ತುಂಬಾ ಜನ ನನಗೆ ಕಾಳು ಹಾಕ್ತಿರ್ತಾರೆ ; ಮದ್ವೆಯಾಗದಿರಲು ಕಾರಣ ಹೇಳಿದ 47 ವರ್ಷದ ಖ್ಯಾತ ನಟಿ
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ..
ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಇದಕ್ಕೆ ದಿವ್ಯಾ ದತ್ತಾ ಅವರ ವ್ಯೆಯಕ್ತಿಕ ಬದುಕು ಸದ್ಯದ ಮತ್ತೊಂದು ಉದಾಹರಣೆ. ಹೌದು, ದಿವ್ಯಾ ದತ್ತಾ.. ಬಾಲಿವುಡ್ನ ಖ್ಯಾತ ಚೆಲುವೆ.

ಕಳೆದ ಮೂರು ದಶಕಗಳಿಂದ ಚಿತ್ರರಂಗದಲ್ಲಿ ಹತ್ತು ಹಲವು ಪಾತ್ರಗಳನ್ನು ಮಾಡಿರುವ ದಿವ್ಯಾ ದತ್ತಾ ಅತ್ಯುತ್ತಮ ಪೋಷಕ ನಟಿ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಗ್ಲೋಬಲ್ ಇಂಡಿಯನ್ ಫಿಲ್ಮ್ ಅವಾರ್ಡ್, ಐಫಾ ಮತ್ತು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಕೂಡ ಮುಡಿಗೇರಿಸಿಕೊಂಡಿದ್ದಾರೆ.
ಇಂಥಾ ದಿವ್ಯಾ ದತ್ತಾಗೆ ಈಗ 47ರ ಹರೆಯ. ಆದರೆ.. ಇನ್ನೂ ಕೂಡ ದಿವ್ಯಾ ಮದುವೆಯಾಗಿಲ್ಲ. ದಿವ್ಯಾ ದತ್ತಾ ಮದ್ವೆಯಾಗದಿರಲು ಕಾರಣಗಳು ಏನೇ ಇರಬಹುದು ಆದರೆ ಈ ಕುರಿತು ಹಲವರಲ್ಲಿ ಪ್ರಶ್ನೆಗಳು ಇದ್ದೇ ಇವೆ. ಈ ಪ್ರಶ್ನೆಗಳಿಗೆ ಈಗ ದಿವ್ಯಾ ದತ್ತ ಉತ್ತರವನ್ನು ನೀಡಿದ್ದಾರೆ. 47 ವಯಸ್ಸಾದರೂ ಕೂಡ ಮದುವೆ ಯಾಕೆ ಆಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು 'ಹಿಂದಿ ರಶ್'ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದಿವ್ಯಾ ದತ್ತಾ ನಿಮಗೆ ಸೂಕ್ತವಾದ ಸಂಗಾತಿ ಸಿಗುವವರೆಗೆ ನೀವು ಮದುವೆಯಾಗಬಾರದು ಎನ್ನುವುದು ನನ್ನ ವ್ಯೆಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ನಮ್ಮನ್ನು ಅವಮಾನಿಸುವ, ಹೊಂದಾಣಿಕೆ ಮಾಡಿಕೊಳ್ಳದ ವ್ಯಕ್ತಿಯ ಜೊತೆ ಮದುವೆಯಾಗುವುದಕ್ಕಿಂತ ಒಬ್ಬಂಟಿಯಾಗಿರುವುದು ಉತ್ತಮ ಎಂದಿರುವ ದಿವ್ಯಾ ದತ್ತಾ ಸರಿಯಾದ ವ್ಯಕ್ತಿ ಸಿಗದಿದ್ದಾಗ ನಮ್ಮನ್ನು ನಾವು ಚೆನ್ನಾಗಿ ನೋಡಿಕೊಳ್ಳಬೇಕು, ನಮ್ಮನ್ನು ನಾವು ಪ್ರೀತಿಸಬೇಕು ಎಂದು ಹೇಳಿದ್ದಾರೆ.
ಮುಂದುವರೆದು ಅನೇಕ ಗಂಡಸರು ನನ್ನತ್ತ ಈ ಹಿಂದೆಯೂ ಆಕರ್ಷಿತರಾಗಿದ್ದಾರೆ. ಈಗಲೂ ನನ್ನತ್ತ ಆಕರ್ಷಿತರಾಗುತ್ತಾರೆ, ನನಗೆ ಎಲ್ಲಿಲ್ಲದ ಪ್ರಾಮುಖ್ಯತೆ ನೀಡಲು ಮುಂದಾಗುತ್ತಾರೆ, ಇದೆಲ್ಲ ನನಗೆ ತುಂಬಾ ಇಷ್ಟವಾಗುತ್ತೆ ಎಂದಿರುವ ದಿವ್ಯಾ ದತ್ತಾ ಪ್ರೀತಿ ಎನ್ನುವುದು ಹೃದಯ ವಿಷಯ, ಹೃದಯದಲ್ಲಿ ಪ್ರೀತಿ ಹುಟ್ಟಿದಾಗ ಗಟ್ಟಿಯಾದ ಸಂಬಂಧ ರೂಪಗೊಳ್ಳುತ್ತೆ ಎಂದು ಹೇಳಿದ್ದಾರೆ.
ಇನ್ನು ಈ ವಯಸ್ಸಿನಲ್ಲಿ ಮದುವೆಯಾಗುವ ಕುರಿತು ಮಾತನಾಡಿರುವ ದಿವ್ಯಾ ದತ್ತಾ ನಾನು ಸದ್ಯ ಮದುವೆಯಾಗಲು ಬಯಸುವುದಿಲ್ಲ. ಆದರೆ.. ನನಗೆ ಈಗ ಒಬ್ಬ ಗಂಡಸು ಬೇಕು ಆ ವ್ಯಕ್ತಿಯ ಜೊತೆ ನಾನು ಸುತ್ತಾಡಲು ಬಯಸುತ್ತೇನೆ, ಪ್ರಯಾಣ ಮಾಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ನನ್ನ ಈ ಆಸೆ ಕೂಡ ಆಸೆಯಾಗಿಯೇ ಉಳಿದರೂ ಕೂಡ ನಾನು ಚಿಂತೆ ಮಾಡುವುದಿಲ್ಲ ಯಾಕೆಂದರೆ ನಾನು ಒಬ್ಬಂಟಿಯಾಗಿಯೇ ಖುಷಿಯಾಗಿದ್ದೇನೆ ಎಂದು ಕೂಡ ದಿವ್ಯಾ ದತ್ತಾ ಹೇಳಿದ್ದಾರೆ.

ನಮ್ಮ ಕೈಯನ್ನು ಕೂಡ ಯಾರಾದರೂ ಹಿಡಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ. ಆದರೆ ವಾಸ್ತವದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡಂತೆ ಆಗುವುದಿಲ್ಲ, ಆಗದೇ ಇದ್ದಾಗ ಚಿಂತಿಸಿ ಫಲ ಇಲ್ಲ ಯಾಕೆಂದರೆ ನನ್ನ ಸುತ್ತಲೂ ನನ್ನನ್ನು ಪ್ರೀತಿಸುವ ಬಹಳಷ್ಟು ಸ್ನೇಹಿತರು ನನಗೆ ಇದ್ದಾರೆ ಎಂದು ಹೇಳಿರುವ ದಿವ್ಯಾ ದತ್ತಾ ನಾನು ಇಲ್ಲಿಯವರೆಗೆ ಹಲವು ತಪ್ಪು ಕೈಗಳನ್ನು ಹಿಡಿದಿದ್ದೇನೆ ಮತ್ತು ಆ ತಪ್ಪುಗಳಿಂದ ಪಾಠವನ್ನು ಕೂಡ ಕಲಿತಿದ್ದೇನೆ ಎಂದು ಕೂಡ ಹೇಳಿದ್ಧಾರೆ.
ಅಂದ್ಹಾಗೇ 1994 ರಲ್ಲಿ ಚಿತ್ರರಂಗಕ್ಕೆ ಬಂದ ದಿವ್ಯಾ ದತ್ತಾ 2005 ರ ಸುಮಾರು ಲೆಫ್ಟಿನೆಂಟ್ ಕಮಾಂಡರ್ ಸಂದೀಪ್ ಶೆರ್ಗಿಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಚಂಢೀಗಡದಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಆದರೆ ಆ ನಂತರ ಅದೇನಾಯ್ತೋ..? ಈ ನಿಶ್ಚಿತಾರ್ಥ ಮುರಿದು ಬಿತ್ತು.
ದಿವ್ಯಾ ದತ್ತಾ ನಿಶ್ಚಿತಾರ್ಥ ನಡೆದಿದೆ ಎನ್ನುವ ಸುದ್ದಿಯನ್ನು ಕೂಡ ಒಪ್ಪಲಿಲ್ಲ. ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿಯನ್ನು ಕೂಡ ಅಲ್ಲಗೆಳೆದಿರಲಿಲ್ಲ. ಬದಲಿಗೆ ಇಂಡಿಯಾ ಫೋರಂಗೆ ನೀಡಿದ ಸಂದರ್ಶನದಲ್ಲಿ ಸಂದೀಪ್ ಮತ್ತು ನಾನು ಕಳೆದ ವರ್ಷ ಚಂಡೀಗಢದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಜನರಿಗೆ ವಿವರಿಸುವುದು ತುಂಬಾ ಮುಜುಗರದ ವಿಷಯ ಎಂದು ಹೇಳಿದ್ದರು. ನಿಶ್ಚಿತಾರ್ಥ ಮತ್ತು ಮದುವೆಯ ನಡುವೆ ಯಾವುದೇ ವ್ಯತ್ಯಾಸವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದರು.
ಇನ್ನು ಇದೇ ಸಮಯದಲ್ಲಿ ದಿವ್ಯಾ ದತ್ತಾ ಬೆಳ್ಳಿತೆರೆಯಿಂದ ಕಿರುತೆರೆಯತ್ತ ಮುಖ ಮಾಡಿದ್ದರು. ಶನ್ನೋ ಕಿ ಶಾದಿ ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದರು. ಈ ಸಮಯದಲ್ಲಿ ಧಾರಾವಾಹಿಯ ಸಹನಟ ವಿಕಾಸ್ ಭಲ್ಲಾ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. ನಿಶ್ಚಿತಾರ್ಥ ಮುರಿದು ಬೀಳಲು ಇವರಿಬ್ಬರ ನಡುವೆ ಇದ್ದ ಆಪ್ತ ಸಂಬಂಧ ಕಾರಣವೆಂದು ಹೇಳಲಾಯ್ತು. ಈ ಸುದ್ದಿಯನ್ನು ಕೂಡ ದಿವ್ಯಾ ದತ್ತಾ ತಳ್ಳಿ ಹಾಕಲಿಲ್ಲ. ಆ ನಂತರ ವಿಕಾಸ್ ಭಲ್ಲಾ, ಹಿರಿಯ ನಟ ಪ್ರೇಮ್ ಚೋಪ್ರಾ ಅವರ ಮಗಳು ಪುನಿತಾ ಅವರನ್ನು ಮದುವೆಯಾದರು.
ಹೀಗೆ ಮುರಿದು ಬಿದ್ದ ನಿಶ್ಚಿತಾರ್ಥ ಮತ್ತು ಸಹನಟನ ಜೊತೆಗಿನ ಅಫೇರ್ ಕಾರಣಕ್ಕೆ ಆಗ ಸುದ್ದಿಯಾಗಿದ್ದ ದಿವ್ಯಾ ದತ್ತಾ ಆ ನಂತರ ತಮ್ಮ ಚಿತ್ರಗಳಿಂದ ಮತ್ತು ಪಾತ್ರಗಳಿಂದ ಸುದ್ದಿಯಾದರು. ಸದ್ಯ ದಿವ್ಯಾ ದತ್ತ 'ಹಿಂದಿ ರಶ್'ಗೆ ಸಂದರ್ಶನ ನೀಡಿದ್ದು ತಮಗೆ ಮದುವೆಯಾಗುವ ಯಾವ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ. ಪ್ರಯಾಣಿಸಲು ಒಬ್ಬ ಗಂಡಸು ಬೇಕೆಂದು ಹೇಳಿದ್ದಾರೆ.


Click it and Unblock the Notifications











