ಪಾತ್ರಕ್ಕಾಗಿ ಪಲ್ಲಂಗ ; 02 ತಿಂಗಳು ನನ್ನ ಜೊತೆಯಿರು ಎಂದು ಸೌತ್ ನಿರ್ದೇಶಕ ಹೇಳಿದ್ದ ಎಂದ ಬಾಲಿವುಡ್ ನ ನಟಿ..!
ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇದಕ್ಕೆ ಮಿತಾ ವಸಿಷ್ಠ ಲೇಟೆಸ್ಟ್ ಎಕ್ಸಾಂಪಲ್.
ಹೌದು. ಚಾಂದಿನಿ .. ದಿಲ್ ಸೇ .. ಗುಲಾಮ್ .. ತಾಲ್ .. ಹೀಗೆ ಹತ್ತು ಹಲವು ಸಿನಿಮಾ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಮಿತಾ ವಸಿಷ್ಠ ತಮ್ಮ ಬದುಕಿನ ಆರಂಭದಲ್ಲಿ ಎದುರಾದ ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ಪಾತ್ರಕ್ಕೆ ಪಲ್ಲಂಗ ಪ್ರಸಂಗ ನನಗೂ ಎದುರಾಗಿತ್ತು ಅಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಮಿತಾ ವಸಿಷ್ಠ 1999ರ ಆಸು ಪಾಸು ನಾನು ಖ್ಯಾತಿಯ ತುತ್ತ ತುದಿಯಲ್ಲಿದ್ದೇ ಎಂದಿದ್ದಾರೆ. ತಮ್ಮ ಗತಕಾಲದ ದಿನಗಳನ್ನ ನೆನಪು ಮಾಡಿಕೊಂಡಿದ್ದಾರೆ. ತಮ್ಮ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ್ದಾರೆ. 1989ರಲ್ಲಿ ತೆರೆಗೆ ಬಂದ ಸಿದ್ದೇಶ್ವರಿ ಚಿತ್ರಕ್ಕೆ ಮತ್ತು 1990ರಲ್ಲಿ ಬಿಡುಗಡೆಯಾದ ಕಸ್ಬಾ ಚಿತ್ರಕ್ಕೆ ನಾನು ಸಂಪೂರ್ಣ ಬೆತ್ತಲೆಯಾಗಿದ್ದೇ ಯಾಕೆಂದರೆ ಆ ಚಿತ್ರ ಮತ್ತು ಆ ಪಾತ್ರದ ಬೇಡಿಕೆ ಹಾಗೇ ಇತ್ತು ಅಂದಿದ್ದಾರೆ. ಈ ಎರಡು ಸಿನಿಮಾದಲ್ಲಿ ಬೆತ್ತಲಾಗಿದ್ದಕ್ಕೆ ನನಗ್ಯಾವ ಪಶ್ಚಾತಾಪ ಇಲ್ಲ ಎಂದು ಕೂಡ ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಮಿತಾ ವಸಿಷ್ಠ ಈ ಎರಡು ಚಿತ್ರಗಳ ನಂತರ ಹಲವಾರು ನಿರ್ದೇಶಕರು ನನ್ನ ದುಂಬಾಲು ಬಿದ್ದಿದ್ದರು, ನನಗೆ ನಾಯಕಿಯ ಪಾತ್ರವನ್ನ ಆಫರ್ ಮಾಡಿದ್ದರು ಎಂದಿದ್ದಾರೆ. ಆದರೆ ನಾಯಕಿಯಾಗುವ ಮನಸ್ಸು ನನಗೆ ಇರಲಿಲ್ಲ ಈ ಕಾರಣಕ್ಕೆ ನಾನು ಬಂದ ಅವಕಾಶಗಳನ್ನೆಲ್ಲ ತಿರಸ್ಕರಿಸಿದ್ದೆ ಎಂದು ಮಿತಾ ಹೇಳಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ದಕ್ಷಿಣ ಖ್ಯಾತ ನಿರ್ದೇಶಕರೊಬ್ಬರು ನನ್ನ ಚೆನ್ನೈಗೆ ಕರೆಯಿಸಿಕೊಂಡಿದ್ದರು. ಮಾತುಕತೆಯಲ್ಲಿ ನಾಯಕಿಯ ಪಾತ್ರ ವಿವರಿಸಿದ್ದರು. ಪಾತ್ರ ಉತ್ತಮವಾಗಿತ್ತು. ಈ ಪಾತ್ರಕ್ಕೆ ನೀವೆ ನಾಯಕಿ ಎಂದು ಆಫರ್ ನೀಡಿದರು. ನನಗೆ ಖುಷಿಯಾಗಿತ್ತು. ಆದರೆ ಮರು ಕ್ಷಣದಲ್ಲೇ ನಿರ್ದೇಶಕ, ನನ್ನ ಜೊತೆ 2 ತಿಂಗಳು ಕಳೆಯಬೇಕು ಎಂದು ಮತ್ತೊಂದು ಕಂಡೀಷನ್ ಹಾಕಿದ್ದರು.
ನಿರ್ದೇಶಕರ ಈ ಮಾತು ಕೇಳಿ ಮೊದಲು ನಾನು ಭಾಷೆ ಕಲಿಯಲು ನಿರ್ದೇಶಕರು ಎರಡು ತಿಂಗಳು ಚೆನೈನಲ್ಲಿರುವಂತೆ ಸಲಹೆ ನೀಡ್ತಿದ್ದಾರೆ ಎಂದು ನಾನು ಅಂದುಕೊಂಡಿದ್ದೆ, ಆದರೆ ಆ ನಂತರ ನನಗೆ ಅವರ ಉದ್ದೇಶ ಗೊತ್ತಾಯಿತು ಎಂದಿರುವ ಮಿತಾ ಆ ನಂತರ ನಿನ್ನ ಪಾತ್ರ ನೀನೆ ಇಟ್ಕೋ ಎಂದು ಆ ಅವಕಾಶವನ್ನ ನಾನು ಎಡಗಾಲಿನಲ್ಲಿ ಒದ್ದು ಆ ಚಿತ್ರದಿಂದ ಹೊರ ಬಂದೆ ಎಂದು ಹೇಳಿದ್ದಾರೆ

ಇನ್ನೂ ಆ ನಿರ್ದೇಶಕ ತೆಲುಗಿನಲ್ಲೂ ಹಲವು ಚಿತ್ರಗಳನ್ನು ಕೊಟ್ಟಿದ್ದಾರೆ. ಆತನ ನಾಯಕಿಯರು ಕೆಲ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದರು ಎಂದಿರುವ ಮಿತಾ, ಈ ರೀತಿಯ ಹಲವು ಕಹಿ ಘಟನೆಗಳನ್ನು ನಾನು ನನ್ನ ಜೀವಮಾನದಲ್ಲಿ ಎದುರಿಸಿದ್ದೇನೆ ಎಂದಿದ್ದಾರೆ. ಸದ್ಯಕ್ಕೆ ಮಿತಾ ಅವರ ಈ ಮನದ ಮಾತು ಬಾಲಿವುಡ್ನಲ್ಲಿ ಅಷ್ಟೇ ಅಲ್ಲ ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಕುರಿತು ಚರ್ಚೆಯನ್ನ ಹುಟ್ಟುಹಾಕಿದೆ. ಪರ-ವಿರೋಧದ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.


Click it and Unblock the Notifications











