ಅವಳೊಬ್ಬಳು ಸಿ ಗ್ರೇಡ್ ನಟಿ ; ಅಣ್ಣನ ಮಾಜಿ ಹೆಂಡತಿ ವಿರುದ್ಧ ಹನ್ಸಿಕಾ ಧಗಧಗ - 2 ಕೋಟಿ ಬೇಡಿಕೆ ಇಟ್ಟ ಬಿಂದಾಸ್ ಚೆಲುವೆ
ಮದುವೆ ಒಂದು ಸುಂದರ ಕನಸು. ಆದರೆ ಅದೇ ವಿಚ್ಚೇದನದ ಹಂತಕ್ಕೆ ತಲುಪಿದರೆ ಕೆಸರು. ದ್ವೇಷ-ಹಗೆತನದಿಂದ ತುಂಬಿದ ಕಾನೂನು ಸಮರ. ಈ ಸಮರ ಚಿತ್ರರಂಗದಲ್ಲಿ ಕೂಡ ನಡೆಯುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ಇಲ್ಲಿ ತಮ್ಮ ವೈಯಕ್ತಿಕ ಬದುಕು ಬೀದಿಗೆ ತಂದಿದ್ದಾರೆ. ರಂಪ ರಾಮಾಯಣ ಮಾಡಿದ್ದಾರೆ. ಆರೋಪ-ಪ್ರತ್ಯಾರೋಪ ಮಾಡಿದ್ದಾರೆ. ವರ್ಷಾನು ವರ್ಷ ಕಾನೂನು ಸಮರ ಮಾಡಿದ್ದಾರೆ. ಈ ಸಾಲಿನಲ್ಲಿ ಈಗ ಹನ್ಸಿಕಾ ಮೋಟ್ವಾನಿ ಕೂಡ ಬಂದು ಸೇರಿಕೊಂಡಿದ್ಧಾರೆ.
ಹೌದು, ಕನ್ನಡದ ''ಬಿಂದಾಸ್'' ಸೇರಿ ಉತ್ತರ ಮತ್ತು ದಕ್ಷಿಣದಲ್ಲಿ ಹಲವು ಚಿತ್ರಗಳನ್ನು ಮಾಡಿರುವ ಹನ್ಸಿಕಾ 2022ರಲ್ಲಿ ಸೊಹೇಲ್ ಖತುರಿಯಾ ಅವರನ್ನು ಮದುವೆಯಾಗಿದ್ದರು. ಈ ಸೊಹೇಲ್ ಖತುರಿಯಾ ಬೇರೆ ಯಾರು ಅಲ್ಲ ಬದಲಿಗೆ ಹನ್ಸಿಕಾ ಅವರ ಆಪ್ತ ಗೆಳತಿ ರಿಂಕಿಯ ಗಂಡ.

ಆ ಕಾಲದಲ್ಲಿ ಈ ವಿಚಾರ ತುಂಬಾ ಸದ್ದು ಮಾಡಿತ್ತು. ಗೆಳತಿಯ ಮನೆಯನ್ನು ಮುರಿದು ಮದುವೆಯಾಗ್ತಿದ್ದಾರೆ ಎಂದು ಹನ್ಸಿಕಾ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.
ಆದರೂ ತಲೆ ಕೆಡಿಸಿಕೊಳ್ಳದ ಹನ್ಸಿಕಾ ಡಿಸೆಂಬರ್ 4-2022ರಲ್ಲಿ ರಾಜಸ್ಥಾನದ ಜೈಪುರದಲ್ಲಿರುವ ''Mundota Fort''ನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
ಹೀಗೆ ಮದುವೆಯಾದ ಹನ್ಸಿಕಾ ತಮ್ಮ ಕೈ ಹಿಡಿದ ಸೊಹೇಲ್ ಖತುರಿಯಾ ಅವರ ಕೈಯನ್ನು ಬಿಟ್ಟಿದ್ದಾರೆ. ವಿಚ್ಚೇದನ ನೀಡಿದ್ದಾರೆ. ಈ ಮೂಲಕ ತಮ್ಮ ಮೂರುವರೆ-ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ.
ಇಂಥಾ ಹನ್ಸಿಕಾ ಸದ್ಯ ತಮ್ಮ ಮಾಜಿ ಅತ್ತಿಗೆ ಮುಸ್ಕಾನ್ ನ್ಯಾನಿ ಜೇಮ್ಸ್ ಅವರ ವಿರುದ್ಧ ಕಾನೂನು ಸಮರ ಸಾರಿದ್ದಾರೆ. 2 ಕೋಟಿ ಮಾನನಷ್ಟ ಮೊಕದಮ್ಮೆ ಹೂಡಿದ್ದಾರೆ.

ಹೌದು, ಅಸಲಿಗೆ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಅವರ ಮೇಲೆ ಹನ್ಸಿಕಾ ಅವರ ಅಣ್ಣ ಪ್ರಶಾಂತ್ ಮೋಟ್ವಾನಿ ಅವರಿಗೆ ಪ್ರೀತಿಯಾಗಿತ್ತು. 2020ರಲ್ಲಿ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ನಡೆದಿತ್ತು. ಮಾರ್ಚ್ 2021ರಲ್ಲಿ ರಾಜಸ್ಥಾನದ ಉದಯಪುರದಲ್ಲಿರುವ ರಾಯಲ್ ರಿಟ್ರೀಟ್ ರೆಸಾರ್ಟ್ನಲ್ಲಿ ಅದ್ಧೂರಿಯಾಗಿ ಮದುವೆ ಕೂಡ ನಡೆದಿತ್ತು.
ಆದರೆ ಇವರ ಈ ಪ್ರೀತಿ ಕೇವಲ ಒಂದೇ ವರ್ಷಕ್ಕೆ ಹಳಸಿತ್ತು. 2022ರಲ್ಲಿ ದಾಂಪತ್ಯ ಜೀವನ ಮುರಿದು ಬಿತ್ತು. ಆ ನಂತರ ಡಿಸೆಂಬರ್ 18, 2024 ರಂದು ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಾಜಿ ಪತಿ ಪ್ರಶಾಂತ್, ಹನ್ಸಿಕಾ ಮತ್ತು ಅವರ ತಾಯಿ ಜ್ಯೋತಿ ಮೋಟ್ವಾನಿ ವಿರುದ್ಧ ಮುಸ್ಕಾನ್ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 498-A, 323, 504, 506, ಮತ್ತು 32 ಅಡಿಯಲ್ಲಿ ದೂರು ದಾಖಲಿಸಿದ್ದರು. ಕೌಟುಂಬಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮತ್ತು ಹಣದ ಬೇಡಿಕೆಯ ಆರೋಪ ಮಾಡಿದರು. ಹನ್ಸಿಕಾ ಅವರು ತಮ್ಮ ಸಂಸಾರದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದರು ಎಂದು ಆರೋಪಿಸಿದ್ದರು.
ಇಷ್ಟೇ ಅಲ್ಲ ಈ ಮಾನಸಿಕ ಒತ್ತಡದಿಂದಾಗಿ ತಮಗೆ ಬೆಲ್ಸ್ ಪಾಲ್ಸಿ (Bell's Palsy) ಎಂಬ ಮುಖದ ಪಾರ್ಶ್ವವಾಯು ಸಮಸ್ಯೆ ಎದುರಾಯಿತು ಎಂದು ಕೂಡ ಮುಸ್ಕಾನ್ ಹೇಳಿದ್ದರು.
ಮುಸ್ಕಾನ್ ಮಾಡಿದ್ದ ಈ ಆರೋಪಕ್ಕೆ ತಿರುಗೇಟು ನೀಡಿದ್ದ ಹನ್ಸಿಕಾ ತಾವು ನೀಡಿದ್ದ ₹27 ಲಕ್ಷ ಸಾಲವನ್ನು ಹಿಂದಿರುಗಿಸಬೇಕೆಂದು ಮುಸ್ಕಾನ್ ಅವರಿಗೆ ನೋಟಿಸ್ ನೀಡಿದ್ದರು. ಹೈಕೋರ್ಟ್ನ ಮೊರೆ ಹೋಗಿದ್ದರು.

ಇದಾದ ನಂತರ ಈ ವಿಚಾರ ತಣ್ಣಗಾಗಿತ್ತು. ಹನ್ಸಿಕಾ ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಆದರೆ, ಹನ್ಸಿಕಾ ಮತ್ತು ಸೊಹೇಲ್ ಖತುರಿಯಾ ಮದುವೆ ಮುರಿದು ಬಿದ್ದ ನಂತರ ಸುಮ್ಮನೆ ಇರದ ಇವರ ಮಾಜಿ ಅತ್ತಿಗೆ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹನ್ಸಿಕಾ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಲು ಶುರು ಮಾಡಿದರು. ಕರ್ಮದ ಪಾಠ ಮಾಡತೊಡಗಿದರು. ಗಾಯ ಮಾಸಿದರೂ ಹಳೆಯ ಕಲೆಗಳು ಕಾಡಿದಂತೆ ತಮ್ಮ ಮದುವೆಯ ಕಹಿ ಅನುಭವ ಹಂಚಿಕೊಳ್ಳಲು ಶುರು ಮಾಡಿದ್ದರು.
ಇದರಿಂದ ಸದ್ಯ ಹನ್ಸಿಕಾ ಮೋಟ್ವಾನಿ ಕೆರಳಿದ್ದು ಮುಂಬೈನ ದಿಂಡೋಶಿ ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮುಸ್ಕಾನ್ ಸಾಮಾಜಿಕ ಮಾಧ್ಯಮದಲ್ಲಿ ತನ್ನ ವರ್ಚಸ್ಸಿಗೆ ಹಾನಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಹನ್ಸಿಕಾ ಆರೋಪಿಸಿದ್ದಾರೆ.
ಎರಡು ಕೋಟಿ ಪರಿಹಾರ ಮತ್ತು ಬಹಿರಂಗವಾಗಿ ಮುಸ್ಕಾನ್ ತಮಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿರುವ ಹನ್ಸಿಕಾ, ತಮ್ಮ ಮಾಜಿ ಅತ್ತಿಗೆಯ ವಿರುದ್ಧ ಆರೋಪಗಳನ್ನು ಕೂಡ ಮಾಡಿದ್ದಾರೆ. ವಕೀಲ ಅದ್ನಾನ್ ಶೇಖ್ ಅವರ ಮೂಲಕ ಅರ್ಜಿಯನ್ನು ಹನ್ಸಿಕಾ ಸಲ್ಲಿಸಿದ್ದು ನನ್ನ ಸಹೋದರ ಮತ್ತು ಮುಸ್ಕಾನ್ ಆನ್ಲೈನ್ ಅಪ್ಲಿಕೇಶನ್ ಮೂಲಕ ಪರಸ್ಪರ ಪರಿಚಿತರಾಗಿದ್ದು, ನಂತರ ಮದುವೆಯಾಗಲು ನಿರ್ಧರಿಸಿದ್ದರು. ಈ ಮದುವೆಯ ವೆಚ್ಚಕ್ಕಾಗಿ ಮುಸ್ಕಾನ್ ತಮ್ಮಿಂದ ₹27 ಲಕ್ಷ ಸಾಲ ಪಡೆದಿದ್ದರು ಎಂದು ಹೇಳಿದ್ದಾರೆ.
ಹಣ ಮರಳಿ ನೀಡುವಂತೆ ಪದೇ ಪದೇ ಕೇಳಿದರೂ ಕೂಡ ಮುಸ್ಕಾನ್ ಆ ಹಣವನ್ನು ಮರಳಿ ಕೊಡಲಿಲ್ಲ ಎಂದು ಹೇಳಿರುವ ಹನ್ಸಿಕಾ, ನನ್ನ ಸಹೋದರ ಮತ್ತು ಮುಸ್ಕಾನ್ ಸಂಬಂಧದಲ್ಲಿ ಬಿರುಕು ಮೂಡಿದಾಗ ನಾನು ಅವರ ಜೊತೆ ವಾಸ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಅವರ ಜೊತೆ ವಾಸ ಮಾಡದೇ ಇದ್ದಾಗ ಅವರಿಗೆ ಕಿರುಕುಳ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನೆಯನ್ನು ಮಾಡಿರುವ ಹನ್ಸಿಕಾ, ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ನ್ನು ರದ್ದು ಮಾಡಬೇಕೆಂದು ಮನವಿಯನ್ನು ಕೂಡ ಮಾಡಿಕೊಂಡಿದ್ದಾರೆ.
ಮುಂದುವರೆದು ತಮ್ಮ ಮಾಜಿ ಅತ್ತಿಗೆಯನ್ನು ''ಸಿ-ಗ್ರೇಡ್'' ನಟಿ ಎಂದು ಕರೆದಿರುವ ಹನ್ಸಿಕಾ ಸಾಮಾಜಿಕ ಮಾಧ್ಯಮಗಳಲ್ಲಿ ದುಬಾರಿ ಬ್ಯಾಗ್, ವಸ್ತುಗಳ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ. ತಮ್ಮ ಫಾರಿನ್ ಟ್ರಿಪ್ ಫೋಟೊಗಳನ್ನು ಶೇರ್ ಮಾಡುತ್ತಾರೆ, ಆದರೆ 27 ಲಕ್ಷ ಹಣ ಮರಳಿ ಕೊಡುವ ವಿಚಾರ ಬಂದಾಗ ಕುಂಟು ನೆಪ ಹೇಳುತ್ತಿದ್ದಾರೆ ಎಂದು ಹೇಳಿದ್ಧಾರೆ. ಹಣ ಮರಳಿ ಕೇಳಿದ್ದಕ್ಕೆ ಮುಸ್ಕಾನ್ ತಮ್ಮ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದಿದ್ದಾರೆ.
ಅಂದ್ಹಾಗೇ ಮುಸ್ಕಾನ್ ನ್ಯಾನ್ಸಿ ಜೇಮ್ಸ್ ಕೂಡ ಹನ್ಸಿಕಾ ಅವರಂತೆಯೇ ಬಾಲ ಕಲಾವಿದೆಯಾಗಿ ಚಿತ್ರರಂಗಕ್ಕೆ ಬಂದವರು. ''ಥೋಡಿ ಖುಷಿ ಥೋಡೆ ಘಮ್''.. ''ಭಾರತ್ ಕಾ ವೀರ್ ಪುತ್ರ''..''ಅದಾಲತ್''.. ''ಏಜೆಂಟ್ ರಾಘವ್''.. ಇವರ ಕೆಲ ಪ್ರಮುಖ ಧಾರಾವಾಹಿಗಳು.


Click it and Unblock the Notifications











