ರಣ್ಬೀರ್-ಆಲಿಯಾರ ಬ್ರಹ್ಮಾಸ್ತ್ರಗೆ ಬಲ ತುಂಬಿದ ದೆಹಲಿ ಹೈಕೋರ್ಟ್
ರಣ್ಬೀರ್ ಕಪೂರ್ ಹಾಗೂ ಆಲಿಯಾ ಭಟ್ರ ಹೊಸ ಸಿನಿಮಾ 'ಬ್ರಹ್ಮಾಸ್ತ್ರ' ಇನ್ನೆರಡು ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಲಿರುವ ಈ ಸಿನಿಮಾಕ್ಕೆ ಭಾರಿ ಮೊತ್ತವನ್ನು ಚಿತ್ರತಂಡ ಖರ್ಚು ಮಾಡಿದೆ. ಸಿನಿಮಾದ ಪ್ರಚಾರ ಸಹ ಜೋರಾಗಿ ನಡೆಯುತ್ತಿದೆ. ಆದರೆ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಇರುವಂತೆಯೇ ಕೆಲವು ವೆಬ್ಸೈಟ್ಗಳು ತಾವು 'ಬ್ರಹ್ಮಾಸ್ತ್ರ' ಸಿನಿಮಾವನ್ನು ಸ್ಟ್ರೀಮ್ ಮಾಡುವುದಾಗಿ ಪ್ರಕಟಿಸಿವೆ.
ಹಕ್ಕುಸ್ವಾಮ್ಯ ಉಲ್ಲಂಘನೆ ಅಡಿಯಲ್ಲಿ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ದೆಹಲಿ ಹೈಕೋರ್ಟ್ಗೆ ಅರ್ಜಿ ಹಾಕಿಕೊಂಡಿದ್ದು, 'ಬ್ರಹ್ಮಾಸ್ತ್ರ' ಸಿನಿಮಾವನ್ನು ಪ್ರದರ್ಶನ ಮಾಡುತ್ತೇವೆಂದಿರುವ ಕೆಲವು ವೆಬ್ಸೈಟ್ಗಳನ್ನು ಬ್ಯಾನ್ ಮಾಡಲು ಕೋರಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅನಧಿಕೃತವಾಗಿ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದ ಕೆಲವು ವೆಬ್ಸೈಟ್ಗಳನ್ನು ಅಳಿಸಿ ಹಾಕಲು ಆದೇಶಿಸಿದೆ.

ನ್ಯಾಯಮೂರ್ತಿ ಜ್ಯೋತಿ ಸಿಂಗ್ ಆದೇಶ
ಸಿನಿಮಾ ಬಿಡುಗಡೆ ಸಮಯದಲ್ಲಿ ಅಥವಾ ಬಳಿಕ ಅದೆ ಸಿನಿಮಾ ವೆಬ್ಸೈಟ್ ಅಥವಾ ಇನ್ನಾವುದೇ ಚಾನೆಲ್ಗಳಲ್ಲಿದ್ದರೆ ಅದು ಸಿನಿಮಾದ ಮೌಲ್ಯವನ್ನು ಕುಸಿಯುವಂತೆ ಮಾಡುತ್ತದೆ ಹಾಗೂ ನಿರ್ಮಾಪಕರಿಗೆ ಭಾರಿ ಹಣಕಾಸು ನಷ್ಟವುಂಟು ಮಾಡುತ್ತದೆ ಎಂದು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಪೈರಸಿ ವಿರುದ್ಧ ಕಠಿಣ ಕ್ರಮ ಬೇಕು: ನ್ಯಾಯಾಲಯ
''ಪೈರಸಿಯನ್ನು ತೊಡೆದುಹಾಕಬೇಕು ಎಂದು ಕೇವಲ ಬಾಯುಪಚಾರಕ್ಕೆ ಹೇಳುವುದರಿಂದ ಏನೂ ಪ್ರಯೋಜನವಿಲ್ಲ. ಪೈರಸಿಯ ವಿರುದ್ಧ ದೊಡ್ಡ ಮಟ್ಟದ ಕ್ರಮವನ್ನು ಕೈಗೊಳ್ಳಬೇಕಿದೆ. ಹಕ್ಕುಸ್ವಾಮ್ಯ ಉಲ್ಲಂಘಿಸಿ ಸಿನಿಮಾಗಳನ್ನು ಅಥವಾ ಇನ್ನಾವುದೇ ಸೃಜನಶೀಲ ಕಂಟೆಂಟ್ ಅನ್ನು ಪ್ರದರ್ಶಿಸುವ ವೆಬ್ಸೈಟ್ಗಳ ವಿರುದ್ಧ ತಡೆಯಾಜ್ಞೆ ತರಬೇಕು'' ಎಂದಿದ್ದಾರೆ.

ಆದೇಶ ಹೊರಡಿಸಿರುವ ನ್ಯಾಯಾಲಯ
ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಲ್ಲೇಖಿಸಿದ್ದ 18 ಪೈರಸಿ ವೆಬ್ಸೈಟ್ಗಳ ವಿರುದ್ಧ ಆದೇಶ ಹೊರಡಿಸಿರುವ ನ್ಯಾಯಮೂರ್ತಿಗಳು, ''ನಂಬರ್ 1 ರಿಂದ 18 ಪ್ರತಿವಾದಿಗಳು ನಂ. 1 ರಿಂದ 18 ಅನಧಿಕೃತ ವೆಬ್ಸೈಟ್ಗಳು ಇದೇ ರೀತಿ ಹಕ್ಕುಸ್ವಾಮ್ಯ ಉಲ್ಲಂಘಿಸುವ ಅಪರಾಧ ಎಸಗುವ ವೆಬ್ಸೈಟ್ಗಳು. 'ಬ್ರಹ್ಮಾಸ್ತ್ರ' ಸಿನಿಮಾದ, ಯಾವುದೇ ರೀತಿಯಲ್ಲಿ ಹೋಸ್ಟಿಂಗ್, ಸ್ಟ್ರೀಮಿಂಗ್, ಮರುಪ್ರಸಾರ, ಪ್ರದರ್ಶಿಸುವುದು, ವೀಕ್ಷಿಸಲು ಮತ್ತು ಡೌನ್ಲೋಡ್ ಮಾಡಲು ಲಭ್ಯವಾಗುವಂತೆ ಅವಕಾಶ ಒದಗಿಸುವುದು ಮತ್ತು ಸಂವಹನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಸಾರ್ವಜನಿಕರು, ತಮ್ಮ ವೆಬ್ಸೈಟ್ಗಳಲ್ಲಿ ಅಥವಾ ಇತರ ಯಾವುದೇ ವೇದಿಕೆಯ ಮೂಲಕ ಸಿನಿಮಾವನ್ನು ಪ್ರದರ್ಶಿಸುವುದು, ಅಪ್ಲೋಡ್ ಮಾಡುವುದು, ಮಾರ್ಪಡಿಸುವುದು, ನವೀಕರಿಸುವುದು ಅಥವಾ ಹಂಚಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ'' ಎಂದು ನ್ಯಾಯಾಲಯ ಆದೇಶಿಸಿದೆ.

ಸೆಪ್ಟೆಂಬರ್ 09ರಂದು ಸಿನಿಮಾ ಬಿಡುಗಡೆ
'ಬ್ರಹ್ಮಾಸ್ತ್ರ' ಸಿನಿಮಾವು ಸೆಪ್ಟೆಂಬರ್ 09 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಣ್ಬೀರ್ ಕಪೂರ್, ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದೈವ-ಅಸುರರ ನಡುವಿನ ಯುದ್ಧದ ಕತೆಯನ್ನು ಈ ಸಿನಿಮಾ ಹೊಂದಿದೆ. ಸಿನಿಮಾದಲ್ಲಿ ದೊಡ್ಡ ತಾರಾಗಾಣ ಇದೆ. ರಣ್ಬೀರ್-ಆಲಿಯಾ ಹೊರತಾಗಿ ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್, ಸೌರವ್ ಗುರ್ಜಾರ್, ದಿವ್ಯೇಂದು ಇನ್ನೂ ಕೆಲವರಿದ್ದಾರೆ. ಇವರ ಜೊತೆಗೆ ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಸಹ.


Click it and Unblock the Notifications











