ರೊಮ್ಯಾಂಟಿಕ್ ದೃಶ್ಯದಲ್ಲಿ ಎಲ್ಲಾ ಓಕೆನಾ ಅಂತ ಪದೇ ಪದೆ ಕೇಳ್ತಿದ್ರು- ಗುಲ್ಷನ್ ಬಗ್ಗೆ ಗಿರಿಜಾ ಮಾತು
'ಕಾಂತಾರ- 1' ಚಿತ್ರದಲ್ಲಿ ನಟಿಸಿ ಬೆಂಗಳೂರು ಮೂಲದ ನಟ ಗುಲ್ಷನ್ ದೇವಯ್ಯ ಸಖತ್ ಕ್ರೇಜ್ ಸಂಪಾದಿಸಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಹುಟ್ಟಿ ಬೆಳೆದ ಅವರು ಬಳಿಕ ಮುಂಬೈ ಸೇರಿದ್ದರು. ಹಿಂದಿ ವೆಬ್ ಸೀರಿಸ್ ಹಾಗೂ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಗುಲ್ಷನ್ ಬಗ್ಗೆ ಮರಾಠಿ ನಟಿ ಗಿರಿಜಾ ಓಕ್ ಹೇಳಿಕೆ ವೈರಲ್ ಆಗ್ತಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ- 1' ಚಿತ್ರದಲ್ಲಿ ಕುಲಶೇಖರನಾಗಿ ನೆಗೆಟಿವ್ ರೋಲ್ನಲ್ಲಿ ಗುಲ್ಷನ್ ನಟಿಸಿ ಗಮನ ಸೆಳೆದಿದ್ದಾರೆ. ಅವರ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂಟಿಮೇಟ್ ಸೀನ್ ಮಾಡುವಾಗ ಗುಲ್ಷನ್ ಎಷ್ಟು ಸಭ್ಯರಾಗಿ ನಡೆದುಕೊಂಡರು, ತಾವೇ ಕ್ಯಾರವ್ಯಾನ್ನಿಂದ ದಿಂಬುಗಳನ್ನು ತಂದುಕೊಟ್ಟು ಸಹಾಯ ಮಾಡಿದ್ರು ಎನ್ನುವುದನ್ನು ದಿ ಲಾಲಿಪಾಪ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ನಟಿ ಗಿರಿಜಾ ನೆನಪಿಸಿಕೊಂಡಿದ್ದಾರೆ.

'ಥೆರಪಿ ಶೆರಪಿ' ಎಂಬ ವೆಬ್ ಸೀರಿಸ್ನಲ್ಲಿ ಗುಲ್ಷನ್ ಹಾಗೂ ಗಿರಿಜಾ ಒಟ್ಟಿಗೆ ನಟಿಸಿದ್ದಾರೆ. ಈ ವೇಳೆ ರೊಮ್ಯಾಂಟಿಂಗ್ ದೃಶ್ಯವೊಂದರಲ್ಲಿ ನಟಿಸುವಾಗ ಗುಲ್ಷನ್ ತೆಗೆದುಕೊಂಡ ಕೇರ್ ಬಗ್ಗೆ ಗಿರಿಜಾ ಮಾತನಾಡಿದ್ದಾರೆ. "ನೀವು ಎಷ್ಟೇ ಪ್ಲ್ಯಾನ್ ಮಾಡಿದ್ರು, ಕೆಲವರ ಜೊತೆ ಮಾತ್ರ ಮಿಲಿಗ್ರಾಂಗಿಂತ ಕಮ್ಮಿ ಕಸಿವಿಸಿ ಇಲ್ಲದೇ ನಟಿಸಲು ಸಾಧ್ಯ. ಅಂತಹವರಲ್ಲಿ ಗುಲ್ಷನ್ ಒಬ್ಬರು. ಅವರು ತಮ್ಮ ಕ್ಯಾರವ್ಯಾನ್ನಿಂದ ಮೂರ್ನಾಲ್ಕು ವಿಭಿನ್ನ ದಿಂಬುಗಳನ್ನು ತಂದಿದ್ರು. ಒಂದು ಚಿಕ್ಕದು, ಒಂದು ದೊಡ್ಡದು, ಇನ್ನೊಂದು ಗಟ್ಟಿಯಾಗಿದ್ದ ದಿಂಬು ಇತ್ತು. ಅವುಗಳಲ್ಲಿ ಯಾವುದು ಹೆಚ್ಚು ಆರಾಮದಾಯಕವೆಂದು ನನಗೆ ಅನಿಸುತ್ತದೆಯೋ ಅದನ್ನು ಆರಿಸಲು ಹೇಳಿದ್ರು. ಆ ದೃಶ್ಯದ ಸಮಯದಲ್ಲಿ, ಅವ್ರು ಕನಿಷ್ಠ 16 ಅಥವಾ 17 ಬಾರಿ ನನ್ನನ್ನು ಕೇಳಿರಬೇಕು, 'ನೀವು ಆರಾಮಾಗಿದ್ದೀರಾ ಅಲ್ವಾ?' ಎಂದು ಗಿರಿಜಾ ಹೇಳಿದ್ದಾರೆ.
ಮಾತು ಮುಂದುವರೆಸಿರುವ ನಟಿ ಗಿರಿಜಾ ಚಿತ್ರೀಕರಣದ ನಡುವೆ ದಿಂಬು ಸಮಸ್ಯೆ ಎನಿಸಿದಾಗ ಗುಲ್ಷಜ್ ತಾವೇ ಬಂದು ಸರಿ ಮಾಡಿದ್ರು. ಅವರ ಸಹಾಯವನ್ನು ಶ್ಲಾಘಿಸಿದ್ದಾರೆ. ಕಷ್ಟಕರವಾದ ಚಿತ್ರೀಕರಣದ ಹೊತ್ತಲ್ಲಿ ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಇರಲು ಇದು ಸಹಾಯವಾಯಿತು ಎಂದಿದ್ದಾರೆ. ದಿಂಬುಗಳು ಬೇಡದಿದ್ದರೆ ತೆಗೆದುಬಿಡಿ ಅಂದ್ರು. ಅಷ್ಟರಮಟ್ಟಿಗೆ ಅವ್ರು ಜೊತೆ ನಿಂತರು ಎಂದು 'ಕಾಂತಾರ-1' ನಟನನ್ನು ನಟಿ ಗಿರಿಜಾ ಶ್ಲಾಘಿಸಿದ್ದಾರೆ.

ಸದ್ಯ ಗಿರಿಜಾ ಓಕ್ ಸಂದರ್ಶನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಕೆಯ ಹಿನ್ನೆಲೆ ಬಗ್ಗೆ ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ. ಮಹಾರಾಷ್ಟ್ರದ ನಾಗ್ಪುರ ಮೂಲದ ಗಿರಿಜಾ ತಮ್ಮ 15ನೇ ವಯಸ್ಸಿನಲ್ಲೇ ಚಿತ್ರರಂಗ ಪ್ರವೇಶಿಸಿದ್ದರು. ಮರಾಠಿ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ್ದರು. ಕಿರುತೆರೆಯಲ್ಲಿ ಕೂಡ ಬಣ್ಣ ಹಚ್ಚಿದ್ದರು.
ಮರಾಠಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲೇ ಗಿರಿಜಾ ಹೆಚ್ಚು ಕಾಣಿಸಿಕೊಂಡಿದ್ದಾರೆ. 'ತಾರೇ ಜಮೀನ್ ಪರ್' ಚಿತ್ರದಲ್ಲಿ ಕೂಡ ನಟಿಸಿದ್ದರು. ಕನ್ನಡದ 'ಹೌಸ್ಫುಲ್' ಚಿತ್ರದಲ್ಲಿ ಮಿಂಚಿದ್ದರು. 'ಶೋರ್ ಇನ್ ದಿ ಸಿಟಿ', 'ಸೈಕಲ್ ಕಿಕ್', 'ಇನ್ಸ್ಪೆಕ್ಟರ್ ಜೆಂಡೆ' ಆಕೆ ನಟಿಸಿರುವ ಕೆಲ ಹಿಂದಿ ಸಿನಿಮಾಗಳು.
2011ರಲ್ಲಿ ಸುಹೃದ್ ಗೋಡ್ಬೋಲೆ ಎಂಬುವವರನ್ನು ಗಿರಿಜಾ ಓಕ್ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಮತ್ತೊಂದು ಕಡೆ 'ಕಾಂತಾರ-1' ಚಿತ್ರದ ನಟಗೆಗಾಗಿ ಗುಲ್ಷನ್ ದೇವಯ್ಯ ಭಾರೀ ಪ್ರಶಂಸೆ ಪಡೆಯುತ್ತಿದ್ದಾರೆ. ಅವರು ಬೆಂಗಳೂರಿನವರು ಎನ್ನುವ ವಿಚಾರ ಇತ್ತೀಚೆಗೆ ಬಹಳ ಜನರಿಗೆ ಗೊತ್ತಾಗಿದೆ.
ಕನ್ನಡ ಭಾಷೆಯ ಬಗ್ಗೆ ಗುಲ್ಷನ್ ದೇವಯ್ಯ ಮಾತುಗಳು ಕೆಲವರ ಬೇಸರಕ್ಕೆ ಕಾರಣವಾಗಿದೆ. ಸಂದರ್ಶನದಲ್ಲಿ ಮಾತನಾಡಿದ್ದ ಅವರು ಕನ್ನಡ ಎನ್ನುವುದನ್ನು 'ಕನ್ನಡ್' ಎನ್ನುವುದರಲ್ಲಿ ತಪ್ಪೇನು ಇಲ್ಲ. ಎಲ್ಲರೂ ಎಲ್ಲಾ ಭಾಷೆಯನ್ನು ಸರಿಯಾಗಿ ಉಚ್ಛಾರಣೆ ಮಾಡಬೇಕು ಎಂದುಕೊಳ್ಳುವುದು ತಪ್ಪು. ನಾವು ಕೂಡ ಬೇರೆ ಭಾಷೆಯ ಪದಗಳನ್ನು ಸರಿಯಾಗಿ ಉಚ್ಛಾರಣೆ ಮಾಡಲ್ಲ. ಅದರಲ್ಲೇನಿದೆ ಬಿಡಿ ಎಂದಿದ್ದರು.


Click it and Unblock the Notifications











