ಧುರಂಧರ್, ಕೇರಳ ಸ್ಟೋರಿ, ಎಲ್ಲ ಕಟ್ಟುಕಥೆ ಎಂದವರ ವಿರುದ್ದ ಗುಡುಗಿದ ನರೇಂದ್ರ ಮೋದಿ
ಸಿನಿಮಾ ಈಗ ಕೇವಲ ಮನರಂಜನೆ ಮಾತ್ರ ಅಲ್ಲ. ಬದಲಿಗೆ ಸೈದ್ಧಾಂತಿಕ ಸಂಘರ್ಷಕ್ಕೆ ವೇದಿಕೆ ಕೂಡ ಹೌದು. ಇದಕ್ಕೆ ಕೈಗನ್ನಡಿ ಎಂಬಂತೆ ಕಾಲ ಕಾಲಕ್ಕೆ ಇಲ್ಲಿ ಕೆಲ ಚಿತ್ರಗಳ ಕುರಿತು ಚರ್ಚೆ ನಡೆಯುತ್ತಲೇ ಇವೆ. ಅದರಲ್ಲಿಯೂ ಕಳೆದ ಒಂದು ದಶಕದಿಂದ ಸಿನಿಮಾ ಸುತ್ತ ಎಡ-ಬಲ ಯುದ್ಧ ಆರಂಭ ಆಗಿದೆ.
ಮನರಂಜನೆಯ ಹೆಸರಿನಲ್ಲಿ ಕೆಲವರು ಹೂತು ಹೋದ ಇತಿಹಾಸವನ್ನು ಅಗೆಯುವ ಪ್ರಯತ್ನ ಮಾಡಿದ್ದೇವೆ ಎಂಬ ವಾದ ಮಾಡಿದರೆ, ಇನ್ನೂ ಕೆಲವರು ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ, ನಿಮ್ಮ ವೈಫಲ್ಯ ಮರೆಮಾಚಲು ಸುಳ್ಳಿನ ಕೋಟೆ ನಿರ್ಮಾಣ ಮಾಡುತ್ತಿದ್ದೀರಾ ಎಂಬ ಪ್ರತಿವಾದವನ್ನು ಮಾಡುತ್ತಿದ್ದಾರೆ.

''ಧುರಂಧರ್''.. ''ಧುರಂಧರ್ 2''.. ''ದಿ ಕೇರಳ ಸ್ಟೋರಿ''.. ''ಕಾಶ್ಮೀರ್ ಫೈಲ್ಸ್''.. ''ಬೆಂಗಾಲ್ ಫೈಲ್ಸ್''.. ಹೀಗೆ ಹಲವು ಚಿತ್ರಗಳು ಈ ಚರ್ಚೆಗೆ ನಾಂದಿ ಹಾಡಿವೆ. ಸದ್ಯ ಇದೇ ಚರ್ಚೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಭಾಗವಹಿಸಿದ್ದಾರೆ. ಆದರೆ ಇದು ಚಾಯ್ ಪೇ ಚರ್ಚಾ ಅಲ್ಲ. ಬದಲಿಗೆ ಎಲೆಕ್ಷನ್ ಪೇ ಚರ್ಚಾ ಎನ್ನುವುದು ವಿಶೇಷ.
ಹೌದು, ವಿಶ್ವದಾದ್ಯಂತ ಮನ್ನಣೆ ಪಡೆದು, ಭಾರತದಲ್ಲಿ ಹಲವರ ನೆಚ್ಚಿನ ನಾಯಕರಾಗಿ ಹೊರ ಹೊಮ್ಮಿದವರು ನರೇಂದ್ರ ಮೋದಿ. ಸೋಲಿಲ್ಲದ ಸರದಾರ ಎಂದೇ ಕರೆಯಲ್ಪಡುವ ಸದ್ಯ ಮೂರನೇ ಬಾರಿ ರಾಷ್ಟ್ರದ ಚುಕ್ಕಾಣಿ ಹಿಡಿದಿದ್ದಾರೆ.
ಇಂಥಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸದ್ಯ ಕೇರಳದಲ್ಲಿದ್ದಾರೆ. ಚುನಾವಣೆ ಹಿನ್ನೆಲೆ ಪ್ರಚಾರ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ವಿರೋಧ ಪಕ್ಷದವರ ವಿರುದ್ಧ ಕಿಡಿ ಕಾರಿದ್ದಾರೆ. ನಿರುದ್ಯೋಗ ಸೇರಿ ದೇಶದಲ್ಲಿ ತಾಂಡವವಾಡುತ್ತಿರುವ ಇನ್ನಿತರ ಸಮಸ್ಯೆಯ ಕುರಿತು ಮಾತನಾಡದೇ ''ಧುರಂಧರ್'' ಮತ್ತು ''ಕೇರಳ ಸ್ಟೋರಿ'' ಕಥೆ ಸುಳ್ಳು ಎಂದವರ ವಿರುದ್ಧ ಗುಡುಗಿದ್ದಾರೆ.
ಕೇರಳದ ತಿರುವಲ್ಲಾದಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಲ್ಡಿಎಫ್ ಮತ್ತು ಯುಡಿಎಫ್ ಮೈತ್ರಿಕೂಟದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಹೇಳಿದ್ದಾರೆ. "ಕಾಶ್ಮೀರ್ ಫೈಲ್ಸ್'' ಬಂದಾಗ ಅದನ್ನು ಸುಳ್ಳು ಅಂದರು. ''ಕೇರಳ ಸ್ಟೋರಿ'' ಬಂದಾಗಲೂ ಸುಳ್ಳು ಅಂದರು. ಈಗ ''ಧುರಂಧರ್'' ಸಿನಿಮಾ ಬಂದಾಗಲೂ ಅದನ್ನೂ ಕೂಡ ಸುಳ್ಳು ಎಂದು ಜಪಿಸುತ್ತಿದ್ದಾರೆ ಎಂದು ಹೇಳಿರುವ ಮೋದಿ ವಿರೋಧ ಪಕ್ಷದವರು ಸುಳ್ಳುಗಳನ್ನೇ ಉತ್ಪಾದಿಸುವ ಫ್ಯಾಕ್ಟರಿ ಇದ್ದಂತೆ ಎಂದು ಕಿಡಿ ಕಾರಿದ್ಧಾರೆ.

ಪ್ರತಿಪಕ್ಷಗಳು ಈ ಚಿತ್ರಗಳನ್ನು ವಿರೋಧಿಸುತ್ತಿರುವುದು ಕೇವಲ ಕಲೆಯ ಕಾರಣಕ್ಕಲ್ಲ, ಬದಲಾಗಿ ತಮ್ಮ ಹಳೆಯ ಓಲೈಕೆಯ ರಾಜಕೀಯ ಮತ್ತು ವೈಫಲ್ಯಗಳು ಬಯಲಾಗುತ್ತವೆ ಎಂಬ ಭಯದಿಂದ ಎಂದು ಹೇಳಿರುವ ಮೋದಿ ಎಫ್ಸಿಆರ್ಎ ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರತಿಪಕ್ಷಗಳು ಕೇರಳದ ಜನರಲ್ಲಿ, ವಿಶೇಷವಾಗಿ ಕ್ರಿಶ್ಚಿಯನ್ ಸಮುದಾಯದಲ್ಲಿ ಸುಳ್ಳು ಭೀತಿಯನ್ನು ಹರಡುತ್ತಿವೆ ಎಂದಿದ್ದಾರೆ. ಗೋವಾದಲ್ಲಿ ಯುಸಿಸಿ ಯಶಸ್ವಿಯಾಗಿದೆ ಎಂದು ಹೇಳಿದ ಮೋದಿ ಸಿನಿಮಾವನ್ನು ಸುಳ್ಳು ಎಂದು ನಂಬಿಸುವ ಅದೇ ಶಕ್ತಿಗಳು ಈಗ ಸರ್ಕಾರದ ಕಾಯ್ದೆಗಳ ಬಗ್ಗೆಯೂ ಅಪಪ್ರಚಾರ ಮಾಡುತ್ತಿವೆ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಶಬರಿಮಲೆ ದೇಗುಲದ ವಿಚಾರದಲ್ಲೂ ಮೋದಿ ಅವರು ಪ್ರತಿಪಕ್ಷಗಳನ್ನು ಬಿಡಲಿಲ್ಲ. ದೇಗುಲದ ನಾಪತ್ತೆಯಾದ ಚಿನ್ನದ ಬಗ್ಗೆ ಎಲ್ಡಿಎಫ್ ಮತ್ತು ಕಾಂಗ್ರೆಸ್ ನಡುವೆ ಮೌನ ಒಪ್ಪಂದವಿದೆ ಎಂದು ಆರೋಪಿಸಿದ ಅವರು, ದೇಶದ ಸಂಸ್ಕೃತಿಯನ್ನು ಕಾಪಾಡುವಲ್ಲಿ ಬಿಜೆಪಿ ಮಾತ್ರ ಬದ್ಧವಾಗಿದೆ ಎಂದು ಹೇಳಿದ್ದಾರೆ.
ಸದ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ವಿಡಿಯೋ ವೈರಲ್ ಆಗಿದ್ದು, ಇನ್ನೊಮ್ಮೆ ''ಧುರಂಧರ್''.. ''ಕೇರಳ ಸ್ಟೋರಿ'' ಸೇರಿ ಬಂದ ಇನ್ನುಳಿದ ಚಿತ್ರಗಳ ಕುರಿತು ಚರ್ಚೆ ಶುರುವಾಗಿದೆ. ಪ್ರೊಪಗಾಂಡ ಸಿನಿಮಾಗಳು ಎನ್ನುವುದರ ಮೇಲೆ ಈಗ ಮೋದಿಯವರೇ ಅಧಿಕೃತ ಮುದ್ರೆ ಒತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ''ಧುರಂಧರ್'' ಚಿತ್ರಲ್ಲಿರುವುದೆಲ್ಲವೂ ನೂರಕ್ಕೆ ನೂರು ನಿಜಾ ಎನ್ನುವುದನ್ನು ಮೋದಿ ನಂಬುತ್ತಾರಾ ಹಾಗಿದ್ದರೆ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.


Click it and Unblock the Notifications











