ಶಿಲ್ಪಾ ಶೆಟ್ಟಿ ರೆಸ್ಟೋರೆಂಟ್ ಎದುರು ಕಿಲೋಮೀಟರ್ ಉದ್ದದ ಕ್ಯೂ ; ನಮ್ಮ ದೇಶದ ಕಥೆ ಇಷ್ಟೇ ಎಂದು ಚರ್ಚೆ
ಹಿಂದೆ ಒಂದು ಕಾಲ ಇತ್ತು. ಆ ಕಾಲದಲ್ಲಿ ಜೀವನೋಪಾಯಕ್ಕೆ ಕಲಾವಿದರು ತಮ್ಮಲ್ಲಿನ ಕಲೆಯೊಂದನ್ನೇ ನಂಬಿಕೊಂಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ತಂತ್ರಜ್ಞರು ಮತ್ತು ಕಾರ್ಮಿಕರನ್ನು ಹೊರತು ಪಡಿಸಿದರೆ ಚಿತ್ರರಂಗವನ್ನಷ್ಟೇ ನೆಚ್ಚಿಕೊಂಡು ಕುಳಿತ ಸ್ಟಾರ್ಗಳು ಯಾರು ಇಲ್ಲ. ಎಲ್ಲರೂ ಒಂದಲ್ಲ ಒಂದು ಕಡೆ ತಮ್ಮ ದುಡ್ಡು ಹೂಡಿದ್ದಾರೆ. ಸಂಪಾದನೆಯ ಮಾರ್ಗ ಕಂಡುಕೊಂಡಿದ್ದಾರೆ.
ಕೆಲವರು ಬಟ್ಟೆ ಮಾರಿದರೆ.. ಇನ್ನು ಕೆಲವರು ಮೇಕಪ್ ಕಿಟ್ ಮಾರುತ್ತಿದ್ದಾರೆ. ಕೆಲವರು ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದರೆ ಮತ್ತೂ ಕೆಲವರು ಜನರಿಗೆಲ್ಲ ಎಣ್ಣೆ ಹೊಡೆಸಿ ದುಡ್ಡು ಮಾಡುತ್ತಿದ್ಧಾರೆ. ತಮ್ಮದೇ ವಿಸ್ಕಿ ಬ್ರ್ಯಾಂಡ್ಗಳನ್ನು ಶುರು ಮಾಡಿದ್ದಾರೆ. ಮತ್ತೂ ಕೆಲವರು ರಿಯಲ್ ಎಸ್ಟೇಟ್ ನಲ್ಲಿ ಹಣ ಹೂಡಿದ್ದಾರೆ. ಇನ್ನೂ ಕೆಲವರು ಹೊಟೇಲ್ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆ ಪೈಕಿ ಶಿಲ್ಪಾ ಶೆಟ್ಟಿ ಕೂಡ ಒಬ್ಬರು.

ಹೌದು. ಶಿಲ್ಪಾ ಶೆಟ್ಟಿ ಒಡೆತನದ ''ಬಾಸ್ಟಿಯನ್'' ರೆಸ್ಟೋರೆಂಟ್ಗಳು ದೇಶದ ನಾನಾ ಭಾಗದಲ್ಲಿವೆ. ಬೆಂಗಳೂರಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿಯೂ ಈ ''ಬಾಸ್ಟಿಯನ್ ಗಾರ್ಡನ್ ಸಿಟಿ'' ಇದೆ. ಗೋವಾದಲ್ಲಿ ಕೂಡ ಇದೆ. ಇನ್ನು ಮುಂಬೈನಲ್ಲಿ ಕೇವಲ ಒಂದು ರೆಸ್ಟೋರೆಂಟ್ ಮಾತ್ರ ಅಲ್ಲ. ಬೇರೆ ಬೇರೆ ಹೆಸರಿನಲ್ಲಿ 6 ರೆಸ್ಟೋರೆಂಟ್ಗಳನ್ನು ರಂಜೀತ್ ಬಿಂದ್ರಾ ಅವರ ಜೊತೆ ಸೇರಿ ಶಿಲ್ಪಾ ಶೆಟ್ಟಿ ಪ್ರಾರಂಭ ಮಾಡಿದ್ದಾರೆ. ಆ ಪೈಕಿ ಬಾಂದ್ರಾದಲ್ಲಿರುವ ''ಅಮ್ಮಕಾಯಿ'' (ಅಮ್ಮನ ಕೈರುಚಿ) ಕೂಡ ಒಂದು.
ಈ ರೆಸ್ಟೋರೆಂಟ್ನಲ್ಲಿ ದಕ್ಷಿಣ ಭಾರತದ ಬಗೆ ಬಗೆಯ ಖಾದ್ಯಗಳಿವೆ. ಮಂಗಳೂರು ಶೈಲಿಯ ಊಟ ಕೂಡ ಇದೆ. ಸದ್ಯ ಇದೇ ರೆಸ್ಟೋರೆಂಟ್ ಮುಂದೆ ಜನ ಸಾಗರ ಕಂಡು ಬಂದಿದೆ. ಹಾಗಂಥ ಜನ ರುಚಿ ಚೆನ್ನಾಗಿರುತ್ತೆ ಎಂದುಕೊಂಡು ಓಡೋಡಿ ಬಂದಿಲ್ಲ. ಬದಲಿಗೆ ಉಚಿತವಾಗಿ ಸಿಗುತ್ತೆ ಎನ್ನುವ ಕಾರಣಕ್ಕೆ ಬಂದಿದ್ದಾರೆ. ಜನರ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.
ಹೌದು, ಗಣರಾಜ್ಯೋತ್ಸವದ ಪ್ರಯುಕ್ತ ಉಚಿತ ಉಪಹಾರ ನೀಡುವುದಾಗಿ 'ಅಮ್ಮಕಾಯಿ' ರೆಸ್ಟೋರೆಂಟ್ ಘೋಷಿಸಿತ್ತು. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂದು ಹೇಳಲಾಗಿತ್ತು. ಬೆಳಿಗ್ಗೆ 9.30 ರಿಂದ 11.30 ರವರೆಗೆ ಎಷ್ಟೇ ಜನರು ಬಂದರೂ ಅವರಿಗೆ ಉಚಿತ ಉಪಹಾರ ಎಂದು ಪ್ರಕಟಣೆ ಹೊರಡಿಸಿತ್ತು. ಇದನ್ನು ಕೇಳಿದ ಜನ ತಮ್ಮೆಲ್ಲ ಕೆಲಸ ಮರೆತು ಬೆಳಗ್ಗೆ 7ಕ್ಕೆ ಬಂದು ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ಎದುರು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಸದ್ಯ ''ಅಮ್ಮಕಾಯಿ'' ರೆಸ್ಟೋರೆಂಟ್ ಹೊರಗಡೆ ಜನ ನಿಂತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸರತಿ ಸಾಲಿನಲ್ಲಿ ನಿಂತ ಹಲವರು ಆರ್ಥಿಕವಾಗಿ ಸದೃಢರಾಗಿದ್ದು, ಐಷಾರಾಮಿ ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದು ಚರ್ಚೆಯ ಕಾವು ಹೆಚ್ಚಿಸಿದೆ. ಭಾರತೀಯರ ಈ ಉಚಿತ ಮನಸ್ಥಿತಿ ಬದಲಾಗುವುದು ಯಾವಾಗ ? ಎಂಬ ಪ್ರಶ್ನೆ ಎದ್ದಿದೆ.

ಕೆಲವರು ಉಚಿತ ಊಟ ಸ್ವೀಕರಿಸಿದವರ ಕುರಿತು ಅಪಹಾಸ್ಯ ಮಾಡುವುದು ಸರಿ ಅಲ್ಲ ಎಂಬ ವಾದ ಮಾಡಿದರೆ ಇನ್ನೂ ಕೆಲವರು ಈ ತರಹದ ಸನ್ನಿವೇಶಗಳು ಸಮಾಜದ ಮೇಲೆ ಮತ್ತು ಹೊಸ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ದೇಶದ ಕಥೆ ಇಷ್ಟೇ ಎಂದು ಚರ್ಚೆ ಮಾಡುತ್ತಿದ್ದಾರೆ. ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಲ್ಲದ ಇವರೆಲ್ಲ ಪುಕ್ಸಟ್ಟೆ ಊಟ ತಿನ್ನಲು ಮಾತ್ರ ಬಂದು ಬಿಡುತ್ತಾರೆ ಎಂಬ ಮಾತು ಕೂಡ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಈ ವಿಡಿಯೋ ಸದ್ಯ ವ್ಯಾಪಕವಾಗಿ ವೈರಲ್ ಆಗಿದ್ದು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.


Click it and Unblock the Notifications











