ಅಂದು ಮಾಡೆಲ್ ಇಂದು ಸನ್ಯಾಸಿ ; ತನ್ನದೇ ಪಿಂಡ ಬಿಟ್ಟ ಮಹಾಕುಂಭದ ವೈರಲ್ ಸಾಧ್ವಿ ಹರ್ಷಾ ರಿಚಾರಿಯಾ - ಹೊಸ ಹೆಸರೇನು?
ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಅಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ.
ಇನ್ನು ಅಧ್ಯಾತ್ಮ ಅಂದರೆ ಅಂತರಂಗದ ಶುದ್ದೀಕರಣ ಮತ್ತು ಅಹಂಕಾರದ ಅಂತ್ಯ. ಭಾರತದ ಸನಾತನ ಧರ್ಮದಲ್ಲಿ ಪಿಂಡದಾನಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ಸಾಮಾನ್ಯವಾಗಿ ವ್ಯಕ್ತಿಯ ಮರಣಾನಂತರ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪುತ್ರರು ಅಥವಾ ಸಂಬಂಧಿಕರು ಮಾಡುವ ಧಾರ್ಮಿಕ ವಿಧಿ ಇದು.

ಆದರೆ, ಅಧ್ಯಾತ್ಮದ ಉತ್ತುಂಗದಲ್ಲಿರುವ ಸನ್ಯಾಸ ಪರಂಪರೆಯಲ್ಲಿ ಒಂದು ವಿಶಿಷ್ಟ ಆಚರಣೆಯಿದೆ, ಅದೇ ಆತ್ಮ ಪಿಂಡದಾನ. ಇದು ಸನ್ಯಾಸತ್ವ ಸ್ವೀಕರಿಸುವ ಮುನ್ನ ತನಗಾಗಿ ತಾನೇ ಮಾಡಿಕೊಳ್ಳುವ ಅಂತ್ಯಕ್ರಿಯೆ. ಈ ಮೂಲಕ ತಮ್ಮ ಹಳೆಯ ಗುರುತನ್ನು ಶಾಶ್ವತವಾಗಿ ಮಣ್ಣು ಮಾಡಿ ಹೊಸ ಅಧ್ಯಾತ್ಮಿಕ ಜನ್ಮದತ್ತ ಹೆಜ್ಜೆಯನ್ನು ಹಲವರು ಹಾಕುತ್ತಾರೆ. ಉದಾಹರಣೆಗೆ ಹರ್ಷ ರಿಚಾರಿಯಾ.
ಹೌದು, ಹರ್ಷ ರಿಚಾರಿಯಾ, ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್. ಕೇವಲ 30ರ ಹರೆಯದ ಈ ಚೆಲುವೆ ಯಾವ ಬಾಲಿವುಡ್ ನಾಯಕಿಗಿಂತ ಕಡಿಮೆ ಇಲ್ಲ. ಸೌಂದರ್ಯದ ಗಣಿಯಂತೆ ಇರುವ ಹರ್ಷ ನಿರೂಪಕಿ ಕೂಡ ಹೌದು. ಮಾಡೆಲ್ ಕೂಡ ಹೌದು.
ಆದರೆ ಅದ್ಯಾಕೋ ಏನೋ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದ ಸಮಯದಲ್ಲಿಯೇ ಇವರ ಮನ ಏಕಾಏಕಿ ಅಧ್ಯಾತ್ಮದತ್ತ ವಾಲಿತು. ಕಳೆದ ವರ್ಷ ಇದೇ ಸಮಯದಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆದಿದ್ದ ಮಹಾ ಕುಂಭಮೇಳದಲ್ಲಿ ಭಾಗಿಯಾಗುವ ಮೂಲಕ ಹರ್ಷ ರಿಚಾರಿಯಾ ಎಲ್ಲರ ಕಣ್ಣು ಕುಕ್ಕಿದ್ದರು. ಭಾರತದೆಲ್ಲೆಡೆ ಚರ್ಚೆಗೀಡಾಗಿದ್ದರು. ಅತ್ಯಂತ ಸುಂದರ ಸಾಧ್ವಿಯೆಂಬ ಹೆಗ್ಗಳಿಕೆಗೆ ಕೂಡ ಪಾತ್ರರಾಗಿದ್ದರು.
ಇಂಥಾ ಹರ್ಷ ರಿಚಾರಿಯಾ ಸದ್ಯ ತಮ್ಮದೇ ಪಿಂಡ ದಾನ ಮಾಡಿದ್ದಾರೆ. ಈ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಅಕ್ಷಯ ತೃತೀಯದಂದು ಉಜ್ಜಯಿನಿಯ ನಿರಂಜನಿ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಸುಮನಾನಂದ ಗಿರಿ ಮಹಾರಾಜ್ ಅವರ ಸಾನಿಧ್ಯದಲ್ಲಿ ಹರ್ಷ ರಿಚಾರಿಯಾ ಸನ್ಯಾಸತ್ವದ ದೀಕ್ಷೆ ಸ್ವೀಕರಿಸಿದ್ದಾರೆ. ತಮ್ಮದೇ ಪಿಂಡ ದಾನ ಮಾಡಿದ್ದಾರೆ. ಪಿಂಡದಾನದ ನಂತರ ''ಸ್ವಾಮಿ ಹರ್ಷಾನಂದ ಗಿರಿ'' ಎಂದು ಹರ್ಷ ರಿಚಾರಿಯಾ ಅವರಿಗೆ ಹೊಸದಾಗಿ ಹೆಸರಿಡಲಾಗಿದ್ದು, ಈಗ ನನ್ನ ಹೊಸ ಜೀವನ ಆರಂಭವಾಗಿದೆ ಎಂದು ಹರ್ಷ ರಿಚಾರಿಯಾ ಹೇಳಿದ್ದಾರೆ.

ಅಂದ್ಹಾಗೇ ಹರ್ಷ ರಿಚಾರಿಯಾ ಕೆಲ ದಿನಗಳ ಹಿಂದೆಯಷ್ಟೇ ತಮ್ಮ ಮನದ ನೋವು ಹೊರ ಹಾಕಿದ್ದರು. ತಮ್ಮ ಮೇಲೆ ನಡೆಯುತ್ತಿರುವ ಸೈಬರ್ ದಾಳಿಯಿಂದ ಹೈರಾಣಾಗಿ ಕಣ್ಣೀರಾಗಿದ್ದರು. ನಿಮ್ಮ ಧರ್ಮವನ್ನ ನಿಮ್ಮ ಬಳಿಯೇ ಇಟ್ಕೊಳ್ಳಿ ಎಂದು ಹೇಳಿ ಧರ್ಮದ ಹಾದಿಗೆ ಗುಡ್ ಬೈ ಹೇಳಿದ್ದರು.
ನಾನು ನನ್ನ ಧರ್ಮ ಆಯ್ಕೆ ಮಾಡಿಕೊಳ್ಳುವ ಮುನ್ನ ಆಂಕರಿಂಗ್ ಮಾಡುತ್ತಿದ್ದೆ, ಮಾಡೆಲ್ ಆಗಿ ಕೆಲಸ ಮಾಡುತ್ತಿದ್ದೆ, ಆಗ ನನಗೆ ಕೈತುಂಭಾ ಹಣ ಸಿಗುತ್ತಿತ್ತು ಎಂದು ಹೇಳಿದ್ದ ಹರ್ಷ ರಿಚಾರಿಯಾ ಧರ್ಮದ ಮಾರ್ಗವನ್ನು ನಾನು ಆಯ್ಕೆ ಮಾಡಿಕೊಂಡ ನಂತರ ನನ್ನ ಕೈ ಬರಿದಾಯ್ತು ಎಂದು ಹೇಳಿದ್ದರು. ಸಾಲ ಹೆಚ್ಚಾಯ್ತು ಅದನ್ನು ಹೊರತು ಪಡಿಸಿದರೆ ಬೇರೆ ಏನೂ ಪ್ರಯೋಜನವಾಗಲಿಲ್ಲ ಎಂದು ಬಿಕ್ಕಿದ್ದರು.
ಮುಂದುವರೆದು ಓರ್ವ ಮಹಿಳೆ ಕುಗ್ಗದೇ ಇದ್ದಾಗ, ಬಗ್ಗದೇ ಇದ್ದಾಗ, ಆ ಮಹಿಳೆಯ ಚಾರಿತ್ರ್ಯದ ಮೇಲೆ ನಮ್ಮ ಸಮಾಜ ಬೆರಳೆತ್ತುತ್ತೆ ಎಂದು ಹೇಳಿದ್ದ ಹರ್ಷ ರಿಚಾರಿಯಾ,ನಿಮ್ಮ ಧರ್ಮ ನಿಮ್ಮಲ್ಲೇ ಇರಲಿ ಎಂದು ಹೇಳಿದ್ದರು. ಪದೇ ಪದೇ ಅಗ್ನಿಪರೀಕ್ಷೆ ನೀಡಲು ನಾನು ಸೀತಾಮಾತೆ ಅಲ್ಲ ಕೊಡಬೇಕಾದ ಎಲ್ಲ ಅಗ್ನಿ ಪರೀಕ್ಷೆಗಳನ್ನು ಕೂಡ ನಾನು ನೀಡಿದ್ದೇನೆ ಎಂದು ಕಣ್ಣೀರು ಹಾಕಿದ್ದರು.
ಆದರೆ ಈಗ ನೋಡಿದರೆ ಮತ್ತೆ ಯುಟರ್ನ್ ತೆಗೆದುಕೊಂಡು ಹರ್ಷ ರಿಚಾರಿಯಾ ಧರ್ಮದ ಹಾದಿಗೆ ಮರಳಿದ್ದಾರೆ. ಬದುಕಿದ್ದಾಗಲೇ ತಮ್ಮ ಪಿಂಡದಾನ ಮಾಡಿದ್ಧಾರೆ. ಸನ್ಯಾಸತ್ವ ಸ್ವೀಕರಿಸಿದ್ದಾರೆ.


Click it and Unblock the Notifications