ಯಶ್ ನಿರ್ಮಾಣದ 'ರಾಮಾಯಣ' ಚರಿತ್ರೆ ಸೃಷ್ಟಿಸುವುದು ಪಕ್ಕಾ ಎಂದ ಮಹಾರಾಷ್ಟ್ರ ಸಿಎಂ ..!
ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದತ್ತ ಎಲ್ಲರು ತಿರುಗಿ ನೋಡುವಂತೆ ಮಾಡಿದ ಯಶ್ ಕುರಿತು ಇವತ್ತು ಜಗತ್ತು ಮಾತನಾಡುತ್ತಿದೆ. ಯಶ್ ಅವರ ಮುಂದಿನ ಚಿತ್ರ ಟಾಕ್ಸಿಕ್ ಚಿತ್ರಕ್ಕೆ ಕಾತುರದಿಂದ ಕಾಯುತ್ತಿದೆ. ಹಾಲಿವುಡ್, ಬಾಲಿವುಡ್ನವರೆಲ್ಲ ಸ್ಯಾಂಡಲ್ವುಡ್ಗೆ ಬಂದು ಯಶ್ ಜೊತೆ ಕೆಲಸ ಮಾಡುತ್ತಿದ್ದಾರೆ. ಇನ್ನು ಯಶ್ ಇವತ್ತು ಕೇವಲ ಕನ್ನಡದ ಸ್ಟಾರ್ ಅಲ್ಲ. ಬಾಲಿವುಡ್ನ ಸೂಪರ್ ವಿಲನ್ ಕೂಡ ಹೌದು.
ಇಷ್ಟೇ ಅಲ್ಲ ನಿರ್ಮಾಪಕ ಕೂಡ ಹೌದು. ಟಾಕ್ಸಿಕ್ ಚಿತ್ರದ ಜೊತೆ ಜೊತೆಯಲ್ಲಿ ರಾಮಾಯಣ ಚಿತ್ರವನ್ನು ಕೂಡ ಯಶ್ ಅದ್ಧೂರಿಯಾಗಿ ತೆರೆಗೆ ತರುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಅಬ್ಬರಿಸಲು ಸರ್ವ ಸನ್ನದ್ಧರಾಗಿದ್ದಾರೆ. ಹೀಗಿರುವಾಗ ಇದೀಗ ಯಶ್ ನಿರ್ಮಾಣದ ರಾಮಾಯಣ ಚಿತ್ರದ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಯಶ್ ಮತ್ತು ತಂಡದ ಪ್ರಯತ್ನವನ್ನು ಮೆಚ್ಚಿ ಬಾಯ್ತುಂಬ ಹೊಗಳಿದ್ದಾರೆ.

ಹೌದು, ಮುಂಬೈನಲ್ಲಿ ಮೊದಲ ವಿಶ್ವ ಆಡಿಯೋ ವಿಷುವಲ್ & ಎಂಟರ್ಟೈನ್ಮೆಂಟ್ ಶೃಂಗಸಭೆ (WAVES) ನಡೆಯುತ್ತಿದೆ. ಚಿತ್ರರಂಗದ ಹಲವು ದಿಗ್ಗಜರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಸಂವಾದ ನಡೆಸುತ್ತಿದ್ಧಾರೆ. ಕೇವಲ ಚಿತ್ರರಂಗದವರು ಮಾತ್ರವಲ್ಲದೇ ರಾಜಕೀಯ ವ್ಯಕ್ತಿಗಳು ಕೂಡ ಈ ಶೃಂಗ ಸಭೆಯಲ್ಲಿ ಭಾಗವಹಿಸಿ ಸಭೆಯ ಮೆರಗು ಹೆಚ್ಚಿಸುತ್ತಿದ್ದಾರೆ. ಆ ಪೈಕಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಒಬ್ಬರು.
ವರ್ಲ್ಡ್ ಆಡಿಯೋ ವಿಶ್ಯುವಲ್ ಎಂಟರ್ಟೇನ್ಮೆಂಟ್ನ ಸಮ್ಮೇಳನದ ಸಂವಾದ ಕಾರ್ಯಕ್ರಮದಲ್ಲಿ ರಾಮಾಯಣದ ನಿರ್ಮಾಪಕರಲ್ಲೊಬ್ಬರಾದ ನಮಿತ್ ಮಲ್ಹೋತ್ರಾ ಜೊತೆ ಮಾತನಾಡಿರುವ ದೇವೇಂದ್ರ ಫಡ್ನವೀಸ್ ನಾವು ವಿಶ್ವದ ಪುರಾತನ ಕಥೆಗಾರರು, ನಮ್ಮ ಸಂಗೀತ, ನಾಟಕ, ಕಲೆ ಬಹಳ ಪುರಾತನ ಇತಿಹಾಸವನ್ನು ಹೊಂದಿದೆ ಎಂದು ಹೇಳಿದ್ದಾರೆ. ನಮ್ಮಲ್ಲಿನ ಆ ಕಥೆಗಳನ್ನು ಹೇಳಲು ನಾವು ಈಗ ಸರಿಯಾದ ತಂತ್ರಜ್ಞಾನದ ಬಳಕೆಯನ್ನು ಮಾಡಿಕೊಳ್ಳಬೇಕಿದೆ ಅದನ್ನೇ ಈಗ ಮಾಡಲಾಗುತ್ತಿದೆ, ನೀವು ಮಾಡುತ್ತಿರುವುದು ಕೂಡ ಅದನ್ನೇ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆ ರಾಮಾಯಣದ ಚಿತ್ರೀಕರಣದ ಸ್ಥಳಕ್ಕೆ ಹೋಗಿದ್ದೇ ಎಂದಿರುವ ದೇವೇಂದ್ರ ಫಡ್ನವಿಸ್, ಗುಣಮಟ್ಟವನ್ನು ನೋಡಿ ನಾನು ಆಶ್ಚರ್ಯ ಚಕಿತಗೊಂಡೆ ಎಂದು ಹೇಳಿದ್ದಾರೆ. ಅದ್ಭುತವಾಗಿ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೊಸ ಪೀಳಿಗೆಗೆ ನಮ್ಮ ಕಥೆಗಳನ್ನು ಹೇಳಬೇಕಾದ ಸರಿಯಾದ ಮಾರ್ಗ ಇದು ಎಂದು ನನ್ನ ಅನಿಸಿಕೆ ಎಂದಿರುವ ದೇವೇಂದ್ರ ಫಡ್ನವಿಸ್, ನೀವು ಮಾಡುತ್ತಿರುವ ಕೆಲಸ ವಿಶ್ವ ಮಟ್ಟದಲ್ಲಿದೆ ಎಂದು ಹೇಳಿದ್ದಾರೆ. ರಾಮಾಯಣ ಚರಿತ್ರೆ ಸೃಷ್ಟಿಸುವ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೇ ಯಶ್ ನಿರ್ಮಾಣ ರಾಮಾಯಣ ಪ್ಯಾನ್ ಇಂಡಿಯಾ ಚಿತ್ರವಲ್ಲ ಬದಲಿಗೆ ಪ್ಯಾನ್ ವರ್ಲ್ಡ್ ಸಿನಿಮಾ. ಜಾಗತಿಕ ಪ್ರೇಕ್ಷಕರಿಗಾಗಿಯೇ ಮಾಡಲಾಗುತ್ತಿರುವ ಚಿತ್ರ. ನಿತೇಶ್ ತಿವಾರಿ ನಿರ್ದೇಶನದಲ್ಲಿ ಎರಡು ಭಾಗಗಳಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ಇದ್ದಾರೆ. ರಣ್ಬೀರ್ ಕಪೂರ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದರೆ ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಯಶ್ ಲಂಕಾಸುರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹನುಮಂತನಾಗಿ ಸನ್ನಿ ಡಿಯೋಲ್, ಇಂದ್ರದೇವನಾಗಿ ಕುನಾಲ್ ಕಪೂರ್, ಲಕ್ಷ್ಮಣನಾಗಿ ರವಿ ದುಬೆ, ಶೂರ್ಪನಖಿಯಾಗಿ ರಕುಲ್ ಪ್ರೀತ್ಸಿಂಗ್, ಮಂಡೋದರಿಯಾಗಿ ಶಿಬಾ ಚಡ್ಡಾ, ದಶರಥನಾಗಿ ಅರುಣ್ ಗೋವಿಲ್ ಬಣ್ಣ ಹಚ್ಚಿದ್ದಾರೆ. ಇನ್ನು ಹಾಲಿವುಡ್ನ ಅನೇಕ ತಂತ್ರಜ್ಞರು ರಾಮಾಯಣ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. 2026ರ ದೀಪಾವಳಿಯಂದು ರಾಮಾಯಣ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. 2027ರಲ್ಲಿ ಎರಡನೇ ಭಾಗ ಬಿಡುಗಡೆಯಾಗಲಿದೆ.


Click it and Unblock the Notifications











