ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟರನ್ನು ಸಿಲುಕಿಸಲು ಎನ್ಸಿಬಿಯಿಂದಲೇ ಒತ್ತಡ!
ಬಾಲಿವುಡ್ನ ಡ್ರಗ್ಸ್ ಪ್ರಕರಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಸುಶಾಂತ್ ಸಾವಿನ ತನಿಖೆಯಿಂದ ತೆರೆದುಕೊಂಡ ಬಾಲಿವುಡ್ ಡ್ರಗ್ಸ್ ಕರ್ಮಕಾಂಡ ಸ್ಟಾರ್ ನಟ-ನಟಿಯರ ಬುಡಕ್ಕೇ ಬಂದಿದೆ.
ಎನ್ಸಿಬಿಯು ಪ್ರಕರಣದ ತನಿಖೆ ನಡೆಸುತ್ತಿದ್ದು, ರಿಯಾ ಚಕ್ರವರ್ತಿ ಸೇರಿದಂತೆ ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಅನ್ನು ವಿಚಾರಣೆ ನಡೆಸಿದ್ದಾರೆ. ಎನ್ಸಿಬಿ ತನಿಖೆಯಿಂದ ಸಾಕಷ್ಟು ದೊಡ್ಡ ಹೆಸರುಗಳೇ ಹೊರಗೆ ಬರುತ್ತಿವೆ.
ಆದರೆ ಇದೀಗ ನಡೆದಿರುವ ಹೊಸ ಬೆಳವಣಿಗೆಯಲ್ಲಿ, ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಸಿಬಿ ವಿರುದ್ಧವೇ ಪ್ರಶ್ನೆಗಳನ್ನು ಎತ್ತುವಂತಾಗಿದೆ. ಎನ್ಸಿಬಿ ಅಧಿಕಾರಿಗಳು ಪೂರ್ವಾಗ್ರಹ ಪೀಡಿತರಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆಯೇ ಎಂಬ ಅನುಮಾನ ಎದ್ದಿದೆ.
ಧರ್ಮ ಪ್ರೊಡಕ್ಷನ್ನ ಸಿಬ್ಬಂದಿ ಕ್ಷಿತಿಜ್ ಪ್ರಸಾದ್ ಎಂಬುವರನ್ನು ಎನ್ಸಿಬಿ ಅವರು ಇತ್ತೀಚೆಗೆಷ್ಟೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಬಂಧನಕ್ಕೊಳಗಾಗಿರುವ ಕ್ಷಿತಿಜ್ ನ್ಯಾಯಾಲಯದಲ್ಲಿ ನೀಡಿರುವ ಹೇಳಿಕೆ ಎನ್ಸಿಬಿ ಬಗ್ಗೆ ಅನುಮಾನಗಳನ್ನು ಎತ್ತಿದೆ.

ನ್ಯಾಯಾಲಯಕ್ಕೆ ದೂರು ಸಲ್ಲಿಸಿರುವ ಕ್ಷಿತಿಜ್
ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಕ್ಷಿತಿಜ್ ಪ್ರಸಾದ್, ಡ್ರಗ್ಸ್ ಪ್ರಕರಣದ ವಿಚಾರಣೆ ನಡೆಸಿದ ಎನ್ಸಿಬಿ ಅಧಿಕಾರಿಗಳು, ಪ್ರಕರಣದಲ್ಲಿ ನಟ ರಣಬೀರ್ ಕಪೂರ್ ಅನ್ನು ಸಿಲುಕಿಸುವಂತೆ ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂದು ಹೇಳಿದ್ದಾರೆ.

ನಟರ ಹೆಸರು ಹೇಳುವಂತೆ ಒತ್ತಡ ಹಾಕಿದ್ದಾರೆ: ಕ್ಷಿತಿಜ್
ಎನ್ಸಿಬಿ ಅಧಿಕಾರಿಗಳು ನನಗೆ ಸಾಕಷ್ಟು ಕಿರುಕುಳ ನೀಡಿದರು, ನಟ ರಣಬೀರ್ ಕಪೂರ್, ಅರ್ಜುನ್ ರಾಮ್ಪಾಲ್, ಡಿನೊ ಮರಿಯೋ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ. ನಾನು ಈ ನಟರ ಹೆಸರನ್ನು ಹೇಳುವಂತೆ ನನ್ನ ಮೇಲೆ ಒತ್ತಡ ಹೇರಿದ್ದಾರೆ ಎಂದು ಕ್ಷಿತಿಜ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಕ್ಷಿತಿಜ್
ನ್ಯಾಯಾಲಯಕ್ಕೆ ಪಿಎಲ್ಎ ಸಲ್ಲಿಸಿರುವ ಕ್ಷಿತಿಜ್, 'ಎನ್ಸಿಬಿ ಅಧಿಕಾರಿಗಳು ನನ್ನನ್ನು ದೈಹಿಕ, ಮಾನಸಿಕ, ಭಾವನಾತ್ಮಕ ಹಿಂಸೆ ನೀಡಿದ್ದಾರೆ. ವಿಚಾರಣೆ ವೇಳೆ ಅವರು ವೃತ್ತಿಪರವಾಗಿ ನಡೆದುಕೊಂಡಿಲ್ಲ ಎಂದು ಕ್ಷಿತಿಜ್ ಹೇಳಿದ್ದಾರೆ.

ಹೇಳಿಲ್ಲದ ವಿಷಯಗಳನ್ನು ಸಹ ದಾಖಲಿಸಿಕೊಂಡಿದ್ದಾರೆ: ಕ್ಷಿತಿಜ್
ವಿಚಾರಣೆ ವೇಳೆ ದಾಖಲಿಸಿಕೊಂಡಿರುವ ತನ್ನ ಹೇಳಿಕೆಯನ್ನು ಸಹ ತಿರುಚಲಾಗಿದೆ. ನನ್ನ ಅನುಮತಿ ಇಲ್ಲದೆ ಇಬ್ಬರು ಅಧಿಕಾರಿಗಳು ನಾನು ಹೇಳದೇ ಇದ್ದ ವಿಷಯಗಳನ್ನು ಸಹ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಕ್ಷಿತಿಜ್ ಆರೋಪಿಸಿದ್ದಾರೆ.

ಮಾದಕ ವಸ್ತು ಮಾರಾಟದ ಆರೋಪ
ಕ್ಷಿತಿಜ್, ಮಾದಕ ವಸ್ತು ಹಂಚಿಕೆ, ಮಾರಾಟದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಪ್ರಕರಣದ ಮತ್ತೊಬ್ಬ ಆರೋಪಿ ಅಂಕುಶ್ ಅರ್ನೇಜಾ ಎಂಬಾತನಿಂದ ಕ್ಷಿತಿಜ್ ಗಾಂಜಾ ಕೊಂಡುಕೊಂಡಿದ್ದ ಎಂದು ಸಹ ಎನ್ಸಿಬಿ ಆರೋಪಿಸಿದೆ.


Click it and Unblock the Notifications











