'ಆದಿಪುರುಷ್' ಮತ್ತೊಂದು ಅವಾಂತರ; ಹನುಮಂತ ದೇವರಲ್ಲ ಎಂದ ಚಿತ್ರತಂಡದ ಸದಸ್ಯ!
ಕಳೆದ ಶುಕ್ರವಾರ ( ಜೂನ್ 16 ) ಬಾಲಿವುಡ್ನ ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಬಿಡುಗಡೆಯಾಯಿತು. ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಮೊದಲ ಹಿಂದಿ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.
ರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದರೆ, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಇನ್ನು ರಾಮಾಯಣ ಆಧಾರಿತ ಕಥೆ ಇರುವ ಚಿತ್ರ ಎಂದು ಪ್ರಚಾರ ಪಡೆದುಕೊಂಡಿದ್ದ ಈ ಸಿನಿಮಾ ಬಿಡುಗಡೆಯಾದ ಬಳಿಕ ಹೀನಾಯವಾಗಿ ಟ್ರೋಲ್ಗೆ ಒಳಗಾಗಿದೆ.

ಹೌದು, ಆದಿಪುರುಷ್ ತನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಕೆಟ್ಟ ಟೀಕೆಗಳನ್ನು ಪಡೆದುಕೊಳ್ತಿದೆ. ಚಿತ್ರ ನೋಡಿ ಹೊರಬಂದ ಸಿನಿ ರಸಿಕರು ಇದು ರಾಮಾಯಣ ಅಲ್ಲ, ಮಾಡರ್ನ್ ಅಪ್ಡೇಟೆಡ್ ರಾಮಾಯಣ ಎಂದು ಅಸಮಾಧಾನ ಹೊರಹಾಕಿದ್ದರು. ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಚಿತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳು ಕೇಳಿಬಂದವು.
ಚಿತ್ರದಲ್ಲಿ ಎಲ್ಲಾ ಪಾತ್ರಗಳ ವಸ್ತ್ರದ ವಿಧಾನ ರಾಮಾಯಣಕ್ಕೆ ಹೋಲಿಕೆಯಾಗ್ತಿಲ್ಲ, ಪಾತ್ರಗಳ ಲುಕ್ ಅನ್ನೂ ಸಹ ದೊಡ್ಡ ಮಟ್ಟದಲ್ಲಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಹನುಮಂತನ ಪಾತ್ರದಲ್ಲೂ ಸಹ ಬದಲಾವಣೆ ಇದೆ ಎಂದು ಆರೋಪಿಸಿದ್ದ ಸಿನಿ ರಸಿಕರು ಹನುಮಂತ ಹೇಳುವ ಬಹುತೇಕ ಡೈಲಾಗ್ಗಳು ಈಗಿನ ಕಾಲದಲ್ಲಿ ಮಾತನಾಡುವ ಹಾಗೆ ಇದೆ, ಈ ಸಂಭಾಷಣೆಗಳನ್ನು ಕೇಳಿದಾಗ ಇದೊಂದು ಪೌರಾಣಿಕ ಚಿತ್ರ ಎನಿಸುವುದೇ ಇಲ್ಲ ಎಂದು ಕಿಡಿಕಾರಿದ್ದರು.
ಹೀಗೆ ದೊಡ್ಡ ಮಟ್ಟದ ವಿರೋಧ ಹಾಗೂ ಟೀಕೆ ವ್ಯಕ್ತವಾದ ಬಳಿಕ ಎಚ್ಚೆತ್ತುಕೊಂಡ ಆದಿಪುರುಷ್ ಚಿತ್ರತಂಡ ಚಿತ್ರದಲ್ಲಿನ ಆಕ್ಷೇಪಾರ್ಹ ಸಂಭಾಷಣೆಗಳನ್ನು ಬದಲಿಸುವುದಾಗಿ ಘೋಷಿಸಿತ್ತು. ಚಿತ್ರದ ಸಹ ಬರಹಗಾರ ಹಾಗೂ ಹಾಡುಗಳನ್ನು ಬರೆದಿರುವ ಮನೋಜ್ ಮುಂತಾಶೀರ್ ಮುಂದಿನ ವಾರದೊಳಗೆ ಈ ಬದಲಾವಣೆಗಳನ್ನು ತರಲಾಗುವುದು ಎಂದು ತಿಳಿಸಿದ್ದರು.
ಹೀಗೆ ಬದಲಾವಣೆಯ ಭರವಸೆ ನೀಡಿರುವ ಮನೋಜ್ ಮುಂತಾಶೀರ್ 'ಆಜ್ ತಕ್' ಜತೆ ನಡೆದ ಸಂದರ್ಶನವೊಂದರಲ್ಲಿ ಹನುಮಂತನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಹೌದು, "ಹನುಮಂತ ಶ್ರೀರಾಮನ ಹಾಗೆ ಅಲ್ಲ. ಹನುಮಂತ ತಾತ್ವಿಕವಾಗಿ ಮಾತನಾಡುವುದಿಲ್ಲ. ಹನುಮಂತ ದೇವರಲ್ಲ, ಆತ ಓರ್ವ ಭಕ್ತ. ಬಳಿಕ ಆತನನ್ನು ನಾವು ದೇವರನ್ನು ಮಾಡಿದೆವು. ಏಕೆಂದರೆ ಆತನ ಭಕ್ತಿ ಅಂತಹ ಶಕ್ತಿಯನ್ನು ಹೊಂದಿತ್ತು" ಎಂದು ಮನೋಜ್ ಮುಂತಾಶೀರ್ ಹೇಳಿಕೆ ನೀಡಿದ್ದಾರೆ.
ಈ ರೀತಿಯ ಹೇಳಿಕೆ ನೀಡುವುದರ ಮೂಲಕ ಮನೋಜ್ ಮುಂತಾಶೀರ್ ವಿವಾದವನ್ನು ಎಬ್ಬಿಸಿದ್ದಾರೆ. ಎಡಬಿಡದೇ ಟೀಕೆಗಳನ್ನು ಎದುರಿಸುತ್ತಿರುವ ಆದಿಪುರುಷ್ ಇದೀಗ ಮತ್ತೊಂದು ಕಾರಣಕ್ಕಾಗಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ನೆಟ್ಟಿಗರು ಮನೋಜ್ ಮುಂತಾಶೀರ್ ಹೇಳಿಕೆಗೆ ಗರಂ ಆಗಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸುವವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕಾಮೆಂಟ್ ಮಾಡಿ ಕಿಡಿಕಾರಿದ್ದಾರೆ.
ಆದಿಪುರುಷ್ ಕಲೆಕ್ಷನ್:
ಇನ್ನು ಇಷ್ಟೆಲ್ಲಾ ಟೀಕೆಗಳು ಹಾಗೂ ಟ್ರೋಲ್ಗಳು ಎದುರಾಗಿದ್ದರೂ ಸಹ ಆದಿಪುರುಷ್ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ 140 ಕೋಟಿ ಗಳಿಸಿದ್ದ ಚಿತ್ರ ಎರಡನೇ ದಿನ 100 ಕೋಟಿ, ಮೂರನೇ ದಿನ 100 ಕೋಟಿ ಹಾಗೂ ನಾಲ್ಕನೇ ದಿನ 35 ಕೋಟಿ ಗಳಿಸಿದೆ. ಹೀಗೆ ಆದಿಪುರುಷ್ ಮೊದಲ 4 ದಿನಗಳಲ್ಲಿ 375 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.


Click it and Unblock the Notifications











