ಭಾರತ ಸೇಫ್ ಅಲ್ಲ ಎಂದು ಹೇಳಿದ್ದ ಆಮಿರ್ ಖಾನ್ ಪಹಲ್ಗಾಮ್ ದಾಳಿಯ ಬಗ್ಗೆ ಹೇಳಿದ್ದೇನು ?
ತಮ್ಮ ಪ್ರತಿ ಚಿತ್ರಕ್ಕೂ ಅದಕ್ಕೇ ಬೇಕಾದ ತಯಾರಿಯನ್ನೆಲ್ಲ ಮಾಡಿಕೊಂಡೇ ಅಖಾಡಕ್ಕೆ ಇಳಿಯುವ ಆಮಿರ್ ಖಾನ್ ಕೇವಲ ಮಿಸ್ಟರ್ ಪರ್ಫೆಕ್ಷನಿಸ್ಟ್ ಮಾತ್ರ ಅಲ್ಲ ಬಾಲಿವುಡ್ನ ಗೇಮ್ ಚೇಂಜರ್ ಕೂಡ ಹೌದು. ಬಹುಶಃ ತಮ್ಮ ಪಾಡಿಗೆ ತಾವೂ ಇದ್ದು, ಕೇವಲ ಒಂದು ಚಿತ್ರದ ಮೂಲಕ ಸುದ್ದಿಯಾಗುವ ಕಲೆ ಆಮಿರ್ ಖಾನ್ಗಷ್ಟೇ ಗೊತ್ತು. ಯಾಕೆಂದರೆ, ಬಾಲಿವುಡ್ ಒಂದು ಸಿದ್ಧ
ಮಾದರಿಯ ಹಿಂದೆ ಬಿದ್ದಾಗ ಭಿನ್ನವಾದ ಹಾದಿಯನ್ನು ತುಳಿದವರು ಆಮಿರ್ ಖಾನ್. ಕೇವಲ ಕಮರ್ಷಿಯಲ್ ಚಿತ್ರಗಳನ್ನಷ್ಟೇ ಮಾಡದೇ ಹತ್ತು ಹಲವು ಪ್ರಯತ್ನ ಮತ್ತು ಪ್ರಯೋಗಗಳನ್ನು ಮಾಡಿದರು.ಇಂಥಾ ಆಮಿರ್ ಖಾನ್ ಪಹಲ್ಗಾಮ್ನಲ್ಲಿ ಮುಗ್ದ ಭಾರತೀಯರ ಮೇಲೆ ಭಯೋತ್ಫಾದಕರು ನಡೆಸಿದ ದಾಳಿಯಿಂದ ವಿಚಲಿತಗೊಂಡಿದ್ದಾರೆ. ನೋವಲ್ಲಿದ್ದಾರೆ. ತಮ್ಮ ಚಿತ್ರ ಬಿಡುಗಡೆಗೊಂಡರು ಕೂಡ ನೋಡಲು ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.

ಹೌದು, ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ಅಭಿನಯಿಸಿರುವ ಏಕೈಕ ಚಿತ್ರ ಅಂದಾಜ್ ಅಪ್ನಾ ಅಪ್ನಾ ಚಿತ್ರವನ್ನು ಮೂವತ್ತೊಂದು ವರ್ಷಗಳ ನಂತರ ಚಿತ್ರಮಂದಿರಗಳಲ್ಲಿಇಂದು { ಏಪ್ರಿಲ್ 25 } ಮರು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ ಚಿತ್ರದ ವಿಶೇಷ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಆದರೆ ಈ ಪ್ರದರ್ಶನಕ್ಕೆ ಆಮಿರ್ ಖಾನ್ ಗೈರಾಗಿದ್ದರು. ಇದಕ್ಕೆ ಕಾರಣ ಪಹಲ್ಗಾಮ್ನಲ್ಲಿ ನಡೆದ ರಣಭೀಕರ ದಾಳಿ. ಈ ಕುರಿತು ಸುಭಾಶ್ ಕೆ ಝಾ ಅವರ ಜೊತೆ ಮಾತನಾಡಿರುವ ಆಮಿರ್ ಖಾನ್, ಕಾಶ್ಮೀರದ ಪಹಲ್ಗಾಮ್ನಲ್ಲಿ ಏನಾಯಿತು ಎಂಬುದರ ಕುರಿತು ನಾನು ವರದಿಗಳನ್ನು ಓದುತ್ತಿದ್ದೆ, ಅಮಾಯಕರ ಹತ್ಯೆಯಿಂದ ನನಗೆ ತೀವೃ ಆಘಾತವಾಗಿದೆ ಎಂದು ಹೇಳಿದ್ದಾರೆ. ಅಂದಾಜ್ ಅಪ್ನಾ ಅಪ್ನಾ ಮರುಬಿಡುಗಡೆಯಾಗಿದೆ, ಆದರೆ ಈ ಸಂದರ್ಭದಲ್ಲಿ ಚಿತ್ರವನ್ನು ನೋಡುವ ಮನಸ್ಥಿತಿಯಲ್ಲಿ ನಾನು ಇಲ್ಲ ಎಂದು ಕೂಡ ಆಮಿರ್ ಖಾನ್ ಹೇಳಿದ್ದಾರೆ.
ಅಂದ್ಹಾಗೇ ಒಂದು ದಶಕದ ಹಿಂದೆ ಅಂದರೆ 2015ರಲ್ಲಿ ಆಮಿರ್ ಖಾನ್,ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಪತ್ನಿ ಕಿರಣ್ ರಾವ್ ಕೂಡ ತಾವಿಬ್ಬರೂ ಭಾರತದಿಂದ ಹೊರ ಹೋಗುವುದು ಸೂಕ್ತ ಎಂಬ ಸಲಹೆ ನೀಡಿದ್ದರು ಎಂದು ಆಮಿರ್ ಖಾನ್ ಹೇಳಿದ್ದರು. ಆಮಿರ್ ಖಾನ್ ಅವರ ಈ ಹೇಳಿಕೆ ಅನೇಕರನ್ನು ಕೆರಳಿಸಿತ್ತು. ಆಮಿರ್ ಖಾನ್ ವಿರುದ್ಧ ಆಕ್ರೋಶ ಕೂಡ ಭುಗಿಲೆದ್ದಿತ್ತು.
ಇದಾದ ನಂತರ ಆಮಿರ್ ಖಾನ್ ಆಗಾಗ ಕೆಲವರ ಕೆಂಗಣ್ಣಿಗೆ ಗುರಿಯಾಗುತ್ತಲೇ ಬಂದರು. ಪಿಕೆ ಚಿತ್ರದ ಮೂಲಕ ಹಿಂದೂಗಳ ವಿರೋಧ ಕಟ್ಟಿಕೊಂಡರು. ಇವತ್ತು ಕೂಡ ಅನೇಕರು ಆಮಿರ್ ಖಾನ್ ವಿರುದ್ಧ ಕೆಂಡ ಕಾರುತ್ತಲೇ ಇರುತ್ತಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪಹಲ್ಗಾಮ್ ದಾಳಿಯ ಕುರಿತು ಆಮಿರ್ ಮಾತನಾಡಿದ ಬೆನ್ನಲ್ಲೇ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಆಮಿರ್ ಖಾನ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಮಿರ್ ಖಾನ್ ಧರ್ಮವನ್ನು ಅವಹೇಳನಕಾರಿಯಾಗಿ ನಿಂದಿಸುತ್ತಿದ್ದಾರೆ. ಟ್ರೋಲ್ ಹೆಸರಿನಲ್ಲಿ ಕೀಳು ಮಟ್ಟದಲ್ಲಿ ಆಮಿರ್ ಖಾನ್ ಕುರಿತು ಮಾತನಾಡುತ್ತಿದ್ದಾರೆ.
ಇನ್ನುಳಿದಂತೆ ಚಿತ್ರದ ವಿಚಾರಕ್ಕೆ ಬಂದರೆ ನವೆಂಬರ್ 4- 1994ರಂದು ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಅಭಿನಯದ ಅಂದಾಜ್ ಅಪ್ನಾ ಅಪ್ನಾ ಚಿತ್ರ ತೆರೆಗೆ ಬಂದಿತ್ತು. ರಾಜ್ ಕುಮಾರ್ ಸಂತೋಷಿ ನಿರ್ದೇಶನದ ಈ ಚಿತ್ರದಲ್ಲಿ ಕರೀಶ್ಮಾ ಕಪೂರ್ ಮತ್ತು ರವೀನಾ ಟಂಡನ್ ನಾಯಕಿಯರ ಪಾತ್ರಗಳನ್ನು ನಿರ್ವಹಿಸಿದ್ದರು. ಜೂಹಿ ಚಾವ್ಲಾ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಅಂದು ಬಾಕ್ಸಾಫೀಸ್ನಲ್ಲಿ ಸೋತಿದ್ದ ಈ ಚಿತ್ರವನ್ನು ಆ ನಂತರ ಕಿರುತೆರೆಯಲ್ಲಿ ನೋಡಿ ಅನೇಕರು ಮೆಚ್ಚಿಕೊಂಡಿದ್ದರು. ಆಮಿರ್ ಮತ್ತು ಸಲ್ಮಾನ್ ಖಾನ್ ಜುಗಲಬಂದಿಯನ್ನು ಹಾಡಿ ಹೊಗಳಿದ್ದರು.


Click it and Unblock the Notifications











