ಯೂಟ್ಯೂಬರ್ ರಣವೀರ್ ಅಲಾಹಾಬಾದಿಯಾ ಸೇರಿ 5 ಜನರ ವಿರುದ್ಧ ಎಫ್ಐಆರ್ ದಾಖಲು...!
ಯೂಟ್ಯೂಬ್ ಮೂಲಕ ಜಗದ್ವಿಖ್ಯಾತಿಯನ್ನು ಗಳಿಸಿದವರಲ್ಲಿ ರಣವೀರ್ ಅಲಾಹಾಬಾದಿಯಾ ಕೂಡ ಒಬ್ಬರು. ಬೀರ್ ಬೈಸೆಪ್ಸ್' ಯೂಟ್ಯೂಬ್ ಚಾನೆಲ್ ನಲ್ಲಿ ಬರೋಬ್ಬರಿ 82 ಲಕ್ಷ ಸಬ್ಸ್ಕ್ರೈಬರ್ಗಳನ್ನು ಒಳಗೊಂಡಿರುವ ರಣವೀರ್ ಅಲಾಹಾಬಾದಿಯಾ ಮೊನ್ನೆ 'ಇಂಡಿಯಾಸ್ ಗಾಟ್ ಲೇಟೆಂಟ್' ಶೋ ' ಕಾರ್ಯಕ್ರಮದಲ್ಲಿ ನಾಲಿಗೆ ಹರಿಬಿಟ್ಟಿದ್ದರು. ಹಾಸ್ಯದ ಹೆಸರಿನಲ್ಲಿ ತನ್ನ ಕೊಳಕು ಮನಸ್ಥಿತಿಯ ಪ್ರದರ್ಶನ ಮಾಡಿದ್ದರು.
ಕಾರ್ಯಕ್ರಮದಲ್ಲಿ ಪರ್ಫಾರ್ಮ್ ಮಾಡಲು ಬಂದ ಸ್ಫರ್ಧಿಗೆ ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೆತ್ತವರು ಪ್ರತಿದಿನ ಲೈಂಗಿಕತೆಯನ್ನು ಹೊಂದುವುದನ್ನು ನೀವು ನೋಡುತ್ತೀರಾ ಅಥವಾ ಒಮ್ಮೆ ಅವರ ಜೊತೆ ಸೇರಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀರಾ ಎಂದು ಪ್ರಶ್ನೆಯನ್ನು ಕೇಳಿದ್ದ ಈ ಮಹಾನುಭಾವನ ವಿರುದ್ದ ಈಗ ಭಾರತದೆಲ್ಲೆಡೆ ಆಕ್ರೋಶದ ಅಲೆ ಎದ್ದಿದೆ. ಒಂದಾದ ಮೇಲೊಂದು ದೂರು ದಾಖಲಾಗುತ್ತಿವೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದು, ರಣವೀರ್ ಅಲಾಹಾಬಾದಿಯಾ ಮಾತನಾಡಿರುವ ವಿಡಿಯೋದ ತುಣುಕನ್ನು ಡಿಲೀಟ್ ಮಾಡುವಂತೆ ಸೂಚಿಸಿದೆ. ಇದೀಗ ಅಸ್ಸಾಂ ಪೊಲೀಸರು ರಣವೀರ್ ಸೇರಿದಂತೆ ಇತರರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು ಯೂಟ್ಯೂಬರ್ಗಳಾದ ಆಶಿಶ್ ಚಂಚಲಾನಿ, ಅಪೂರ್ವ ಮಖೀಜಾ, ಜಸ್ಪ್ರೀತ್ ಸಿಂಗ್, ಸಮಯ್ ರೈನಾ ವಿರುದ್ಧವೂ ಅಶ್ಲೀಲತೆಯನ್ನು ಪ್ರಚಾರ ಮಾಡಿದ್ದಕ್ಕಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಇವರೆಲ್ಲರ ವಿರುದ್ಧ ವಿವಿಧ ಸೆಕ್ಷನ್ಗಳಡಿ ಗುವಹಾಟಿ ಪೊಲೀಸರು ಕೇಸ್ ದಾಖಲಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಈ ಹಿಂದೆ ಕಾರ್ಯಕ್ರಮದಲ್ಲಿ ರಣವೀರ್ ಮಾತನಾಡಿದ ಮಾತು ವೈರಲ್ ಆಗುತ್ತಿದ್ದಂತೆಯೇ ಮುಂಬೈ ಪೊಲೀಸರು ಖಾರ್ನಲ್ಲಿರುವ ಶೋ ಸೆಟ್ಗೆ ಭೇಟಿ ನೀಡಿದ್ದರು. ಮಹಾರಾಷ್ಟ್ರ ಮಹಿಳಾ ಆಯೋಗ ಕೂಡ ಈ ವಿಚಾರದಲ್ಲಿ ದೂರನ್ನು ದಾಖಲಿಸಿದ್ದು ಜನಪ್ರಿಯತೆ ಮತ್ತು ಆರ್ಥಿಕ ಲಾಭ ಗಳಿಸಲು ಉದ್ದೇಶಪೂರ್ವಕವಾಗಿಯೇ ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಅಶ್ಲೀಲ ಹೇಳಿಕೆಗಳನ್ನು ನೀಡುವ ಸಂಪ್ರದಾಯ ಹೆಚ್ಚಾಗುತ್ತೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಜಾಗತಿಕ ಮಟ್ಟದಲ್ಲಿ ಪ್ರಸಾರಗೊಳ್ಳುವ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಾ ನಗುತ್ತಿರುವುದನ್ನು ತೋರಿಸಲಾಗಿದ್ದು ಇದನ್ನು ಗಂಭೀರವಾದ ಅಪರಾಧವೆಂದು ಪರಿಗಣಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮತ್ತೊಂದು ಕಡೆ ಶಿವಸೇನೆ { ಯುಬಿಟಿ } ಪಕ್ಷದ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಂಸದೀಯ ಸಮಿತಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ. ಹಾಸ್ಯ ಅಥವಾ ವಿನೋದದ ಹೆಸರಿನಲ್ಲಿ ನಿಂದನೀಯ ಭಾಷೆಯನ್ನು ಬಳಸಿದರೆ ಅದಕ್ಕೆ ಅರ್ಥ ಇಲ್ಲ ಎಂದಿರುವ ಪ್ರಿಯಾಂಕ ಚತುರ್ವೇದಿ ನಿಮ್ಮ ಪ್ರತಿಭೆಯ ಪ್ರದರ್ಶನ ಮಾಡಲು ಮಾತನಾಡಲು ವೇದಿಕೆ ಸಿಕ್ಕಿದೆ ಅಂದರೆ ಅಲ್ಲಿ ನೀವು ಏನು ಬೇಕಾದರೂ ಮಾತನಾಡಬಹುದು ಎನ್ನುವುದು ಅರ್ಥ ಅಲ್ಲ ಎಂದು ಹೇಳಿದ್ದಾರೆ. ಲಕ್ಷಾಂತರ ಜನ ಫಾಲೋವರ್ಸ್ ಗಳನ್ನು ಹೊಂದಿರುವ ವ್ಯಕ್ತಿ, ಅನೇಕ ರಾಜಕಾರಣಿಗಳು ಅವರ ಎದುರು ಕುಳಿತು ಪಾಡ್ಕಾಸ್ಟ್ನಲ್ಲಿ ಮಾತನಾಡಿದ್ದಾರೆ. ಸಾಲದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇವರಿಗೆ ಪ್ರಶಸ್ತಿಯನ್ನು ಕೂಡ ನೀಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸ್ಥಾಯಿ ಸಮಿತಿಯ ಸದಸ್ಯೆಯಾಗಿ ನಾನು ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಪ್ರಿಯಾಂಕ ಚತುರ್ವೇದಿ.


Click it and Unblock the Notifications











