ಹಾಲಿವುಡ್ ಆಫರ್ನ ಎಡಗಾಲಿನಲ್ಲಿ ಒದ್ದ ಬಾಲಿವುಡ್ನ 'ಅವತಾರ' ಪುರುಷ..!
ವರ್ಷವೊಂದಕ್ಕೆ ಒಂದು ಚಿತ್ರ ಮಾಡಲು ನಮ್ಮಲ್ಲಿನ ಅನೇಕ ಸ್ಟಾರ್ಗಳು ಕವಡೆ ಹಾಕುತ್ತಾರೆ. ಆದರೆ ಇದಕ್ಕೆ ತದ್ವಿರುದ್ದವೆನ್ನುವಂತೆ ಆ ಕಾಲದಲ್ಲಿ ದಿನವೊಂದಕ್ಕೆ ನಾಲ್ಕೈದು ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲಕ್ಕೆ ಅನೇಕರು ಭಾಗಿಯಾಗುತ್ತಿದ್ದರು. ಆ ಪೈಕಿ ಅಂದಕಾಲತ್ತಿಲ್ನ ಬಾಲಿವುಡ್ನ ಹೀರೋ ನಂಬರ್ ಓನ್ ಗೋವಿಂದ ಕೂಡ ಒಬ್ಬರು.
90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗೋವಿಂದ ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಬರೆದಿದ್ದರು. ಬಾಲಿವುಡ್ನಲ್ಲಿ ಅನೇಕರ ಹುಬ್ಬೇರಿಸಿದ್ದರು. ಆದರೆ ಇದೇ ಗೋವಿಂದ ಆ ನಂತರ ತಮ್ಮ 'ನಡಾವಳಿ' ಹಾಗೂ 'ದುರಂಹಕಾರ'ಗಳಿಂದ ತಮ್ಮ 'ಕಾಲ' ಮೇಲೆ ತಾವೇ 'ಚಪ್ಪಡಿ ಕಲ್ಲು' ಎಳೆದುಕೊಂಡರು. 'ಸೂಪರ್ ಸ್ಟಾರ್' ಪಟ್ಟವನ್ನ ಅಲಂಕರಿಸಿ ಆ ನಂತರ ಹೇಳ ಹೆಸರಿಲ್ಲದಂತೆ 'ಬಾಲಿವುಡ್' ನಿಂದ 'ಕಣ್ಮರೆ' ಕೂಡ ಆದರು.

ಇಂಥಾ ಗೋವಿಂದಗೆ ಆಗಾಗ ಪ್ರಚಾರದ ಹುಚ್ಚು ಹಿಡಿಯುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಜನ ತನ್ನನ್ನೂ ಮರೆಯುತ್ತಿದ್ದಾರೆ ಎಂದು ಅನಿಸಿದಾಗೆಲ್ಲಾ ದಿಗ್ಗನೆ ಎದ್ದು ಬರುವ ಗೋವಿಂದ ಏನೇನೋ ಬಡಬಡಿಸಲು ಶುರು ಮಾಡುತ್ತಾರೆ. ಬಾಲಿವುಡ್ನಲ್ಲಿ ನನ್ನನ್ನೂ ತುಳಿಯಲೆಂದೇ ಒಂದು ಬಣ ಇದೆ ಎಂದು ಯಾರ ಹೆಸರನ್ನು ಹೇಳದೇ ಅಡ್ಡ ಗೋಡೆಯ ಮೇಲೆ ದೀಪ ಇಡುತ್ತಾರೆ.
ಇನ್ನೂ ಕೆಲವೊಮ್ಮೆ ಪ್ರಚಾರ ಕಡಿಮೆಯಾಯ್ತು ಎಂಬ ಭಾವನೆ ಮೂಡಿದಾಗ ಸೀದಾ ಹಾಲಿವುಡ್ಗೆ ಹೋಗಿ ಬಿಡುತ್ತಾರೆ. ಜೇಮ್ಸ್ ಕ್ಯಾಮರೂನ್ ಅವರ ಜಗದ್ವಿಖ್ಯಾತ ಚಿತ್ರ ಅವತಾರ್ ಚಿತ್ರದಲ್ಲಿ ನಾನು ನಾಯಕನ ಪಾತ್ರ ನಿರ್ವಹಿಸಬೇಕಿತ್ತು ಎಂದು ಹೇಳುತ್ತಾರೆ. ಈ ಮೂಲಕ ಪ್ರಚಾರ ಪಡೆಯುವ ಭರದಲ್ಲಿ ನಗೆಪಾಟಲಿಗೀಡಾಗುತ್ತಾರೆ.
ಹೌದು, ಕೆಲ ವರ್ಷಗಳ ಹಿಂದೆ ಅವತಾರ್ ಚಿತ್ರದಲ್ಲಿ ನಾನು ಅಭಿನಯಿಸಬೇಕಿತ್ತು ಎಂದು ಹೇಳಿ ಅಪಹಾಸ್ಯಕ್ಕೀಡಾಗಿದ್ದ, ವ್ಯಾಪಕವಾಗಿ ಟ್ರೋಲ್ ಆಗಿದ್ದ, ಗೋವಿಂದ ಈಗ ಇನ್ನೊಮ್ಮೆ ಅವತಾರ್ ಚಿತ್ರದ ಕುರಿತು ಮಾತನಾಡಿದ್ದಾರೆ. ಈ ಕುರಿತು ಬಾಲಿವುಡ್ನ ಮತ್ತೊಬ್ಬ ಪ್ರಚಾರ ಪ್ರಿಯ ಒಂದ್ಕಾಲದ ಶಕ್ತಿಮಾನ್ ಮುಖೇಶ್ ಖನ್ನಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೋವಿಂದ ಕೆಲ ವರ್ಷಗಳ ಹಿಂದೆ ಅಮೆರಿಕಾಗೆ ನಾನು ಹೋಗಿದ್ದೇ ಅಲ್ಲಿ ನನಗೆ ಸರ್ದಾರ್ ಒಬ್ಬರು ಸಿಕ್ಕಿದ್ದರು, ನಾನು ಅವರಿಗೊಂದು ವ್ಯಾಪಾರದ ಐಡಿಯಾ ಕೊಟ್ಟಿದ್ದೇ ಎಂದು ಹೇಳಿದ್ದಾರೆ. ನಾನು ಹೇಳಿದ್ದ ಐಡಿಯಾ ಆ ನಂತರ ವರ್ಕೌಟ್ ಆಗಿತ್ತು ಎಂದು ಹೇಳಿದ್ದಾರೆ.
ಆ ನಂತರ ಮತ್ತೊಮ್ಮೆ ಲಂಡನ್ಗೆ ಹೋದಾಗ ಅಲ್ಲಿ ಅದೇ ಸರ್ದಾರ್ ನನಗೆ ಸಿಕ್ಕಿದ್ದರು ಅವತ್ತು ಅವರ ಜೊತೆ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಕೂಡ ಇದ್ದರು ಆಗ ಅವರ ನಿರ್ದೇಶನದ ಅವತಾರ್ ಚಿತ್ರದಲ್ಲಿ ನಟಿಸುವಂತೆ ಸರ್ದಾರ್ ನನಗೆ ಹೇಳಿದ್ದರು ಎಂದಿರುವ ಗೋವಿಂದ ಈ ಹಿನ್ನೆಲೆ ನಾನು ಜೇಮ್ಸ್ ಕ್ಯಾಮರೂನ್ ಅವರಿಗೆ ಊಟಕ್ಕೆ ಕರೆದಿದ್ದೆ ಅವರ ಜೊತೆ ಚರ್ಚೆ ಕೂಡ ಮಾಡಿದ್ದೇ ಎಂದು ಹೇಳಿದ್ದಾರೆ.
ಮುಂದುವರೆದು ಆ ಸಮಯದಲ್ಲಿ ನಾನೇ 'ಅವತಾರ್' ಎಂಬ ಶೀರ್ಷಿಕೆಯನ್ನು ಜೇಮ್ಸ್ ಕ್ಯಾಮರೂನ್ಗೆ ನೀಡಿದ್ದೆ ಎಂದಿರುವ ಗೋವಿಂದ, ಚಿತ್ರದಲ್ಲಿ ಅಭಿನಯಿಸುವಂತೆ ಅವರು ನನ್ನನ್ನು ಕೇಳಿಕೊಂಡರು, 18 ಕೋಟಿ ರೂಪಾಯಿ ಸಂಭಾವನೆ ಕೊಡ್ತೀವಿ 410 ದಿನಗಳ ಕಾಲ ನಮ್ಮ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿ ಅಂದರು, ಆದರೆ ದಿವ್ಯಾಂಗರ ಪಾತ್ರದಲ್ಲಿ ಆಕ್ಟ್ ಮಾಡುವಂತೆ ಹೇಳಿದರು ಇದಕ್ಕೆ ನಾನು ನೋ ಎಂದು ಹೇಳಿದ್ದೇ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ ಮೈಗೆ ಬಣ್ಣ ಎಲ್ಲ ಹಚ್ಕೋಬೇಕು ಎಂದೆಲ್ಲ ಜೇಮ್ಸ್ ಕ್ಯಾಮರೂನ್ ನನಗೆ ಹೇಳಿದರು ನಾನು ಅದೆಲ್ಲ ಆಗಲ್ಲ ಬಣ್ಣ ಬಳ್ಕೊಂಡ್ರೆ ನಾನು ಆಸ್ಪತ್ರೆಗೆ ಸೇರಬೇಕಾಗುತ್ತೆ ಎಂದು ಹೇಳಿ ಎದ್ದು ಬಂದೆ ಎಂದು ಹೇಳಿದ್ದಾರೆ. ಈ ಅವಕಾಶ ಕೈ ಚೆಲ್ಲಿದ ಬೇಸರ ನನಗೆ ಇವತ್ತು ಇದೆ ಎಂದು ಕೂಡ ಗೋವಿಂದ ಹೇಳಿದ್ದಾರೆ. ನಿರೀಕ್ಷಿಸಿದಂತೆ ಗೋವಿಂದ ಅವರ ಈ ಮಾತು ಮತ್ತೊಮ್ಮೆ ಟ್ರೋಲಿಗರಿಗೆ ಆಹಾರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವರ್ಗ ಮತ್ತೊಮ್ಮೆ ಗೋವಿಂದ ಅವರನ್ನು ಆಡಿಕೊಂಡು ನಗುತ್ತಿದೆ.


Click it and Unblock the Notifications











