ದಮ್ಮಯ್ಯ ಅಂತೀನಿ ನನ್ನ ಮಗಳನ್ನು ನನಗೆ ಹಿಂದಿರುಗಿಸಿ ; ಬೀದಿಯಲ್ಲಿ ಮಹಾಕುಂಭದ ಮೊನಾಲಿಸಾ ತಾಯಿ ಆರ್ತನಾದ
ಪ್ರೀತಿ ಹೃದಯದ ಭಾಷೆ ಎನ್ನುವುದು ಲೋಕಾರೂಢಿ. ಆದರೆ ಕಾಲ ಕಳೆದಂತೆ ಪ್ರೀತಿ ಹುಟ್ಟುವ ಹೃದಯವೂ ಕೂಡ ವ್ಯಾವಹಾರಿಕವಾಗಿದೆ. ಇನ್ನು ಕೆಲವೊಮ್ಮೆ ಹೃದಯದಲ್ಲಿ ಅರಳಿದ ಪ್ರೀತಿಗೆ ಜಾತಿ-ಧರ್ಮ- ಅಂತಸ್ತು-ಮನೆತನ- ಸಂಪ್ರದಾಯ-ಗೌರವ ಇತ್ಯಾದಿ ಮನುಷ್ಯ ನಿರ್ಮಿತ ಗೋಡೆಗಳು ಅಡ್ಡಿಯಾಗುತ್ತಾವೆ.ಆಗ ಕೆಲವರ ಪ್ರೀತಿ ಕಮರಿ ಹೋಗುತ್ತೆ.ಇನ್ನು ಕೆಲವರ ಮನೆಯಲ್ಲಿ ಹೆತ್ತವರ ವಿರೋಧದಿಂದ ಮನೆಯಿಂದ ಓಡಿ ಹೋಗಿ ಮದುವೆಯಾಗ್ಲೇ ಬೇಕಾದ ಅನಿವಾರ್ಯತೆ ಎದುರಾಗುತ್ತೆ.
ಈ ಅನಿವಾರ್ಯತೆಯಿಂದ ಮೊನಾಲಿಸಾ ಮದುವೆಯಾಗಿರಬಹುದು. ಆದರೆ.. ಪ್ರೀತಿಯ ಹೆಸರಿನಲ್ಲಿ ಮೊನಾಲಿಸಾನ ಖೆಡ್ಡಾಗೆ ಕೆಡವಲಾಗಿದೆ ಎನ್ನುವ ಅನುಮಾನ ಸದ್ಯ ಹಲವರಲ್ಲಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಮೊನಾಲಿಸಾ ಮೊನ್ನೆ ಮೊನ್ನೆ ಫರ್ಮಾನ್ ಖಾನ್ನ ಮದುವೆಯಾಗಿದ್ದೇ ತಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ''ಲವ್ ಜಿಹಾದ್'' ಕೂಗು ಕೇಳಿ ಬರುತ್ತಿದೆ. ಹೀಗಿರುವಾಗ ಹೆತ್ತು ಹೊತ್ತು ಸಾಕಿದ ಹೆತ್ತವರ ಕಥೆ ಏನಾಗಬೇಡ..?

ಹೌದು, ವರ್ಷದ ಹಿಂದೆ ಪ್ರಯಾಗ್ ರಾಜ್ನಲ್ಲಿ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೊನಾಲಿಸಾ, ರಾತ್ರೋ ರಾತ್ರಿ ದೇಶದೆಲ್ಲೆಡೆ ಮನೆ ಮಾತಾದರು. ಮೊನಾಲಿಸಾ ಕಣ್ಣುಗಳಿಗೆ ಹಲವರು ಮಾರು ಹೋದರು. ಮಹಾಕುಂಭದ ಮೊನಾಲಿಸಾ ಎಂದು ಕರೆಯಲು ಶುರು ಮಾಡಿದರು. ಕನವರಿಸಲು ಶುರು ಮಾಡಿದರು. ಎಲ್ಲರೂ ಮೊನಾಲಿಸಾ ಬದುಕು ಬದಲಾಯ್ತು ಎಂದೇ ಅಂದುಕೊಂಡಿದ್ದರು. ಬದಲಾಯ್ತು ಕೂಡ.
ಆದರೆ. ಹೆತ್ತವರ ಬದುಕು ಮಾತ್ರ ಬೀದಿಗೆ ಬಿದ್ದಿದ್ದು ಮಾತ್ರ ವಿಷಾದನೀಯ. ಇದಕ್ಕೆ ಪುರಾವೆ ಎನ್ನುವಂತೆ ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಬಂಜಾರಾ ಸಮುದಾಯದ ಗುಡಿಸಲುಗಳಲ್ಲಿ ವಾಸವಿರುವ ಮೋನಾಲಿಸಾ ತಾಯಿ ಲತಾ ಭೋಂಸ್ಲೆ ಕಣ್ಣೀರು ಹಾಕುತ್ತಿದ್ದಾರೆ. ನನ್ನ ಮಗಳನ್ನು ನನಗೆ ಮರಳಿ ಕೊಡಿಸಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ಧಾರೆ. ನನ್ನ ಇನ್ನುಳಿದ 3 ಮಕ್ಕಳಾದ ಜೆಸ್ಸಿಕಾ, ಅಜಯ್ ಮತ್ತು ಆಶಿಶ್ಗೆ ಯಾರು ದಿಕ್ಕು..? ಎಂದು ಅಸಹಾಯಕತೆಯಿಂದ ಪ್ರಶ್ನೆ ಕೇಳುತ್ತಿದ್ದಾರೆ. ವಿಷ ಕುಡಿದು ನಾವು ಸತ್ತು ಹೋಗುತ್ತೇವೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನೆಲದ ಮೇಲೆ ಕುಳಿತು ಗೋಳಾಡಿದ್ಧಾರೆ.
ಇನ್ನು, ಮೊನಾಲಿಸಾ ಮತ್ತು ಫರ್ಮಾನ್ ನಡುವೆ ಪ್ರೇಮಾಂಕುರವಾಗಿದ್ಹೇಗೆ..? ಮದುವೆಯಾಗಿದ್ಹೇಗೆ..? ಈ ಕುರಿತು ಮನೆಯವರಿಗೆ ಯಾವ ಸುಳಿವು ಇಲ್ಲ. ಮದುವೆಯಾಗುವ ದಿನದವರೆಗೆ ಕೆಲಸದ ಪ್ರಯುಕ್ತ ಮೊನಾಲಿಸಾ ಕೇರಳಕ್ಕೆ ಹೋಗಿದ್ದಾಳೆ ಎಂದೇ ಮೊನಾಲಿಸಾ ತಂದೆ ಮತ್ತು ತಾಯಿ ನಂಬಿದ್ದರು.
ಆದರೆ.. ಮದುವೆ ವಿಡಿಯೋ ವೈರಲ್ ಆದಾಗ ಇಬ್ಬರಿಗೆ ಬರಸಿಡಿಲು ಬಡಿದಂತಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮದುವೆಯಾದ ನಂತರ ಮೊನಾಲಿಸಾಗೆ ತನ್ನ ತಂದೆ ತಾಯಿಯ ನೆನಪಾಗಿಲ್ಲ. ಕರೆ ಮಾಡಿ ಒಮ್ಮೆಯೂ ಮಾತನಾಡಿಲ್ಲ. ಈ ವಿಚಾರದಿಂದ ದುಃಖ ಇನ್ನೂ ಉಲ್ಬಣಗೊಂಡಿದ್ದು ಒಮ್ಮೆ ಅವಳ ಜೊತೆ ಮಾತನಾಡಲು ನನಗೆ ಅವಕಾಶ ಮಾಡಿಕೊಡಿ, ಆಗ ನನಗೆ ಚೂರಾದರೂ ಸಮಾಧಾನವಾಗುತ್ತೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಬಲವಂತವಾಗಿ ನನ್ನ ಮದುವೆಯನ್ನು ನನ್ನ ಚಿಕ್ಕಮ್ಮನ ಮಗನ ಜೊತೆ ಮಾಡಿಸಲು ಮನೆಯವರು ಮುಂದಾಗಿದ್ದರು ಎಂದು ಮೊನಾಲಿಸಾ ಹೇಳಿದ್ದರು. ಈ ಮಾತನ್ನು ಅಲ್ಲಗೆಳೆದಿರುವ ಮೊನಾಲಿಸಾ ತಾಯಿ ಲತಾ ಅದೆಲ್ಲವೂ ಸುಲ್ಳು, ನಾವು ಹಿಂದೂಗಳು, ಇಂತಹ ವಿಷಯ ಮತ್ತು ವಿಚಾರ ನಮ್ಮ ಧರ್ಮದಲ್ಲಿ ಪ್ರಸ್ತಾಪವಾಗುವುದಿಲ್ಲ ಎಂದು ಹೇಳಿದ್ಧಾರೆ. ಅವಳು ಹೇಳುತ್ತಿರುವ ಮಾತು ಅವಳದ್ದಲ್ಲ, ಮದುವೆಯಾದ ಆ ವ್ಯಕ್ತಿ ಹೀಗೆ ಮಾತನಾಡು ಎಂದು ಅವಳಿಗೆ ಹೇಳಿ ಕೊಡುತ್ತಿದ್ದಾನೆ ಎಂದು ಹೇಳಿದ್ಧಾರೆ. ವಶೀಕರಣದ ಆರೋಪವನ್ನು ಕೂಡ ಮಾಡಿದ್ದಾರೆ.
ಇನ್ನೂ ಮೊನಾಲಿಸಾ ಅಪ್ರಾಪ್ತೆ ಎನ್ನುವ ಮಾತು ಇದೆ. ಆದರೆ ಮೊನಾಲಿಸಾ ನನಗೆ 18 ವರ್ಷ ಎಂಬ ವಾದ ಮಾಡಿದ್ದಾರೆ. ಈ ವಿಚಾರದ ಕುರಿತು ಕೂಡ ಪ್ರತಿಕ್ರಿಯಿಸಿರುವ ಮೊನಾಲಿಸಾ ತಾಯಿ ಲತಾ, ಮೊನಾಲಿಸಾಗೆ ಈಗ 16 ವರ್ಷ. ಅವಳಿಗೆ ಅಡುಗೆ ಕೂಡ ಮಾಡಲು ಬರುವುದಿಲ್ಲ ಎಂದು ಹೇಳಿದ್ಧಾರೆ. ಆಧಾರ್ ಕಾರ್ಡ್ನಲ್ಲಿ ವಯಸ್ಸು ಹೆಚ್ಚಾಗಿದ್ಹೇಗೆ ಎನ್ನುವುದು ನಮಗೆ ಗೊತ್ತಿಲ್ಲ ಎಂದು ಕಣ್ಣೀರು ಹಾಕಿದ್ಧಾರೆ.
ಮೊನಾಲಿಸಾ ಮದುವೆ ವಿವಾದದ ಕುರಿತು ಮಾತನಾಡಿರುವ ಸೋದರ ಸಂಬಂಧಿ ರೂಪರೇಖಾ ಬಾಲ್ಯದಿಂದಲೂ ಇದೇ ಗುಡಿಸಲಿನಲ್ಲಿ ಅವಳು ವಾಸಿಸುತ್ತಿದ್ದಳು, ತನ್ನ ಟೇಬಲ್ ಮೇಲೆ ಚಿಕ್ಕ ದೇವಾಲಯವನ್ನು ನಿರ್ಮಿಸಿ ಬೆಳಗ್ಗೆ-ಸಂಜೆ ಪೂಜೆ ಮಾಡುತ್ತಿದ್ದಳು ಎಂದು ಹೇಳಿದ್ಧಾರೆ.
ಹಲವು ದಿನಗಳಿಂದ ಮೊನಾಲಿಸಾ ಸಂಪರ್ಕಕ್ಕೆ ಸಿಕ್ಕಿಲ್ಲ. ಅವಳ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೇಳಿರುವ ರೂಪರೇಖಾ ಆಕೆ ಮದುವೆಯಾದ ದಿನದಿಂದ ಇಲ್ಲಿಯವರೆಗೆ ಮನೆಯಲ್ಲಿ ಅಡುಗೆ ಮಾಡಿಲ್ಲ ಎಂದು ಭಾವುಕರಾಗಿದ್ಧಾರೆ. ನಮ್ಮ ಕುಟುಂಬದ ಮೇಲೆ ಈ ಘಟನೆ ತೀವೃವಾದ ಪರಿಣಾಮ ಬೀರಿದೆ ಎಂದಿದ್ಧಾರೆ.
ಅವಳು ಅಲ್ಲಿ ಸಂತೋಷವಾಗಿದ್ದಾಳೆ, ಆದರೆ ಇಲ್ಲಿ ನಾವು ಕಣ್ಣೀರು ಹಾಕುತ್ತಿದ್ದೇವೆ ಎಂದು ಹೇಳಿರುವ ಮೊನಾಲಿಸಾ ಚಿಕ್ಕಮ್ಮ ರೇಖಾ ಅವಳ ಈ ಕೆಲಸದಿಂದ ನಮ್ಮ ಇಡೀ ಬಂಜಾರಾ ಸಮುದಾಯದ ಈ ಗುಡಿಸಲಿರುವ ವಾತಾವರಣ ಸ್ಮಶಾನದಂತಾಗಿದೆ ಎಂದು ಹೇಳಿದ್ಧಾರೆ. ತುಂಬಾನೇ ಮಹತ್ವಕಾಂಕ್ಷೆಯನ್ನು ಹೊಂದಿದ್ದ ಹುಡುಗಿ ಅವಳು, ನಮ್ಮ ವಸತಿ ಪ್ರದೇಶದಲ್ಲಿ ಶಾಲೆ ಕಟ್ಟಿಸಿ ಮಕ್ಕಳಿಗೆ ಶಿಕ್ಷಣ ನೀಡಿ ಎಲ್ಲರಿಗೂ ಶಾಶ್ವತ ಮನೆಗಳನ್ನು ನಿರ್ಮಿಸುತ್ತೇನೆ ಎಂದು ಹೇಳುತ್ತಿದ್ದಳು, ಪ್ರಸಿದ್ಧಳಾಗಿ ಸಮುದಾಯಕ್ಕೆ ಹೆಮ್ಮೆ ತರುತ್ತೇನೆ ಎನ್ನುತ್ತಿದ್ದಳು ಎಂದು ನೆನಪು ಮಾಡಿಕೊಂಡಿದ್ಧಾರೆ. ಕೇರಳಕ್ಕೆ ಆಕ್ಟಿಂಗ್ ಕ್ಲಾಸ್ಗೆ ಹೋಗುತ್ತಿದ್ದೇನೆ ಎಂದು ಹೇಳಿ ಆ ಹುಡುಗನನ್ನು ಮದುವೆಯಾಗಿದ್ದಾಳೆ ಎಂದು ರೇಖಾ ಕಣ್ಣೀರು ಹಾಕಿದ್ದಾರೆ.


Click it and Unblock the Notifications











