ಸಲ್ಮಾನ್ ಖಾನ್ಗೆ ಮತ್ತೆ ಎಚ್ಚರಿಕೆ ನೀಡಿದ ಗ್ಯಾಂಗ್ಸ್ಟಾರ್ ಲಾರೆನ್ಸ್ ಬಿಷ್ಣೋಯ್: ಆಪ್ತನ ಮನೆ ಮೇಲೆ ಗುಂಡಿನ ದಾಳಿ
ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ನಡುವಿನ ಸಮಸ್ಯೆಗಳು ಮುಗಿಯುವಂತೆ ಕಾಣುತ್ತಿಲ್ಲ. ಕೆಲ ದಿನಗಳು ಸುಮ್ಮನಿದ್ದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈಗ ಮತ್ತೆ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕುವುದನ್ನು ಮುಂದುವರೆಸಿದೆ. ಅವರ ಆಪ್ತರ ಮನೆ ಮೇಲೆ ಗುಂಡಿನ ದಾಳಿ ನಡೆಸಿ ಆತಂಕ ಉಂಟುಮಾಡುತ್ತಿದೆ.
ಸಲ್ಮಾನ್ ಖಾನ್ ಅವರ ಆಪ್ತ, ನಟ ಮತ್ತು ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಅವರ ಕೆನಡಾದ ಮನೆಯ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗುಂಡಿನ ದಾಳಿ ನಡೆಸಿದೆ. ಗುಂಡಿನ ದಾಳಿಗೆ ಕಾರಣ ಮತ್ತು ಆರೋಪಿಗಳನ್ನು ಪತ್ತೆ ಮಾಡುವ ಮೊದಲೇ ಈ ಗ್ಯಾಂಗ್ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಸಲ್ಮಾನ್ ಖಾನ್ ಅವರಿಂದಾಗಿಯೇ ದಾಳಿ ನಡೆದಿದೆ ಎಂದು ಹೇಳಿದೆ.

ಕೆನಡಾದ ವ್ಯಾಂಕೋವರ್ನ ವೈಟ್ ರಾಕ್ ಬಳಿ ಇರುವ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಅವರ ಮನೆ ಮೇಲೆ ದಾಳಿ ನಡೆಸಿ, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ಬಗ್ಗೆ, ದಾಳಿಯ ಹಿಂದಿನ ಕಾರಣವನ್ನು ಹೇಳಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಟಿಪ್ಪಣಿ ಹಂಚಿಕೊಂಡಿದೆ. ಸಲ್ಮಾನ್ ಖಾನ್ ಜೊತೆ ಗಾಯಕನ ನಿಕಟ ಸಂಬಂಧವೇ ದಾಳಿಗೆ ಕಾರಣ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ.
''ಸಲ್ಮಾನ್ ಅವರೊಂದಿಗಿನ ನಿಮ್ಮ ನಿಕಟ ಸಂಪರ್ಕವು ನಿಮ್ಮನ್ನು ಉಳಿಸಲು ಅಥವಾ ರಕ್ಷಿಸಲು ಸಾಧ್ಯವಾಗುವುದಿಲ್ಲ. ನಿಮ್ಮ ಸಹೋದರ (ಸಲ್ಮಾನ್) ಈಗ ಬಂದು ನಿಮ್ಮನ್ನು ರಕ್ಷಿಸಲಿ. ಈ ಸಂದೇಶ ಸಲ್ಮಾನ್ ಖಾನ್ಗಾಗಿಯೂ ಕೂಡ. ದಾವೂದ್ ಇಬ್ರಾಹಿಂ ನಿನ್ನನ್ನು ನಮ್ಮಿಂದ ಉಳಿಸಬಹುದೆಂದು ಎಮದು ಯೋಚಿಸಿ ಸುಮ್ಮನೆ ಕಾಲ ಕಳೆಯಬೇಡ" ಎಂದು ಫೇಸ್ಬುಕ್ನಲ್ಲಿ ಹೇಳಿದ್ದಾರೆ.
ಇದಷ್ಟೇ ಅಲ್ಲದೇ, ಇದು ಕೇವಲ ಟ್ರೇಲರ್, ಇಡೀ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಬೆದರಿಸಿದ್ದು, ನೀವು ಯಾವುದೇ ದೇಶಕ್ಕೆ ಓಡಿಹೋಗಿ. ಆದರೆ ಸಾವಿಗೆ ಯಾವುದೇ ವೀಸಾ ಅಗತ್ಯವಿಲ್ಲ ಎಂಬುದನ್ನು ನೆನಪಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಭಾರತದಲ್ಲಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ, ಬಾಲಿವುಡ್ ಭಾಯ್ಜಾನ್ಗೆ ಬೆದರಿಕೆ ಮೇಲ್ ಕಳುಹಿಸಲಾಗಿತ್ತು. ಮತ್ತೊಂದು ಜೀವ ಬೆದರಿಕೆ ಪತ್ರದಲ್ಲಿ ಸಲ್ಮಾನ್ ಅವರನ್ನು ಕೊಲ್ಲುವುದು ತನ್ನ ಜೀವನದ ಏಕೈಕ ಗುರಿ ಎಂದು ಹೇಳಿಕೊಂಡಿದ್ದರು. ಸರಣಿ ಬೆದರಿಕೆಗಳ ನಂತರ, ಕಳೆದ ವರ್ಷ ಮುಂಬೈ ಪೊಲೀಸರು ಸಲ್ಮಾನ್ಗೆ Y+ ದರ್ಜೆಯ ಭದ್ರತೆಯನ್ನು ನೀಡಿದ್ದಾರೆ.
ಈ ಹಿಂದೆ ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಲ್ಲುವ ಮೂಲಕ ತನ್ನ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದರು. ಸಲ್ಮಾನ್ ಖಾನ್ ಮೇಲೆ ನಮ್ಮ ಸಮಾಜದಲ್ಲಿ ಸಿಟ್ಟು ಇದೆ. ನನ್ನ ಸಮಾಜವನ್ನು ಅವಮಾನಿಸಿದ್ದಾರೆ. ಅವರ ವಿರುದ್ಧ ಕೇಸು ದಾಖಲಿಸಿದರೂ ಕ್ಷಮೆ ಕೇಳಿಲ್ಲ, ಕ್ಷಮೆಯಾಚಿಸದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿರಿ, ನಾನು ಬೇರೆಯವರ ಮೇಲೆ ಅವಲಂಬಿತನಾಗಿಲ್ಲ" ಎಂದಿದ್ದರು.
"ಅವರ ಮೇಲೆ ಬಾಲ್ಯದಿಂದಲೂ ನನ್ನ ಮನಸ್ಸಿನಲ್ಲಿ ಸಿಟ್ಟು ಇದೆ. ಬೇಗನೇ ಅವನ ಅಹಂಕಾರವನ್ನು ಮುರಿಯುತ್ತಾನೆ. ಅವನು ನಮ್ಮ ದೇವರ ಗುಡಿಗೆ ಬಂದು ಕ್ಷಮೆ ಕೇಳಬೇಕು. ನಮ್ಮ ಸಮಾಜ ಕ್ಷಮಿಸಿದರೆ ನಾನು ಏನನ್ನೂ ಹೇಳುವುದಿಲ್ಲ" ಎಂದಿದ್ದರು. ವರದಿಗಳ ಪ್ರಕಾರ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿರುವ ಮಾಸ್ಟರ್ಮೈಂಡ್ಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಕೂಡ ಒಬ್ಬರು.


Click it and Unblock the Notifications











