ICICI Bank CEO ಚಂದಾ ಕೊಚ್ಚಾರ್ ಬಯೋಪಿಕ್ ಚಿತ್ರಕ್ಕೆ ಕೋರ್ಟ್ ತಡೆಯಾಜ್ಞೆ
ಐಸಿಐಸಿಐ ಬ್ಯಾಂಕ್ ಮಾಜಿ ಸಿಇಓ ಚಂದಾ ಕೊಚ್ಚಾರ್ ಅವರ ಜೀವನ ಆಧರಿಸಿ ಬಾಲಿವುಡ್ ನಲ್ಲಿ ಸಿನಿಮಾ ಬರ್ತಿದೆ. ಈ ಚಿತ್ರಕ್ಕೆ 'ಚಂದಾ: ಎ ಸಿಗ್ನೆಚರ್ ದಟ್ ರೂನೆಡ್ ಎ ಕೆರಿಯರ್' ಎಂದು ಹೆಸರಿಟ್ಟಿದ್ದು, ಚಿತ್ರೀಕರಣ ಸಾಗುತ್ತಿದೆ.
ಈ ಮಧ್ಯೆ ಸಿನಿಮಾದಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಎಂದು ಚಂದಾ ಕೊಚ್ಚಾರ್ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಚಂದಾ ಕೊಚ್ಚಾರ್ ಅವರ ಅರ್ಜಿ ಪುರಸ್ಕರಿಸಿದ ಕೋರ್ಟ್ ಈಗ ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸಂದೀಪ್ ಗರ್ಗ್ ಶನಿವಾರ ಆದೇಶ ಹೊರಡಿಸಿದ್ದು, ''ನಿರ್ಮಾಪಕರು ಮತ್ತು ಈ ಸಿನಿಮಾಗೆ ಸಂಬಂಧಿಸಿದ ಯಾವುದೇ ವ್ಯಕ್ತಿಗಳು ಚಂದಾ ಕೊಚ್ಚರ್ ಅವರ ಹೆಸರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬಳಸಬಾರದು. ಈ ಚಿತ್ರವನ್ನು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಪ್ರದರ್ಶಿಸಬಾರದು'' ಎಂದು ಕೋರ್ಟ್ ತಿಳಿಸಿದೆ.

ಇದಕ್ಕೂ ಮುಂಚೆ ಚಂದಾ ಕೊಚ್ಚಾರ್ ಅವರ ಪರ ವಾದ ಮಂಡಿಸಿದ್ದ ವಕೀಲ ವಿಜಯ್ ಅಗರ್ವಾಲ್ ''ಚಿತ್ರತಂಡದವರು ಚಂದಾ ಕೊಚ್ಚಾರ್ ಅವರ ಕುರಿತು ಸಿನಿಮಾ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಅವರ ಒಪ್ಪಿಗೆ ಇಲ್ಲದೆ ಅವರ ಹೆಸರಿನಲ್ಲಿ ಸಿನಿಮಾ ಮಾಡಲಾಗುತ್ತಿದೆ. ಜೊತೆಗೆ ಅವರ ವ್ಯಕ್ತಿತ್ವಕ್ಕೆ ತೇಜೋವಧೆ ಮಾಡುವ ಪ್ರಯತ್ನ ಸಾಗುತ್ತಿದೆ. ಅವರ ಹೆಸರನ್ನು ಶೀರ್ಷಿಕೆಯಾಗಿ ಬಳಸಿರುವುದು ಖಂಡನೀಯ'' ಎಂದು ಆರೋಪಿಸಿದ್ದರು.
ಚಂದಾ ಕೊಚ್ಚರ್ ಅವರು ಜೂನ್ 2009 ಮತ್ತು ಅಕ್ಟೋಬರ್ 2011ರ ನಡುವೆ ಐಸಿಐಸಿಐ ಬ್ಯಾಂಕ್ ಸಿಇಒ ಆಗಿದ್ದ ವೇಳೆ ವಿಡಿಯೋಕಾನ್ ಗ್ರೂಪ್ ಗೆ 1,875 ಕೋಟಿ ರೂ.ಗಳ ಆರು ಸಾಲಗಳನ್ನು ಮಂಜೂರು ಮಾಡಿದ್ದಕ್ಕಾಗಿ ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿದೆ. ಇದೇ ಘಟನೆ ಕುರಿತು ಸಿನಿಮಾ ಮಾಡಲಾಗುತ್ತಿತ್ತು. ಈ ಸಿನಿಮಾ ಆದರೆ, ಚಂದಾ ಕೊಚ್ಚರ್ ಅವರ ವೃತ್ತಿಯ ಬಗ್ಗೆ ಹಲವು ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆ ಇತ್ತು. ಹಾಗಾಗಿ, ಚಿತ್ರಕ್ಕೆ ತಡೆ ತರಲಾಗಿದೆ ಎಂಬ ಮಾತಿದೆ.
ಇನ್ನುಳಿದಂತೆ ಗುರ್ಲೀನ್ ಚೋಪ್ರಾ ಅವರು ಚಂದಾ ಕೊಚ್ಚಾರ್ ಅವರ ಪಾತ್ರ ನಿರ್ವಹಿಸುತ್ತಿದ್ದು, ಈಗಾಗಲೇ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications