ಯಶ್ಗೂ ಮುನ್ನ ಬಾಲಿವುಡ್ ಸಿನಿಮಾಗಳನ್ನು ನಿರ್ಮಿಸಿದ ಕನ್ನಡ ನಿರ್ಮಾಪಕರಿವರು
ಭಾರತೀಯ ಚಿತ್ರರಂಗ ಅಂದರೆ ಬಾಲಿವುಡ್ ಎನ್ನುವ ಕಾಲವೊಂದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಿಂದಿ ಸಿನಿಮಾಗಳಿಗಿಂತ ದಕ್ಷಿಣದ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ತೆಲುಗು ಸಿನಿಮಾ ಆಸ್ಕರ್ ವೇದಿಕೆಯಲ್ಲಿ ದಾಖಲೆ ಬರೆದಿದೆ. ನಾವು ಯಾರಿಗೂ ಕಮ್ಮಿಯಿಲ್ಲ ಎಂದು ದಕ್ಷಿಣದ ಕಲಾವಿದರು, ತಂತ್ರಜ್ಞರು ಸಾಬೀತು ಮಾಡುತ್ತಿದ್ದಾರೆ. ಬಾಲಿವುಡ್ ಸ್ಟಾರ್ಗಳೇ ದಕ್ಷಿಣದ ಚಿತ್ರಗಳಲ್ಲಿ ನಟಿಸೋಕೆ ಮುಗಿಬೀಳುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಈಗ ಹಿಂದಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಬಂದು ಸಿನಿಮಾ ನಟನಾಗುವ ಕನಸು ಕಂಡಿದ್ದ ನವೀನ್ ಕುಮಾರ್ ಈಗ ಬಾಲಿವುಡ್ ಸಿನಿಮಾ ನಿರ್ಮಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಗಾಂಧಿನಗರದ ಚಿತ್ರಮಂದಿರದ ಮುಂದೆ ತಮ್ಮ ಕಟೌಟ್ ನೋಡಬೇಕು ಎಂದು ಯಶ್ ಬಯಸಿದ್ದರು. ಆದರೆ ಮುಂಬೈನಲ್ಲಿ 100 ಅಡಿಗೂ ಎತ್ತರದ ರಾಕಿಭಾಯ್ ಕಟೌಟ್ ಎದ್ದು ನಿಂತಿದ್ದು ಗೊತ್ತೇಯಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಬಾಲಿವುಡ್ ಹಾಗೂ ದಕ್ಷಿಣದ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಬಣ್ಣ ಹಚ್ಚಿದ್ದಾರೆ. ಯಶ್ ನಟಿಸೋದು ಮಾತ್ರವಲ್ಲ ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.
ಎರಡು ಭಾಗಗಳಾಗಿ ರಾಮಾಯಣ ಕಾವ್ಯವನ್ನು ತೆರೆಗೆ ತರಲಾಗುತ್ತಿದೆ. ಈಗಾಗಲೇ 2 ಚಿತ್ರಗಳ ರಿಲೀಸ್ ಡೇಟ್ ಸಹ ಘೋಷಣೆ ಆಗಿದೆ. ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ತೆರೆಗೆ ಬರಲಿದೆ. 2ನೇ ಭಾಗ 2027ರಲ್ಲಿ ದೀಪಾವಳಿ ಸಂಭ್ರಮದಲ್ಲೇ ಬಿಡುಗಡೆ ಆಗಲಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗಪ್ಪಳಿಸಲಿದೆ. ಕನ್ನಡಕ್ಕೂ ಡಬ್ ಆಗಲಿದೆ. ಮುಂದಿನ ವರ್ಷ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ. ವರ್ಷದ ಆರಂಭದಲ್ಲಿ 'ಟಾಕ್ಸಿಕ್' ಕಿಕ್ ಸಿಕ್ಕರೆ ವರ್ಷಾಂತ್ಯಕ್ಕೆ ರಾಮಾಯಣ ದರ್ಶನವಾಗಲಿದೆ.

ಅಂದಾಜು 600 ಕೋಟಿ ರೂ. ಬಜೆಟ್ನಲ್ಲಿ ರಾಮಾಯಣ ಕಾವ್ಯವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಇವತ್ತಿನ ತಂತ್ರಜ್ಞಾನ ಬಳಸಿ ಚಿತ್ರವನ್ನು ಕಣ್ಣಿಗೆ ಕಟ್ಟಿದಂತೆ ಕಟ್ಟಿಕೊಡಲು ಚಿತ್ರತಂಡ ಮುಂದಾಗಿದೆ. ಕನ್ನಡ ಕಲಾವಿದರು, ತಂತ್ರಜ್ಞರು ಬಾಲಿವುಡ್ ಸಿನಿಮಾಗಳಲ್ಲಿ ಹಿಂದೆ ಕೆಲಸ ಮಾಡಿದ್ದಾರೆ. ಈಗಾಗಲೇ ಕೆಲ ಕನ್ನಡ ನಿರ್ಮಾಪಕರು ಹಿಂದಿ ಸಿನಿಮಾಗಳನ್ನು ನಿರ್ಮಿಸುವ ಸಾಹಸಕ್ಕೂ ಕೈ ಹಾಕಿದ್ದಾರೆ.
ಬಾಲಿವುಡ್ ಅಂದರೆ ವಿಭಿನ್ನ ಪ್ರಪಂಚ. ಅಲ್ಲಿನ ಸಿನಿಮಾಗಳು, ಕಥೆಗಳು, ಸಿನಿಮಾ ಮಾಡುವ ಶೈಲಿ ಎಲ್ಲವೂ ದಕ್ಷಿಣಕ್ಕಿಂತ ಬಹಳ ಭಿನ್ನವಾಗಿರುತ್ತದೆ. ಈ ಬಗ್ಗೆ ಅಲ್ಲಿ ಕೆಲಸ ಮಾಡಿ ಬಂದಿರುವ ಕಲಾವಿದರು, ತಂತ್ರಜ್ಞರು ಹೇಳುತ್ತಿರುತ್ತಾರೆ. ಬಹಳ ನಿಧಾನವಾಗಿ ಸಿನಿಮಾಗಳನ್ನು ನಿರ್ಮಿಸಿ ತೆರೆಗೆ ತರಲಾಗುತ್ತದೆ. ಇನ್ನು ದಶಕಗಳ ಹಿಂದೆ ನೂರಾರು ಕೋಟಿ ಸುರಿದು ಹಿಂದಿ ಸಿನಿಮಾಗಳನ್ನು ನಿರ್ಮಿಸಲು ಲೆಕ್ಕಾಚಾರ ಶುರುವಾಯಿತು. ಹಾಗಾಗಿ ಬಾಲಿವುಡ್ ಸಿನಿಮಾ ಎಂದರೆ ಹೆಚ್ಚು ಬಂಡವಾಳ ಬೇಕು ಎನ್ನುವಂತಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಕೂಡ 500 ಕೋಟಿ ರೂ. ಬಜೆಟ್ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾಗಳನ್ನು ತೆರೆಗೆ ತರಲಾಗುತ್ತಿದೆ.
ಗೊತ್ತಿಲ್ಲದ ಜಾಗಕ್ಕೆ ಹೋಗಿ ಸಿನಿಮಾ ನಿರ್ಮಾಣ ಮಾಡಿ ರಿಲೀಸ್ ಮಾಡುವುದು ಸವಾಲಿನ ಕೆಲಸ. ಮೋಸ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಈಗ ವಾತಾವರಣ ಬದಲಾಗಿದೆ. ಬಾಲಿವುಡ್ ಸಿನಿಮಾ ನಿರ್ಮಾಣ ಎಂದರೆ ಹೆದರುತ್ತಿದ್ದ ಕಾಲದಲ್ಲಿ ಕನ್ನಡದ ಕೆಲವರು ಅಲ್ಲಿ ಸಿನಿಮಾ ನಿರ್ಮಿಸುವ ಧೈರ್ಯ ಮಾಡಿದ್ದರು. ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
ಎನ್. ವೀರಸ್ವಾಮಿ
ಕನ್ನಡ ಚಿತ್ರರಂಗ ಕಂಡ ಜನಪ್ರಿಯ ನಿರ್ಮಾಪಕರು ಎನ್. ವೀರಸ್ವಾಮಿ. ನಟ, ನಿರ್ಮಾಪಕ, ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ತಂದೆ ವೀರಾಸ್ವಾಮಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಕೆಲ ಚಿತ್ರಗಳಿಗೆ ಫೈನಾನ್ಸ್ ಕೂಡ ಮಾಡುತ್ತಿದ್ದರು. ಕನ್ನಡದಲ್ಲಿ ಯಶಸ್ಸು ಕಂಡು 'ಚಕ್ರವ್ಯೂಹ' ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡಿದ್ದರು. ಆಗ ರವಿಚಂದ್ರನ್ ಕೂಡ ತಂದೆ ಜೊತೆಗೆ ಕೈ ಜೋಡಿಸಿದ್ದರು.
'ಇಂಕ್ವಿಲಾಬ್' ಹೆಸರಿನಲ್ಲಿ ಚಿತ್ರ ನಿರ್ಮಾಣವಾಗಿತ್ತು. ಅಮಿತಾಬ್ ಬಚ್ಚನ್ ಹಾಗೂ ಶ್ರೀದೇವಿ ಲೀಡ್ ರೋಲ್ಗಳಲ್ಲಿ ನಟಿಸಿದ್ದರು. ತೆಲುಗು ನಿರ್ದೇಶಕ ಟಿ. ರಾಮಾರಾವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಉತ್ಪಾಲ್ ದತ್, ಶಕ್ತಿ ಕಪೂರ್, ನಿರುಪ್ ರಾಯ್, ಪೂರ್ಣಿಮಾ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.
ದ್ವಾರಕೀಶ್
ಕನ್ನಡ, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ 50 ಸಿನಿಮಾಗಳನ್ನು ದ್ವಾರಕೀಶ್ ನಿರ್ಮಾಣ ಮಾಡಿದ್ದರು. ಅವತ್ತಿನ ಕಾಲಕ್ಕೆ ಭಾರೀ ಸಾಹಸಗಳಿಗೆ ಕೈ ಹಾಕಿದ್ದರು. ತಮಿಳಿನ 'ಮಲೈಯೂರ್ ಮಾಂಬಟ್ಟಿಯನ್' ಚಿತ್ರವನ್ನು ಹಿಂದಿಗೆ ರೀಮೆಕ್ ಮಾಡಿದ್ದರು. 'ಗಂಗ್ವಾ' ಚಿತ್ರದಲ್ಲಿ ರಜನಿಕಾಂತ್, ಶಬಾಆ ಅಜ್ಮಿ ನಟಿಸಿದ್ದರು. ತಮಿಳು ನಿರ್ದೇಶಕ ರಾಜಶೇಖರ್ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದರು.
'ಆಫ್ರಿಕಾದಲ್ಲಿ ಶೀಲ' ದ್ವಾರಕೀಶ್ ಕನಸಿನ ಸಿನಿಮಾ. 30 ವರ್ಷಗಳ ಹಿಂದೆ ಆಫ್ರಿಕಾ ಕಾಡಿನಲ್ಲಿ ಇಡೀ ಸಿನಿಮಾ ಚಿತ್ರೀಕರಣ ಮಾಡಿದ್ದರು. ಸ್ವತಃ ದ್ವಾರಕೀಶ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ತೆಲುಗು, ತಮಿಳಿಗೂ ಡಬ್ ಮಾಡಿ ರಿಲೀಸ್ ಮಾಡಿದ್ದರು. ಆದರೆ ಸಿನಿಮಾ ಗೆಲ್ಲಲಿಲ್ಲ. ಮರುವರ್ಷ ಹಿಂದಿಯಲ್ಲಿ ಚಿತ್ರವನ್ನು ರೀಮೆಕ್ ಮಾಡುವ ಸಾಹಸ ಮಾಡಿದ್ದರು ದ್ವಾರಕೀಶ್.
ರಾಕ್ಲೈನ್ ವೆಂಕಟೇಶ್
ಸಲ್ಮಾನ್ ಖಾನ್ ನಟನೆಯ 'ಭಜರಂಗಿ ಭಾಯ್ಜಾನ್' ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. ಈ ಚಿತ್ರಕ್ಕೆ ರಾಕ್ಲೈನ್ ವೆಂಕಟೇಶ್ ಹಣ ಹೂಡಿದ್ದರು. ರಾಜಮೌಳಿ ತಂದೆ ಕಥೆಗಾರ ವಿಜಯೇಂದ್ರ ಪ್ರಸಾದ್ ಜೊತೆ ರಾಕ್ಲೈನ್ ವೆಂಕಟೇಶ್ ಅವರಿಗೆ ಉತ್ತಮ ಒಡನಾಟ ಇತ್ತು. ಹಾಗಾಗಿ ಈ ಕಥೆಯನ್ನು ಸಿನಿಮಾ ಮಾಡುವ ಅವಕಾಶ ಸಿಕ್ಕಿತ್ತು. ಮೊದಲು ಆಮೀರ್ ಖಾನ್ಗೆ ಕಥೆ ಹೇಳಿದ್ದರು.
ಆಮೀರ್ ಖಾನ್ ಒಪ್ಪದೇ ಇದ್ದಾಗ ಸಲ್ಮಾನ್ ಖಾನ್ ಸಿನಿಮಾ ಮಾಡುವಂತಾಯಿತು. ರಾಕ್ಲೈನ್ ವೆಂಕಟೇಶ್ ಜೊತೆ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಕಬೀರ್ ಖಾನ್ ಕೂಡ ಚಿತ್ರ ನಿರ್ಮಾಣಕ್ಕೆ ಕೈ ಜೋಡಿಸಿದ್ದರು. ಸಿನಿಮಾ ಸೂಪರ್ ಹಿಟ್ ಆಗಿ ಗೆದ್ದಿತ್ತು. ಸದ್ಯ ಚಿತ್ರದ ಸೀಕ್ವೆಲ್ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಈಗಾಗಲೇ ಸಿನಿಮಾ ಮಾಡುವ ಬಗ್ಗೆ ಮಾತುಕತೆ ಶುರುವಾಗಿದೆ. ಸೋಲಿನ ಸುಳಿಗೆ ಸಿಲುಕಿರುವ ಸಲ್ಲು ಮತ್ತೆ ಭಾಯಿಜಾನ್ ಆಗಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ.
ರಮೇಶ್ ರೆಡ್ಡಿ
ರಾಕ್ಲೈನ್ ವೆಂಕಟೇಶ್ ಬಳಿಕ ಇತ್ತೀಚೆಗೆ ಕನ್ನಡ ನಿರ್ಮಾಪಕರು ಹಿಂದಿ ಸಿನಿಮಾ ಮಾಡುವ ಸಾಹಸ ಮಾಡುತ್ತಿರಲಿಲ್ಲ. ನಿರ್ಮಾಪಕ ರಮೇಶ್ ರೆಡ್ಡಿ 2 ವರ್ಷದ ಹಿಂದೆ 'ಘುಸ್ಪೈಥಿಯಾ' ಚಿತ್ರ ನಿರ್ಮಾಣ ಮಾಡಿದ್ದು ವಿಶೇಷ. ತಮಿಳಿನ 'ತಿರುಟ್ಟು ಪಯಲೇ'-2 ಚಿತ್ರದ ರೀಮೆಕ್ ಇದು. ಸುಶಿ ಗಣೇಶ್ ನಿರ್ದೇಶನದ ಚಿತ್ರದಲ್ಲಿ ವಿನೀತ್, ಊರ್ವಶಿ ರೌಟೇಲಾ ಹಾಗೂ ಅಕ್ಷಯ್ ಒಬೆರಾಯ್ ನಟಿಸಿದ್ದರು. ರಮೇಶ್ ರೆಡ್ಡಿ ಕನ್ನಡದಲ್ಲಿ 'ಗಾಳಿಪಟ-2', 'ಉಪ್ಪು ಹುಳಿ ಖಾರ', '45' ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











