ಕಂಗನಾ ರಣೌತ್ ನಿವಾಸದ ಬಳಿ ಗುಂಡಿನ ಸದ್ದು: ನಡೆಯಿತೇ ಕೊಲೆ ಯತ್ನ?
ಬಾಲಿವುಡ್ನ ದೊಡ್ಡ ಕುಳಗಳ ಮೇಲೆ ಸತತ ವಾಗ್ದಾಳಿ ನಡೆಸುತ್ತಿರುವ ನಟಿ ಕಂಗನಾ ರಣೌತ್ ನಿವಾಸದ ಬಳಿ ಗುಂಡಿನ ಸುದ್ದು ಕೇಳಿದೆ.
ಪ್ರಸ್ತುತ ಕಂಗನಾ ರಣೌತ್ ತಮ್ಮ ಮನಾಲಿಯ ನಿವಾಸದಲ್ಲಿದ್ದು, ತಮ್ಮ ನಿವಾಸದ ಬಳಿ ಗುಂಡಿನ ಶಬ್ದ ಕೇಳಿತೆಂದು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಕಂಗನಾ ರಣೌತ್ ನೀಡಿರುವ ಹೇಳಿಕೆ ಪ್ರಕಾರ, ಜುಲೈ 31 ರ ರಾತ್ರಿ 11:30 ರ ಸುಮಾರಿಗೆ ಕಂಗನಾ ನಿವಾಸದ ಬಳಿ ಬಂದೂಕಿನ ಗುಂಡಿನ ಶಬ್ದ ಕೇಳಿತಂತೆ. ಕೂಡಲೇ ತಮ್ಮ ಭದ್ರತಾ ಸಿಬ್ಬಂದಿಯನ್ನು ಕರೆದು ಅದೇನು ತಿಳಿದುಕೊಳ್ಳುವಂತೆ ಹೇಳಿದರಂತೆ. ಆದರೆ ಆಗ ಏನೂ ಗೊತ್ತಾಗಿಲ್ಲ.
ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಅವರು ಸಹ ತುಸು ಸಮಯ ಹುಡುಕಾಟ ನಡೆಸಿ, ರಾತ್ರಿ ಸಮಯ ಬಾವುಲಿಗಳನ್ನು ಹೆಸರಿಸಲೋ ಅಥವಾ ಇನ್ನಾವುದೋ ಪ್ರಾಣಿಗಳನ್ನು ಹೆದರಿಸಲು ಬಂದೂಕು ಚಲಾಯಿಸಬೇಕು ಎಂದು ಹೇಳಿ ಹೋದರಂತೆ.

ನೆರೆ-ಹೊರೆಯವರನ್ನು ವಿಚಾರಿಸಿದೆ: ಕಂಗನಾ
ನಂತರ ಮಾರನೇಯ ದಿನ ಬೆಳಿಗ್ಗೆ ಆಗಸ್ಟ್ 1 ರಂದು ಕಂಗನಾ ತಮ್ಮ ನೆರೆಹೊರೆಯವರನ್ನು ರಾತ್ರಿಯ ಶಬ್ದದ ಬಗ್ಗೆ ವಿಚಾರಿಸಿದ್ದಾರೆ. ಜೊತೆಗೆ ಅವರೇನಾದರೂ ಪ್ರಾಣಿಗಳನ್ನು ಹೆದರಿಸಲು ಗುಂಡು ಹಾರಿಸಿದರಾ ಎಂದು ವಿಚಾರಿಸಿದ್ದಾರೆ. ಆದರೆ ಅವರಾರೂ ತಾವು ಗುಂಡು ಹಾರಿಸಿಲ್ಲವೆಂದು ಕಂಗನಾ ಗೆ ತಿಳಿಸಿದರಂತೆ.

'ನನ್ನ ಕೋಣೆಗೆ ಎದುರಾಗಿ ಗುಂಡು ಹಾರಿಸಲಾಯಿತು'
ನನಗೆ ಗುಂಡಿನ ಶಬ್ದದ ಪರಿಚಯ ಇದೆ. ನಿನ್ನೆ ರಾತ್ರಿ ಸರಿಯಾಗಿ ನನ್ನ ರೂಮಿಗೆ ಎದುರಾಗಿ ಎರಡು ಗನ್ ಶಾಟ್ಗಳು ಕೇಳಿದವು. ಎರಡೂ ಗನ್ಶಾಟ್ ನಡುವೆ ಸುಮಾರು ಎಂಟು ಸೆಕೆಂಡ್ನಷ್ಟು ಅಂತರ ಇತ್ತು. ನನ್ನ ಮನೆಯ ಕಾಂಪೌಂಡ್ನ ಆಚೆ ಕಡೆಯಿಂದ ಯಾರೋ ಶೂಟ್ ಮಾಡಿದ್ದಾರೆ ಎಂದು ಕಂಗನಾ ಹೇಳಿದ್ದಾರೆ.

ನನಗೆ ಎಚ್ಚರಿಕೆ ನೀಡಲೆಂದು ಹೀಗೆ ಮಾಡಿದ್ದಾರೆ: ಕಂಗನಾ
ಇತ್ತೀಚೆಗೆ ನಾನು ರಾಜಕೀಯ ಹೇಳಿಕೆಗಳನ್ನು ಸಹ ನೀಡುತ್ತಿದ್ದೇನೆ. ಬಾಲಿವುಡ್ನ ಹುಳುಕುಗಳನ್ನು ಹೊರಗೆ ಹಾಕುತ್ತಿದ್ದೇನೆ. ಬಹುಷಃ ನಿನ್ನೆ ರಾತ್ರಿ ನಡೆದ ಘಟನೆ ನನಗೆ ಎಚ್ಚರಿಕೆ ನೀಡಲೆಂದು ಯಾರೋ ಮಾಡಿಸಿದ್ದಾರೆ. ಆದರೆ ನಾನು ಸುಮ್ಮನಾಗುವುದಿಲ್ಲ ಎಂದು ಕಂಗನಾ ಹೇಳಿದ್ದಾರೆ.

ಮಹಾರಾಷ್ಟ್ರ ಸಿಎಂ ಪುತ್ರನ ಮೇಲೆ ಕಂಗನಾ ಅನುಮಾನ
ಮಹಾರಾಷ್ಟ್ರ ಸಿಎಂ ಪುತ್ರ ಆದಿತ್ಯ ಠಾಕ್ರೆ ಬಗ್ಗೆ ಕಂಗನಾ ರಣೌತ್ ಮಾತನಾಡಿದ್ದರು. ಆ ಕಾರಣದಿಂದಲೇ ಈಗ ಅವರ ಮೇಲೆ ದಾಳಿಯಾಗಿದೆ ಎಂದು ಕಂಗನಾ ಟೀಮ್ ಟ್ವೀಟ್ ಮಾಡಿದೆ. ಆದಿತ್ಯ ಠಾಕ್ರೆ, ಕರಣ್ ಜೋಹರ್ ಆಪ್ತ ಮಿತ್ರರೂ ಆಗಿದ್ದಾರೆ ಎಂದು ಕಂಗನಾ ತಂಡ ಹೇಳಿದೆ.


Click it and Unblock the Notifications











