ಅಂದು ರಂಪ ರಾಮಾಯಣ ಇಂದು ಪ್ರೇಮಾಯಣ ; ಮಾಜಿ ಪತಿಯ ಜೊತೆ ಬ್ಯಾಂಕಾಕ್ನಲ್ಲಿ ಜಾಲಿ ಮೂಡಿನಲ್ಲಿ ಖ್ಯಾತ ನಟಿ
ಪ್ರೀತಿ ಎನ್ನುವುದು ಮಾಯೆ. ಆ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದವಾಗಿ ಇರಬೇಕು ಎಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು. ನಿಜಾ.. ಪ್ರೀತಿಗಾಗಿ ಮನುಷ್ಯ ಹಾತೊರೆಯುತ್ತಾನೆ. ನಮಗಾಗಿ ಒಂದು ಜೀವ ಇದೆ, ನಮ್ಮ ಎಲ್ಲಾ ಅಗತ್ಯತೆಗಳಿಗೆ ಆದ್ಯತೆಯನ್ನು ನೀಡಿ ರಕ್ಷಣೆಯ ಭಾವವನ್ನು ನೀಡುತ್ತದೆ ಎನ್ನುವ ನಂಬಿಕೆಯೇ ಜೀವಕ್ಕೊಂದು ಬೆಳಕು.
ಆದರೆ ಬಣ್ಣದ ಲೋಕದಲ್ಲಿ ಹಲವರು ಈ ಬೆಳಕಿನಿಂದ ತಪ್ಪಿಸಿಕೊಂಡು ಕತ್ತಲೆ ಕಡೆಗೆ ಬರುತ್ತಾರೆ. ಕೆಲವರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಪ್ರೀತಿಯಲ್ಲಿ ಬಿದ್ದು ಹೊರಳಾಡಿ ಮದುವೆಯಾದ ನಂತರ ತಮ್ಮ ಸಂಬಂಧಕ್ಕೆ ತೀಲಾಂಜಲಿ ಬಿಡುತ್ತಾರೆ. ಈ ಹಿನ್ನೆಲೆ ಚಿತ್ರರಂಗದ ಈ ಧ್ರುವತಾರೆಯರ ಬದುಕಿನಲ್ಲಿ ಸರಸ-ವಿರಸ-ಪ್ರೇಮ-ವಿರಹ-ವೇದನೆ-ವಿಚ್ಛೇದನ ಇವೆಲ್ಲವೂ ಮಾಮೂಲು ಎನ್ನುವ ಮಾತು ಕೇಳಿ ಬರುತ್ತೆ.

ಇದರ ನಡುವೆ ಈಗೀಗ ಈ ಬಣ್ಣದ ಪ್ರಪಂಚದಲ್ಲಿ ಹೊಸದೊಂದು ಟ್ರೆಂಡ್ ಶುರುವಾದಂತೆ ಇದೆ. ವಿಚ್ಚೇದನ ನೀಡಿದ ನಂತರವೂ ಕೂಡ ಮಾಜಿ ಪತ್ನಿ ಅಥವಾ ಪತಿಯ ಜೊತೆ ತೀರಾ ಸಲುಗೆಯಿಂದ ಇರುವ ಟ್ರೆಂಡ್ ಅದು.
ಅವರನ್ನು ನೋಡಿದರೆ ಅರೇ, ಇವರ ಇಬ್ಬರ ದಾಂಪತ್ಯ ಮುರಿದು ಬಿದ್ದಿದೆಯಾ ಎನ್ನುವ ಅನುಮಾನ ಮೂಡಿ ಬಿಡುತ್ತೆ. ಒಂದೇ ಸೂರಿನಡಿ ಜೊತೆಯಾಗಿ ಇರುವುದಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ ವಿಚ್ಚೇದನದ ನಂತರವೂ ಕೂಡ ಗಂಡ ಹೆಂಡತಿಯಂತೆಯೇ ಇಬ್ಬರು ಬದುಕುತ್ತಾರೆ. ಉದಾಹರಣೆಗೆ ರಾಜೀವ್ ಸೇವ್ ಮತ್ತು ಚಾರು ಅಸೋಪಾ.
ಹೌದು, ಚಾರು ಅಸೋಪಾ. ಹಿಂದಿಯ ಪ್ರಸಿದ್ಧ ಕಿರುತೆರೆ ನಾಯಕಿ. ''ಬಲ್ವೀರ್'' ಮತ್ತು ''ಮೇರೆ ಅಂಗನೇ ಮೇ'' ಇವರ ಜನಪ್ರಿಯ ಧಾರಾವಾಹಿಗಳು. 2009ರಿಂದ ಇಲ್ಲಿಯವರೆಗೆ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಚಾರು ಅಸೋಪಾ ಭುವನ ಸುಂದರಿ ಸುಶ್ಮಿತಾ ಸೇನ್ ಅವರ ಮಾಜಿ ಅತ್ತಿಗೆ ಕೂಡ ಹೌದು.

ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರನ್ನು ಚಾರು 2019ರಲ್ಲಿ ಮದುವೆಯಾಗಿದ್ದರು. ಇಬ್ಬರಿಗೆ ಜಿಯಾನ ಎಂಬ ಮಗಳಿದ್ದಾಳೆ. 2023ರಲ್ಲಿ ರಾಜೀವ್ ಅವರಿಂದ ದೂರವಾದ ಚಾರು ಆ ನಂತರ ತಮ್ಮ ಮಗಳ ಜೊತೆ ವಾಸ ಮಾಡುತ್ತಿದ್ದಾರೆ.
ಇಂಥಾ ಚಾರು ಅಸೋಪಾ ಈ ವರ್ಷದ ಏಪ್ರಿಲ್ನಲ್ಲಿ ಏಕಾಏಕಿ ಮುಂಬೈಗೆ ಗುಡ್ ಬೈ ಹೇಳಿ ತಮ್ಮ ಊರು ಸೇರಿಕೊಂಡಿದ್ದರು. ಆಕ್ಟಿಂಗ್ ಮಾಡುವುದನ್ನು ಬಿಟ್ಟು ಆನ್ಲೈನ್ನಲ್ಲಿ ಬಟ್ಟೆ ಮಾರಲು ಮುಂದಾಗಿದ್ದರು. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚಾರು ಅಸೋಪಾ ಮುಂಬೈನಲ್ಲಿ ಜೀವನ ನಡೆಸುವುದು ಸುಲಭ ಅಲ್ಲ ಮನೆಯ ಬಾಡಿಗೆ ಮತ್ತು ಖರ್ಚು ವೆಚ್ಚ ಸೇರಿಸಿದರೆ ಒಂದರಿಂದ ಒಂದೂವರೆ ಲಕ್ಷ ತಿಂಗಳಿಗೆ ಬೇಕಾಗುತ್ತಿತ್ತು ಎಂದು ಹೇಳಿದ್ದರು. ಮಗಳನ್ನು ದಾದಿ ಬಳಿ ಬಿಟ್ಟು ಚಿತ್ರೀಕರಣಕ್ಕೆ ಹೋಗಲು ನನಗೆ ಮನಸಾಗುತ್ತಿರಲಿಲ್ಲ ತುಂಬಾ ಕಷ್ಟವಾಗುತ್ತಿತ್ತು ಹೀಗಾಗಿ ನನ್ನೂರು ರಾಜಸ್ಥಾನದ ಬಿಕಾನೇರ್ಗೆ ಹೋಗಿದ್ದೇನೆ ಅಲ್ಲಿ ನನ್ನ ಪೋಷಕರ ಜೊತೆ ನಾನು ಮತ್ತು ನನ್ನ ಮಗಳು ವಾಸ ಮಾಡುತ್ತಿದ್ದೇವೆ ಎಂದು ಹೇಳಿದ್ದರು.
ಚಾರು ಅವರ ಈ ನಡೆ ಮತ್ತು ಹೇಳಿಕೆಯಿಂದ ಸೆಲೆಬ್ರೆಟಿಯಾದರು ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದಾರಲ್ಲ ಎನ್ನುವ ಅನುಕಂಪ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗಿತ್ತು. ವ್ಯೆಯಕ್ತಿಕ ಬದುಕಿನಲ್ಲಿ ವಿವಾದದ ಅಲೆ ಎದ್ದಿತ್ತು. ಮಾಜಿ ಪತ್ನಿಯ ಮಾತುಗಳಿಂದ ಕೆರಳಿದ್ದ ರಾಜೀವ್ ಸೇನ್ ನನ್ನ ಮಗಳನ್ನು ನನ್ನಿಂದ ದೂರ ಇಡುವ ಕಲೆ ಆಕೆಗೆ ಮೊದಲಿಂದ ಚೆನ್ನಾಗಿ ಕರಗತವಾಗಿದೆ ಎಂದು ಹೇಳಿದ್ದರು. ಮಗಳು ಜಿಯಾನಾ ಬಗ್ಗೆ ಯೋಚನೆ ಮಾಡಿದಾಗೆಲ್ಲ ನನಗೆ ಬೇಸರವಾಗುತ್ತೆ ಎಂದಿದ್ದ ರಾಜೀವ್ ಅವಳಿಂದ ನನ್ನ ಮಗಳು ಕೂಡ ನರಳುವಂತಾಗಿದೆ ಎಂದು ನೊಂದುಕೊಂಡಿದ್ದರು. ಅವಳಿಗೆ ಆರ್ಥಿಕ ಸಮಸ್ಯೆ ಇದೆ ಎನ್ನುವುದನ್ನು ನಾನು ನಂಬಲಾರೆ ಹೇಳಿದ್ದರು.
ಹೀಗೆ ಕೆಲ ದಿನಗಳ ಹಿಂದೆಯಷ್ಟೇ ರಂಪ ರಾಮಾಯಣದಿಂದ ಸದ್ದು ಮಾಡಿದ್ದ ಇಬ್ಬರು ಈಗ ತಮ್ಮ ಮಗಳ ಜೊತೆ ಬ್ಯಾಂಕಾಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜಾಲಿ ಮೂಡಿನಲ್ಲಿ ಬ್ಯಾಂಕಾಕ್ನಲ್ಲೆಡೆ ಓಡಾಡಿದ್ದಾರೆ. ಡೇಟ್ ನೈಟ್ ಎಂದೆಲ್ಲಾ ಕ್ಯಾಪ್ಷನ್ ನೀಡಿ ತಮ್ಮ ಬ್ಯಾಂಕಾಕ್ ಪ್ರವಾಸದ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಚಾರು ಮತ್ತು ರಾಜೀವ್ ಅವರ ಈ ಫೋಟೊ ಮತ್ತು ವಿಡಿಯೋಗಳನ್ನು ನೋಡಿ ಹಲವರು ಗೊಂದಲಕ್ಕೀಡಾಗಿದ್ದಾರೆ.
ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿ ಏನಾಗ್ತಿದೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಬ್ಬರು ನನ್ನ ಜೀವನದಲ್ಲಿ ನಾನು ಗೊಂದಲಕ್ಕೊಳಗಾಗಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಹಳೆಯದನ್ನೆಲ್ಲಾ ಮರೆತು ಮಗಳಿಗಾಗಿ ಇಬ್ಬರು ಮತ್ತೆ ಒಂದಾಗಬಹುದು, ಒಂದಾಗಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಚಾರು ಮತ್ತು ರಾಜೀವ್ ಅವರ ಈ ಬ್ಯಾಂಕಾಕ್ ಪ್ರವಾಸದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Click it and Unblock the Notifications











