ಚಿತ್ರರಂಗದಲ್ಲಿ ಹೊಸ ನಟಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾರೆ - ತನುಶ್ರೀ ದತ್ತಾ ಶಾಕಿಂಗ್ ಹೇಳಿಕೆ
ಮೊದಲೆಲ್ಲಾ ಚಿತ್ರರಂಗ ಅಂದರೆ ಅರೇ, ಅಲ್ಲಿ ನಮ್ಮಂತೋರು ಎಲ್ಲಿ ಬದುಕೋಕಾಗುತ್ತೆ, ದುಡ್ಡಿದ್ದವರಿಗೆ ಮಾತ್ರ ಅದು ಹೇಳಿ ಮಾಡಿಸಿದ ಪ್ರೊಫೆಷನ್ ಎಂದು ಅನೇಕರು ಹೇಳುತ್ತಿದ್ದರು. ಇಂತಹ ಹುಚ್ಚು ಆಲೋಚನೆಯನ್ನು ತಲೆಯಿಂದ ತೆಗೆದು ಹಾಕು ಎಂದು ತಮ್ಮ ಮಕ್ಕಳಿಗೆ ಹಿರಿಯರು ಹೇಳುತ್ತಿದ್ದರು.
ಇನ್ನು, ಹೆಣ್ಣು ಮಕ್ಕಳ ಪಾಲಿಗಂತೂ ಚಿತ್ರರಂಗ ಎನ್ನುವುದು ಗಗನ ಕುಸುಮವಾಗಿತ್ತು. ಚಿತ್ರರಂಗ ಹೆಣ್ಣು ಮಕ್ಕಳಿಗೆ ಸುರಕ್ಷಿತವಾದ ಸ್ಥಳವಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಅವಕಾಶ ನೀಡುವ ನೆಪದಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಾರೆ ಎಂದೇ ಅನೇಕರು ಅಂದುಕೊಂಡಿದ್ದರು. ಇಷ್ಟೇ ಅಲ್ಲ ಬೆಳ್ಳಿತೆರೆಯ ಮೇಲೆ ಚಿತ್ರ ನೋಡಿ ಖುಷಿ ಪಡುತ್ತಿದ್ದ ಹಲವರು ಕಲಾವಿದರನ್ನು ಅದರಲ್ಲಿಯೂ ಚಿತ್ರರಂಗದಲ್ಲಿನ ನಾಯಕಿಯರನ್ನು ಮತ್ತು ಮಹಿಳೆಯರನ್ನು ಗೌರವದಿಂದ ಕಾಣುತ್ತಿರಲಿಲ್ಲ. ಬದಲಿಗೆ ವೇಶ್ಯೆಯರು ಎಂದು ಭಾವಿಸುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ. ಬದಲಾದ ಕಾಲದಲ್ಲಿ ಚಿತ್ರರಂಗದವರ ಮನಸ್ಥಿತಿ ಮತ್ತು ಚಿತ್ರರಂಗದ ಮನಸ್ಥಿತಿ ಬದಲಾಗಿದೆ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ, ಕಾಲ ಎಷ್ಟೇ ಬದಲಾದರೂ ಚಿತ್ರರಂಗ ಇವತ್ತು ಕೂಡ ಸುರಕ್ಷಿತವಲ್ಲ ಅನ್ನೋದೇ ಸತ್ಯ. ಇಂತಹದ್ದೊಂದು ಬಾಂಬ್ನ ಬಾಲಿವುಡ್ ಮೇಲೆ ತನುಶ್ರೀ ದತ್ತಾ ಎಸೆದಿದ್ದಾರೆ.
ಹೌದು, ತನುಶ್ರೀ ದತ್ತಾ..ಒಂದು ಕಾಲದ ಪಡ್ಡೆಹುಡುಗರ ಕನಸಿನ ರಾಣಿ. ಇವರ ''ಆಶಿಕ್ ಬನಾಯಾ ಆಪ್ನೇ'' ಚಿತ್ರವನ್ನು ಅದೆಷ್ಟು ಜನ ಅದೆಷ್ಟು ಬಾರಿ ನೋಡಿದ್ದಾರೋ ಗೊತ್ತಿಲ್ಲ. ಇದೊಂದೇ ಚಿತ್ರದ ಮೂಲಕ ಖ್ಯಾತಿಯ ಶಿಖರಕ್ಕೇರಿದ ತನುಶ್ರೀ ದತ್ತಾ 2018ರ ಆಚೀಚೆ ನಾನಾ ಪಾಟೇಕರ್ ಮೇಲೆ ಮೀಟೂ ಆರೋಪ ಮಾಡಿದ್ದರು. ಹಾಡೊಂದರ ಚಿತ್ರೀಕರಣ ಸಮಯದಲ್ಲಿ 'ನಾನಾ ಪಾಟೇಕರ್' ತನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದರು ಎಂದು ಹೇಳಿದ್ದರು. ತಮ್ಮ ಈ ಹೇಳಿಕೆಯಿಂದ ತನುಶ್ರೀ ದತ್ತಾ ಆ ಕಾಲದಲ್ಲಿ ದೊಡ್ಡ ಸಂಚಲನವೇ ಸೃಷ್ಟಿ ಮಾಡಿದ್ದರು. ಆ ನಂತರ ಬಾಲಿವುಡ್ದಿಂದ ಕಣ್ಮರೆಯೂ ಆದರು.
ಇಂಥಾ ತನುಶ್ರೀ ದತ್ತಾ ಚಿತ್ರರಂಗದಲ್ಲಿ ಹೊಸ ನಟಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಾರೆ ಎಂದು ಹೇಳಿದ್ದಾರೆ. ಈ ಕುರಿತು ''ಮೇರಿ ಸಖಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತನುಶ್ರೀ ದತ್ತಾ ಚಿತ್ರರಂಗಕ್ಕೆ ಬರುವ ಹೊಸಬರನ್ನು ಇಲ್ಲಿ ಸುಖಾಸುಮ್ಮನೆ ಕೆಲವರು ಹೊಗಳುತ್ತಾರೆ, ಅವರಲ್ಲಿ ಪ್ರತಿಭೆ ಇದೆಯಾ, ಇಲ್ಲವಾ..? ಎನ್ನುವುದು ಕೂಡ ಅವರಿಗೆ ಗೊತ್ತಿರಲ್ಲ. ಆದರೆ.. ನೀವು ಮುಂದೆ ದೊಡ್ಡ ಸ್ಟಾರ್ ನಟಿಯಾಗ್ತೀರಾ, ಆ ಗುಣ ನಿಮ್ಮಲ್ಲಿ ಇದೆ ಎಂದು ಹೇಳುತ್ತಾರೆ. ನೀವು ಸುಂದರವಾಗಿದ್ದೀರಾ.. ನಿಮ್ಮಲ್ಲಿ ತುಂಬಾನೇ ಪ್ರತಿಭೆ ಇದೆ ಎಂದೆಲ್ಲಾ ಮಾತನಾಡಿ ಪ್ರಚೋದಿಸುತ್ತಾರೆ ಎಂದು ಹೇಳಿದ್ದಾರೆ.
ನಾಲ್ಕು ಜನ ಬಂದು ನಿಮ್ಮನ್ನು ಹೊಗಳುತ್ತಿದ್ದಾರೆ ಎಂದರೆ ಅದು ನಿಮ್ಮ ದಾರಿ ತಪ್ಪಿಸುವ ಪ್ರಯತ್ನ ಎನ್ನುವುದು ನಿಮಗೆ ಅರ್ಥವಾಗಬೇಕು ಎಂದು ಹೇಳಿರುವ ತನುಶ್ರೀ ಮೊದಲು ಹಾಡಿ ಹೊಗಳುತ್ತಾರೆ, ಆ ನಂತರ ಅವರನ್ನು ಭೇಟಿ ಮಾಡಿ, ಇವರನ್ನು ಭೇಟಿ ಮಾಡಿ ಎನ್ನುತ್ತಾರೆ. ಈ ಸಮಯದಲ್ಲಿ ತಾಳ್ಮೆ ತುಂಬಾ ಮುಖ್ಯ, ತುಂಬಾನೇ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಹೇಳಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ಬಾಲ್ಯದಲ್ಲಿ ಪೋಷಕರು ಕಲಿಸುವ ಎಚ್ಚರಿಕೆಯ ಪಾಠವನ್ನು ಕೂಡ ನೆನಪು ಮಾಡಿಕೊಂಡಿರುವ ತನುಶ್ರೀ ದತ್ತಾ ಬಾಲ್ಯದಲ್ಲಿ ಅಪರಿಚಿತರಿಂದ ದೂರ ಇರುವಂತೆ ನಮಗೆ ಹೇಳಲಾಗುತ್ತೆ, ಅಪರಿಚಿತರು ತೋರಿಸುವ ಚಾಕ್ಲೇಟ್ ಆಸೆಗೆ ಬಲಿಯಾಗಬೇಡ ಎಂದು ಹೇಳಲಾಗುತ್ತೆ, ಆದರೆ.. ದೊಡ್ಡವರಾದ ಮೇಲೆ ಈ ಪಾಠ ಮರೆತು ಹೋಗುತ್ತೆ ಎಂದು ಹೇಳಿದ್ದಾರೆ. ನಾವು ದೊಡ್ಡವರಾದ ಮೇಲೆ ನಮ್ಮ ಕಣ್ಣೆದುರು ನಿಜವಾದ ಚಾಕ್ಲೇಟ್ ಇರುವುದಿಲ್ಲ, ಆದರೆ ನಮ್ಮ ಆಸೆ, ಆಕಾಂಕ್ಷೆ ಮತ್ತು ಕನಸುಗಳ ಜೊತೆ ಇಲ್ಲಿ ಹಲವರು ಆಟ ಆಡುತ್ತಾರೆ ಎಂದಿದ್ದಾರೆ.
ಕನಸೊತ್ತು ಬರುವ ಹಲವು ಯುವಕ ಮತ್ತು ಯುವತಿಯರನ್ನು ಇಲ್ಲಿ ಉಪಯೋಗಿಸಿಕೊಳ್ಳುತ್ತಾರೆ, ಅವರಿಗೆ ಕಿರುಕುಳ ನೀಡುತ್ತಾರೆ, ಆ ನಂತರ ಅವರನ್ನು ಅಕ್ಷರಶಃ ತಿಪ್ಪೆಗೆ ಎಸೆದಂತೆ ಎಸೆಯುತ್ತಾರೆ ಎಂದು ಹೇಳಿರುವ ತನುಶ್ರೀ ಇದೆಲ್ಲದರಿಂದ ನೊಂದು ಬೆಂದು ಕೆಲವರು ರಾಜಿ ಮಾಡಿಕೊಳ್ಳುತ್ತಾರೆ, ಇನ್ನೂ ಕೆಲವರು ಮರಳಿ ಊರು ಸೇರುತ್ತಾರೆ, ಮತ್ತೂ ಕೆಲವರು ವೇಶ್ಯಾವಾಟಿಕೆಯ ಬಲೆಗೆ ಬೀಳುತ್ತಾರೆ ಎಂದು ಹೇಳಿದ್ದಾರೆ.
ಈ ಕರಾಳ ಕಥೆಗಳು ಯಾವತ್ತು ಕೂಡ ಹೊರಬರುವುದಿಲ್ಲ. ಯಾಕೆಂದರೆ ಇಲ್ಲಿ ಕೇವಲ ಯಶಸ್ಸಿನ ಕಥೆಗಳನ್ನು ಮಾತ್ರ ಹೊರ ಜಗತ್ತಿಗೆ ಬಿಂಬಿಸಲಾಗುತ್ತೆ ಎಂದು ಹೇಳಿರುವ ತನುಶ್ರೀ ದತ್ತಾ ಉದ್ಯಮಕ್ಕೆ ಬರುವ ಹೊಸಬರನ್ನು ಎಚ್ಚರಿಸುವ ಉದ್ದೇಶದಿಂದ ಈ ವಿಷಯಗಳ ಬಗ್ಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ. ನನ್ನಿಂದ ನಾಲ್ಕು ಜೀವ ಉಳಿದರೆ ಅದೇ ನನಗೆ ದೊಡ್ಡ ವಿಷಯ ಎಂದಿದ್ದಾರೆ. ಸದ್ಯ ತನುಶ್ರೀ ದತ್ತಾ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬಣ್ಣದ ಲೋಕ ತನುಶ್ರೀ ದತ್ತಾ ಅವರ ಈ ಮಾತು ಕೇಳಿ ಬೆಚ್ಚಿ ಬಿದ್ದಿದೆ.


Click it and Unblock the Notifications











