಿದ್ದಾರೆ. ಬಳಿಕ ಛಾಯಾಗ್ರಾಹಕರು ಮತ್ತು ದೀಪಿಕಾ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ತಾಳ್ಮೆ ಕಳೆದುಕೊಂಡ ದೀಪಿಕಾ ಎಲ್ಲಾ ಕಡೆ ಹೀಗೆ ಹಿಂಬಾಲಿಸಿದರೇ ಮುಂದೆ ಪಾಪರಾಜಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಮೊದಲು ದೀಪಿಕಾ ಗೋವಾದಲ್ಲಿ ಚಿತ್ರೀಕರಣದಲ್ಲಿ ಇದ್ದ ಸಮಯದಲ್ಲಿ ಎನ್ ಸಿ ಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ ಬಳಿಕ ಮುಂಬೈಗೆ ಬಂದ ದೀಪಿಕಾರನ್ನು ಮುಂಬೈ ವಿಮಾನ ನಿಲ್ದಾಣದಿಂದ ಮನೆಯವರೆಗೂ ಹಿಂಬಾಲಿಸಿದ್ದರು.


Click it and Unblock the Notifications











