ಆಧುನಿಕ ರಂಗಭೂಮಿ ಹರಿಕಾರ ಇಬ್ರಾಹಿಂ ಅಲ್ಕಜಿ ನಿಧನ: ಮೋದಿ ಸಂತಾಪ
ಭಾರತೀಯ ರಂಗಭೂಮಿಗೆ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಇಬ್ರಾಹಿಮ್ ಅಲ್ಕಜಿ ಅವರು ನಿನ್ನೆ (ಆಗಸ್ಟ್ 04) ರ ರಾತ್ರಿ ನಿಧನರಾಗಿದ್ದಾರೆ.
ಆಧುನಿಕ ರಂಗಭೂಮಿಯ ಹರಿಕಾರ ಎಂದೇ ಕರೆಯಲಾಗುವ ಇಬ್ರಾಹಿಮ್ ಅಲ್ಕಜಿ ಅವರಿಗೆ 94 ವರ್ಷ ವಯಸ್ಸಾಗಿತ್ತು. ಅಲ್ಕಜಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಕೊನೆ ಉಸಿರೆಳೆದಿದ್ದಾರೆ.
ವಿಶ್ವದ ಪ್ರಮುಖ ನಾಟಕ ಶಾಲೆಯಾದ ರಾಡಾನಲ್ಲಿ ವ್ಯಾಸಾಂಗ ಮಾಡಿದ ಇಬ್ರಾಹಿಮ್, ಹಲವು ಖ್ಯಾತ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಗಿರೀಶ್ ಕಾರ್ನಾಡರ 'ತುಗಲಕ್', ಮೋಹನ್ ರಾಕೇಶ್ ಅವರ 'ಆಶಾಡ್ ಕಾ ಏಕ್ ದಿನ್', ಧರ್ಮವೀರ್ ಭಾರ್ತಿ ಅವರ 'ಅಂಧಾ ಯುಗ್' ಇವುಗಳ ಜೊತೆಗೆ ಗ್ರೀಕ್ನ ಕೆಲವು ನಾಟಕಗಳು ಹಾಗೂ ಶೇಕ್ಸ್ಪಿಯರ್ನ ಕೆಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ 'ಎನ್ಎಸ್ಡಿ' ಯ ಮೊದಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಇಬ್ರಾಹಿಂ, ಖ್ಯಾತ ನಟರಾದ ನಾಸಿರುದ್ದೀನ್ ಶಾ, ಓಂ ಪುರಿ, ಉತ್ತರಾ ಬೌಕೋರ್, ರೋಹಿಣಿ ಅಟ್ಟಾಂಗಡಿ ಮುಂತಾದವರನ್ನು ತರಬೇತು ಗೊಳಿಸಿದ ಶ್ರೇಯ ಅಲ್ಕಜಿ ಅವರದ್ದು.
ಅಲ್ಕಜಿ ಅವರಿಗೆ ಭಾರತ ಸರ್ಕಾರವು, ಪದ್ಮ ಭೂಷಣ, ಪದ್ಮ ವಿಭೂಷಣ, ಪದ್ಮ ಶ್ರೀ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇದರ ಜೊತೆಗೆ ಬಿಬಿಸಿಯ ಬ್ರಾಡ್ಕಾಸ್ಟಿಂಗ್ ಪ್ರಶಸ್ತಿಯೂ ಅವರನ್ನು ಹುಡುಕಿ ಬಂದಿದೆ.
ರಂಗಭೂಮಿ ದಿಗ್ಗಜನ ಅಗಲಿಕೆಗೆ ಖ್ಯಾತ ನಟ-ನಟಿಯರು ಕಂಬನಿ ಮಿಡಿದಿದ್ದು, ನವಾಜುದ್ದೀನ್ ಸಿದ್ಧಿಕಿ, ರಣದೀಪ್ ಹೂಡಾ ಮುಂತಾದ ನಟರು ಟ್ವಿಟ್ಟರ್ನಲ್ಲಿ ಶೋಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಸಹ ಶೋಕ ವ್ಯಕ್ತಪಡಿಸಿ ಟ್ವಿಟ್ಟರ್ ಸಂದೇಶ ಪ್ರಕಟಿಸಿದ್ದಾರೆ.


Click it and Unblock the Notifications











