ಮಹಾಕುಂಭ ಮೇಳದ 'ಮೊನಾಲಿಸಾ'ನ ಸೂಪರ್ ಸ್ಟಾರ್ ಮಾಡಲು ಹೊರಟಿದ್ದ ನಿರ್ದೇಶಕ ಅರೆಸ್ಟ್..!
ಸರೀನಾ ತಪ್ಪಾ ಎಂಬ ಆಲೋಚನೆ ಮಾಡದೇ, ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಧಾವಂತದಿಂದ ಥರ ಥರದ ವೇಷ ಹಾಕಿಕೊಂಡು, ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವ ಅನೇಕ ಜನ ನಮ್ಮ ಸುತ್ತ ಮುತ್ತ ಇರುತ್ತಾರೆ. ಮೋಸದ ಬಲೆ ಹೆಣೆದು ಅಮಾಯಕರನ್ನು ಖೆಡ್ಡಾಗೆ ಬೀಳಿಸುವುದನ್ನೇ ಫುಲ್ ಟೈಮ್ ಕಾಯಕ ಮಾಡಿಕೊಂಡಿರುವ ಇವರು ಮುಗ್ದರನ್ನು ತಮ್ಮ ರಂಗು ರಂಗಾದ ಆಟಗಳ ಮೂಲಕ ಸೆಳೆಯುತ್ತಾ ಅಧಿಕ ಲಾಭದ ಆಸೆ ತೋರಿಸುತ್ತಾನೇ ಅವರ ಜೊತೆ ಮಾಡಬಾರದ್ದನ್ನೆಲ್ಲ ಮಾಡುತ್ತಾರೆ. ಇದಕ್ಕೆ ಸನೋಜ್ ಮಿಶ್ರಾ ಸದ್ಯದ ಉದಾಹರಣೆ.
ಹೌದು, ಮೊನ್ನೆ ಮೊನ್ನೆ ಮುಕ್ತಾಯವಾದ ಮಹಾಕುಂಭ ಮೇಳದಲ್ಲಿ ಬಂದವರನ್ನೆಲ್ಲ ತನ್ನ ಕಣ್ಣುಗಳ ಮೂಲಕವೇ ಸೆಳೆದ ಮಣಿ ಮಾರುವ ಹುಡುಗಿ ಮೊನಾಲಿಸಾ ನಿಮಗೆ ನೆನಪಿರಬೇಕು. ಕೇವಲ 24 ಗಂಟೆಗಳಲ್ಲಿ ಅಖಂಡ ಭಾರತದೆಲ್ಲೆಡೆ ಮನೆ ಮಾತಾದ ಈ ಮೊನಾಲಿಸಾ ಮುಗ್ದತೆಯನ್ನು ಬಳಸಿಕೊಂಡು ವಂಚಿಸುವ ಕೆಲಸಕ್ಕೆ ಅನೇಕರು ಮುಂದಾಗಿದ್ದರು. ನಾನಾ ಕಸರತ್ತುಗಳನ್ನು ಮಾಡಿದರು. ಆ ಪೈಕಿ ಈ ಸನೋಜ್ ಮಿಶ್ರಾ ಕೂಡ ಒಬ್ಬರು.

ಟಾರ್ ರೋಡ್ನಲ್ಲಿದ್ದವಳನ್ನು ಸ್ಟಾರ್ ಮಾಡುವುದಾಗಿ ಹೇಳಿ, ಆ ಹುಡುಗಿಯ ತಲೆಯನ್ನೆಲ್ಲಾ ಕೆಡಿಸಿ ಆಕೆಯ ಹೆಸರಿನಲ್ಲಿ ಪುಕ್ಸಟ್ಟೆ ಪ್ರಚಾರವನ್ನು ಪಡೆದ ಸನೋಜ್ ಮಿಶ್ರಾ ತಮ್ಮ ಈ ಚಿತ್ರಕ್ಕೆ ' ದಿ ಡೈರಿ ಆಫ್ ಮಣಿಪುರ್' ಎಂಬ ಟೈಟಲ್ ಇಟ್ಟಿದ್ದರು. ಸನೋಜ್ ಮಿಶ್ರಾ ಅವರ ಇತಿಹಾಸ ಗೊತ್ತಿದ್ದ ಅನೇಕರು ಈ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದರು. ಯೂಟ್ಯೂಬ್ ವಿಡಿಯೋ ಮೂಲಕ ಈ ನಿರ್ದೇಶಕನ ಜನ್ಮವನ್ನೇ ಜಾಲಾಡಿದರು.
ಇವನೊಬ್ಬ ಡೋಂಗಿ ನಿರ್ದೇಶಕ ಈತ ನಿರ್ದೇಶಿಸಿರುವ ಯಾವ ಚಿತ್ರ ಕೂಡ ಇಲ್ಲಿಯವರೆಗೆ ಬಿಡುಗಡೆಯಾಗಿಲ್ಲ ಎಂದು ಹೇಳಿದರು. ಇಂತಹ ವ್ಯಕ್ತಿ ಜೊತೆ ಏನೂ ಅರಿಯದ 16 ವರ್ಷ ವಯಸ್ಸಿನ ಮೊನಾಲಿಸಾ ಚಿತ್ರ ಮಾಡಿದರೆ ಆಕೆಯ ಭವಿಷ್ಯ ಹಾಳಾಗಿ ಹೋಗುತ್ತೆ ಎಂದು ಅಲವತ್ತುಕೊಂಡರು. ಆದರೆ, ಇವರ ಮಾತನ್ನು ಅನೇಕರು ನಂಬಲಿಲ್ಲ. ಬದಲಿಗೆ ತನ್ನ ಮೇಲೆ ಮಾಡಲಾದ ಈ ಆರೋಪಗಳಿಂದ ಕೆರಳಿದ ಸನೋಜ್ ಮಿಶ್ರಾ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದರು.
ಯೂಟ್ಯೂಬ್ ಮೂಲಕ ತಮ್ಮ ಚಿತ್ರದ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರನ್ನು ಸನೋಜ್ ಮಿಶ್ರಾ ನೀಡಿದ್ದರು.ಮೊನಾಲಿಸಾ ಅವರ ಉಜ್ವಲ ಭವಿಷ್ಯಕ್ಕೆ ಕಲ್ಲು ಹಾಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಸನೋಜ್ ಮಿಶ್ರಾ ನೀಡಿದ ದೂರಿನ ಅನ್ವಯ 5 ಜನರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿತ್ತು.
ಇಂಥಾ ಸನೋಜ್ ಮಿಶ್ರಾ ಈಗ ತಾವೇ ಖುದ್ದು ಪೊಲೀಸರ ಅತಿಥಿಯಾಗಿದ್ದಾರೆ. ಅತ್ಯಾಚಾರದ ಆರೋಪದಡಿ ಕಂಬಿ ಎಣಿಸುತ್ತಿದ್ದಾರೆ . ಸನೋಜ್ ಮಿಶ್ರಾ ವಿರುದ್ಧ ದೂರನ್ನು ದಾಖಲಿಸಿರುವ ಸಂತ್ರಸ್ತ ಯುವತಿ ತಮ್ಮ ಮೇಲೆ ಅತ್ಯಾಚಾರ ಎಸಗಿ ತಮ್ಮನ್ನು ಬ್ಲ್ಯಾಕ್ಮೇಲ್ ಮಾಡಿರುವುದಾಗಿ ಹೇಳಿದ್ದಾರೆ.
ದಾಖಲಾದ ದೂರಿನ ಅನ್ವಯ 2020ರಲ್ಲಿ ಝಾನ್ಸಿ ಮೂಲದ ಯುವತಿಯನ್ನು ಟಿಕ್ ಟಾಕ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ಸನೋಜ್ ಮಿಶ್ರಾ ಜೂನ್ 17-2021ರಂದು ಝಾನ್ಸಿ ರೇಲ್ವೆ ನಿಲ್ದಾಣದಲ್ಲಿ ಭೇಟಿಯಾಗುವಂತೆ ಯುವತಿಯನ್ನು ಕೇಳಿಕೊಂಡಿದ್ದರು. ಇದಕ್ಕೆ ಯುವತಿ ನಿರಾಕರಿಸಿದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು.
ಸನೋಜ್ ಹಾಕಿದ್ದ ಈ ಬೆದರಿಕೆಗೆ ಬೆದರಿದ ಯುವತಿ ಆ ನಂತರ ಜೂನ್ 18-2021ರಂದು ಭೇಟಿಯಾಗಿದ್ದರು. ಆಗ ಯುವತಿಯನ್ನು ರೆಸಾರ್ಟ್ಗೆ ಕರೆದೊಯ್ದ ಸನೋಜ್ ಮಿಶ್ರಾ ಮತ್ತು ಬರಿಸುವ ಔಷಧಿಯನ್ನು ನೀಡಿ ಲೈಂಗಿಕ ದೌರ್ಜನ್ಯ ಎಸಗಿದರು. ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಯುವತಿಗೆ ಬ್ಲ್ಯಾಕ್ ಮೇಲ್ ಕೂಡ ಮಾಡಿದರು.
ಹೀಗೆ ಬ್ಲ್ಯಾಕ್ ಮೇಲ್ ಮಾಡುತ್ತಲೇ ಸನೋಜ್ ಮಿಶ್ರಾ ಆ ನಂತರ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಮದುವೆಯಾಗುವುದಾಗಿ ಯುವತಿ ಬಳಿ ಸುಳ್ಳು ಹೇಳಿದ್ದಾರೆ. ಚಿತ್ರರಂಗದಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವನ್ನೊಡ್ಡಿದ್ದಾರೆ. ಬಲವಂತವಾಗಿ ಮೂರು ಬಾರಿ ಗರ್ಭಪಾತವನ್ನು ಮಾಡಿಸಿದ್ದಾರೆ. ಆದರೆ ಆ ನಂತರ ಮದುವೆಯೂ ಆಗಲಿಲ್ಲ. ಅವಕಾಶವನ್ನು ನೀಡಲಿಲ್ಲ. ಹೀಗಾಗಿ ಬೇಸತ್ತು ಇದೀಗ ಯುವತಿ ಸನೋಜ್ ಮಿಶ್ರಾ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಕೆಲ ಸಾಕ್ಷಿಗಳನ್ನು ಕೂಡ ಒದಗಿಸಿದ್ದಾರೆ. ಯುವತಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಸನೋಜ್ ಮಿಶ್ರಾ ಅವರನ್ನು ಬಂಧಿಸಿದ್ದಾರೆ.
ಇನ್ನು ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ಬೆಚ್ಚಿ ಬಿದ್ದಿದ್ದ ಸನೋಜ್ ಮಿಶ್ರಾ ದೆಹಲಿ ಹೈಕೋರ್ಟ್ನ ಮೊರೆ ಹೋಗಿದ್ದರು. ಆದರೆ ಸನೋಜ್ ಮಿಶ್ರಾ ದುರಾದೃಷ್ಟಕ್ಕೆ ಹೈಕೋರ್ಟ್ನಲ್ಲಿ ಇವರಿಗೆ ಹಿನ್ನೆಡೆಯಾಗಿತ್ತು. ಯುವತಿಯ ಒಪ್ಪಿಗೆಯ ಮೇರೆಗೆ ಸಂಬಂಧ ಮುಂದುವರೆದಿತ್ತು, ತಪ್ಪು ಕಲ್ಪನೆಯಿಂದ ಯುವತಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಸನೋಜ್ ಮಿಶ್ರಾ ಪರ ವಕೀಲರು ವಾದ ಮಾಡಿದ್ದರು ನ್ಯಾಯಾಲಯ ಈ ವಾದವನ್ನು ಒಪ್ಪಿರಲಿಲ್ಲ. ಯಾವುದೇ ಮೋಸ ಮಾಡುವ ಪ್ರಯತ್ನವನ್ನು ಸನೋಜ್ ಮಿಶ್ರಾ ಮಾಡಿಲ್ಲ, ಜಾಮೀನು ನೀಡಲು ನನ್ನ ಅಭ್ಯಂತರ ಇಲ್ಲ ಎಂದು ಯುವತಿ ಉಲ್ಲೇಖಿಸಿದ್ದಾಳೆ ಎಂದು ವಕೀಲರು ಹೇಳಿದರು ಕೂಡ ಕೋರ್ಟ್ ಸನೋಜ್ ಮಿಶ್ರಾ ಅವರ ವಕೀಲರ ವಾದಕ್ಕೆ ಮನ್ನಣೆ ಹಾಕಲಿಲ್ಲ.
ಬದಲಿಗೆ ಯುವತಿಗೆ ಅವಕಾಶ ಕೊಡುವುದಾಗಿ ಹೇಳಿ ಸತತವಾಗಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಸನೋಜ್ ಮಿಶ್ರಾ ಮೇಲಿದೆ. ಲಭ್ಯ ಇರುವ ದಾಖಲೆ ಮತ್ತು ಆರೋಪ ತಳ್ಳಿ ಹಾಕಲು ನಿರ್ದೇಶಕರ ಬಳಿ ಸೂಕ್ತವಾದ ಪುರಾವೆಗಳಿಲ್ಲ, ನಿರ್ದೇಶಕರ ವಾದವನ್ನು ಕೂಡ ಒಪ್ಪಲು ಸಾಧ್ಯ ಇಲ್ಲ, ಹೀಗಾಗಿ ನಿರೀಕ್ಷಣಾ ಜಾಮೀನು ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತೆ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಈಗ ನಿರೀಕ್ಷಣಾ ಜಾಮೀನು ವಜಾ ಆದ ಬೆನ್ನಲ್ಲೇ ಸನೋಜ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ಧಾರೆ.
ಸದ್ಯ ಪೊಲೀಸರು ಸನೋಜ್ ಮಿಶ್ರಾ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ಧಾರೆ. ಇನ್ನು ಸನೋಜ್ ಮಿಶ್ರಾ ಬಂಧನದ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಮಹಾಕುಂಭ ಮೇಳದ ಮೊನಾಲಿಸಾ ಅವರ ಭವಿಷ್ಯದ ಕುರಿತು ಅನೇಕರು ಚರ್ಚೆ ಮಾಡುತ್ತಿದ್ದಾರೆ. ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಆರೋಪ ಗಂಭೀರವಾದ ಹಿನ್ನೆಲೆ ನಾಯಕಿಯಾಗುವ ಮೊನಾಲಿಸಾ ಅವರ ಕನಸು ಛಿದ್ರವಾಯಿತು ಎಂಬ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಸನೋಜ್ ಮಿಶ್ರಾ ಅವರಂತಹ ವ್ಯಕ್ತಿಗಳಿಂದ ಇಡೀ ಚಿತ್ರರಂಗ ಮುಜುಗರಕ್ಕೊಳಗಾಗಬೇಕಾಗುತ್ತೆ ಅವಮಾನ ಎದುರಿಸಬೇಕಾಗುತ್ತೆ ಎಂದು ಕೂಡ ಕಿಡಿ ಕಾರುತ್ತಿದ್ದಾರೆ. ಇಂತಹ ಪ್ರಕರಣಗಳಿಂದ ಚಿತ್ರರಂಗಕ್ಕೆ ಬರುವ ಕನಸೊತ್ತು ಅನೇಕ ಯುವತಿಯರು ಹಿಂದೆ ಮುಂದೆ ಯೋಚನೆ ಮಾಡುವಂತಾಗಿದೆ ಎಂದು ಕೂಡ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನುಳಿದಂತೆ ಮೊನಾಲಿಸಾ ಈ ಹಿಂದೆ ನೀಡಿದ ಸಂದರ್ಶನದಲ್ಲಿ ತಮಗೆ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುವ ಆಸೆ ಇದೆ ಎಂದು ಹೇಳಿದ್ದರು. ಕುಂಭ ಮೇಳದಲ್ಲಿ ಇವರ ವಿಡಿಯೋ ವೈರಲ್ ಆದ ಬೆನ್ನಲ್ಲಿಯೇ
ಯಾರಾದರೂ ನಿಮ್ಮನ್ನು ಚಿತ್ರದ ನಾಯಕಿಯನ್ನಾಗಿ ಮಾಡುವುದಾಗಿ ಹೇಳಿ ಅವಕಾಶವನ್ನು ನೀಡಿದರೆ ನೀವೇನು ಮಾಡ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರವನ್ನು ನೀಡಿದ್ದ ಮೊನಾಲಿಸಾ ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವುದಾಗಿ ಹೇಳಿದ್ದರು. ಐಶ್ವರ್ಯ ರೈ ಅವರಂತೆ ಮಿಂಚುವ ಆಸೆ ಇದೆ ಎಂದು ಹೇಳಿದ್ದರು. ಚಿತ್ರರಂಗಕ್ಕೆ ಬರುವ ಉದ್ದೇಶದಿಂದ ಮುಂಬೈನಲ್ಲಿ ನಟನಾ ತರಬೇತಿಯನ್ನು ಕೂಡ ಮೊನಾಲಿಸಾ ಸದ್ಯ ಬಂಧನಕ್ಕೊಳಗಾಗಿರುವ ಸನೋಜ್ ಮಿಶ್ರಾ ಅವರಿಂದ ಪಡೆಯುತ್ತಿದ್ದರು.


Click it and Unblock the Notifications











