ಶಾಹಿದ್ ಅಫ್ರಿದಿ ನನ್ನ ಕ್ರಶ್; 'ಧುರಂಧರ್' ಚಿತ್ರ ನಿರ್ದೇಶಕನ ಪತ್ನಿ ಹೇಳಿಕೆ ವೈರಲ್
ಆದಿತ್ಯಧರ್ ನಿರ್ದೇಶನದ 'ಧುರಂಧರ್' ಸರಣಿ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಕೆಲವರು ಪ್ರಾಪಗಂಡ ಸಿನಿಮಾ ಎಂದು ಟೀಕಿಸುತ್ತಿದ್ದಾರೆ. ಆದರೆ ಬಹುತೇಕರು ಸತ್ಯವನ್ನೇ ತೆರೆಮೇಲೆ ತೋರಿಸಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ. ಭಾರತದ ಸೈನಿಕ ಗೂಢಚಾರಿಯಾಗಿ ಪಾಕಿಸ್ತಾನಕ್ಕೆ ತೆರಳಿ ಉಗ್ರರ ವಿರುದ್ಧ ಹೋರಾಡುವ ಕಥೆ 'ಧುರಂಧರ್' ಚಿತ್ರದಲ್ಲಿದೆ. ಬಹಳ ರೋಚಕವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಅದೇ ಕಾರಣಕ್ಕೆ ಸಿನಿಮಾ ಸಂಚಲನ ಸೃಷ್ಟಿಸಿದೆ.
ಈ ಹಿಂದೆ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಚಿತ್ರವನ್ನು ಆದಿತ್ಯಧರ್ ನಿರ್ದೇಶಿಸಿದ್ದರು. 'ಆರ್ಟಿಕಲ್ 370' ಚಿತ್ರವನ್ನು ನಿರ್ಮಿಸಿದ್ದರು. ಆದಿತ್ಯಧರ್ ನಿಜವಾದ ರಾಷ್ಟ್ರೀಯವಾದಿ ಚಿತ್ರ ನಿರ್ದೇಶಕ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. 'ಆರ್ಟಿಕಲ್ 370' ಚಿತ್ರದ ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಆದಿತ್ಯಧರ್ ಪತ್ನಿ ನಟಿ ಯಾಮಿ ಗೌತಮ್ ನಟಿಸಿದ್ದರು. ಇಬ್ಬರೂ ನಿಜವಾದ ರಾಷ್ಟ್ರೀಯವಾದಿಗಳು ಎಂದು ಎಲ್ಲರೂ ಕೊಂಡಾಡುತ್ತಿದ್ದಾರೆ.

ದಶಕದ ಹಿಂದೆ ಯಾಮಿ ಗೌತಮಿ ಪಾಕಿಸ್ತಾನದ ಕ್ರಿಕೆಟಿಗ ನನ್ನ ಕ್ರಶ್ ಎಂದು ಹೇಳಿದ್ದರು. ಆ ವೀಡಿಯೋವನ್ನು ಈಗ ವೈರಲ್ ಮಾಡಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಈಗ ಮಹಾನ್ ರಾಷ್ಟ್ರೀಯವಾದಿ ಎನ್ನುವಂತೆ ಬಿಂಬಿಸಿಕೊಳ್ಳುತ್ತಿರುವ ಯಾಮಿ ಗೌತಮ್ ಒಂದ್ಕಾಲದಲ್ಲಿ ಪಾಕ್ ಕ್ರಿಕೆಟಿಗನ ಅಭಿಮಾನಿ ಆಗಿದ್ದರು. ಈಗ ಬೂಟಾಟಿಕೆ ಮಾತನಾಡುತ್ತಿದ್ದಾರೆ. ಅವರ ನಿಜ ಬಣ್ಣ ಇದು ಅಂತೆಲ್ಲಾ ವ್ಯಂಗ್ಯವಾಡುತ್ತಿದ್ದಾರೆ. 2014ರಲ್ಲಿ 'ಟೋಟಲ್ ಸಿಯಪ್ಪ' ಎಂಬ ಚಿತ್ರದಲ್ಲಿ ಯಾಮಿ ಗೌತಮ್ ನಾಯಕಿಯಾಗಿ ನಟಿಸಿದ್ದರು. ಚಿತ್ರದ ಪ್ರಚಾರದ ವೇಳೆ ಶಾಹಿದ್ ಅಫ್ರಿದಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿದ್ದರು.
ಪಾಕ್ ಕ್ರಿಕೆಟಿಗೆ ಶಾಹಿದ್ ಅಫ್ರಿದಿ ಕಾಶ್ಮೀರ ವಿವಾದವನ್ನು ಪದೇ ಪದೆ ಕೆಣಕಿ ವಿವಾದ ಸೃಷ್ಟಿಸುತ್ತಿರುತ್ತಾರೆ. ಅಂತಹ ವ್ಯಕ್ತಿ ನನ್ನ ಕ್ರಶ್ ಎಂದು ಯಾಮಿ ಗೌತಮ್ ಹೇಳುತ್ತಿದ್ದರು. ಈಗ ನೋಡಿದ್ರೆ 'ಧುರಂಧರ್' ಸಿನಿಮಾ ಮಾಡಿ ಆದಿತ್ಯ- ಯಾಮಿ ಗೌತಮ್ ರಾಷ್ಟ್ರೀಯವಾದಿಗಳಾಗಿ ಬದಲಾಗಿಬಿಟ್ಟಿದ್ದಾರೆ ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇಂತಹ ವಿಚಾರಗಳು ಗೊತ್ತಿರಲ್ಲ, ಪ್ರಬುದ್ಧರಾದ ಬಳಿಕ ಯಾವುದು ಸತ್ಯ ಎಂದು ಗೊತ್ತಾಗುತ್ತದೆ. ಇದನ್ನೆಲ್ಲಾ ಕೆದಕುವುದು ಸರಿಯಲ್ಲ ಎಂದು ಸಾಕಷ್ಟು ಜನ ಯಾಮಿ ಗೌತಮ್ ಬೆಂಬಲಕ್ಕೆ ನಿಂತಿದ್ದಾರೆ.
'ಧುರಂಧರ್' ಗೆಲುವು ಕೆಲವರ ನಿದ್ದೆ ಕೆಡಿಸಿದೆ, ಅದಕ್ಕೆ ಹೀಗೆ ಬೇಡದ ವಿಚಾರಗಳನ್ನು ಎಳೆದು ತರುತ್ತಿದ್ದಾರೆ. ಆದಿತ್ಯಧರ್ ಸತ್ಯವನ್ನೇ ಚಿತ್ರದಲ್ಲಿ ತೋರಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 'ಟೋಟಲ್ ಸಿಯಪ್ಪ' ಚಿತ್ರದಲ್ಲಿ ಪಾಕಿಸ್ತಾನದ ಮೂಲದ ಯುವಕ ಭಾರತೀಯ ಮೂಲದ ಯುವತಿಯನ್ನು ಪ್ರೀತಿಸುವ ಕಥೆಯಿದೆ. ಚಿತ್ರದಲ್ಲಿ ಪಾಕ್ ಕ್ರಿಕೆಟಿಗ ಅಫ್ರಿದಿ ಬಗ್ಗೆ ಒಂದು ಡೈಲಾಗ್ ಕೂಡ ಇದೆ. ಪಾಕ್ ಮೂಲದ ನಟ ಅಲಿ ಜಾಫರ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಹಾಗಾಗಿ ಪ್ರಚಾರದ ವೇಳೆ ಅಫ್ರಿದಿ ಹೆಸರು ಯಾಮಿ ಗೌತಮ್ ತೆಗೆದುಕೊಂಡಿರಬಹುದು ಅಷ್ಟೇ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
'ಧುರಂಧರ್-2' ಸಿನಿಮಾ ಗೆಲುವಿನ ಓಟ ಮುಂದುವರೆದಿದೆ. ಭಾರತದಲ್ಲೇ 1300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ. 1088 ಕೋಟಿ ರೂ. ನೆಟ್ ಕಲೆಕ್ಷನ್ ಆಗಿದೆ. ಐಪಿಎಲ್ ಆರ್ಭಟದ ನಡುವೆ ಕೂಡ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ. 700ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರದರ್ಶನ ಕಾಣ್ತಿದೆ.
ಆದಿತ್ಯಧರ್ ಮುಂದಿನ ಸಿನಿಮಾ ಯಾವುದು ಎನ್ನುವ ಚರ್ಚೆ ಕೂಡ ಜೋರಾಗಿದೆ. ಈ ಹಿಂದೆ ಅಶ್ವತ್ಥಾಮ ಕಥೆಯನ್ನು ತೆರೆಗೆ ತರುವುದಾಗಿ ಘೋಷಿಸಿದ್ದರು. ಆದರೆ ಬಜೆಟ್ ಕಾರಣಕ್ಕೆ ಆ ಸಿನಿಮಾ ನಿಂತು ಹೋಗಿತ್ತು. ಅದೇ ಚಿತ್ರವನ್ನು ಮತ್ತೆ ಕೈಗೆತ್ತಿಕೊಳ್ಳುತ್ತಾರಾ ಕಾದು ನೋಡಬೇಕಿದೆ.


Click it and Unblock the Notifications











