"ರಾಮಮಂದಿರ ಕಟ್ಸಿದ್ದಾರೆ, ಚುನಾವಣೆ ಗೆಲ್ಲಲು ಸರ್ಕಾರಕ್ಕೆ ನಮ್ಮ ಸಣ್ಣ ಸಿನಿಮಾ ಬೇಕಿಲ್ಲ"; ಆದಿತ್ಯಧರ್ ಹೇಳಿಕೆ ವೈರಲ್
ರಣ್ವೀರ್ ಸಿಂಗ್ ನಟನೆಯ 'ಧುರಂಧರ್'-2 ಸಿನಿಮಾ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದೆ. ಪ್ರೀಮಿಯರ್ ಶೋಗಳು ಸೇರಿ 5 ದಿನಕ್ಕೆ 500 ಕೋಟಿ ರೂ,ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡ್ತಿದೆ. ಇದು ಪ್ರಾಪಗಂಡಾ ಸಿನಿಮಾ, ಬಿಜೆಪಿ ಪ್ರಚಾರದ ಸಿನಿಮಾ, ದೇಶಾಭಿಮಾನದ ಹೆಸರಿನಲ್ಲಿ ಸುಳ್ಳು ಹಬ್ಬಿಸುತ್ತಿರುವ ಸಿನಿಮಾ ಅಂತೆಲ್ಲಾ ಕೆಲವರು ಟೀಕಿಸುತ್ತಿದ್ದಾರೆ.
'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಹಾಗೂ 'ಧುರಂಧರ್' ಸಿನಿಮಾಗಳ ಮೂಲಕ ಆದಿತ್ಯಧರ್ ಸಂಚಲನ ಸೃಷ್ಟಿಸಿದ್ದಾರೆ. 3 ಸಿನಿಮಾಗಳಲ್ಲಿ ದೇಶಾಭಿಮಾನದ ಕಥೆ ಹೇಳಿ ಗೆದ್ದಿದ್ದು ಮೂರು ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದೆ. ನಿರ್ದೇಶಕರಿಗೆ ಟೀಕೆಗಳು ಹೊಸದಲ್ಲ. ಈ ಹಿಂದೆ ಇಂತಹ ಟೀಕೆಗಳ ಬಗ್ಗೆ ಆದಿತ್ಯಧರ್ ನೇರವಾಗಿ ಪ್ರತಿಕ್ರಿಯಿಸಿದ್ದು ಇದೆ. 3 ಸಿನಿಮಾ ನಿರ್ದೇಶನ ಮಾತ್ರವಲ್ಲ ಕೆಲ ಸಿನಿಮಾಗಳಿಗೆ ಬರಹಗಾರರಾಗಿ ಅವರು ಕೆಲಸ ಮಾಡಿದ್ದಾರೆ.

ತಮ್ಮದೇ ಬ್ಯಾನರ್ ಅಡಿಯಲ್ಲಿ 'ಆರ್ಟಿಕಲ್ 370' ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. ಚಿತ್ರಕಥೆ ಕೂಡ ಬರೆದಿದ್ದರು. ಅವರ ಪತ್ನಿ ಯಾಮಿ ಗೌತಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೊಂದು ಪ್ರಾಪೊಗಂಡ ಸಿನಿಮಾ ಎನ್ನುವವರಿಗೆ ಟ್ರೈಲರ್ ಲಾಂಚ್ ಈವೆಂಟ್ನಲ್ಲೇ ತಿರುಗೇಟು ಕೊಟ್ಟಿದ್ದರು. ಆ ವೀಡಿಯೋ ಈಗ ಮತ್ತೆ ವೈರಲ್ ಆಗುತ್ತಿದೆ. 'ಧುರಂಧರ್'-2 ಎನ್ನುವವರಿಗೆ ಈ ವೀಡಿಯೋ ತೋರಿಸಿ ನೆಟ್ಟಿಗರು ಕೌಂಟರ್ ಕೊಡುತ್ತಿದ್ದಾರೆ.
ಅಂದು ಮಾತನಾಡಿದ್ದ ನಿರ್ದೇಶಕ ಆದಿತ್ಯಧರ್ "ಪ್ರಸ್ತುತ ಸರ್ಕಾರಕ್ಕೆ ಚುನಾವಣೆಯಲ್ಲಿ ಗೆಲ್ಲಲು ನಾವು ಮಾಡಿರುವ ಸಣ್ಣ ಚಿತ್ರದ ಅಗತ್ಯವಿಲ್ಲ ಅಂತ ವೈಯಕ್ತಿಕವಾಗಿ ಮತ್ತು ಗಂಭೀರವಾಗಿ ನಾನು ಭಾವಿಸುತ್ತೇನೆ" ಎಂದು ನಕ್ಕಿದ್ದರು. ಅವರು ನಮಗಾಗಿ ರಾಮಮಂದಿರವನ್ನು ನಿರ್ಮಿಸಿದ್ದಾರೆ. ಅದನ್ನು ಪಡೆಯಲು ನಮಗೆ 500 ವರ್ಷಗಳು ಬೇಕಾಯಿತು. ಅವರಿಗೆ ವೋಟ್ ಪಡೆಯಲು ನಾವು ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದಿದ್ದರು.

'ಧುರಂಧರ್' ಸರಣಿ ಸಕ್ಸಸ್ ಬೆನ್ನಲ್ಲೇ ಆದಿತ್ಯಧರ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಶುರುವಾಗಿದೆ. 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಎಂಬ ಚಿತ್ರವನ್ನು ನಿರ್ದೇಶಕರು ಹಿಂದೆ ಘೋಷಿಸಿದ್ದರು. ವಿಕ್ಕಿ ಕೌಶಲ್ ಚಿತ್ರದಲ್ಲಿ ನಟಿಸಬೇಕಿತ್ತು. ಬಜೆಟ್ ಹೆಚ್ಚಾಯ್ತು ಎನ್ನುವ ಕಾರಣಕ್ಕೆ ಆ ಚಿತ್ರ ಕೈಬಿಟ್ಟಿದ್ದರು. ಆದರೆ ಈಗ 'ಧುರಂಧರ್' ಸರಣಿ ಬ್ಲಾಕ್ಬಸ್ಟರ್ ಹಿಟ್ ಆಗಿರುವುದು ಆದಿತ್ಯಧರ್ ಮೇಲೆ ನಂಬಿಕೆ ಮೂಡುವಂತೆ ಮಾಡಿದೆ. ಅವರ ಕೆಲಸ ನಂಬಿ ಎಷ್ಟೇ ದೊಡ್ಡ ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರುವಂತಾಗಿದೆ.
1000 ಕೋಟಿ ರೂ. ಬಜೆಟ್ನಲ್ಲಿ 'ದಿ ಇಮ್ಮಾರ್ಟಲ್ ಅಶ್ವತ್ಥಾಮ' ಸಿನಿಮಾ ಮಾಡ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ವಿಕ್ಕಿ ಬದಲು ರಾಮ್ಚರಣ್ ಅಥವಾ ಅಲ್ಲು ಅರ್ಜುನ್ ಹೀರೊ ಆಗಿ ಚಿತ್ರದಲ್ಲಿ ನಟಿಸಬಹುದು ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದಿತ್ಯಧರ್ 'ಅಶ್ವತ್ಥಾಮ'ನ ಕಥೆಯನ್ನು ತೆರೆ ತರ್ತಾರಾ? ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನು ದಿನದಿಂದ ದಿನಕ್ಕೆ 'ಧುರಂಧರ್-2' ದರ್ಬಾರ್ ಜೋರಾಗುತ್ತಿದೆ. ಫಸ್ಟ್ ವೀಕೆಂಡ್ ಮುಗಿದು ಸೋಮವಾರದ ಪರೀಕ್ಷೆಯನ್ನು ಸಿನಿಮಾ ಗೆದ್ದಿದೆ. ಬಹುತೇಕ ಕಡೆಗಳಲ್ಲಿ ಸಿನಿಮಾ ಹೌಸ್ಫುಲ್ ಪ್ರದರ್ಶನ ಮುಂದುವರೆದಿದೆ. ಇನ್ನು ತಾರೆಯರು ಚಿತ್ರವನ್ನು ಕೊಂಡಾಡುತ್ತಲೇ ಇದ್ದಾರೆ. ರಾಜಮೌಳಿ, ರಾಮ್ಚರಣ್, ಜ್ಯೂ. ಎನ್ಟಿಆರ್, ಅಲ್ಲು ಅರ್ಜುನ್ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಟ್ವೀಟ್ ಮಾಡಿ ಚಿತ್ರತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಅದಕ್ಕೆ ನಿರ್ದೇಶಕ ಆದಿತ್ಯಧರ್ ಕೂಡ ಪ್ರತಿಕ್ರಿಯಿಸಿದ್ದಾರೆ.


Click it and Unblock the Notifications











