'ಆದಿಪುರುಷ್' ಚಿತ್ರದಲ್ಲಿ ರಾವಣನನ್ನು ಬೀದಿ ರೌಡಿ ತರ ತೋರ್ಸಿದ್ದಾರೆ"; 'ಹೊಸಜೀವನ' ಚಿತ್ರನಟಿ ಬೇಸರ
ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ತೆರೆಕಂಡು ವರ್ಷವಾಗುತ್ತಾ ಬಂತು. ಆದರೆ ಸಿನಿಮಾ ಬಗ್ಗೆ ಟೀಕೆಗಳು ಮಾತ್ರ ಕಮ್ಮಿ ಆಗುತ್ತಿಲ್ಲ. ಓಂ ರಾವುತ್ ನಿರ್ದೇಶನದ ಈ ಪೌರಾಣಿಕ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬಂದಿತ್ತು. ರಾಮಾಯಣ ಕಾವ್ಯವನ್ನೇ ಆಧರಿಸಿ ಸಿನಿಮಾ ಮಾಡಲಾಗಿತ್ತು.
ಶ್ರೀರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೂನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಟಿಸಿದ್ದರು. ಇನ್ನು ರಾವಣನಾಗಿ ಸೈಫ್ ಅಲಿಖಾನ್ ಬಣ್ಣ ಹಚ್ಚಿದ್ದರು. ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಬರೀ ಸ್ಟುಡಿಯೋದಲ್ಲೇ ಇಡೀ ಸಿನಿಮಾ ಚಿತ್ರೀಕರಣ ನಡೆದಿತ್ತು. ಆದರೆ ರಾಮಾಯಣ ಕಾವ್ಯವನ್ನು ಹೊಸ ರೀತಿಯಲ್ಲಿ ಕಟ್ಟಿ ಕೊಡುತ್ತೇವೆ, ಇವತ್ತಿನ ಜನರೇಷನ್ ಇಷ್ಟಪಡುವಂತೆ ತೋರಿಸುತ್ತೇವೆ ಎನ್ನುವ ಹಠಕ್ಕೆ ಬಿದ್ದು ಚಿತ್ರತಂಡ ಎಡವಿತ್ತು.

'ಆದಿಪುರುಷ್' ಸಿನಿಮಾ ತಾಂತ್ರಿಕವಾಗಿ ಶ್ರೀಮಂತವಾಗಿತ್ತು. ಪ್ರಭಾಸ್, ಕೃತಿ, ದೇವದತ್ತ ನಟನೆ ಇಷ್ಟವಾಗಿತ್ತು. ಆದರೆ ಪಾತ್ರಗಳ ಚಿತ್ರಣ, ವೇಷ ಭೂಷಣದ ವಿಚಾರದಲ್ಲಿ ಚಿತ್ರತಂಡ ಮಾಡಿದ ತಪ್ಪನ್ನು ಯಾರೂ ಕೂಡ ಒಪ್ಪಲು ಸಿದ್ಧರಿರಲಿಲ್ಲ. ಚಿತ್ರವನ್ನು ಬ್ಯಾನ್ ಮಾಡುವಂತೆ ಆಗ್ರಹ ವ್ಯಕ್ತವಾಗಿತ್ತು. ಕೆಲವಡೆ ದೂರುಗಳು ದಾಖಲಾಗಿತ್ತು. ಚಿತ್ರದ ಕೆಲ ಸಂಭಾಷಣೆ ಬಗ್ಗೆಯೂ ವಿವಾದ ಸೃಷ್ಟಿಯಾಗಿತ್ತು.
ಇದೀಗ ಬಾಲಿವುಡ್ ನಟಿ ದೀಪಿಕಾ ಚಿಖ್ಲಿಯಾ 'ಆದಿಪುರುಷ್' ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೂರದರ್ಶನ ರಾಮಾಯಣ ಧಾರಾವಾಹಿಯ ಸೀತಾ ಪಾತ್ರದಲ್ಲಿ ನಟಿಸಿ ದೀಪಿಕಾ ಚಿಖ್ಲಿಯಾ ಜನಪ್ರಿಯರಾಗಿದ್ದರು. 'ಆದಿಪುರುಷ್' ಚಿತ್ರದ ಬಗ್ಗೆ ಮಾತನಾಡಿರುವ ಆಕೆ "ಪ್ರತಿ ಬಾರಿ ಏನಾಗುತ್ತದೆ ಅಂದ್ರೆ, ಐದು ವರ್ಷ ಅಥವಾ ಎಂಟು ವರ್ಷದ ಮಗು ತನ್ನ ಹೆತ್ತವರೊಂದಿಗೆ 'ಆದಿಪುರುಷ' ಚಿತ್ರ ವೀಕ್ಷಿಸುತ್ತಾ ದೊಡ್ಡವನಾದಾಗ, ಚಿತ್ರದಲ್ಲಿ ಏನು ನೋಡಿದೆ ಎನ್ನುವುದು ಚಿತ್ರಣವೇ ಅವನ ಮನಸ್ಸಿನಲ್ಲಿ ಉಳಿಯುತ್ತದೆ.ಅದು ನಿಮ್ಮ ಭವಿಷ್ಯವನ್ನು ಹಾಳುಮಾಡುತ್ತದೆ. ಈ ವಿಚಾರ ನನ್ನನ್ನು ಕಾಡುತ್ತದೆ" ಎಂದಿದ್ದಾರೆ.
"ಆ ಸಮಯದಲ್ಲಿ, ರಾವಣ ಹೀಗಿರಲಿಲ್ಲ ಎಂದು ನಿಮ್ಮ ಪೋಷಕರು ವಿವರಿಸಲು ಹೋಗುವುದಿಲ್ಲ. ರಾವಣ ಮಾಂಸಾಹಾರ ಸೇವಿಸಲಿಲ್ಲ, ಸೀತೆ ಕೂಡ ಹೀಗಿರಲಿಲ್ಲ. ಯಾರೂ ಅದನ್ನು ಮಗುವಿಗೆ ವಿವರಿಸುವುದಿಲ್ಲ. ಅದು ಗೊತ್ತಾದಾಗ ಅವರು ಆಘಾತಕ್ಕೆ ಒಳಗಾಗುತ್ತಾರೆ, ಆದರೆ ಇದರು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಹೊರಬರಲು ಸಾಧ್ಯವಿಲ್ಲ" ಎಂದು ವಿವರಿಸಿದ್ದಾರೆ.

"ರಾವಣನು ಬ್ರಾಹ್ಮಣ. ಮಹಾನ್ ಶಿವಭಕ್ತ. ಅವನಲ್ಲಿ ಎಷ್ಟೋ ಒಳ್ಳೆಯ ಗುಣಗಳಿದ್ದವು. ಅವನು ಕೇವಲ ಖಳನಾಯಕನಾಗಿರಲಿಲ್ಲ. ಅವನು ಕೇವಲ ಕೆಟ್ಟ ಮನುಷ್ಯನಾಗಿರಲಿಲ್ಲ. ಅವನು ಮಾಡಿದ ಏಕೈಕ ಕೆಟ್ಟ ಕೆಲಸವೆಂದರೆ ಅವನು ಯಾರೊಬ್ಬರ ಹೆಂಡತಿಯನ್ನು ಅಪಹರಿಸಿದ್ದು. ಅದು ದೊಡ್ಡ ತಪ್ಪು. ಅದು ಬಿಟ್ಟರೆ ಆತ ಮಹಾನ್ ವಿದ್ವಾಂಸನಾಗಿದ್ದ. ಆದರೆ ಅವನನ್ನು ರಸ್ತೆಬದಿಯ ಗೂಂಡಾ ರೀತಿ ತೋರಿಸಿರುವುದು ಒಳ್ಳೆ ಅಭಿರುಚಿ ಅಲ್ಲ ಎಂದು ಆಕೆ ಆಕ್ರೋಶ ಹೊರ ಹಾಕಿದ್ದಾರೆ.
ನಾನು ತೆರೆಮೇಲೆ 'ಆದಿಪುರುಷ್' ಸಿನಿಮಾ ನೋಡಲಿಲ್ಲ. ಟಿವಿಯಲ್ಲಿ ಸ್ವಲ್ಪ ನೋಡಿದೆ. ನನಗೆ ತುಂಬಾ ನೋವಾಯಿತು. ನನಗೆ ಅದು ಇಷ್ಟವಾಗಲಿಲ್ಲ" ಎಂದು ದೀಪಿಕಾ ಚಿಖ್ಲಿಯಾ ಹೇಳಿದ್ದಾರೆ. 80ರ ದಶಕದಲ್ಲೇ ಬಾಲಿವುಡ್ಗೆ ಬಂದ ದೀಪಿಕಾ ಬಳಿಕ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದರು.
ಕನ್ನಡದಲ್ಲಿ 'ಇಂದ್ರಜಿತ್', 'ಹೊಸ ಜೀವನ', 'ಕಾಲಚಕ್ರ', 'ಮೇಯರ್ ಪ್ರಭಾಕರ್' ಚಿತ್ರಗಳಲ್ಲಿ ದೀಪಿಕಾ ಕಾಣಿಸಿಕೊಂಡಿದ್ದರು.


Click it and Unblock the Notifications











