'ಡಾನ್' ಆಗಲು ಒಪ್ಪದ 'ಧುರಂಧರ್' ; ರಣ್ವೀರ್ ಸಿಂಗ್ ವಿರುದ್ದ ದೂರು ದಾಖಲಿಸಿದ ಫರ್ಹಾನ್ ಅಖ್ತರ್ - 40ಕೋಟಿ ಕೊಡ್ತಾರಾ ದೀಪಿಕಾ ಗಂಡ?
ಹಣ ಕೆಲ ಒಮ್ಮೆ ಸಂಬಂಧದಲ್ಲಿ ಹುಳಿ ಹಿಂಡುತ್ತೆ. ವರ್ಷಾನುವರ್ಷದ ಪ್ರೀತಿ ಮತ್ತು ಸ್ನೇಹವನ್ನು ಕೂಡ ಮುರಿಯುವ ಶಕ್ತಿ ಈ ಹಣಕ್ಕಿದೆ. ಹಣ ಇದ್ದರೆ ವ್ಯಕ್ತಿಯ ವ್ಯಕ್ತಿತ್ವ ಹೇಗೆ ಇರಲಿ ಆ ವ್ಯಕ್ತಿಗೆ ಗೌರವ ಸಿಗುತ್ತೆ. ಇನ್ನು ಚಿತ್ರರಂಗದಲ್ಲಿ ಅನೇಕರ ಗುಣವಾಗುಣಗಳನ್ನು ನಿರ್ಧರಿಸುವುದು ಕೇವಲ ಹಣ ಮಾತ್ರ. ಹಣದಾಸೆಗೆ ಇಲ್ಲಿ ಅನೇಕರು ಅನೇಕರಿಗೆ ಮಕ್ಮಲ್ ಟೋಪಿಯನ್ನು ಹಾಕಿದ್ದಾರೆ. ನಂಬಿಕೆ ದ್ರೋಹ ಎಸಗಿದ್ದಾರೆ. ಮತ್ತೂ ಕೆಲವರು ಸಂಬಂಧವನ್ನೇ ಕಡಿದುಕೊಂಡಿದ್ದಾರೆ. ಉದಾಹರಣೆಗೆ ರಣವೀರ್ ಸಿಂಗ್ ಮತ್ತು ಫರ್ಹಾನ್ ಅಖ್ತರ್.
ಹೌದು, ಅಸಲಿಗೆ ''ಡಾನ್ 3'' ಚಿತ್ರದ ಮೂಲಕ ಹಲವರು ಮತ್ತೊಮ್ಮೆ ಶಾರುಖ್ ಖಾನ್ ಅವರನ್ನು ''ಡಾನ್'' ರೂಪದಲ್ಲಿ ನೋಡಲು ಬಯಸಿದ್ದರು.ಆದರೆ, ನಿರ್ದೇಶಕ ಮತ್ತು ನಿರ್ಮಾಪಕ ಫರ್ಹಾನ್ ಅಖ್ತರ್ ಮಾತ್ರ ಈ ಬಾರಿ ಶಾರುಖ್ ಖಾನ್ ಬದಲಿಗೆ ರಣವೀರ್ ಸಿಂಗ್ಗೆ ಮಣೆ ಹಾಕಿದ್ದರು. ಚಿತ್ರದ ಚಿಕ್ಕ ಟೀಸರ್ ಕೂಡ ಬಿಡುಗಡೆ ಮಾಡಿದ್ದರು.

ಆದರೆ ಘೋಷಣೆ ಮಾಡಲಾಯ್ತಿಷ್ಟೇ, ''ಡಾನ್ 3'' ಎದ್ದೇಳಲೇ ಇಲ್ಲ. ಹೀಗಿರುವಾಗ ಬಂದ ''ಧುರಂಧರ್'' ಬಾಕ್ಸಾಫೀಸ್ನಲ್ಲಿ ಹೊಸದೊಂದು ಇತಿಹಾಸವನ್ನು ಬರೆಯಿತು. ''ಧುರಂಧರ್ 2'' ರಣವೀರ್ ಸಿಂಗ್ ಅವರಿಗೆ ಬಾಲಿವುಡ್ನ ಬಾಕ್ಸಾಫೀಸ್ ಕಿಂಗ್ ಎಂಬ ಬಿರುದನ್ನು ಕೂಡ ತಂದು ಕೊಡ್ತು. ವಿವಾದ ಶುರುವಾಗಿದ್ದು ಇಲ್ಲಿಂದಲೇ.
ಫರ್ಹಾನ್ ಅಖ್ತರ್ ಹೇಳುವ ಪ್ರಕಾರ ''ಧುರಂಧರ್'' ಚಿತ್ರದ ಪ್ರಚಂಡ ಗೆಲುವಿನ ನಂತರ ರಣ್ವೀರ್ ಸಿಂಗ್ ವರ್ತನೆಯಲ್ಲಿ ಬದಲಾವಣೆಗಳಾಗಿವೆ. ಏಕಾಏಕಿ ಹೇಳದೇ ಕೇಳದೇ ''ಡಾನ್ 3'' ಚಿತ್ರದಿಂದ ರಣ್ವೀರ್ ಹೊರ ನಡೆದಿದ್ದಾರೆ ಎನ್ನುವ ಆರೋಪವನ್ನು ಮಾಡಿರುವ ಫರ್ಹಾನ್ ಅಖ್ತರ್, ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಈಗಾಗಲೇ ಕೋಟ್ಯಂತರ ರೂಪಾಯಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗಿದ್ದು, 40 ಕೋಟಿ ಪರಿಹಾರ ಕೊಡಬೇಕೆಂದು ವಾದ ಮಾಡುತ್ತಿದ್ದಾರೆ.
ಆದರೆ. ಮುಂಬೈನಲ್ಲಿ ಕೇಳಿ ಬರುವ ಮಾತೇ ಬೇರೆ. ಆ ಪ್ರಕಾರ ''ಡಾನ್ 3'' ಚಿತ್ರಕ್ಕೆ ರಣವೀರ್ ಸಿಂಗ್ ತುಂಬಾನೇ ಉತ್ಸಾಹದಲ್ಲಿದ್ದರು. ಆದರೆ, ಕಥೆ ರಣವೀರ್ ಸಿಂಗ್ ಅವರಿಗೆ ಇಷ್ಟ ಆಗಲಿಲ್ಲ. ಕೆಲ ಬದಲಾವಣೆಗಳನ್ನು ರಣವೀರ್ ಸಿಂಗ್ ಹೇಳಿದರೂ ಕೂಡ ಫರ್ಹಾನ್ ಅಖ್ತರ್ ಕಿವಿಗೆ ಹಾಕಿಕೊಳ್ಳಲಿಲ್ಲ. ಬೇರೆ ವಿಧಿ ಇಲ್ಲದೇ ಚಿತ್ರದಿಂದ ರಣವೀರ್ ಸಿಂಗ್ ಹೊರ ಬರಬೇಕಾಯ್ತು ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಸದ್ಯ ಈ ವಿವಾದ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನೆ ಎಂಪ್ಲಾಯೀಸ್ (FWICE) ಅಂಗಳಕ್ಕೆ ತಲುಪಿದೆ. ನಾಳೆ (ಮೇ 25) ಈ ವಿವಾದ ತಾರ್ಕಿಕ ಅಂತ್ಯ ಕಾಣುವ ಸಾಧ್ಯತೆ ಇದೆ. ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆಯ ಪ್ರಕಾರ, ಫರ್ಹಾನ್ ಅಖ್ತರ್ ಸದಸ್ಯರಾಗಿರುವ ಇಂಡಿಯನ್ ಫಿಲ್ಮ್ ಅಂಡ್ ಟೆಲಿವಿಷನ್ ಡೈರೆಕ್ಟರ್ಸ್ ಅಸೋಸಿಯೇಷನ್ (IFTDA) ಮೂಲಕ ಈ ದೂರನ್ನು ದಾಖಲಿಸಿದ್ದಾರೆ.

ಫರ್ಹಾನ್ ಅಖ್ತರ್ ಸಲ್ಲಿಸಿರುವ ದೂರನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಪುರಾವೆಗಳನ್ನು ಕೂಲಂಕಷವಾಗಿ ಪರಿಶೀಲಿಸಿರುವುದಾಗಿ ಚಲನಚಿತ್ರ ಒಕ್ಕೂಟ ಹೇಳಿದ್ದು, ಸೋಮವಾರ (ಮೇ 25) ಸಂಜೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ತನ್ನ ಅಂತಿಮ ನಿಲುವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಹೇಳಿದೆ.
ಇನ್ನುಳಿದಂತೆ ಈ ಹಿಂದೆ ಈ ವಿವಾದಕ್ಕೆ ''ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ''ದಲ್ಲಿ ಮಂಗಳ ಹಾಡುವ ಪ್ರಯತ್ನ ಮಾಡಲಾಗಿತ್ತು. ಆದರೆ ಮಾತುಕಥೆ ಫಲಪ್ರದವಾಗಲಿಲ್ಲ. ಇಬ್ಬರ ನಡುವೆ
ಸಂಧಾನ ಮಾಡಲು ಆಮಿರ್ ಖಾನ್ ಮುಂದಾಗಿದ್ಧಾರೆ ಎನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆದರೆ ಆಮಿರ್ ಖಾನ್ ಈ ಸುದ್ದಿಯನ್ನು ನಿರಾಕರಿಸಿದರು. ನಾನು ಯಾವ ಸಂಧಾನ ಸಭೆಯನ್ನು ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಈ ವಿವಾದ ನಾಳೆ (ಮೇ 25) ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications