ಪಾತ್ರಕ್ಕಾಗಿ ಪಲ್ಲಂಗ ; ಚಪ್ಪಲಿಯಲ್ಲಿ ಹೊಡಿತೀನಿ ಎಂದ ಖ್ಯಾತ ನಟಿ
ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ.
ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಕೇವಲ ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ.

ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವು ನಾಯಕಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಅಲ್ಲೊಬ್ಬರು .. ಇಲ್ಲೊಬ್ಬರು .. ಮಾತ್ರ ಅಪರೂಪ ಎಂಬಂತೆ ಈ ಸುಳಿಯಿಂದ ಹೇಗೋ ಪಾರಾಗಿದ್ದಾರೆ. ಉದಾಹರಣೆಗೆ ಅಮ್ರಪಾಲಿ ದುಬೆ.
ಹೌದು, ಅಮ್ರಪಾಲಿ ದುಬೆ. ಭೋಜ್ಪುರಿಯ ಸ್ಟಾರ್ ನಾಯಕಿ. ಭೋಜ್ಪುರಿ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ಮೊದಲಿಗರಾಗಿರುವ ಅಮ್ರಪಾಲಿ ಅಲ್ಲಿನ ಸೂಪರ್ ಸ್ಟಾರ್ಗಳಾದ ಪವನ್ ಸಿಂಗ್.. ದಿನೇಶ್ ಲಾಲ್ ಯಾದವ್.. ಸೇರಿ ಹಲವರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಇನ್ನೂ ನಾಯಕಿಯಾಗಿ ಖ್ಯಾತಿಯ ತುತ್ತ ತುದಿಯನ್ನು ತಲುಪುವ ಮುನ್ನ ಕಿರುತೆರೆಯಲ್ಲಿ ಕೂಡ ತಮ್ಮ ಚಾಪು ಮೂಡಿಸಿದವರು ಅಮ್ರಪಾಲಿ ದುಬೆ.
''ಪಾಟ್ನಾ ಸೇ ಪಾಕಿಸ್ತಾನ್''.. ''ಲಲ್ಲು ಕೀ ಲೈಲಾ''.. ''ಬಾರ್ಡರ್''.. ''ರೋಮಿಯೋ ರಾಜಾ''.. ಇವರ ಕೆಲ ಜನಪ್ರಿಯ ಚಿತ್ರಗಳು. ಅದರಲ್ಲಿಯೂ ಇವರು ದಿನೇಶ್ ಲಾಲ್ ಯಾದವ್ ಜೊತೆ ಮಾಡಿರುವ ಹಿಂದೂಸ್ತಾನಿ ಚಿತ್ರದ ಮೂರು ಭಾಗಗಳು ಅಪಾರ ಹೆಸರನ್ನು ಇವರಿಗೆ ತಂದು ಕೊಟ್ಟವು. ಇದರ ಜೊತೆ ದಿನೇಶ್ ಲಾಲ್ ಯಾದವ್ ಜೊತೆ ''ಚಾಲ್ ಸಸುರಾಲ್''.. ''ಚಾಲ್ ಲಂಡನ್'' ಚಿತ್ರವನ್ನು ಕೂಡ ಅಮ್ರಪಾಲಿ ಮಾಡಿದರು.
ಇಂಥಾ ಅಮ್ರಪಾಲಿ ದುಬೆ ಸದ್ಯ ಪಾತ್ರಕ್ಕಾಗಿ ಪಲ್ಲಂಗ ಸಂಸ್ಕ್ರತಿಯ ಬಗ್ಗೆ ಮಾತನಾಡಿದ್ದಾರೆ. ಭೋಜ್ಪುರಿಯಲ್ಲಿ ಕಾಸ್ಟಿಂಗ್ ಕೌಚ್ ತುಂಬಾನೇ ಸಾಮಾನ್ಯವಂತೆ ಹೌದಾ..? ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಈ ಕುರಿತು ''ಸಿದ್ಧಾರ್ಥ್ ಕಣ್ಣನ್'' ಅವರಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅಮ್ರಪಾಲಿ ಯಾರಿಗೆ ಈ ಅನುಭವ ಆಗಿದೆ ನೀವು ಅವರನ್ನೇ ಈ ಪ್ರಶ್ನೆ ಕೇಳಿದರೆ ಅವರು ವಿವರಣೆಯನ್ನು ನೀಡಬಹುದು ಎಂದು ಹೇಳಿದ್ದಾರೆ. ನನ್ನನ್ನೂ ಇಲ್ಲಿಯವರೆಗೆ ಯಾರು ಪಾತ್ರ ಕೊಡುವ ನೆಪದಲ್ಲಿ ಹಾಸಿಗೆಗೆ ಕರೆದಿಲ್ಲ. ಆ ಧೈರ್ಯ ಕೂಡ ಯಾರಲ್ಲಿಯೂ ಇಲ್ಲ ಎಂದು ಹೇಳಿರುವ ಅಮ್ರಪಾಲಿ ಹಾಗೊಂದು ವೇಳೆ ಯಾರಾದರೂ ನನ್ನ ಕೇಳಿದರೆ ಅಲ್ಲಿಯೇ ಅವರ ಗ್ರಹಚಾರ ಬಿಡಿಸ್ತೀನಿ ಎಂದು ಹೇಳಿದ್ದಾರೆ. ಕಾಲಿನಲ್ಲಿರುವ ಚಪ್ಪಲಿನ ಕೈಗೆ ತಗೊಂಡು ಕಿತ್ತು ಹೋಗುವಂತೆ ಹೊಡೆಯುತ್ತೇನೆ ಎಂದು ಹೇಳಿದ್ದಾರೆ.
ನನ್ನ ಈ ಸ್ವಭಾವ.. ನೇರವಂತಿಕೆ.. ಎಲ್ಲರಿಗೆ ಗೊತ್ತು. ಈ ಕಾರಣಕ್ಕೆ ಆ ತರಹದ ಆಲೋಚನೆಯನ್ನು ಕೂಡ ಯಾರು ಮಾಡುವುದಿಲ್ಲ ಎಂದು ಹೇಳಿರುವ ಅಮ್ರಪಾಲಿ ಕೇವಲ ನಾನು ಅಂತ ಅಲ್ಲ ಯಾರೇ ನಾಯಕಿ ಇರಲಿ ಹಾಸಿಗೆ ಹಂಚಿಕೊಳ್ಳುವಂತೆ ಕರೆದರೆ.. ಒತ್ತಾಯ ಮಾಡಿದರೆ.. ಎದುರಿನ ವ್ಯಕ್ತಿ ಯಾರೇ ಇರಲಿ ಆಲೋಚನೆ ಮಾಡದೇ ಚಪ್ಪಲಿಯಲ್ಲಿಯೇ ಹೊಡೆಯಬೇಕು ಆ ಮನೋಭಾವ ಬೆಳೆಸಿಕೊಳ್ಳಬೇಕು, ಆಗಲೇ ಇದೆಲ್ಲದಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಹೇಳಿದ್ದಾರೆ.


Click it and Unblock the Notifications











