ಮುಂಬೈ ಬಿಟ್ಮೇಲೆ ಚೆನ್ನಾಗಿದ್ದೀನಿ, ಮದ್ಯ ಸೇವನೆ, ಬಾಲಿವುಡ್ ಸಿನಿಮಾ ನೋಡೊದು ಬಿಟ್ಟಿದ್ದೀನಿ; ಅನುರಾಗ್ ಕಶ್ಯಪ್
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮುಂಬೈ ತೊರೆದಿರುವುದು ಗೊತ್ತೇಯಿದೆ. ಇದೀಗ ದಕ್ಷಿಣದ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಕನ್ನಡ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಮುಂಬೈನಿಂದ ಹೊರಬಂದ ಮೇಲೆ ಹೊಸ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದಾರೆ. ದಕ್ಷಿಣ ಭಾರತದಲ್ಲಿ ಅವರ ಚಿತ್ರಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಮ್ಮ ಆರೋಗ್ಯ ಮತ್ತು ಒಳ್ಳೆ ಅಭ್ಯಾಸಗಳಿಗೆ ಆದ್ಯತೆ ಅನುರಾಗ್ ಕಶ್ಯಪ್ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.
ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡುವುದು ಮಾತ್ರವಲ್ಲ ಕೆಲ ಸಿನಿಮಾಗಳಲ್ಲಿ ಅನುರಾಗ್ ನಟಿಸಿದ್ದಾರೆ. ಸದ್ಯ ಸುಧೀರ್ ಶ್ರೀನಿವಾಸನ್ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಟೌನ್ ಮಂದಿ ಬಗ್ಗೆ ಮತ್ತೆ ಬೇಸರ ಹೊರಹಾಕಿದ್ದಾರೆ. "ಮುಂಬೈ ಮಂದಿ ತಾನು ಆರ್ಜಿವಿ ದಾರಿಯಲ್ಲಿ ಹೋಗ್ತಿದ್ದೀನಿ, ನಾನು ಬದಲಾಗಬೇಕು ಎಂದು ಭಾವಿಸಿದ್ದಾರೆ" ಎಂದು ತಿಳಿಸಿದ್ದಾರೆ.

5 ತಿಂಗಳ ಹಿಂದೆ ತಾನು ಮುಂಬೈ ಬಿಟ್ಟು ದಕ್ಷಿಣಕ್ಕೆ ಬಂದಿರುವುದಾಗಿ'ದಿ ಹಿಂದೂ' ಪತ್ರಿಕೆಗೆ ಖಚಿತಪಡಿಸಿದ್ದರು. ಹಿಂದಿ ಫಿಲ್ಮ್ ಮೇಕರ್ಸ್ "ಸೃಜನಾತ್ಮಕ ಉತ್ಸಾಹವನ್ನು ಹೆಚ್ಚಿಸಿಕೊಳ್ಳದೇ ಬರೀ ಬಾಕ್ಸ್ ಆಫೀಸ್ ಗಳಿಕೆ ಸಿನಿಮಾಗಳ ಬೆನ್ನತ್ತಿದ್ದಾರೆ. ಅದನ್ನು ನೋಡಿ ಬೇಸರಗೊಂಡು ಮುಂಬೈನಿಂದ ವಿಮುಖರಾಗಿದ್ದಾಗಿ ಹೇಳಿಕೊಂಡಿದ್ದರು.
ಸಂದರ್ಶನದಲ್ಲಿ ಮಾತನಾಡಿರುವ ಅನುರಾಗ್ "ಆಗ ನಾನು ಖಿನ್ನತೆಗೆ ಒಳಗಾಗಿದ್ದೆ. ಈಗ ಅದರಿಂದ ಹೊರಬಂದು ಸಂತೋಷವಾಗಿದ್ದೇನೆ. ಹಿಂದಿ ಸಿನಿಮಾಗಳನ್ನು ನೋಡುವುದು ಬಿಟ್ಟಿದ್ದೇನೆ. ಹೊಸ ನಿರ್ದೇಶಕರ ಅದರಲ್ಲೂ ಮಲಯಾಳಂ ಚಿತ್ರಗಳನ್ನು ಹೆಚ್ಚು ನೋಡಲು ಆರಂಭಿಸಿದ್ದೇನೆ" ಎಂದಿದ್ದಾರೆ. "ಹಿಂದಿ ಫಿಲ್ಮ್ ಮೇಕರ್ಸ್ ನನ್ನನ್ನು ದೂರವಿಡುತ್ತಿದ್ದಾರೆ, ಕಾರಣ ನಾನು ಕೆಟ್ಟವನು ಎಂದು ಅವರು ಭಾವಿಸುತ್ತಾರೆ. ನನಗೆ ಯಾವುದೇ ಫಿಲ್ಟರ್ ಇಲ್ಲ, ನಾನು ನೇರವಾಗಿ ಮಾತನಾಡುತ್ತೇನೆ ಎಂದು ಅವರು ಭಾವಿಸುತ್ತಾರೆ. ನನ್ನೊಂದಿಗೆ ಸಂಬಂಧ ಬೆಳೆಸಿಕೊಂಡರೆ, ಒಳ್ಳೆ ಅವಕಾಶ ಸಿಗಲ್ಲ ಎಂದುಯೋಚಿಸುತ್ತಾರೆ. ಆದರೆ ಈಗ ನಾನು ಪ್ರೇರಣೆ ನೀಡುವಂತಹ ಸ್ಥಳಕ್ಕೆ ಬಂದಿದ್ದೇನೆ, ಇಲ್ಲಿನ ಜನ ನನ್ನ ಮೇಲೆ ತುಂಬಾ ಪ್ರೀತಿ ತೋರಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

"ಜನ ನನ್ನ ಮದ್ಯಪಾನದ ಬಗ್ಗೆ, ನನ್ನ ಖಿನ್ನತೆಯ ಬಗ್ಗೆ ಮಾತನಾಡುತ್ತಿದ್ದಾರೆ, ನಾನು ದಾರಿ ತಪ್ಪಿದ್ದೇನೆ ಎನ್ನುತ್ತಾರ. ಅವರು ನನ್ನನ್ನು ಉಳಿಸಿ ರಕ್ಷಕರಾಗಲು ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ನಾನೇ ಉಳಿಸಿಕೊಳ್ಳಲು ಏನು ಮಾಡಬೇಕು ಎಂದು ನನಗೆ ಹೇಳುತ್ತಿದ್ದಾರೆ. ನಾನು ಜನರೊಂದಿಗೆ ಹೆಚ್ಚು ಬೆರೆಯುತ್ತಿಲ್ಲ. ಹಾಗಾಗಿ ವ್ಯಾಯಾಮ ಮಾಡಲು ಪ್ರಾರಂಭಿಸಿದೆ. ತಾನಾಗಿಯೇ ನಾನು ಬರೆಯಲು ಶುರು ಮಾಡಿದೆ" ಎಂದಿದ್ದಾರೆ.
ನೆಟ್ಫ್ಲಿಕ್ಸ್ಗಾಗಿ 'ಮ್ಯಾಕ್ಸಿಮಮ್ ಸಿಟಿ' ಎಂಬ ವೆಬ್ ಸೀರಿಸ್ ಮಾಡಲು ಅನುರಾಗ್ ಕಶ್ಯಪ್ ಪ್ರಯತ್ನಿಸಿದ್ದರು. ಅದನ್ನು ಕೈಬಿಟ್ಟ ನಂತರ ಮಾನಸಿಕ ಆರೋಗ್ಯ ಸವಾಲುಗಳನ್ನು ಎದುರಿಸಿದ ಬಗ್ಗೆಯೂ ಅವರು ಮಾತನಾಡಿದ್ದಾರೆ. ತೆಲುಗಿನ 'ಡಕಾಯ್ಟ್'ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅನುರಾಗ್ ಕಶ್ಯಪ್ ಕಾಣಿಸಿಕೊಳ್ಳಲಿದ್ದಾರೆ. ಆದಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇನ್ನು 'ರೈಫಲ್ ಕ್ಲಬ್' ಚಿತ್ರದಲ್ಲಿನ ಅವರ ಪಾತ್ರಕ್ಕೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


Click it and Unblock the Notifications











