ಮೊದಲ 'ರಾಮಾಯಣ' ಚಿತ್ರದಲ್ಲಿ ರಾಮ, ಸೀತೆ ಪಾತ್ರ ಮಾಡಿದ್ದು ಒಬ್ರೇನಾ; ಆ ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು
ಸದ್ಯ ಭಾರತೀಯ ಚಿತ್ರರಂಗದಲ್ಲೀಗ ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಶ್ರೀರಾಮನ ಪಾತ್ರ ಪರಿಚಯದ ಸಣ್ಣ ಝಲಕ್ ನೋಡಿ ಸಿನಿರಸಿಕರು ಪರ, ವಿರೋಧ ಚರ್ಚೆ ನಡೆಸುತ್ತಿದ್ದಾರೆ. ಬೆಳ್ಳಿಪರದೆ ಮೇಲೆ 'ರಾಮಾಯಣ' ಕಾವ್ಯವನ್ನು ಕಟ್ಟಿಕೊಟ್ಟವರು ಯಾರು? ಯಾರೆಲ್ಲಾ ನಟಿಸಿದ್ದರು ಗೊತ್ತಾ?
ವಾಲ್ಮೀಕಿ ರಾಮಾಯಣ ಆಧರಿಸಿ ಸಾಕಷ್ಟು ಜನ ರಾಮಾಯಣ ಕಾವ್ಯಗಳನ್ನು ರಚಿಸಿದ್ದಾರೆ. ಬಳಿಕ ನಾಟಕಗಳಾಗಿ ರಾಮಾಯಣ ಕಥೆ ಪ್ರದರ್ಶನವಾಗಲು ಆರಂಭವಾಯಿತು. ಸಿನಿಮಾ ಮಾಧ್ಯಮ ಉಗಮವಾದ ಬಳಿಕ ಪೌರಾಣಿಕ ಕಾವ್ಯಗಳನ್ನು ತೆರೆಮೇಲೆ ತರುವ ಪ್ರಯತ್ನಗಳು ನಡೀತು. ರಂಗಭೂಮಿಯಲ್ಲಿ ಕಟ್ಟಿಕೊಡುತ್ತಿದ್ದ ನಾಟಕಗಳನ್ನೇ ಮೊದಲಿಗೆ ಬೆಳ್ಳಿ ಪರದೆ ಮೇಲೆ ನೋಡುವಂತಾಯಿತು. ರಂಗಭೂಮಿ ಹಿನ್ನೆಲೆಯ ಕಲಾವಿದರು, ತಂತ್ರಜ್ಞರು ಚಿತ್ರರಂಗ ಪ್ರವೇಶಿಸಿ ಆರಂಭದಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದರು.

1917ರಲ್ಲಿ 'ಲಂಕಾ ದಹನ್' ಎಂಬ ಮೂಕಿ ಚಿತ್ರ ಬಂದಿತ್ತು. ಭಾರತೀಯ ಸಿನಿಮಾ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಟೈಟಲ್ ಹೇಳುವಂತೆ ಇದು 'ರಾಮಯಾಣ'ದಲ್ಲಿ ಹನುಮಂತ ಲಂಕೆಯನ್ನು ದಹನ ಮಾಡುವ ಚಿತ್ರಕಥೆ ಹೊಂದಿತ್ತು. ಅವತ್ತಿಗೆ ತೆರೆಮೇಲೆ ಚಿತ್ರ ನೋಡಿದವರು ದಂಗಾಗಿದ್ದರು. ಚಿತ್ರಮಂದಿರಗಳು ದೇವಾಲಯದಂತಾಗಿತ್ತು. ಜನ ಚಪ್ಪಲಿ ಹೊರಗೆ ಬಿಟ್ಟು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಅಚ್ಚರಿಗೊಂಡಿದ್ದರು.
ಸ್ವತಃ ದಾದಾ ಸಾಹೇಬ್ ಫಾಲ್ಕೆ 'ಲಂಕಾ ದಹನ್' ಸಿನಿಮಾ ನಿರ್ಮಾಣ ಮಾಡಿದ್ದರು. ಸಿನಿಮಾ ನೋಡಲು ಭಾರೀ ಕ್ರೇಜ್ ಇತ್ತು. ಮುಂಬೈನಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಜನ ಟಿಕೆಟ್ಗಾಗಿ ಗಲಾಟೆ ಮಾಡಿದ್ದರು. ಟಿಕೆಟ್ ಕೌಂಟರ್ಗಳಿಂದ ನಾಣ್ಯಗಳನ್ನು ಗೋಣಿ ಚೀಲಗಳಲ್ಲಿ ತುಂಬಿ ಎತ್ತಿನಗಾಡಿಗಳಲ್ಲಿ ನಿರ್ಮಾಪಕರ ಕಚೇರಿಗೆ ಸಾಗಿಸಿದ್ದರು. ಅಲ್ಲಿವರೆಗೂ ರಂಗದ ಮೇಲಿನ ನಾಟಕಗಳನ್ನು ಮಾತ್ರ ನೋಡಿದ್ದ ಜನ ಪರದೆ ಮೇಲೆ ಚಲಿಸುವ ಚಿತ್ರಗಳನ್ನು ನೋಡಿ ಪುಳಕಿತರಾಗಿದ್ದರು. ಅದರಲ್ಲೂ ರಾಮಾಯಣದ ಹನುಮಂತನ ಸಾಹಸವನ್ನು ಕಣ್ಣಿಗೆ ಕಟ್ಟಿದಂತೆ ನೋಡಿ ಬೆರಗಾಗಿದ್ದರು.
ನಟ ಅನ್ನಾ ಸಲುಂಕೆ ಈ ಚಿತ್ರದಲ್ಲಿ ಶ್ರೀರಾಮ ಹಾಗೂ ಸೀತೆಯ ಪಾತ್ರಗಳಲ್ಲಿ ನಟಿಸಿದ್ದರು. ಅಂದರೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಟಕಗಳಲ್ಲಿ ಪುರುಷರೇ ಮಹಿಳಾ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದರು. ಸಿನಿಮಾ ಬಂದ ಆರಂಭದಲ್ಲಿ ಅದು ಮುಂದುವರೆಯಿತು. ಅನ್ನಾ ಸಲುಂಕೆ ಹೀಗೆ ಕೆಲ ಸಿನಿಮಾಗಳಲ್ಲಿ ಸ್ತ್ರೀ ಪಾತ್ರಗಳಲ್ಲಿ ನಟಿಸಿದ್ದರು. ಇದೇ ಸಿನಿಮಾ ಮೂಲಕ ದ್ವಿಪಾತ್ರದಲ್ಲಿ ನಟಿಸಿದ ಭಾರತದ ಮೊದಲ ನಟ ಎನ್ನುವ ಖ್ಯಾತಿಗೆ ಅವರು ಪಾತ್ರರಾಗಿದ್ದರು.
ಹನುಮಂತನ ಪಾತ್ರದಲ್ಲಿ ಗಣಪತ್ ಜಿ. ಶಿಂಧೆ ನಟಿಸಿದ್ದರು. ಡಿ.ಡಿ. ದಾಬ್ಕೆ ಹಾಗೂ ಮಂದಾಕಿನಿ ಫಾಲ್ಕೆ ಕೂಡ ತಾರಾಗಣದಲ್ಲಿದ್ದರು. ಯೂಟ್ಯೂಬ್ನಲ್ಲಿ ಇವತ್ತಿಗೂ 'ಲಂಕಾ ದಹನ್' ಮೂಕಿ ಚಿತ್ರದ ದೃಶ್ಯಗಳನ್ನು ನೋಡಬಹುದು. ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಕಾವ್ಯ ಆಧರಿಸಿದ ಚಿತ್ರಗಳಿಗೂ 100 ವರ್ಷಗಳ ಇತಿಹಾಸವಿದೆ. 'ಲಂಕಾ ದಹನ್' ಬಳಿಕ ಸಾಕಷ್ಟು ಜನ ರಾಮಾಯಣ ಕಾವ್ಯವನ್ನು ತೆರೆಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದರು. ಟಾಕಿ ಸಿನಿಮಾ ಬಂದ ಮೇಲೆ ಇದು ಮತ್ತಷ್ಟು ಹೆಚ್ಚಾಗಿತ್ತು. ತಂತ್ರಜ್ಞಾನ ಬೆಳದಂತೆ ಮತ್ತಷ್ಟು ರೋಚಕವಾಗಿ ದೃಶ್ಯಗಳನ್ನು ಕಟ್ಟಿಕೊಡುವ ಪ್ರಯತ್ನ ಮುಂದುವರಿಯಿತು.
'ಲಂಕಾ ದಹನ್' ಬಳಿಕ 'ರಾಮಾಯಣ' ಪ್ರಧಾನ ಕಥೆಯನ್ನು ಆಧರಿಸಿ 40ಕ್ಕೂ ಅಧಿಕ ಸಿನಿಮಾಗಳು ನಿರ್ಮಾಣವಾಗಿವೆ. ಇನ್ನು ಹನುಮಂತ, ಲವ-ಕುಶ, ರಾವಣ ಪಾತ್ರಗಳನ್ನು ಆಧರಿಸಿ ಕೂಡ ಸಿನಿಮಾಗಳನ್ನು ನಿರ್ಮಿಸಲಾಗಿದೆ. ಆನಿಮೇಷನ್, ಶಾರ್ಟ್ ಫಿಲ್ಮ್ಸ್ ಕೂಡ ಸೇರಿಸಿದರೆ 150ಕ್ಕೂ ಅಧಿಕ ಸಿನಿಮಾಗಳಲ್ಲಿ ರಾಮಾಯಣ ಕಾವ್ಯ ರಾರಾಜಿಸಿದೆ. 1934ರಲ್ಲಿ ಬಂದಿದ್ದ ಬೆಂಗಾಲಿಯಲ್ಲಿ 'ಸೀತಾ' ಎಂಬ ಸಿನಿಮಾ ಬಂದಿತ್ತು. ರಣ್ಬೀರ್ ಕಪೂರ್ ತಾತ ಪೃಥ್ವಿರಾಜ್ ಕಪೂರ್ ಈ ಚಿತ್ರದಲ್ಲಿ ಶ್ರೀರಾಮನ ಪಾತ್ರ ನಿಭಾಯಿಸಿದ್ದರು.
ನಮಿತ್ ಮಲ್ಹೋತ್ರಾ ನಿರ್ಮಾಣದ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಕಪೂರ್ ಶ್ರೀರಾಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈಗಾಗಲೇ ಟೀಸರ್ನಲ್ಲಿ ಸಣ್ಣ ಝಲಕ್ ನೋಡಿದ್ದೇವೆ. ದೀಪಾವಳಿ ಸಂಭ್ರಮದಲ್ಲಿ ಮೊದಲ ಭಾಗ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











