ಆದಿಪುರುಷ್ ಡಬ್ಬಾ ಎಂದವನಿಗೆ ಥಳಿಸಿದ ಪ್ರಭಾಸ್ ಫ್ಯಾನ್ಸ್; ಏಟು ತಿಂದವ ನಂತರ ಕೊಟ್ಟ ಉತ್ತರಕ್ಕೆ ಎಲ್ರೂ ಫಿದಾ!
ಇಂದು ( ಜೂನ್ 16 ) ಭಾರತದ ಅತಿ ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಯಾಗಿದೆ. ಮೂಲ ಹಿಂದಿ ಚಿತ್ರವಾಗಿರುವ ಆದಿಪುರುಷ್ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಆಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ.
ಚಿತ್ರಕ್ಕೆ ಓಂ ರಾವತ್ ನಿರ್ದೇಶನವಿದ್ದು, ಚಿತ್ರ ರಾಮಾಯಣ ಕಥೆಯ ಆಧರಿತವಾಗಿದೆ. ಚಿತ್ರದಲ್ಲಿ ರಾಮನ ಪಾತ್ರವನ್ನು ಪ್ರಭಾಸ್ ನಿರ್ವಹಿಸಿದ್ದು, ಸೀತೆಯಾಗಿ ಕೃತಿ ಸೆನನ್ ಕಾಣಿಸಿಕೊಂಡಿದ್ದಾರೆ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಅಭಿನಯಿಸಿದ್ದಾರೆ.

ಇನ್ನು ಮೊದಲಿಗೆ ಟೀಸರ್ ಬಿಡುಗಡೆ ಮಾಡುವ ಮೂಲಕ ವಿಎಫ್ಎಕ್ಸ್ ಹಾಗೂ ಮೇಕಿಂಗ್ ವಿಚಾರಕ್ಕಾಗಿ ಕೆಟ್ಟದಾಗಿ ಟ್ರೋಲ್ ಆಗಿದ್ದ ಆದಿಪುರುಷ್ ಚಿತ್ರತಂಡ ಬಳಿಕ ಮತ್ತಷ್ಟು ಸಮಯ ತೆಗೆದುಕೊಂಡು ಹಲವು ಬದಲಾವಣೆಗಳೊಂದಿಗೆ ಮತ್ತೆ ಟ್ರೈಲರ್ ಮೂಲಕ ಸಿನಿ ರಸಿಕರ ಮುಂದೆ ಬಂದಿತ್ತು.
ಟೀಸರ್ನಲ್ಲಿ ಟ್ರೋಲ್ ಆಗಿದ್ದ ಆದಿಪುರುಷ್ ತಂಡ ಈ ಬಾರಿ ಮೆಚ್ಚುಗೆ ಗಳಿಸಿತ್ತು. ಟೀಸರ್ಗೆ ಹೋಲಿಕೆ ಮಾಡಿದರೆ ಟ್ರೈಲರ್ ಹಾಗೂ ಹಾಡುಗಳು ಚೆನ್ನಾಗಿವೆ ಎಂದಿದ್ದ ಸಿನಿ ರಸಿಕರು ಒಂದೊಮ್ಮೆ ಆದಿಪುರುಷ್ ನೋಡಬೇಕು ಎಂದು ನಿಶ್ಚಯಿಸಿದ್ದರು. ಇನ್ನು ಚಿತ್ರದ ಮುಂಗಡ ಬುಕಿಂಗ್ ಭಾನುವಾರವೇ ಆರಂಭಗೊಂಡಿದ್ದು, ಚಿತ್ರ ನೋಡಬೇಕೆಂಬ ಹಂಬಲವನ್ನು ಹೊಂದಿದ್ದವರು ಮೊದಲ ದಿನದ ಮೊದಲ ಪ್ರದರ್ಶನವನ್ನು ವೀಕ್ಷಿಸಿದ್ದಾರೆ.
ಚಿತ್ರವನ್ನು ವೀಕ್ಷಿಸಿ ಹೊರಬಂದ ಪ್ರಭಾಸ್ ಅಭಿಮಾನಿಗಳು ನಿರೀಕ್ಷೆಯಂತೆ ಚಿತ್ರ ಸೂಪರ್, ಅತ್ಯದ್ಭುತ ಎಂಬ ಮಾತುಗಳನ್ನು ಆಡುತ್ತಿದ್ದರೆ, ಸಾಮಾನ್ಯ ಸಿನಿ ಪ್ರೇಕ್ಷಕ ಅದ್ಭುತವಾಗೇನೂ ಇಲ್ಲ, ಓಕೆ ಓಕೆ, ಒಮ್ಮೆ ನೋಡಬಹುದು ಹಾಗೂ ಚೆನ್ನಾಗಿಲ್ಲ ಎಂಬ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಹೈದರಾಬಾದ್ನ ಪ್ರಸಾದ್ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ಆದಿಪುರುಷ್ ಫಸ್ಟ್ ಶೋ ವೀಕ್ಷಿಸಿದ್ದ ಚಿತ್ರ ಪ್ರೇಮಿಗಳು ಸಹ ಹೊರಬಂದು ಮೀಡಿಯಾ ಮುಂದೆ ಚಿತ್ರ ಹೇಗಿದೆ ಎಂಬುದನ್ನು ತಿಳಿಸಿದ್ದಾರೆ. ಈ ಪೈಕಿ ಓರ್ವ ಚಿತ್ರ ರಸಿಕ ಹೊರಬಂದು 'ಆದಿಪುರುಷ್ ನನಗೆ ಇಷ್ಟವಾಗಲಿಲ್ಲ, ಚಿತ್ರ ಚೆನ್ನಾಗಿಲ್ಲ, ಡಬ್ಬಾ. ಪ್ರಭಾಸ್ ಅವರನ್ನೂ ಸಹ ಚೆನ್ನಾಗಿ ತೋರಿಸಿಲ್ಲ. ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಅವರನ್ನು ಎಷ್ಟು ಕೆಟ್ಟದಾಗಿ ತೋರಿಸಿದ್ರೋ ಅಷ್ಟು ಕೆಟ್ಟದಾಗಿ ಈ ಚಿತ್ರದಲ್ಲಿ ಪ್ರಭಾಸ್ ಅವರನ್ನು ತೋರಿಸಿದ್ದಾರೆ. ಗೇಮ್ ಸ್ಟೇಷನ್ನಲ್ಲಿರುವ ರಾಕ್ಷಸರನ್ನು ಚಿತ್ರದಲ್ಲಿ ಹಾಕಿಕೊಂಡಿದ್ದಾರೆ. ಹನುಮಂತ, ಹಿನ್ನೆಲೆ ಸಂಗೀತ ಹಾಗೂ ಅಲ್ಲಲ್ಲಿ ಕೆಲವೊಂದು 3D ದೃಶ್ಯಗಳನ್ನು ಬಿಟ್ಟರೆ ಚಿತ್ರದಲ್ಲಿ ಇನ್ನೇನೂ ಇಲ್ಲ. ಬಾಹುಬಲಿ ಚಿತ್ರದಲ್ಲಿ ರಾಜನ ಪಾತ್ರದಲ್ಲಿ ಅಚ್ಚುಕಟ್ಟಾಗಿ ಕಂಡ ಪ್ರಭಾಸ್ ಅವರನ್ನು ನಾಯಕನನ್ನಾಗಿ ಆರಿಸಿಕೊಂಡ ನಿರ್ದೇಶಕ ಓಂ ರಾವತ್ ಅವರನ್ನು ಚೆನ್ನಾಗಿ ತೋರಿಸುವಲ್ಲಿ ವಿಫಲರಾಗಿದ್ದಾರೆ, ರಾಮನ ಪಾತ್ರ ಸೆಟ್ ಆಗಿಲ್ಲ' ಎಂದು ಮುಕ್ತವಾಗಿ ಹೇಳಿಕೊಂಡಿದ್ದಾನೆ.
ಹೀಗೆ ತನ್ನ ಅಭಿಪ್ರಾಯವನ್ನು ನೇರವಾಗಿ ಹೇಳಿದ ಸಿನಿ ರಸಿಕನ ವಿರುದ್ಧ ಅಲ್ಲಿಯೇ ಸುತ್ತಮುತ್ತ ಇದ್ದ ಪ್ರಭಾಸ್ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ. ಚಿತ್ರ ಚೆನ್ನಾಗಿಲ್ಲ ಎಂದವನನ್ನು ಅಲ್ಲಿಯೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಕೆಟ್ಟ ಮಾತುಗಳಿಂದ ಆತನನ್ನು ನಿಂದಿಸಿದ್ದಾರೆ. ಇಷ್ಟೆಲ್ಲಾ ನಡೆದರೂ ಸಹ ಆತ ಮತ್ತೆ ಎದ್ದು ಬಂದು ಕ್ಯಾಮೆರಾ ಮುಂದೆ ಮಾತನಾಡಿದ್ದಾನೆ.
"ನಾನು ಬೇಕಂತಲೇ ಚಿತ್ರದ ವಿರುದ್ಧವಾಗಿ ಹೇಳುತ್ತಿದ್ದಾನೆ ಅಂದ್ರು, ನಿದ್ರೆ ಮಾಡಿ ಚಿತ್ರ ನೋಡಿದ್ದೀಯ ಅಂದ್ರು, ಕನ್ನಡಕ ತೆಗೆದು ಚಿತ್ರ ನೋಡಿದ್ದಿಯ ಅದಕ್ಕೆ ಅರ್ಥವಾಗಿಲ್ಲ ಅಂದ್ರು. ಆದರೆ ನಾನು ಇರೋದನ್ನ ಹೇಳಿದೆ. ಅದನ್ನು ಅವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ. ಚಿತ್ರ ಚೆನ್ನಾಗಿ ಮಾಡದ ನಿರ್ದೇಶಕನ ಮೇಲಿನ ಕೋಪವನ್ನು ನನ್ನ ಮೇಲೆ ಹಾಕಿದ್ರು. ಈ ಹಿಂದೆ ನಾನು ತುಂಬಾ ಸಿನಿಮಾಗೆ ಅಭಿಪ್ರಾಯ ಹೇಳಿದ್ದೆ. ಚೆನ್ನಾಗಿದ್ದ ಚಿತ್ರಗಳನ್ನು ಹೊಗಳಿದ್ದೇನೆ. ಚೆನ್ನಾಗಿಲ್ಲದ ಚಿತ್ರಗಳನ್ನು ತೆಗಳಿದ್ದೇನೆ. ಯಾವ ಸಿನಿಮಾದಲ್ಲೂ ಹೊಡೆದಿರಲಿಲ್ಲ, ಈ ಸಿನಿಮಾದಲ್ಲಿ ಹೊಡೆದ್ರು, ಚಿತ್ರ ಚೆನ್ನಾಗಿಲ್ಲ ಎಂಬ ನೋವನ್ನು ನನ್ನ ಮೇಲೆ ತೀರಿಸಿಕೊಂಡರು" ಎಂದು ಹೇಳಿಕೆ ನೀಡಿದ್ದಾನೆ. ಹೀಗೆ ಹೊಡೆತ ತಿಂದ ಬಳಿಕ ಹೇಳಿಕೆ ನೀಡಿದ ಈತನ ಪ್ರಬುದ್ಧತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅನೇಕರು ಆತ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ, ಚಿತ್ರ ಅಷ್ಟಕ್ಕಷ್ಟೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











