ಅರ್ನಬ್ ಗೋಸ್ವಾಮಿ ಮತ್ತು ಗೆಳೆಯರಿಗೆ ಎದುರಾಗಲಿದೆ ಸಂಕಷ್ಟ
ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಸುದ್ದಿ ನಿರೂಪಕ ಅರ್ನಬ್ ಗೋಸ್ವಾಮಿ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದು, ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಅರ್ನಬ್ ಗೋಸ್ವಾಮಿಗೆ ಇಂದು ಬಾಂಬೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಅರ್ನಬ್ ಬೆನ್ನೇರುವ ಲಕ್ಷಣಗಳು ಗೋಚರಿಸುತ್ತದೆ. ಅರ್ನಬ್ ಮಾತ್ರವಲ್ಲ ಅವರ ಇತರ 'ಗೆಳೆಯರಿಗೂ' ಸಂಕಷ್ಟ ತಂದಿಡುವ ಸಾಧ್ಯತೆ ಇದೆ.
ಬಾಲಿವುಡ್ ನಿರ್ಮಾಪಕರು, ನಾಲ್ಕು ಸಿನಿಮಾ ಸಂಘಟನೆಗಳು, ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದಲ್ಲಿ ಅರ್ನಬ್ನ ರಿಪಬ್ಲಿಕ್ ಟಿವಿ, ಟೌಮ್ಸ್ ನೌ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು, ಮಾನ ಹಾನಿಕಾರಕ ಸುದ್ದಿಗಳನ್ನು ಪ್ರಕಟಿಸಿವೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಲು ದೆಹಲಿ ಹೈಕೋರ್ಟ್ ಒಪ್ಪಿದೆ.

ಮಾಧ್ಯಮಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ
ಸುಶಾಂತ್ ಸಿಂಗ್ ಪ್ರಕರಣದಲ್ಲಿ ಹಲವು ನಟ-ನಟಿಯರ ವಿರುದ್ಧ, ಬಾಲಿವುಡ್ ಚಿತ್ರರಂಗದ ವಿರುದ್ಧ ಅವಮಾನಕರ, ಮಾನಹಾನಿ ಹಾಗೂ ಸುಳ್ಳುಗಳನ್ನು ಚಾನೆಲ್ಗಳು ಪ್ರಸಾರ ಮಾಡಿದ್ದು, ಅವುಗಳ ವಿರುದ್ಧ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ.

ಅರ್ಜಿಯು ವಿಚಾರಣೆಗೆ ಅರ್ಹ ಎಂದು ಪರಿಗಣಿಸಲಾಗಿದೆ
ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ರಾಜೀವ್ ಸಖಧರ್ ಅವರು ನಿರ್ಮಾಪಕರು ಹಾಗೂ ಇತರರು ಮಾಧ್ಯಮಗಳ ವಿರುದ್ಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ವಿಚಾರಣೆ ಅರ್ಹ ಎಂದು ಹೇಳಿದ್ದು, ವಿಚಾರಣೆ ಪ್ರಾರಂಭವಾಗಲಿದೆ.

ನಟರ ಹಕ್ಕುಗಳ ಉಲ್ಲಂಘನೆ ಬಗ್ಗೆ ಚರ್ಚೆ ನಡೆಯಲಿದೆ
ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ, ಮಾಧ್ಯಮಗಳು ಬಾಲಿವುಡ್ ನಟ-ನಟಿಯರನ್ನು ಸಾಕ್ಷ್ಯಗಳಿಲ್ಲದೆ ಅಪರಾಧಿಗಳು ಎಂಬಂತೆ ಬಿಂಬಿಸಿದರ ಬಗ್ಗೆ ದೂರು ಇದ್ದು, ಜೊತೆಗೆ ಮಾಧ್ಯಮಗಳು ಸೆಲೆಬ್ರಿಟಿಗಳ ಖಾಸಗಿ ಜೀವನದ ಬಗ್ಗೆ ವರದಿ ಮಾಡಿ, ನಟರ ಹಕ್ಕುಗಳ ಉಲ್ಲಂಘನೆ ಮಾಡುತ್ತಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಲಾಗಿದೆ.
Recommended Video

ಹಲವರ ತೇಜೋವಧೆ ಮಾಡಲಾಗಿತ್ತು
ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಅರ್ನಬ್ ಗೋಸ್ವಾಮಿಯು, ರಿಯಾಳನ್ನು ಶೀಘ್ರವೇ ಬಂಧಿಸುವಂತೆ, ರಿಯಾಳೆ ಸುಶಾಂತ್ ನ ಕೊಲೆ ಮಾಡಿದ್ದಾಗಿ, ಮಹೇಶ್ ಭಟ್ ಸಹ ಕೊಲೆಯಲ್ಲಿ ಶಾಮೀಲಾಗಿರುವುದಾಗಿ ಹೇಳಿದ್ದರು. ಶಾರುಖ್ ಖಾನ್, ಸಲ್ಮಾನ್ ಖಾನ್, ದೀಪಿಕಾ ಪಡುಕೋಣೆ, ರಣ್ಬೀರ್ ಸಿಂಗ್ ಇನ್ನೂ ಹಲವರ ತೇಜೋವಧೆ ಆ ಸಂದರ್ಭದಲ್ಲಿ ಮಾಡಲಾಗಿತ್ತು.


Click it and Unblock the Notifications











