ಭಾರತೀಯರಿಗೆ ಕಾಶ್ಮೀರದಲ್ಲಿ ಪ್ರವೇಶ ಇಲ್ಲ ಎಂಬ ಬರಹ ಮೆಚ್ಚಿದ ನಟಿ, ಭುಗಿಲೆದ್ದ ಆಕ್ರೋಶ..!
ಪಹಲ್ಗಾಮ್ನಲ್ಲಿ 26 ಜನರ ಬಲಿ ಪಡೆದ ಉಗ್ರರಿಗಾಗಿ ಭದ್ರತಾ ಪಡೆಗಳು ಕಳೆದ ಐದು ದಿನಗಳಿಂದ ತೀವೃ ಶೋಧ ನಡೆಸುತ್ತಿವೆ. ಅಮಾಯಕರ ಪ್ರಾಣ ತೆಗೆದ ಉಗ್ರರ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದೆ. ಅನೇಕರು ಈಗಲೇ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಘೋಷಿಸಬೇಕೆನ್ನುವ ಮಾತುಗಳನ್ನಾಡುತ್ತಿದ್ದಾರೆ. ಕಾಶ್ಮೀರಕ್ಕೆ ಕಾಲಿಡಲು ಅನೇಕರು ಈಗ ಭಯ ಕೂಡ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಟಿಯೊಬ್ಬರು
ಭಾರತದಲ್ಲಿದ್ದುಕೊಂಡು ಭಾರತದ ವಿರುದ್ಧ ಬರೆಯಲಾಗಿದ್ದ ಬರಹವೊಂದನ್ನು ಮೆಚ್ಚಿಕೊಂಡಿದ್ದಾರೆ. ಈ ಮೂಲಕ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗೆ ಭಾರತೀಯರನ್ನು ಕೆರಳಿಸಿರುವ ಆ ನಾಯಕಿಯ ಹೆಸರು ಆಯೇಷಾ ಖಾನ್. ಹೌದು, ಆಯೇಶಾ ಖಾನ್..ತೆಲುಗಿನ ಮುಖ ಚಿತ್ರಂ ಮೂಲಕ ಚಿತ್ರರಂಗಕ್ಕೆ ಬಂದ ಮುಂಬೈನ ಚೆಲುವೆ. ಆ ನಂತರ ತೆಲುಗಿನ ಗ್ಯಾಂಗ್ಸ್ ಆಫ್ ಗೋದಾವರಿ ಮತ್ತು ಓಂ ಭೀಮ್ ಬುಷ್ ಚಿತ್ರಗಳಲ್ಲಿ ಕೂಡ ಇವರು ಅಭಿನಯಿಸಿದ್ದಾರೆ.

ಇತ್ತೀಚೆಗೆ ತೆರೆಗೆ ಬಂದ ಜಾಟ್ ಚಿತ್ರದಲ್ಲಿ ಕೂಡ ಆಯೇಷಾ ಖಾನ್ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಇನ್ನು ಹಿಂದಿಯ ಬಿಗ್ ಬಾಸ್ ಸೀಸನ್ 17ರಲ್ಲಿ ಕೂಡ ಭಾಗವಹಿಸಿದ್ದ ಆಯೇಷಾ ಖಾನ್ 8ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಇಂಥಾ ಆಯೇಷಾ ಖಾನ್ ಈಗ ಕಾಶ್ಮೀರದಲ್ಲಿ ಭಾರತೀಯರಿಗೆ ಪ್ರವೇಶ ಇಲ್ಲ ಎಂದು ಬರೆಯಲಾಗಿದ್ದ ಬರಹವನ್ನು ಮೆಚ್ಚಿಕೊಳ್ಳುವ ವಿವಾದಕ್ಕೀಡಾಗಿದ್ಧಾರೆ.
ಹೌದು, ಅಸಲಿಗೆ ಕಾಶ್ಮೀರಿ ಕವಿ ಮತ್ತು ಲೇಖಕ ಜಲೀಸ್ ಹೈದರ್ ಪಹಲ್ಗಾಮ್ ದಾಳಿಯ ನಂತರ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಲೇಖನ ಬರೆದಿದ್ದಾರೆ. ತಮ್ಮ ಲೇಖನದಲ್ಲಿ ನಾನು ಹೀಗೆ ಹೇಳುತ್ತಿರುವುದಕ್ಕೆ ಯಾರು ಕೋಪಗೊಂಡರೂ ನಾನು ಚಿಂತಿಸುವುದಿಲ್ಲ ಯಾಕೆಂದರೆ ಕೆಲ ಸತ್ಯಗಳನ್ನು ಮಾತನಾಡಲೇಬೇಕಾಗುತ್ತೆ ಎಂದು ಹೇಳಿದ್ದಾರೆ.
ಕಾಶ್ಮೀರ ನಿಮ್ಮ ಪಿಕ್ನಿಕ್ ಸ್ಪಾಟ್ ಅಲ್ಲ, ನಿಮ್ಮ ಇನ್ಸ್ಟಾಗ್ರಾಮ್ ಗೋಸ್ಕರ ಸೃಷ್ಟಿಯಾದ ಸ್ವರ್ಗವಲ್ಲ ಬದಲಿಗೆ ಮಿಲಿಟರಿ ಪ್ರದೇಶ, ಇದನ್ನು ತಮ್ಮ ಮನೆಯೆಂದುಕೊಂಡವರು ಶಾಂತಿಯಿಂದ ಬದುಕುತ್ತಿಲ್ಲ, ಬದಲಿಗೆ ಹಿಂಸಾಚಾರ, ನಿರಂತರ ಬೆದರಿಕೆ, ಮತ್ತು ಕಣ್ಗಾವಲಿನಲ್ಲಿ ಬದುಕುತ್ತಿದ್ದಾರೆ ಎಂದು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ನೆಲದ ಮೇಲಿನ ಕ್ರೂರ ವಾಸ್ತವವನ್ನು ಒಪ್ಪಿಕೊಳ್ಳದೆ ಈ ಭೂಮಿಯನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಸುಳ್ಳು ಹೇಳುವವರು ಇಲ್ಲಿ ತೆಗೆದುಕೊಳ್ಳುವ ಪ್ರತಿಯೊಂದು ಫೋಟೊ ಕೂಡ ಹಿಂಸೆಯ ರೂಪ, ನಮ್ಮ ತಾಯ್ನಾಡನ್ನು ನಿಮ್ಮ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ನಿಮಗೆ ಸ್ವಾಗತ ಇಲ್ಲ, ಭಾರತೀಯರಿಗೆ ಕಾಶ್ಮೀರದಲ್ಲಿ ಪ್ರವೇಶ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಜಲೀಸ್ ಹೈದರ್ ಬರೆದುಕೊಂಡ ಈ ವಿವಾದಾತ್ಮಕವಾದ ಬರಹವನ್ನು ಆಯೇಶಾ ಖಾನ್ ಮೆಚ್ಚಿಕೊಂಡಿದ್ದಾರೆ. ಇದು ಈಗ ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದಲ್ಲಿದ್ದುಕೊಂಡು, ಭಾರತದ ಅನ್ನ ತಿಂದು ಬೆಳೆದು, ಕಾಶ್ಮೀರದಲ್ಲಿ ಭಾರತೀಯರಿಗೆ ಪ್ರವೇಶ ಇಲ್ಲ ಎನ್ನುವ ಬರಹವನ್ನು ಹೇಗೆ ಯಾರಾದರೂ ಮೆಚ್ಚಿಕೊಳ್ಳಲು ಸಾಧ್ಯ ಎನ್ನುವ ಚರ್ಚೆಗೆ ಕಾರಣವಾಗಿದೆ. ಇವರಿಗೆ ದೇಶಕ್ಕಿಂತ ಧರ್ಮ ಮುಖ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆಯೇಶಾ ಖಾನ್ ತಮ್ಮ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರು ಸದ್ಯ ಮೌನ ವಹಿಸಿದ್ದಾರೆ. ತಾವು ಪೋಸ್ಟ್ ಮೆಚ್ಚಿಕೊಂಡಿದ್ದೇಕೆ ಎನ್ನುವ ಸ್ಪಷ್ಟೀಕರಣವನ್ನು ಇದುವರೆಗೆ ಆಯೇಷಾ ಖಾನ್ ನೀಡಿಲ್ಲ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಯೇಷಾ ಖಾನ್ ವಿರುದ್ಧ ಅನೇಕರು ಕಿಡಿ ಕಾರುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ವಾಸ ಮಾಡಿ ಎನ್ನುತ್ತಿದ್ದಾರೆ. ಆಯೇಷಾ ಖಾನ್ ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಈ ಆಕ್ರೋಶಕ್ಕೆ ಉತ್ತರವನ್ನು ಕೊಡುವ ಪ್ರಯತ್ನ ಮಾಡುತ್ತಾರಾ, ಮುಂದೆ ಈ ವಿವಾದದ ಕುರಿತು ಮಾತನಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











