ಅಶ್ಲೀಲ ವಿಡಿಯೋ ಪ್ಲೇ ಮಾಡಿ ನನ್ನ ತೊಡೆ ಮೇಲೆ ಇಟ್ಟ ; ಎಣ್ಣೆ ಅಮಲಿನಲ್ಲಿದ್ದ ನಟನ ವರ್ತನೆಗೆ ಬೆಚ್ಚಿ ಬಿದ್ದ ನಟಿ
ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಕನಸೊತ್ತು ಬರುವ ಚೆಲುವೆಯರಿಗೆ ಇಲ್ಲಿ ಎದುರಾಗುವ ಸವಾಲುಗಳು ಒಂದೆರಡಲ್ಲ. ಕೆಲವರು ಪಾತ್ರ ಬೇಕು ಅಂದರೆ ಪಲ್ಲಂಗಕ್ಕೆ ಕರೆಯುತ್ತಾರೆ. ಬೇಡಿಕೆ ಈಡೇರಿಸದಿದ್ದರೆ ಚಿತ್ರದಿಂದಲೇ ಹೊರ ಹಾಕುತ್ತಾರೆ. ಇನ್ನೂ ಕೆಲ ಒಮ್ಮೆ ಎಲ್ಲಿಯೂ ಅವಕಾಶ ಸಿಗದಂತೆ ಕೂಡ ನೋಡಿಕೊಳ್ಳುತ್ತಾರೆ. ಮತ್ತೂ ಕೆಲವರು ಮಾನಸಿಕ ಕಿರುಕುಳ ಕೊಡುತ್ತಾರೆ. ಹೇಗಾದರೂ ಮಾಡಿ ಸ್ವಾಭಿಮಾನ ಅಡ ಇಡುವಂತೆ ಮಾಡುತ್ತಾರೆ.
ಕೇವಲ ನಿರ್ದೇಶಕ ಮತ್ತು ನಿರ್ಮಾಪಕ ಮಾತ್ರ ಅಲ್ಲ ಚಿತ್ರದ ಕಥಾನಾಯಕರು ಕೂಡ ಕೊಡಬಾರದ ಚಿತ್ರಹಿಂಸೆಯನ್ನು ಕೊಡುತ್ತಾರೆ. ಒಟ್ನಲ್ಲಿ ಅಡಿಗಡಿಗೂ ಇಲ್ಲಿ ಸಮಸ್ಯೆ. ಬಣ್ಣದ ಲೋಕದ ಈ ಧೋರಣೆಯಿಂದ ಬೇಸತ್ತು ಬಂದಷ್ಟೇ ವೇಗದಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳಿ ಹಲವರು ಮನೆ ಸೇರಿದ್ದಾರೆ. ಜೀವನೋಪಾಯಕ್ಕೆ ಬೇರೆ ಬೇರೆ ಕೆಲಸ ಮಾಡಿಕೊಂಡು ನೆಮ್ಮದಿಯಿಂದ ಇದ್ಧಾರೆ. ಉದಾಹರಣೆಗೆ ಸಂದೀಪಾ ವೀರ್ಕ್.

ಹೌದು, ಸಂದೀಪಾ ವಿರ್ಕ್.. ದೆಹಲಿಯ ಚೆಲುವೆ. ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ಇನ್ಸ್ಟಾಗ್ರಾಮ್ನಲ್ಲಿ ಒಂದು ಮಿಲಿಯನ್ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಸಂದೀಪಾ ''HybooCare'' ಎಂಬ ಸೌಂದರ್ಯ ವರ್ಧಕ ಬ್ರ್ಯಾಂಡ್ನ ಸಂಸ್ಥಾಪಕರೂ ಹೌದು.
2015ರಲ್ಲಿ ಬಂದ ಪಂಜಾಬಿ ಚಿತ್ರ ''ಗನ್ & ಗೋಲ್'' ಮೂಲಕ ಚಿತ್ರರಂಗಕ್ಕೆ ಬಂದ ಸಂದೀಪಾ ''ದಿಲ್ ಸಾಲಾ ಸಂಕಿ'' ಚಿತ್ರದ ಮೂಲಕ ಬಾಲಿವುಡ್ನ ಪ್ರವೇಶ ಮಾಡಿದರು. ''ಧನ್ಯತ್ರಾ'' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಬಂದ ಸಂದೀಪಾ ಕನ್ನಡದಲ್ಲಿಯೂ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದರು. 2022ರಲ್ಲಿ ತೆರೆಗೆ ಬಂದಿದ್ದ ಡಾರ್ಲಿಂಗ್ ಕೃಷ್ಣ ಅಭಿನಯದ ''ಲೋಕಲ್ ಟ್ರೈನ್'' ಮತ್ತು 2023ರಲ್ಲಿ ಬಿಡುಗಡೆಯಾಗಿದ್ದ ಅಂಬಾಸಿಡರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.
ಇವರ IMDb ಪ್ರೊಫೈಲ್ ಪ್ರಕಾರ ''ಹನಿ ಟ್ರ್ಯಾಪ್ ಸ್ಕ್ವಾಡ್'' ಎಂಬ ವೆಬ್ ಸರಣಿಯಲ್ಲಿ ಕೂಡ ಸಂದೀಪಾ ಕಾಣಿಸಿಕೊಂಡಿದ್ದು ಅಜಿತ್ ಅಭಿನಯದ ''ಮಂಕಥಾ'' ಮತ್ತು ಮೋಹನ್ ಲಾಲ್ ಅಭಿನಯದ ''ಶಿಕ್ಕರ್'' ಚಿತ್ರಗಳಲ್ಲಿ ಕೂಡ ಸಂದೀಪಾ ಅಭಿನಯಿಸಿದ್ದಾರೆ.
ಆದರೆ ಇವರ ಬದುಕು ಕಳೆದ ವರ್ಷ ಮತ್ತೊಂದು ಮಗ್ಗಲಿನತ್ತ ಹೊರಳಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂದೀಪಾ ವೀರ್ಕ್ ಸಿಕ್ಕಿ ಹಾಕಿಕೊಂಡಿದ್ದರು. ''ಪಿಟಿಐ'' ವರದಿಯ ಪ್ರಕಾರ ಸಿನಿಮಾದಲ್ಲಿ ಪ್ರಮುಖ ಪಾತ್ರ ನೀಡುವುದಾಗಿ ನಂಬಿಸಿ ಹೂಡಿಕೆದಾರರಿಂದ ಹಣ ಪಡೆದು ಅವರಿಗೆ ಪಂಗನಾಮವನ್ನು ಹಾಕಿದ್ದ ಸಂದೀಪಾ ಆ ಹಣದಲ್ಲಿ ಆಸ್ತಿ ಖರೀದಿ ಮಾಡಿದ್ದರು. ಇ-ಕಾಮರ್ಸ್ ವೇದಿಕೆಗಳಿಗೆ ಹಣ ವರ್ಗಾಯಿಸಿದ್ದರು.

ಹೀಗೆ ಜಾರಿ ನಿರ್ದೇಶನಾಲಯದ (ED)ದ ಬಲೆಗೆ ಬಿದ್ದ ಸಂದೀಪಾ ಆಗಲೇ ಹೇಳಿದಂತೆ ಕಳೆದ ವರ್ಷ ಆಗಸ್ಟ್ 14ರಂದು ಬಂಧನಕ್ಕೊಳಗಾಗಿದ್ದರು. ತಿಹಾರ್ ಜೈಲಿಗೆ ಹೋಗಿದ್ದರು. ಹೆಚ್ಚು ಕಡಿಮೆ 4 ತಿಂಗಳು ಸೆರೆವಾಸ ಅನುಭವಿಸಿದ್ದರು.
ಇಂಥಾ ಸಂದೀಪಾ ವೀರ್ಕ್ ಕಳೆದ ಕೆಲ ದಿನಗಳಿಂದ ಹಲವರಿಗೆ ಸಂದರ್ಶನ ಕೊಡುತ್ತಿದ್ದಾರೆ. ತಮ್ಮ ಜೈಲಿನ ಅನುಭವ ಹಂಚಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಚಿತ್ರರಂಗದಲ್ಲಿ ತಮಗೆ ಹೇಗೆಲ್ಲಾ ಕಾಡಿದರು ಎಂದು ಹೇಳುತ್ತಿದ್ಧಾರೆ. ಈ ಮೂಲಕ ಚಿತ್ರರಂಗದ ಮುಖವಾಡ ಕಳಚುತ್ತಿದ್ದಾರೆ. ಸದ್ಯ ಸಂದೀಪಾ ವೀರ್ಕ್ ''ಶಲ್ಲು ನಿಶಾ'' ಜೋಡಿಗೆ ಸಂದರ್ಶನ ನೀಡಿದ್ದು ಎಣ್ಣೆ ಮತ್ತಿನಲ್ಲಿ ನಾಯಕನೊಬ್ಬ ಹೇಗೆ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ ಎಂದು ಹೇಳಿದ್ದಾರೆ.
ಈ ಕುರಿತು ಶಲ್ಲು ನಿಶಾ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಸಂದೀಪಾ ವೀರ್ಕ್, ಪಂಜಾಬಿ ಚಿತ್ರವೊಂದನ್ನು ನಾನು ಮಾಡುತ್ತಿದ್ದೆ, ಆ ಸಮಯದಲ್ಲಿ ಆ ಚಿತ್ರದ ನಾಯಕ ಕಂಠಪೂರ್ತಿ ಎಣ್ಣೆ ಕುಡಿದಿದ್ದ ಎಂದು ಹೇಳಿದ್ದಾರೆ. ಆಗ ಫೋಟೊಶೂಟ್ ನಡೆಯುತ್ತಿತ್ತು ನಾನು ನನ್ನ ಕುರ್ಚಿಯ ಮೇಲೆ ಕುಂತಿದ್ದೆ ಎಂದು ಹೇಳಿರುವ ಸಂದೀಪಾ ವೀರ್ಕ್, ಆಗ ಆ ನಟ ಏಕಾಏಕಿ ನನ್ನ ಹತ್ತಿರ ಬಂದು ಮೊಬೈಲ್ನಲ್ಲಿ ಅಶ್ಲೀಲ ವಿಡಿಯೋ ಪ್ಲೇ ಮಾಡಿ ನನ್ನ ತೊಡೆಯ ಮೇಲಿಟ್ಟ ಎಂದು ಹೇಳಿದ್ದಾರೆ.
ನನ್ನ ತೊಡೆಯ ಮೇಲೆ ಮೊಬೈಲ್ ಇಟ್ಟಿದ್ದ ಆ ನಟ ರಾಜಿ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದ, ಚಿತ್ರೀಕರಣದ ಸಮಯದಲ್ಲಿ ಹೋಟೆಲ್ನಲ್ಲಿ ಒಟ್ಟಿಗೆ ಇರುವಂತೆ ಒತ್ತಾಯ ಕೂಡ ಮಾಡಿದ್ದ ಎಂದು ಹೇಳಿರುವ ಸಂದೀಪಾ ವೀರ್ಕ್, ಇಂತಹ ವಾತಾವರಣದಲ್ಲಿ ಯಾಕೆ ಕೆಲಸ ಮಾಡಬೇಕು? ಎಂದು ಪ್ರಶ್ನೆ ಮಾಡಿದ್ದಾರೆ.
ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇರಲ್ಲ, ದೇವರು ಎಲ್ಲೋ ಒಂದು ಕಡೆ ನಮ್ಮ ಬದುಕಿಗೆ ಒಳ್ಳೆಯ ದಾರಿಯನ್ನು ರೂಪಿಸುತ್ತಾನೆ, ಅದಕ್ಕೆ ನಾವು ಪ್ರಾಮಾಣಿಕರಾಗಿರಬೇಕು, ಶ್ರದ್ದೆಯಿಂದ ಕೆಲಸ ಮಾಡಬೇಕು ಎಂದು ಹೇಳಿರುವ ಸಂದೀಪಾ ವೀರ್ಕ್ ಈ ರೀತಿ ಸಿನಿಮಾ ಮಾಡಬೇಕು ಅಂದರೆ ಅದರ ಅಗತ್ಯವೇನು..? ಎಂದು ಪ್ರಶ್ನೆ ಮಾಡಿದ್ದಾರೆ. ತಮ್ಮ ಈ ಅನುಭವಗಳಿಂದ ಬೇಸತ್ತು ಸದ್ಯ ಚಿತ್ರರಂಗದಿಂದ ಸಂದೀಪಾ ವೀರ್ಕ್ ಅಂತರ ಕಾಪಾಡಿಕೊಂಡಿದ್ದು ಈ ಸಂದರ್ಶನ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ನಟನ ಈ ವರ್ತನೆಯಿಂದ ನಾನು ಅಕ್ಷರಶಃ ಸಂಪೂರ್ಣ ದಂಗಾಗಿ ಹೋದೆ, ಹೇಗೆ ಪ್ರತಿಕ್ರಿಯಿಸಬೇಕೆನ್ನುವುದೇ ನನಗೆ ಗೊತ್ತಾಗಲಿಲ್ಲ ಎಂದು ಹೇಳಿರುವ ಸಂದೀಪಾ, ಚಿತ್ರರಂಗದಲ್ಲಿ ಇಂತಹ ಕೀಳು ಮನಸ್ಥಿತಿಯ ವ್ಯಕ್ತಿಗಳು ತುಂಬಾ ಜನ ಇದ್ದಾರೆ ಎಂದು ಹೇಳಿದ್ದಾರೆ.


Click it and Unblock the Notifications